Home / ಕವನ / ಕವಿತೆ / ನಚ್ಚಿನ ಸೋದರಿ

ನಚ್ಚಿನ ಸೋದರಿ

ನಚ್ಚಿನಾ ಸೋದರಿಯೆ ಕಡುಜಾಣೆ ನೀನಮ್ಮ
ಸ್ವಚ್ಛವಾಗಿದೆ ಮನವು ಮುದವಾಯಿತಮ್ಮ
ಅಚ್ಯುತಾನಂತದೊಳು ಎನಿಬರೆನಿಬರು ಉಂಟೊ?
ಸಚ್ಚರಿತ ಮಾನವರು ಶೀಲ ಸುಗುಣಾನ್ವಿತರು

ನಿನ್ನ ನುಡಿ ಹಿತವಿಹುದು ನಿನ್ನ ನಡೆ ಸೊಗವಿಹುದು
ನಿನ್ನ ಶ್ರಾವ್ಯದ ಗಾನ ಮಧುರವಾಗಿಹುದು
ಬಿನ್ನಾಣ ಬೆಡಗಿಲ್ಲ ಸಿಡುಕು ದುಡುಕುಗಳಿಲ್ಲ
ಸನ್ನುತಾಂಗಿಯೆ ರಸಿಕೆ ಸರಳ ಮಾನಸಳಮ್ಮ

ಸಕಲ ಕಲೆಗಳ ಒಳಗೆ ಅಕಳಂಕ ತುಂಬಿಹನು
ವಿಕಟ ಮಾನಸರಿದನು ತಿಳಿಯದಿಹರು
ಪ್ರಕೃತಿ ದೇವಿಯ ನೋಡೆ ನೃತ್ಯಗೈದಿಹಳಿಲ್ಲಿ
ಸುಖವಲ್ಲದೇ ಉಂಟೆ ದುಃಖವೀ ಜೀವನಿಗೆ

ಸಿರಿ ನಮಗೆ ಸ್ಥಿರವಲ್ಲ ಕಲ್ಪನೆಯ ಕೈಮರವು
ಕೊರತೆ ನಮಗೊಂದಿಲ್ಲ ತಿಳಿದಿಲ್ಲಿ ನೋಡೆ
ಹರಿಯ ಕೀರ್ತನೆ ಮಾಡಿ ವಿಜಯ ಧ್ವಜವನು ಹೂಡಿ
ಪರಮ ಸಂತೋಷದೊಳು ನಲಿವುದೇ ಸುಖವಮ್ಮ

ಯಾತ್ರಿಕರು ನಾವೆಲ್ಲಾ ನಿಯಮದಿಂ ಬಂದಿಹೆವು
ಕ್ಷೇತ್ರವೆಮಗೀ ಧರೆಯು ಕೇಳಮ್ಮ ತಂಗಿ
ಸತ್ಯಶೋಧನೆ ಇಲ್ಲೆ, ನಾಕನರಕಗಳಿಲ್ಲೆ
ನಿತ್ಯ ನಿರ್ಮಲಸ್ವಾಮಿ ಪ್ರತ್ಯಕ್ಷವಹುದಿಲ್ಲೆ

ನಾನು ನೀನೆಂದೆಂಬೊ ದ್ವೈತ ಭಾವಗಳಿಲ್ಲೆ
ಜ್ಞಾನಿ ತಾನರಿತಿರುವ ಅದ್ವೈತವಿಲ್ಲೆ
ಧ್ಯಾನಸಾಧನೆ ಇಲ್ಲೆ, ಫಲವನುಂಬುವುದಿಲ್ಲೆ
ಜನಕಜೆಯು ಅನುಭವಿಪ ಆನಂದವಿಹುದಿಲ್ಲೆ
*****

Tagged:

Leave a Reply

Your email address will not be published. Required fields are marked *

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...

ಶೋಭಾ, ನಿನ್ನ ಎಲ್ಲಾ ಕಾಗದಗಳೂ ತಲುಪಿವೆ. ಓದುತ್ತಲೂ ಇದ್ದೇನೆ. ‘ತಂಪೆರೆಯುವ ನಿನ್ನ ಕಾಗದಗಳನ್ನು ದಿನಾ ಎದುರು ನೋಡುತ್ತಿರುತ್ತೇನೆ. ಅಬ್ಬಾ! ಎಷ್ಟು ಪ್ರಶ್ನೆಗಳನ್ನು ಕೇಳಿದ್ದೀಯಾ? ಬರೆಯುವ ಶಕ್ತಿ ಬರಲೀಂತ ಕಾಯ್ತಾ ಇದ್ದೆ. ಮಾನಸಿಕ ವಿಪ್ಲವದಲ್ಲಿ ಮನಸ್ಸು, ದೇಹ ಎಲ್ಲವೂ ಕೊರಡಿನಂತಾ...