Home / ಕವನ / ಕವಿತೆ / ಯಾರು ಹೆಚ್ಚು ?

ಯಾರು ಹೆಚ್ಚು ?

ಕಲ್ಲು ತಂದು ರೂಪುಮಾಡಿ
ದೇವನೆಂದು ಕರೆದು ನಿನ್ನ
ಎಲ್ಲ ಜಗದ ಒಡೆಯನಾಗಿ
ಕಾವುದೆಂದೆನು.

ಮೆಯ್ಯ ತೊಳೆದು ಹಾಲನೆರೆದು
ಹೂವು ಮುಡಿಸಿ ಗಂಧವಿಕ್ಕಿ
ತುಯ್ಯಲಿಟ್ಟು ದೀಪವಿಟ್ಟು
“ದೇವ” ಎಂದೆನು.

ನಾನು ಮಾಡೆ ನೀನು ಆದೆ
ನಾನು ಕಟ್ಟೆ ನಿನಗೆ ಗುಡಿಯು
ನಾನು ಒರೆಯೆ ನಿನಗೆ ತುತಿಯು
ನಾನೆ ಹಿರಿಯನು.

ಮರುಳನಂತೆ ಹಾಡಿ ಹಿಂದೆ
ಹಿರಿಯತನವ ಹೇರಿ ನಿನಗೆ
ಗರುವದೇವನೆಂದು ಕರೆದು
ಬಿರುದ ಹೊರಿಸಿದೆ.

ಇನಿತು ಕೃತಿಗಳೆನ್ನದಿರಲು
ಪುಣ್ಯ ಪಾಪ ಎಂಬ ಭಾರ
ಕರ್ಮ ಗಿರ್ಮ ಎಂಬ ಬಲೆಯ
ನೀನು ಹಾಕಿದೆ.

ನಾನು ತಗ್ಗಿ ತಗ್ಗಿ ನಡೆಯೆ
ನೀನು ಬೀಗಿ ಬೀಗಿ ಮೆರೆವೆ
ಮಾನವಿಲ್ಲ ನಿನಗೆ, ನೀನೆ
ಜಗದಿ ಭಂಡನು.

ದೇವನೆಂದು ನಿನ್ನ ಮಾಡಿ
ಜೀವದುಸಿರು ನಿನಗೆ ಕೊಟ್ಟು
ಸಾವದಾಯ್ತು, ಎನ್ನ ಭೂತ
ಎನ್ನ ತಿಂದಿತು.

ನಿನ್ನ ಗುಡಿಯು ನಿನ್ನ ಮೂರ್ತಿ
ಕಲ್ಲು ಗುಡಿಯು ಕಲ್ಲು ಮೂರ್ತಿ
ಭಿನ್ನವಾಗೆ ನೊಂದು ನಾನು
ಅತ್ತು ಮರುಗುವೆ.

ಎಲ್ಲ ಜನರ ಹೃದಯದಲ್ಲಿ
ನೆಲಸಿಯವರ ಕಷ್ಟ ದುಃಖ
ನೋಡಿ ನೋಡಿ ಕರಗದಿರುವೆ
ಕಟುಕನಲ್ಲವೆ?

ಮಾಯೆಯೆಂಬ ಬಲೆಯ ಬೀಸಿ
ಮನುಜ ಮೀನ ಹಿಡಿದು ತಿಂಬ
ಜಾಲಗಾರ ನಿನಗದೆಂತು
ದಯೆಯದಿಪ್ಪುದು.

ಹೊಲ್ಲೆತನವ ಪೆರ್ಮೆಯೆಂದು
ಎಲ್ಲ ಗುಣವ ಹೇಳಿಕೊಂಡು
ಕಳ್ಳನಂತೆ ಅಡಗಿಕೊಂಡು
ಕೈಗೆ ಸಿಕ್ಕದೆ,

ನೀಚತನಕೆ ನೀನೆ ಹೇಸಿ
ನಾಚಿಕೊಳುತ ಮುಖವ ಮರೆಸಿ
ಗೋಚರಿಸದೆ ತಿರುಗುತಿರುವೆ
ಲೋಕವರಿಯಲು.

ನಾಡನಾಳ್ವ ಸಾರ್ವಭೌಮ
ಬಿರುದು ಪಡೆದ ಚಕ್ರವರ್ತಿ
ಕಣ್ಗೆ ಕಾಂಬ ತೆರದಿ ನೀನು
ಕಾಣ ಬೇಡವೆ?

ರೂಪು ದೇಹ ಏನುಮಿಲ್ಲ
ಸೈಪು ಪಾಪ ಏನುಮಿಲ್ಲ
ಕಷ್ಟ ದುಃಖ ಅಂಟಲಿಲ್ಲ
ದೇವನೇತಕೆ ?

ಸಹಜನೆಂದು ಹಿರಿಯನೆಂದು
ಪರಮನೆಂದು ದೇವನೆಂದು
ಕಹಳೆ ಕೊಂಬು ಇಡಿಸಿಕೊಂಬೆ
ತೋರು ನೀನೆಲೆ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...