Home / ಕವನ / ಕವಿತೆ / ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ

ತೊಗಲ ಮಲಿಯನ ಹಾಲು ಕುಡಿದು ದೊಡ್ಡವರಾಗಿ
ಶೀಲ ಮಾಡತೀರಿ ನಾಡೆಲ್ಲಾ
ತೊಗಲಿನ ಆಟಾ ತಿಳಿಯದು ತಮ್ಮಾ
ತಗಲುಮಾತು ಒಂದು ಚೂರಿಲ್ಲ ||ಪ||

ತೊಗಲಿನೊಳಗೆ ತೊಗಲ್ಹುಟ್ಟತೈತಿ
ಕಾಮನಾಟಾ ಕೇಳೋ ಕಡಿಮೆ ಜಲಾ
ಪಿಂಡರಕ್ತ ಕಾಯದೇಹ ಕಣ್ಣಿಗೆ ಛಾಯಾ
ಕಾಣಿಸುವದು ಈ ತೊಗಲಾ
ಕುಡಗೋಲ ಪಿಡಿದು ಕೂಲಿಮಾಡಿ
ತುಂಬಿಸಬೇಕೋ ಈ ಚೀಲಾ
ಒಂದರಘಳಿಗೀ ಅನ್ನವಿಲ್ಲದಿರೆ
ಸೈಲಬೀಳತೈತ್ಯೋ ಈ ತೊಗಲಾ
||ಇಳವು||
ತೊಗಲಿನ ಉಸಾಬರಿ ನಾನು ಎಷ್ಟು ಮಾಡಬೇಕ
ಬೇಗು ಬೆಳಗು ಸಂಜಿಯಾ ತನಕ
ಸ್ಥಿರವಿಲ್ಲದ ತೊಗಲು ಹುಟ್ಟಿಬಂತು ಸಾವುದಕ
ಗೊತ್ತುಹತ್ತಲಿಲ್ಲೋ ಸವಿ ಸುಖಕ
||ಏರು||
ತೊಗಲಿನ ಸವಿಸುಖ ತೊಗಲು ಬಲ್ಲದಿದು
ರಾತ್ರಿ ಹಗಲು ಹರಿದಾಡೋ ತೊಗಲಾ ||೧||

ಸತ್ತು ಹೋಗಲು ಭೂಮಿಯ ಕಿತ್ತು ಹಾಕತೈತಿ
ಮತ್ತೆ ತೊಗಲು ಜೀವಕಾಧಾರಾ
ತೊಗಲಿನ ಬಾರು ಮಿಣಿ ಜತಿಗೆ ಕಣ್ಣಿ ತೊಗಲ ಮ್ಯಾಡಾರ

ತೊಗಲಿಗೆ ತೊಗಲಾ ಮದುವೆ ಮಾಡಿದರು
ತೊಗಲಿಗೆ ಮಾಡ್ಯಾರೋ ಉಪಕಾರ
ಅರಿಶಿನ ಕುಂಕುಮ ಅರದು ಎರದುಕರ
ತೊಗಲಿಗೆ ಮಾಡ್ಯಾರೋ ಸಿಂಗಾರಾ
||ಇಳವು||
ತೊಗಲಿಗೆ ಮೆಚ್ಚಿ ವೀರಾಧಿವೀರ ಜನರೆಲ್ಲಾ
ಸತ್ತುಹೋದರೆಂಬುವದು ಗುಲ್ಲಾ
ಇಂದ್ರ ಚಂರ್ರ ದೇವತೆ ಋಷಿ
ಮುಳುಗಿ ಹೋದರೋ ಎಲ್ಲಾ
ಇದರಾಟಾ ಯಾರಿಗೂ ತಿಳಿಲಿಲ್ಲಾ
||ಏರು||
ನಾ ಆದರೇನು ನೀ ಆದರೇನು
ಅರಸ ಪ್ರಧಾನಿ ಆದರೋ ತೊಗಲಾ || ೨ ||

ತೊಗಲು ತೊಳಿದುಕರ ನೀರ ಮಡಿಯ ಮಾಡಿ
ಗುಂಡಿಯಂತಿದೋ ಪಿಕನಾಶಿ
ಗಂಧ ವಿಭೂತಿ ತೊಗಲಿಗೆ ಧರಿಸಿ
ಜಾತಿ ಚಾತಿ ಬ್ಯಾರೆಯೆನಿಸಿ
ಜಪತಪವೆಂದು ಸನ್ಯಾಸಿ
ಬೂದಿಯೆಲ್ಲ ಮೈಯಿಗೆ ಪೂಸಿ
ಶಿವಶಿವಯೆಂದು ಶಿವಪೂಜಿ ಮಾಡುತಿ
ತೊಗಲಿನ ಮ್ಯಾಲೆ ಕೂತು ಜಪ ಎಣಿಸಿ
||ಇಳವು||
ಬಂಧು ಬಳಗಯೆಲ್ಲ ಮುಂದು ಹಾಕಿಕೊಂಡು ಬರುತೀರಿ
ತೊಗಲಿನ ಬೀಗರಿರತೀರಿ
ಮಿಗಿಲಾದ ತೊಗಲಿಗೆ ಮಾನ ಮರ್ಯಾದೆ ಮಾಡತೀರಿ
ದಾನ ದಕ್ಷಿಣೆಯನ್ನು ಕೊಡತೀರಿ

|| ಏರು||
ಸಿದ್ದ ಶಿಶುನಾಳಧೀಶನ ದಯೆಯೊಳು
ಬುದ್ಧಿವಂತರು ತಿಳಿಯಿರಿ ತೊಗಲಾ || ೩ ||
*****

 

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...