Home / ಕವನ / ಕವಿತೆ / ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ
ಶೀಲ ಮಾಡತೀರಿ ನಾಡೆಲ್ಲಾ
ತೊಗಲಿನ ಆಟಾ ತಿಳಿಯದು ತಮ್ಮಾ
ತಗಲುಮಾತು ಒಂದು ಚೂರಿಲ್ಲ ||ಪ||

ತೊಗಲಿನೊಳಗೆ ತೊಗಲ್ಹುಟ್ಟತೈತಿ
ಕಾಮನಾಟಾ ಕೇಳೋ ಕಡಿಮೆ ಜಲಾ
ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ
ಕಾಣಿಸುವದು ಈ ತೊಗಲಾ
ಕುಡಗೋಲ ಪಿಡಿದು ಕೂಲಿಮಾಡಿ
ತುಂಬಿಸಬೇಕೋ ಈ ಚೀಲಾ
ಒಂದರಘಳಿಗೀ ಅನ್ನವಿಲ್ಲದಿರೆ
ಸೈಲಬೀಳತೈತ್ಯೋ ಈ ತೊಗಲಾ
||ಇಳವು||
ತೊಗಲಿನ ಉಸಾಬರಿ ನಾನು ಎಷ್ಟು ಮಾಡಬೇಕ
ಬೇಗು ಬೆಳಗು ಸಂಜಿಯಾ ತನಕ
ಸ್ಥಿರವಿಲ್ಲದ ತೊಗಲು ಹುಟ್ಟಿಬಂತು ಸಾವುದಕ
ಗೊತ್ತುಹತ್ತಲಿಲ್ಲೋ ಸವಿ ಸುಖಕ
||ಏರು||
ತೊಗಲಿನ ಸವಿಸುಖ ತೊಗಲು ಬಲ್ಲದಿದು
ರಾತ್ರಿ ಹಗಲು ಹರಿದಾಡೋ ತೊಗಲಾ ||೧||

ಸತ್ತು ಹೋಗಲು ಭೂಮಿಯ ಕಿತ್ತು ಹಾಕತೈತಿ
ಮತ್ತೆ ತೊಗಲು ಜೀವಕಾಧಾರಾ
ತೊಗಲಿನ ಬಾರು ಮಿಣಿ ಜತಿಗೆ ಕಣ್ಣಿ ತೊಗಲ ಮ್ಯಾಡಾರ

ತೊಗಲಿಗೆ ತೊಗಲಾ ಮದುವೆ ಮಾಡಿದರು
ತೊಗಲಿಗೆ ಮಾಡ್ಯಾರೋ ಉಪಕಾರ
ಅರಿಶಿನ ಕುಂಕುಮ ಅರದು ಎರದುಕರ
ತೊಗಲಿಗೆ ಮಾಡ್ಯಾರೋ ಸಿಂಗಾರಾ
||ಇಳವು||
ತೊಗಲಿಗೆ ಮೆಚ್ಚಿ ವೀರಾಧಿವೀರ ಜನರೆಲ್ಲಾ
ಸತ್ತುಹೋದರೆಂಬುವದು ಗುಲ್ಲಾ
ಇಂದ್ರ ಚಂರ್ರ ದೇವತೆ ಋಷಿ
ಮುಳುಗಿ ಹೋದರೋ ಎಲ್ಲಾ
ಇದರಾಟಾ ಯಾರಿಗೂ ತಿಳಿಲಿಲ್ಲಾ
||ಏರು||
ನಾ ಆದರೇನು ನೀ ಆದರೇನು
ಅರಸ ಪ್ರಧಾನಿ ಆದರೋ ತೊಗಲಾ || ೨ ||

ತೊಗಲು ತೊಳಿದುಕರ ನೀರ ಮಡಿಯ ಮಾಡಿ
ಗುಂಡಿಯಂತಿದೋ ಪಿಕನಾಶಿ
ಗಂಧ ವಿಭೂತಿ ತೊಗಲಿಗೆ ಧರಿಸಿ
ಜಾತಿ ಚಾತಿ ಬ್ಯಾರೆಯೆನಿಸಿ
ಜಪತಪವೆಂದು ಸನ್ಯಾಸಿ
ಬೂದಿಯೆಲ್ಲ ಮೈಯಿಗೆ ಪೂಸಿ
ಶಿವಶಿವಯೆಂದು ಶಿವಪೂಜಿ ಮಾಡುತಿ
ತೊಗಲಿನ ಮ್ಯಾಲೆ ಕೂತು ಜಪ ಎಣಿಸಿ
||ಇಳವು||
ಬಂಧು ಬಳಗಯೆಲ್ಲ ಮುಂದು ಹಾಕಿಕೊಂಡು ಬರುತೀರಿ
ತೊಗಲಿನ ಬೀಗರಿರತೀರಿ
ಮಿಗಿಲಾದ ತೊಗಲಿಗೆ ಮಾನ ಮರ್ಯಾದೆ ಮಾಡತೀರಿ
ದಾನ ದಕ್ಷಿಣೆಯನ್ನು ಕೊಡತೀರಿ

|| ಏರು||
ಸಿದ್ದ ಶಿಶುನಾಳಧೀಶನ ದಯೆಯೊಳು
ಬುದ್ಧಿವಂತರು ತಿಳಿಯಿರಿ ತೊಗಲಾ || ೩ ||
*****

 

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...