ನರಸಿಯ ಪರಿಸೆ

ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ
ಮುದವಾಗುತಿದೆ ಇವಳ ನಡೆ ನುಡಿಯ ನೋಡೆ
ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು
ಉಡುಗುವಳು ವರ್ತನೆಯ ಮನೆಗಳೊಳು ಕಸವ

ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು
ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು
ಚೆಲ್ವ ಪಣೆಯೊಳು ಬಿದ್ದು ಅಲುಗಾಡುತಿವೆ ಕುರುಳು
ರಸಿಕತೆಯು ಚಿಮ್ಮುತಿದೆ ಇವಳ ಮಾತಿನೊಳು

ತೊಳೆಯುವಳು ಮುಸುರೆಗಳ ಥಳಥಳನೆ ಕ್ಷಣದಿ
ಓಡುವಳು ಮತ್ತೊಂದು ಮನೆಗಿವಳು ಮುದದಿ
ಬೆಳಸುವಳು ಗೆಳೆತನವ ಹುಡುಗರೊಳು ಬೆರೆತು
ದುಡಿತದೊಳಗಿದ್ದರೂ ದುಗುಡವನು ಮರೆತು

ಬಾರದಿರಲೊಂದು ದಿನ ಮನೆಗೆಲಸಕಿವಳು
ಮೀರಿದಳೆ? ಆಜ್ಞೆಯನು ಎನುತ ದುಡುಕಿದೆನು
ಬರಲಿಲ್ಲವಿಂದೇಕೆ ಮನೆಗೆಲಸಕೆಲೆ ನರಸಿ,
ತಿರುದು ತಿಂಬುವ ನಿನಗೆ ಜಂಬವೇ ಮೂಳಿ!

ಹಿಡಿಯುವೆನು ನಾ ನಿನ್ನ ಕೂಲಿಯೊಳಗೊಂದಾಣೆ
ಬಿಡಿಸುವೆನು ನೀನಿನ್ನು ಬೇಕಿಲ್ಲ ನಡಿ ಎಂದೆ
ಸಿಟ್ಟಾಗ ಬೇಡಮ್ಮ ತಾಸು ತಡವಾಯ್ತು
ಹಿಟ್ಟಿನಾರತಿ ಹೊತ್ತು ಗುಡಿಗೆ ಹೋಗಿದ್ದೆ

ಬೀರಪ್ಪ ಹೊರಟಿದ್ದ, ತೇರು ನೋಡಲು ಹೋದೆ
ಎಲೆ ಪೂಜೆ ಕಟ್ಟಿದರು ತಡವಾಯಿತಲ್ಲಿ
ಎಡೆಯನಿಟ್ಟವು ಎಲ್ಲ ಸ್ವಾಮಿಗೊಂದೊಂದಾಗಿ
ನೆನೆಯಕ್ಕಿ ತಂಬಿಟ್ಟು ಕಾಯಿ ಬಾಳೇಹಣ್ಣು

ಉಡಿಯೊಳಗೆ ಮಡಗಿದ್ದ ಚೂರು ಕೊಬ್ಬರಿಯೊಂದು
ತೆಗೆದುಕೊಟ್ಟಳು ನನಗೆ ಪರಸಾದವೆಂದು
ತೇರಿನೊಳು ಬೀರಪ್ಪಗಾರತಿಯ ಬೆಳಗಿದರು
ಹೊಂಬಾಳೆ ದವನಗಳ ನಾವು ಸೂರಿದೆವು

ತೇರು ಕದಲಿಸುವಾಗ ಭೋರೆಂದು ವುರಿಮೆಗಳು
ಕುಣಿಕುಣಿದು ಜನರೆಲ್ಲ ಕೇಕೆ ಹಾಕಿದರು
ನಾಗಮ್ಮ ಕರಿಯಮ್ಮ ಸಿತ್ತಮ್ಮ ಸಿರಿಯಮ್ಮ
ಪದಗಳನು ಹಾಡಿದರು ಏನೇಳಲಮ್ಮ!

ಹೊರಟಿಲ್ಲವೇನಮ್ಮ ನೀನಿನ್ನು ಪರಿಸೆಗೆ
ತರಿಸಮ್ಮ ಕಾಯೊಂದ ಇರಲಿ ದಿನಗೆಲಸ
ಬಾರಮ್ಮ ಸ್ವಾಮಿಯ ತೇರ ನೋಡಮ್ಮ
ಊರೂರೆ ಬಂದಿಹುದು ನೀನಿಲ್ಲೆ ಇರುವೆ

ತೊಡಿಸಮ್ಮ ಪರಿಸೆಯೊಳು ನನ ಕೈಗೆ ಬಳೆಗಳನು
ಕೊಡಿಸಮ್ಮ ಮಕ್ಕಳಿಗೆ ಗೊಂಬೆಗಳನೆಂದಳು
ಆಗಿಲ್ಲವೇ ನರಸಿ ಮದುವೆ ನಿನಗೆಂದರೆ
ಸೆರಗ ಬಾಯಿಗೆ ಮುಚ್ಚಿ ಸಿರಬಾಗಿ ನಗುವಳು

ಮದುವೆಯೊಳಗಿನ ತತ್ವ ಗೊತ್ತಿಲ್ಲ ಪಸುಳೆಗೆ
ನಿಸ್ಪೃಹದ ಮನಸಿನೊಳು ನಲಿದಾಡುತಿಹಳು
ಇರಲಿರಲಿ ನರಸೀ ಮದುವೆಯಂತಿರಲಿ
ಬೀರಪ್ಪನಾ ಪರಿಸೆ ಬಂಗಾರವಾದೀತು

ನಿನ್ನ ಜೀವನ ಬೆಳಸು ಬೆಳೆಯುತಿರಲಿಂತೆ
ನಿನ್ನ ರಸಿಕತೆ ಬೆಳಗಿ ಬೆಳಗುತಿರಲಿಂತೆ
ನಿನ್ನ ದುಡಿತವು ಜನಕೆ ಸಲ್ಲುತಿರಲಿಂತೆ
ನಿನ್ನ ಪರಿಸೆಯ ಕುಣಿತ ಕುಣಿಯುತಿರಲಿಂತೆ

ಬಂಧನದಿ ಸಿಲುಕಿದಾ ಬಾಳಿನನುಭವಕಿಂತ
ಎಳೆತನದ ಕುಣಿತವೇ ಜನಕಜೆಗೆ ಹಿತವು
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೆಂಬೆ…
Next post ದೂರ ತೀರ ಯಾನ

ಸಣ್ಣ ಕತೆ

  • ಮೌನವು ಮುದ್ದಿಗಾಗಿ!

    ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

cheap jordans|wholesale air max|wholesale jordans|wholesale jewelry|wholesale jerseys