ಯಾರು ಹೆಚ್ಚು ?

ಕಲ್ಲು ತಂದು ರೂಪುಮಾಡಿ
ದೇವನೆಂದು ಕರೆದು ನಿನ್ನ
ಎಲ್ಲ ಜಗದ ಒಡೆಯನಾಗಿ
ಕಾವುದೆಂದೆನು.

ಮೆಯ್ಯ ತೊಳೆದು ಹಾಲನೆರೆದು
ಹೂವು ಮುಡಿಸಿ ಗಂಧವಿಕ್ಕಿ
ತುಯ್ಯಲಿಟ್ಟು ದೀಪವಿಟ್ಟು
“ದೇವ” ಎಂದೆನು.

ನಾನು ಮಾಡೆ ನೀನು ಆದೆ
ನಾನು ಕಟ್ಟೆ ನಿನಗೆ ಗುಡಿಯು
ನಾನು ಒರೆಯೆ ನಿನಗೆ ತುತಿಯು
ನಾನೆ ಹಿರಿಯನು.

ಮರುಳನಂತೆ ಹಾಡಿ ಹಿಂದೆ
ಹಿರಿಯತನವ ಹೇರಿ ನಿನಗೆ
ಗರುವದೇವನೆಂದು ಕರೆದು
ಬಿರುದ ಹೊರಿಸಿದೆ.

ಇನಿತು ಕೃತಿಗಳೆನ್ನದಿರಲು
ಪುಣ್ಯ ಪಾಪ ಎಂಬ ಭಾರ
ಕರ್ಮ ಗಿರ್ಮ ಎಂಬ ಬಲೆಯ
ನೀನು ಹಾಕಿದೆ.

ನಾನು ತಗ್ಗಿ ತಗ್ಗಿ ನಡೆಯೆ
ನೀನು ಬೀಗಿ ಬೀಗಿ ಮೆರೆವೆ
ಮಾನವಿಲ್ಲ ನಿನಗೆ, ನೀನೆ
ಜಗದಿ ಭಂಡನು.

ದೇವನೆಂದು ನಿನ್ನ ಮಾಡಿ
ಜೀವದುಸಿರು ನಿನಗೆ ಕೊಟ್ಟು
ಸಾವದಾಯ್ತು, ಎನ್ನ ಭೂತ
ಎನ್ನ ತಿಂದಿತು.

ನಿನ್ನ ಗುಡಿಯು ನಿನ್ನ ಮೂರ್ತಿ
ಕಲ್ಲು ಗುಡಿಯು ಕಲ್ಲು ಮೂರ್ತಿ
ಭಿನ್ನವಾಗೆ ನೊಂದು ನಾನು
ಅತ್ತು ಮರುಗುವೆ.

ಎಲ್ಲ ಜನರ ಹೃದಯದಲ್ಲಿ
ನೆಲಸಿಯವರ ಕಷ್ಟ ದುಃಖ
ನೋಡಿ ನೋಡಿ ಕರಗದಿರುವೆ
ಕಟುಕನಲ್ಲವೆ?

ಮಾಯೆಯೆಂಬ ಬಲೆಯ ಬೀಸಿ
ಮನುಜ ಮೀನ ಹಿಡಿದು ತಿಂಬ
ಜಾಲಗಾರ ನಿನಗದೆಂತು
ದಯೆಯದಿಪ್ಪುದು.

ಹೊಲ್ಲೆತನವ ಪೆರ್ಮೆಯೆಂದು
ಎಲ್ಲ ಗುಣವ ಹೇಳಿಕೊಂಡು
ಕಳ್ಳನಂತೆ ಅಡಗಿಕೊಂಡು
ಕೈಗೆ ಸಿಕ್ಕದೆ,

ನೀಚತನಕೆ ನೀನೆ ಹೇಸಿ
ನಾಚಿಕೊಳುತ ಮುಖವ ಮರೆಸಿ
ಗೋಚರಿಸದೆ ತಿರುಗುತಿರುವೆ
ಲೋಕವರಿಯಲು.

ನಾಡನಾಳ್ವ ಸಾರ್ವಭೌಮ
ಬಿರುದು ಪಡೆದ ಚಕ್ರವರ್ತಿ
ಕಣ್ಗೆ ಕಾಂಬ ತೆರದಿ ನೀನು
ಕಾಣ ಬೇಡವೆ?

ರೂಪು ದೇಹ ಏನುಮಿಲ್ಲ
ಸೈಪು ಪಾಪ ಏನುಮಿಲ್ಲ
ಕಷ್ಟ ದುಃಖ ಅಂಟಲಿಲ್ಲ
ದೇವನೇತಕೆ ?

ಸಹಜನೆಂದು ಹಿರಿಯನೆಂದು
ಪರಮನೆಂದು ದೇವನೆಂದು
ಕಹಳೆ ಕೊಂಬು ಇಡಿಸಿಕೊಂಬೆ
ತೋರು ನೀನೆಲೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿತೆಯೆಂದರೇನು?
Next post ಮೂಗಪ್ಪ

ಸಣ್ಣ ಕತೆ

  • ಬಾಗಿಲು ತೆರೆದಿತ್ತು

    ಆ ಮನೆಯ ಮುಂದಿನ ಬಾಗಿಲು ಯಾವಾಗಲೂ ಇಕ್ಕಿರುವುದು! ನನ್ನ ಓದುವ ಕೋಣೆಯ ಕಿಡಿಕೆಯೊಳಗಿಂದ ಆ ಮನೆಯ ಬಾಗಿಲು ಕಾಣುವುದು. ನಾನು ಕಿಡಿಕೆಯೊಳಗಿಂದ ಎಷ್ಟೋ ಸಲ ಅತ್ತ ಕಡೆ… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…