Home / ಕವನ / ಕವಿತೆ / ನರಸಿಯ ಪರಿಸೆ

ನರಸಿಯ ಪರಿಸೆ

ಹದಿನಾಲ್ಕು ಹರೆಯದ ನರಸಿ ಬಲು ಚೆಲುವೆ
ಮುದವಾಗುತಿದೆ ಇವಳ ನಡೆ ನುಡಿಯ ನೋಡೆ
ಹರುಕು ಕಂಚುಕ ತೊಟ್ಟು ಮಲಿನಾಂಬರವುಟ್ಟು
ಉಡುಗುವಳು ವರ್ತನೆಯ ಮನೆಗಳೊಳು ಕಸವ

ಮುಕುರವೇತಕೆ ಇವಳ ಮೂಗೆ ಸಂಪಿಗೆ ಮೊಗ್ಗು
ಪೊಳೆವ ಕಂಗಳ ತುಂಬಿ ತುಳುಕುತಿದೆ ಹಿಗ್ಗು
ಚೆಲ್ವ ಪಣೆಯೊಳು ಬಿದ್ದು ಅಲುಗಾಡುತಿವೆ ಕುರುಳು
ರಸಿಕತೆಯು ಚಿಮ್ಮುತಿದೆ ಇವಳ ಮಾತಿನೊಳು

ತೊಳೆಯುವಳು ಮುಸುರೆಗಳ ಥಳಥಳನೆ ಕ್ಷಣದಿ
ಓಡುವಳು ಮತ್ತೊಂದು ಮನೆಗಿವಳು ಮುದದಿ
ಬೆಳಸುವಳು ಗೆಳೆತನವ ಹುಡುಗರೊಳು ಬೆರೆತು
ದುಡಿತದೊಳಗಿದ್ದರೂ ದುಗುಡವನು ಮರೆತು

ಬಾರದಿರಲೊಂದು ದಿನ ಮನೆಗೆಲಸಕಿವಳು
ಮೀರಿದಳೆ? ಆಜ್ಞೆಯನು ಎನುತ ದುಡುಕಿದೆನು
ಬರಲಿಲ್ಲವಿಂದೇಕೆ ಮನೆಗೆಲಸಕೆಲೆ ನರಸಿ,
ತಿರುದು ತಿಂಬುವ ನಿನಗೆ ಜಂಬವೇ ಮೂಳಿ!

ಹಿಡಿಯುವೆನು ನಾ ನಿನ್ನ ಕೂಲಿಯೊಳಗೊಂದಾಣೆ
ಬಿಡಿಸುವೆನು ನೀನಿನ್ನು ಬೇಕಿಲ್ಲ ನಡಿ ಎಂದೆ
ಸಿಟ್ಟಾಗ ಬೇಡಮ್ಮ ತಾಸು ತಡವಾಯ್ತು
ಹಿಟ್ಟಿನಾರತಿ ಹೊತ್ತು ಗುಡಿಗೆ ಹೋಗಿದ್ದೆ

ಬೀರಪ್ಪ ಹೊರಟಿದ್ದ, ತೇರು ನೋಡಲು ಹೋದೆ
ಎಲೆ ಪೂಜೆ ಕಟ್ಟಿದರು ತಡವಾಯಿತಲ್ಲಿ
ಎಡೆಯನಿಟ್ಟವು ಎಲ್ಲ ಸ್ವಾಮಿಗೊಂದೊಂದಾಗಿ
ನೆನೆಯಕ್ಕಿ ತಂಬಿಟ್ಟು ಕಾಯಿ ಬಾಳೇಹಣ್ಣು

ಉಡಿಯೊಳಗೆ ಮಡಗಿದ್ದ ಚೂರು ಕೊಬ್ಬರಿಯೊಂದು
ತೆಗೆದುಕೊಟ್ಟಳು ನನಗೆ ಪರಸಾದವೆಂದು
ತೇರಿನೊಳು ಬೀರಪ್ಪಗಾರತಿಯ ಬೆಳಗಿದರು
ಹೊಂಬಾಳೆ ದವನಗಳ ನಾವು ಸೂರಿದೆವು

ತೇರು ಕದಲಿಸುವಾಗ ಭೋರೆಂದು ವುರಿಮೆಗಳು
ಕುಣಿಕುಣಿದು ಜನರೆಲ್ಲ ಕೇಕೆ ಹಾಕಿದರು
ನಾಗಮ್ಮ ಕರಿಯಮ್ಮ ಸಿತ್ತಮ್ಮ ಸಿರಿಯಮ್ಮ
ಪದಗಳನು ಹಾಡಿದರು ಏನೇಳಲಮ್ಮ!

ಹೊರಟಿಲ್ಲವೇನಮ್ಮ ನೀನಿನ್ನು ಪರಿಸೆಗೆ
ತರಿಸಮ್ಮ ಕಾಯೊಂದ ಇರಲಿ ದಿನಗೆಲಸ
ಬಾರಮ್ಮ ಸ್ವಾಮಿಯ ತೇರ ನೋಡಮ್ಮ
ಊರೂರೆ ಬಂದಿಹುದು ನೀನಿಲ್ಲೆ ಇರುವೆ

ತೊಡಿಸಮ್ಮ ಪರಿಸೆಯೊಳು ನನ ಕೈಗೆ ಬಳೆಗಳನು
ಕೊಡಿಸಮ್ಮ ಮಕ್ಕಳಿಗೆ ಗೊಂಬೆಗಳನೆಂದಳು
ಆಗಿಲ್ಲವೇ ನರಸಿ ಮದುವೆ ನಿನಗೆಂದರೆ
ಸೆರಗ ಬಾಯಿಗೆ ಮುಚ್ಚಿ ಸಿರಬಾಗಿ ನಗುವಳು

ಮದುವೆಯೊಳಗಿನ ತತ್ವ ಗೊತ್ತಿಲ್ಲ ಪಸುಳೆಗೆ
ನಿಸ್ಪೃಹದ ಮನಸಿನೊಳು ನಲಿದಾಡುತಿಹಳು
ಇರಲಿರಲಿ ನರಸೀ ಮದುವೆಯಂತಿರಲಿ
ಬೀರಪ್ಪನಾ ಪರಿಸೆ ಬಂಗಾರವಾದೀತು

ನಿನ್ನ ಜೀವನ ಬೆಳಸು ಬೆಳೆಯುತಿರಲಿಂತೆ
ನಿನ್ನ ರಸಿಕತೆ ಬೆಳಗಿ ಬೆಳಗುತಿರಲಿಂತೆ
ನಿನ್ನ ದುಡಿತವು ಜನಕೆ ಸಲ್ಲುತಿರಲಿಂತೆ
ನಿನ್ನ ಪರಿಸೆಯ ಕುಣಿತ ಕುಣಿಯುತಿರಲಿಂತೆ

ಬಂಧನದಿ ಸಿಲುಕಿದಾ ಬಾಳಿನನುಭವಕಿಂತ
ಎಳೆತನದ ಕುಣಿತವೇ ಜನಕಜೆಗೆ ಹಿತವು
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...