Home / ಕವನ / ಕವಿತೆ / ಚಂದ್ರ ಚಕೋರಿ

ಚಂದ್ರ ಚಕೋರಿ

ಇರುಳಿನ ಮಡಿಲಲಿ ಒಲವಿನೊಂದು ಮನ-
ದಾಸೆಯ ನನಸಂತೆ,
ಆಗಸದೊಡಲಲಿ ಚಂದಿರ ನಗುತಿರೆ,
ಜೀವನೆ ಕನಸಂತೆ!

ಒಂದು ಚಕೋರಿಯು ಚಂದಿರನೊಲವನು
ಪಡೆಯಲಂದು ಮನವ
ಭಾವ ಪುಷ್ಪಗಳ ಪರಿಮಳವಾಗಿಸಿ
ಹರಿಸಿತು ಎದೆಯೊಲವ

ಹಕ್ಕಿ ಚಂದಿರನ ಸನಿಯ ಸಾರಲಿಕೆ
ಚಿಮ್ಮಿ ಹಾರುತಿಹುದು.
ಒಲವಿನ ಎಣೆಯಿಲ್ಲದ ಸುಖದಾಸೆಯು
ಸ್ಫೂರ್ತಿಯನಿತ್ತಿಹುದು.

ಹಾರಿ ಹಾರಿ, ಸರಿ ಸಾರಿ ಬೀಳುತಿರೆ,
ಹಕ್ಕಿ ನೋಡಿತಲ್ಲಿ,
ಇರುಳನಲ್ಲ ತನ್ನೊಲವ ಚಂದಿರನು
ಹಗಲ ಹಿಡಿತದಲ್ಲಿ.

ತನ್ನೆದೆಯೊಲವಿನ ಆಸೆಯೆಲ್ಲ ಹುಸಿ
ಹುಡಿಯ ಗುಡ್ಡೆಯಾಗಿ,
ಹಕ್ಕಿ ಚಿಂತಿಸಿತು ಇನಿಯನ ಜತೆಯನು
ಸೇರುವ ಬಗೆಗಾಗಿ.

ಸುಖ ಸಂತೋಷದಿ ನೋಡಿತೊಂದು ಕಿಡಿ
ಬೆಂಕಿ ಮಸಣದಲ್ಲಿ;
“ಇದರ ಉಡಿಯೊಳೆನ್ನೆದೆಯ ನೀಗುವೆನು,
ಉಳಿವೆ ಬೂದಿಯಲ್ಲಿ.

ಮುಂದಕೊಂದು ದಿನ, ಶಿವನು ಈ ಕಡೆಗೆ
ಬಂದೆ ಬರುವನಂದು,
ಚಿತೆಯ ಭಸ್ಮವನು ಕೈಯಲೆತ್ತಿ ಹರ
ಹಣೆಗೆ ಇಡುವ ನಿಂದು.

ಶಂಕರ ಶಿರದಲಿ ರಾಜಿಸುತಿಹನದೊ,
ಇನಿಯನವನ ಬಳಿಗೆ
ಚಿತೆಯ ಭಸ್ಮದಲಿ ಸಾರಿ ಸೇರುವೆನು,
ತ್ಯಾಗ ಒಲವ ನೆರಿಗೆ.”

ಎನುತ ಹಕ್ಕಿ ಹಾರಿತ್ತು ಬೆಂಕಿಯಲಿ,
ಮೂರೆ ಗಳಿಗೆಯಲ್ಲಿ
ಜೀವ ಹಾರಿರಲು, ರವಿಯು ಉದಿಸಿದನು
ಬಾಳ ಮೂಡಲಲ್ಲಿ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...