Home / ಕವನ / ಕವಿತೆ / ನರಸಿಯ ಪರಿಸೆ

ನರಸಿಯ ಪರಿಸೆ

ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ
ಮುದವಾಗುತಿದೆ ಇವಳ ನಡೆ ನುಡಿಯ ನೋಡೆ
ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು
ಉಡುಗುವಳು ವರ್ತನೆಯ ಮನೆಗಳೊಳು ಕಸವ

ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು
ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು
ಚೆಲ್ವ ಪಣೆಯೊಳು ಬಿದ್ದು ಅಲುಗಾಡುತಿವೆ ಕುರುಳು
ರಸಿಕತೆಯು ಚಿಮ್ಮುತಿದೆ ಇವಳ ಮಾತಿನೊಳು

ತೊಳೆಯುವಳು ಮುಸುರೆಗಳ ಥಳಥಳನೆ ಕ್ಷಣದಿ
ಓಡುವಳು ಮತ್ತೊಂದು ಮನೆಗಿವಳು ಮುದದಿ
ಬೆಳಸುವಳು ಗೆಳೆತನವ ಹುಡುಗರೊಳು ಬೆರೆತು
ದುಡಿತದೊಳಗಿದ್ದರೂ ದುಗುಡವನು ಮರೆತು

ಬಾರದಿರಲೊಂದು ದಿನ ಮನೆಗೆಲಸಕಿವಳು
ಮೀರಿದಳೆ? ಆಜ್ಞೆಯನು ಎನುತ ದುಡುಕಿದೆನು
ಬರಲಿಲ್ಲವಿಂದೇಕೆ ಮನೆಗೆಲಸಕೆಲೆ ನರಸಿ,
ತಿರುದು ತಿಂಬುವ ನಿನಗೆ ಜಂಬವೇ ಮೂಳಿ!

ಹಿಡಿಯುವೆನು ನಾ ನಿನ್ನ ಕೂಲಿಯೊಳಗೊಂದಾಣೆ
ಬಿಡಿಸುವೆನು ನೀನಿನ್ನು ಬೇಕಿಲ್ಲ ನಡಿ ಎಂದೆ
ಸಿಟ್ಟಾಗ ಬೇಡಮ್ಮ ತಾಸು ತಡವಾಯ್ತು
ಹಿಟ್ಟಿನಾರತಿ ಹೊತ್ತು ಗುಡಿಗೆ ಹೋಗಿದ್ದೆ

ಬೀರಪ್ಪ ಹೊರಟಿದ್ದ, ತೇರು ನೋಡಲು ಹೋದೆ
ಎಲೆ ಪೂಜೆ ಕಟ್ಟಿದರು ತಡವಾಯಿತಲ್ಲಿ
ಎಡೆಯನಿಟ್ಟವು ಎಲ್ಲ ಸ್ವಾಮಿಗೊಂದೊಂದಾಗಿ
ನೆನೆಯಕ್ಕಿ ತಂಬಿಟ್ಟು ಕಾಯಿ ಬಾಳೇಹಣ್ಣು

ಉಡಿಯೊಳಗೆ ಮಡಗಿದ್ದ ಚೂರು ಕೊಬ್ಬರಿಯೊಂದು
ತೆಗೆದುಕೊಟ್ಟಳು ನನಗೆ ಪರಸಾದವೆಂದು
ತೇರಿನೊಳು ಬೀರಪ್ಪಗಾರತಿಯ ಬೆಳಗಿದರು
ಹೊಂಬಾಳೆ ದವನಗಳ ನಾವು ಸೂರಿದೆವು

ತೇರು ಕದಲಿಸುವಾಗ ಭೋರೆಂದು ವುರಿಮೆಗಳು
ಕುಣಿಕುಣಿದು ಜನರೆಲ್ಲ ಕೇಕೆ ಹಾಕಿದರು
ನಾಗಮ್ಮ ಕರಿಯಮ್ಮ ಸಿತ್ತಮ್ಮ ಸಿರಿಯಮ್ಮ
ಪದಗಳನು ಹಾಡಿದರು ಏನೇಳಲಮ್ಮ!

ಹೊರಟಿಲ್ಲವೇನಮ್ಮ ನೀನಿನ್ನು ಪರಿಸೆಗೆ
ತರಿಸಮ್ಮ ಕಾಯೊಂದ ಇರಲಿ ದಿನಗೆಲಸ
ಬಾರಮ್ಮ ಸ್ವಾಮಿಯ ತೇರ ನೋಡಮ್ಮ
ಊರೂರೆ ಬಂದಿಹುದು ನೀನಿಲ್ಲೆ ಇರುವೆ

ತೊಡಿಸಮ್ಮ ಪರಿಸೆಯೊಳು ನನ ಕೈಗೆ ಬಳೆಗಳನು
ಕೊಡಿಸಮ್ಮ ಮಕ್ಕಳಿಗೆ ಗೊಂಬೆಗಳನೆಂದಳು
ಆಗಿಲ್ಲವೇ ನರಸಿ ಮದುವೆ ನಿನಗೆಂದರೆ
ಸೆರಗ ಬಾಯಿಗೆ ಮುಚ್ಚಿ ಸಿರಬಾಗಿ ನಗುವಳು

ಮದುವೆಯೊಳಗಿನ ತತ್ವ ಗೊತ್ತಿಲ್ಲ ಪಸುಳೆಗೆ
ನಿಸ್ಪೃಹದ ಮನಸಿನೊಳು ನಲಿದಾಡುತಿಹಳು
ಇರಲಿರಲಿ ನರಸೀ ಮದುವೆಯಂತಿರಲಿ
ಬೀರಪ್ಪನಾ ಪರಿಸೆ ಬಂಗಾರವಾದೀತು

ನಿನ್ನ ಜೀವನ ಬೆಳಸು ಬೆಳೆಯುತಿರಲಿಂತೆ
ನಿನ್ನ ರಸಿಕತೆ ಬೆಳಗಿ ಬೆಳಗುತಿರಲಿಂತೆ
ನಿನ್ನ ದುಡಿತವು ಜನಕೆ ಸಲ್ಲುತಿರಲಿಂತೆ
ನಿನ್ನ ಪರಿಸೆಯ ಕುಣಿತ ಕುಣಿಯುತಿರಲಿಂತೆ

ಬಂಧನದಿ ಸಿಲುಕಿದಾ ಬಾಳಿನನುಭವಕಿಂತ
ಎಳೆತನದ ಕುಣಿತವೇ ಜನಕಜೆಗೆ ಹಿತವು
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...