Home / ಕವನ / ಕವಿತೆ / ಚಂದ್ರ ಚಕೋರಿ

ಚಂದ್ರ ಚಕೋರಿ

ಇರುಳಿನ ಮಡಿಲಲಿ ಒಲವಿನೊಂದು ಮನ-
ದಾಸೆಯ ನನಸಂತೆ,
ಆಗಸದೊಡಲಲಿ ಚಂದಿರ ನಗುತಿರೆ,
ಜೀವನೆ ಕನಸಂತೆ!

ಒಂದು ಚಕೋರಿಯು ಚಂದಿರನೊಲವನು
ಪಡೆಯಲಂದು ಮನವ
ಭಾವ ಪುಷ್ಪಗಳ ಪರಿಮಳವಾಗಿಸಿ
ಹರಿಸಿತು ಎದೆಯೊಲವ

ಹಕ್ಕಿ ಚಂದಿರನ ಸನಿಯ ಸಾರಲಿಕೆ
ಚಿಮ್ಮಿ ಹಾರುತಿಹುದು.
ಒಲವಿನ ಎಣೆಯಿಲ್ಲದ ಸುಖದಾಸೆಯು
ಸ್ಫೂರ್ತಿಯನಿತ್ತಿಹುದು.

ಹಾರಿ ಹಾರಿ, ಸರಿ ಸಾರಿ ಬೀಳುತಿರೆ,
ಹಕ್ಕಿ ನೋಡಿತಲ್ಲಿ,
ಇರುಳನಲ್ಲ ತನ್ನೊಲವ ಚಂದಿರನು
ಹಗಲ ಹಿಡಿತದಲ್ಲಿ.

ತನ್ನೆದೆಯೊಲವಿನ ಆಸೆಯೆಲ್ಲ ಹುಸಿ
ಹುಡಿಯ ಗುಡ್ಡೆಯಾಗಿ,
ಹಕ್ಕಿ ಚಿಂತಿಸಿತು ಇನಿಯನ ಜತೆಯನು
ಸೇರುವ ಬಗೆಗಾಗಿ.

ಸುಖ ಸಂತೋಷದಿ ನೋಡಿತೊಂದು ಕಿಡಿ
ಬೆಂಕಿ ಮಸಣದಲ್ಲಿ;
“ಇದರ ಉಡಿಯೊಳೆನ್ನೆದೆಯ ನೀಗುವೆನು,
ಉಳಿವೆ ಬೂದಿಯಲ್ಲಿ.

ಮುಂದಕೊಂದು ದಿನ, ಶಿವನು ಈ ಕಡೆಗೆ
ಬಂದೆ ಬರುವನಂದು,
ಚಿತೆಯ ಭಸ್ಮವನು ಕೈಯಲೆತ್ತಿ ಹರ
ಹಣೆಗೆ ಇಡುವ ನಿಂದು.

ಶಂಕರ ಶಿರದಲಿ ರಾಜಿಸುತಿಹನದೊ,
ಇನಿಯನವನ ಬಳಿಗೆ
ಚಿತೆಯ ಭಸ್ಮದಲಿ ಸಾರಿ ಸೇರುವೆನು,
ತ್ಯಾಗ ಒಲವ ನೆರಿಗೆ.”

ಎನುತ ಹಕ್ಕಿ ಹಾರಿತ್ತು ಬೆಂಕಿಯಲಿ,
ಮೂರೆ ಗಳಿಗೆಯಲ್ಲಿ
ಜೀವ ಹಾರಿರಲು, ರವಿಯು ಉದಿಸಿದನು
ಬಾಳ ಮೂಡಲಲ್ಲಿ!
*****

Tagged:

Leave a Reply

Your email address will not be published. Required fields are marked *

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...