Home / ಕವನ / ಕವಿತೆ / ಜೀವನದ ರೂಪನ್ನೆ ಬದಲಿಸುವ, ಬಾ!

ಜೀವನದ ರೂಪನ್ನೆ ಬದಲಿಸುವ, ಬಾ!

ಕೈಯ ಕೈಯಲಿ ಇಟ್ಟು
ಕಣ್ಣ ಕಣ್ಣಲಿ ನಟ್ಟು
ಮುಂದಕ್ಕೆ ಸಾಗೋಣ, ನೋಡೋಣ ಬಾ;
ನಾನು ನೀನೂ ಕೂಡಿ
ವಿಧಿಯೊಡನೆ ಹೆಣಗಾಡಿ
ಜೀವನದ ರೂಪನ್ನೆ ಬದಲಿಸುವ, ಬಾ!

ನದಿಯ ತಣ್ದುಟಿ ಮೇಲೆ
ಶಶಿಯ ಒಲವಿನ ಓಲೆ
ಕೊರೆಸಿ ಕುಣಿವುದನು ಓದೋಣ ಬಾ;
ಬಾಳಿನಂಗಳದಲ್ಲಿ
ಸಾವ ಪಂಜರದಲ್ಲಿ
ಅಳಿದುಳಿದ ಕುಲವನ್ನು ಕಾಣೋಣ, ಬಾ!

ನಾಡ ಸುತ್ತಲು ಸುತ್ತಿ
ಹಾಡ ಮಿಂಚಿನ ಕತ್ತಿ
ಝಳಪಿಸುತ ಇರುಳನ್ನು ಇರಿಯೋಣ ಬಾ;
ನಾನು ನೀನೂ ಕೂಡಿ
ಜೀವನವ ಜಾಲಾಡಿ
ಹುದುಗಿರುವ ಮುತ್ತನ್ನು ಆಯೋಣ, ಬಾ!

ಸಿರಿಯ ಸಂತಸ ಕೂಟ,
ಹೊರೆಯ ಸಿಂಗರ ಮಾಟ,
ಮರೆಯ ಹೆಣ್ಣಿನ ಬೇಟ, ಕಾಣೋಣ ಬಾ;
ಅದಕೆ ಜೀವವ ತೆತ್ತ
ಲೆಕ್ಕವಿಲ್ಲದ ಮೊತ್ತ
ಜನರ ಜೀವನವನ್ನು ಎಣಿಸೋಣ, ಬಾ!

ನಾಡ ಬಿಡುಗಡೆಗಾಗಿ
ಓಡ ಅರಳುಗಳಾಗಿ
ಬಾಡಿರುವ ಹೂಗಳನು ಆಯೋಣ ಬಾ;
ಅವರ ಜೀವನದ ನಾಡಿ
ಸಿಡಿಲ ನದಿಗಳ ಕೋಡಿ
ಕೊಚ್ಚಿಸುತ, ಕ್ರಾಂತಿಯನು ಹರಡೋಣ, ಬಾ!

ಜಗವೆ ತನ್ನದು ಎಂದು,
ಕದ್ದು ಎಲ್ಲವ ತಂದು
ಕೂಡಿಟ್ಟ ಕಳ್ಳನನು ಅಳಿಸೋಣ ಬಾ;
ತನ್ನ ಬಾಳ್ವೆಯ ತೆತ್ತು,
ತಾನೆ ಉಳಿದರ ತೊತ್ತು
ಆಗಿ ಅಳಿಯುವ ಜೀವ ಉಳಿಸೋಣ, ಬಾ!

ಅವರ ಕೊನೆಯಿದು ಅಲ್ಲ,
ಇದು ಬರಿಯ ಉರಿಯಲ್ಲ,
ನಾಡಿನೆದೆಗಿಚ್ಚೆಂದು ಅರಿಯೋಣ ಬಾ;
ನಾನು ನೀನೂ ಕೂಡಿ
ಒಲವ ಹಾಡನು ಹಾಡಿ
ಜೀವನದ ರೂಪ, ಬದಲಿಸುವ ಬಾ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...