ಹನುಮಂತನ ಜನನ

ಶ್ರೀರಾಮ ಶ್ರೀರಾಮ ಶ್ರೀರಾಮ ನಾಮವನು
ವಿಂದ್ಯಾದ್ರಿ ಗಿರಿದುದಿಯ ಮೇಲಿನಿಂದುರಿಸಿ;
ಸಾನಂದ ಸಂಸ್ಕಾರ ಸಾಯುಜ್ಯವನ್ನಿತ್ತ
ಶ್ರೀರಾಮ ಭೃತ್ಯನೀ ಮಂಡಲದಿ ಹಾರಿ.

ಹಾರಾರಿ ಲೋಕದಾ ಜನದೊಡೆಯ ರಾಮನಾ
ಸೇವೆಯನು ಪೂಜೆಯನು ಧ್ಯಾನವನು ಸದಾ;
ಧ್ಯಾನದಾ ಬೀಜವನು ಆ ಸೇತು ಹಿಮಿಗಿರಿಯ
ನಡುಭೂಮಿಯೆಡೆ ಬಿತ್ತಿ ಧನ್ಯನವನಾದ!

ಸೂಸಿಬಹ ತಣ್ಣೆಲರ, ಸುರುಳಾಯ್ವ ಬಿರುಗಾಳಿ
ಮಧ್ಯೆ ಶ್ರೀರಾಮ ರಾಮೆಂಬ ಧ್ವನಿ ಕೇಳಿ;
ಪೂರ್ವಾಪರ ದಡಬಡೆವ ಸಾಗರದ ತೆರೆಗಳೂ
ಶ್ರೀರಾಮ ಎಂದೆನುತ ಘೋಷಿಪುದು ಉರುಳಿ!

ಪುಣ್ಯೆ ಶ್ರೀ ತಾಯಮ್ಮ ಭೂರಮೆಯ ಪ್ರಿಯಸುತೆ,
ಈ ನಮ್ಮ ಭಾರತಿಯು ಆ ಧ್ವನಿಯ ಕೇಳಿ
ವಾಯುಸುತ ಹಾರಾಡಿ ಚೆಲ್ಲಾಡಿದಾ ಮಂತ್ರ
ಇದೊ ಕುವರ ಕೋಟಿಗಳೆ ಕಲಿಯಿರೆಂದುಸುರೆ!

ಕಿಷ್ಕಿಂಧ ನಗರದಲ್ಲಿ ಕಿರಿದಾದ ಜನ್ಮದಲಿ
ವಾನರನ ರೂಪದಲಿ ಶ್ರೀದೇವ ಮಾಯೆ;
ಅವತಾರ ಲೀಲೆಯಲಿ ದಾಶರಥಿ ಸುತ್ತಾಡೆ
ದಂಡಕಾರಣ್ಯದಲಿ ಜಗಜನರಕಾಯೆ!

ಕಪಿವೀರ ಕುಂಜರನು ಮುದ್ದಾಡಿದೆಳೆಪಸುಳೆ
ವಾನರನ ಕುಲಪೋತೆಯಂತೆಸೆದು ಕುವರಿ,
ಅಂಜನಾದೇವಿ ಶ್ರೀ ರಮಣಿಯಂತಾಡುತಲಿ
ಕೇಸರಿಯ ಸರಿಸತಿಯೆಂದೆನಿಸಿದಳೂ ಮುದದಿ!

ವೀರ ಸ್ತ್ರೀ ಅಂಜನಿಯು ಕೇಸರಿಯ ಪ್ರಿಯ ಪತ್ನಿ
ಪುತ್ರ ಸುಖ ಹೊಂದಲೆಂದೆಲ್ಲ ಜನರಂತೆ,
ಮರುಮರುಗಿ ಕಟ್ಟಕಡೆ ಬ್ರಹ್ಮನಂ ಮೊರೆಯಿಡಲು
ಗಿರಿವನಕೆ ಸಾಗಿದಳು ಘೋರ ತಪಕೆಂದೆ.

ವೃಷಭಾಚಲಾಗ್ರದಲಿ ಪತಿಯಾಜ್ಞೆ ಪಂಥದಲಿ
ತಪವೆಸಗಿ, ಸತ್ಪುತ್ರ ಮಾತೆಯೆಂದೆನಿಸೆ-
ಅಂಜನಿ-ನಿರಾಹಾರ, ಜಲಪಾನ, ಏಕಪದ,
ಉಂಗುಷ್ಠ ಮಾತ್ರದಲಿ ನಿಲ್ಲುತಲಿ ತಪಕೆ!

ಧ್ಯಾನದಲಿ ಏಳುಸಾವಿರ ವರ್ಷ ಕಳೆಯುತಲಿ
ಲೋಕದಲಿ ಶಾಂತಿಯದು ಇಲ್ಲದಿರೆ ಕಡೆಗೆ
ಪರಮಾತ್ಮ ಶಂಕರನೆ ತಾನ್ಬಂದು ಓಡೋಡಿ
ಅಂಜನಿಯ ಮೊರೆಯನ್ನು ಸ್ಮರಿಸಿದನು ನಿಜದೆ.

ಸಾಹಸದ ಚಿಚ್ಛಕ್ತಿ ದೃಢವ್ರತದ ಮಹಿಮೆಯು
ಸ್ತ್ರೀಯೊಳಿಹ ಮೌನ ಪ್ರತಿಜ್ಞೆ ಪ್ರಭಾವ-
ಜನಗಣಕೆ ಹರಿಮನಕೆ ಯೋಗಿ ಜನಭಾವಕೆ
ಅಚ್ಚರಿಯವಡಿಸಿದವು ಅಂಜನಿಯ ಸ್ಥೈರ್ಯ!

ಮನನೊಂದು ಬಹುಮೆಚ್ಚಿ ದೇವಾಧಿಪಾ ವಾಯು
ನಿಜರೂಪಿಂದಂಜನಿಗೆ ‘ತನ್ನ ಬಲವೀರ್ಯ
ತೇಜಸ್ಸು ಮುಂತಾಗಿ ಇರುವ ವರ ಕುವರನನು
ಪಡೆ’ಎಂದು ವರವಿತ್ತು ಪೋದ ಸಖ ಸೂರ್ಯ.

‘ಬಾ ಎನ್ನ ಶಂಕರನೆ, ಶ್ರೀಲೋಲ ಶ್ರೀಕರನೆ!
ಬಾ ಎನ್ನ ಮೂರುತಿಯೆ’ ಎಂದು ಮೊರೆಯಿಟ್ಟು!
‘ಮಗನನ್ನು ಮಡಿಲಲ್ಲಿ ಮಮತೆಯಲಿ ಮುದ್ದಿಸುವ
ಭಾಗ್ಯವೆನಗಿಡು’ ಎಂದು ಮೊರೆದು ಮತಿಗೆಟ್ಟು.

ವರುಷವನು ಕ್ಷಣದಂತೆ ಕಳೆಯುತಿರೆ ಬಂದನದೊ
‘ಭೋ’ವೆಂದು ಬೊಬ್ಬಿಡುತ ಶಂಕರನೆ ಬಳಿಗೆ
ಏಳೇಳು ನಿಂತಿರುವೆ, ಸನ್ನಿಧಿಗೆ ಬಂದಿರುವೆ
ಬೇಡು ನೀ ಬೇಕದ ವರಗಳನು ಮುದದೆ.

ಅರೆತೆರೆದ ಕಣ್ಣನ್ನು ಕೆದರಿರಿತ ವೇಣಿಯನು
ಜೋಲುಮೊಗ ಜೋಡು ಕೈ ಎಲ್ಲವನು ಸಮದೆ;
ಸರಿಪಡಿಸಿ ತಲೆಬಾಗಿ ‘ನಮೋ’ಎಂದೆನ್ನುತಲಿ
ಅಂಜನಿಯು ಪ್ರಸನ್ನ ಮುಖಿಯಾಗಿ ಶಿವಗೆ!-

ಬಗ್ಗಿದಳು, ಕಂಬನಿಯ ಸುರಿಸಿದಳು, ಮುದದಿಂದ
ಹಿಗ್ಗಿದಳು, ಮನದಲ್ಲಿ ಬೆದರಿದಳು ನೋಡೆ;
‘ಹೇ ಶಿವಾ, ಶಂಕರಾ, ಹರಹರಾ, ಗಿರಿಜೆವರ!
ಬಂದೆಯಾ?  ನಿಂತೆಯಾ? ರೂಪವನು ತೋರ್ದೆ’!

‘ಕೇಳೇಕಾದಶರುದ್ರ ವಜ್ರದೇಹಿಯ ತೆರದಿ
ಬೆದರನಾರಗು ಜಗದಿ, ರಕ್ಕಸರಿಗೂ;
ಹುಟ್ಟುವಳು ಧನ್ಯಳಿಹೆ, ನೀಕೊರಗದಿರುವಿದಕೆ
ಘೋರತಪ ಕೊನೆಗೊಳಿಸು, ಬೆದರದಿರು ಹೋಗು’!

‘ಕೇಳೆನ್ನ ಪ್ರಿಯಸುತೆ, ಕೂತಿರೇ ಧ್ಯಾನದಲಿ
ದೃಢಮನದಿ, ನಿಜತಪದಿ, ಘನವಾದಿಯಾಗಿ;
ಕಣ್ಣೆರಡು ಮುಚ್ಚಿಡುತ, ಬೋಗಸೆಯನ್ನೊಡ್ಡಿಡುತ
ಧಾನ್ಯಸ್ಥಳಾಗುನೀ ದೈನ್ಯಮತಿಯಾಗಿ.’

ಎಂದು ಸುತನುದಯದಾ ನಂಬುಗೆಯ ಬೀಜವನು
ಅಂಜನಿಯ ಸಮ್ಮುಖದೊಳಿಡುತ ಈಶ್ವರನು
ಥಟ್ಟನರೆ ಕ್ಷಣದೊಳಗೆ ಮಿಂಚಿ ಮರೆಯಾದನಾ
ಶಂಕರನು ಸಾನಂದ ಸುಖವೀಯುವವನು!

ಯೋಗಾಸನದಿ ನಿದ್ರೆ, ಬೊಗಸೆ ಬೇಡಿಕೆ ಮುದ್ರೆ-
ಯಿಂದ ಪರಮಾನಂದ ಶೃದ್ದೆಯಲಿ ಭದ್ರೆ,
ಗಿರಿಯ ಕಂದರದಲ್ಲಿ ಸ್ವರೂಪಾನಂದದಲಿ
ಇರಿತಳಂದದಿ ಮಂದಗಮನೆ ಚೆಲ್ವಾಧರೆ!

ಶೋಭಿಸುವ ಆ ಚೈತ್ರ ಶುದ್ದ ಪೂರ್ಣಮಿಯ ದಿನ
ಅರುಣೋದಯ ಸಮಯದಲ್ಲಿ ಸರಿಯಾಗಿ;
ನಿಶೆ ಹರಿದು ಉಷೆಚೆಲ್ಲಿ ಎಳರವಿಯ ತಂಗದಿರು
ಭೂರಮೆಯ ಹೃತ್ಪಠದ ಕಾಂತಿಯನು ಮಿಗಿಸಿ.

ಧೀರಸತಿ ಆ ಸಮಯದಲ್ಲಿ ಮಾರುತಿಯನ್ನು
ಪ್ರಸವಿಸುತ ಭೂತಲದಲ್ಲೊಂದು ಶೋಭನೆಯ
ಬೀರುತಾ ಕೃತ ತ್ರೇತಾ ದ್ವಾಪರಕೆ ಹೆಸರಾಂತ
ಕಲಿವೀರನನ್ನಡೆದ ಪುಣ್ಯಮಣಿ ಧನ್ಯ!

ದಿನವಂದು ಶಾಂತಿಯಲಿ ನವಗ್ರಹವು ಅದರದರ
ತಾಣದಲಿ ರಂಜಿಸಿತು ತಾರೆಗಳು ನಭದಿ,
ತರುಲತಾ ತಳಿರೆದ್ದು ಉದ್ಯಾನ ಹೂವರಳಿ
ಖಗಮೃಗವು ನಲ್ಮೆಯಿಂದೋಡಾಡಿ ಸುಖದಿ!

ಇರ್ದೊಡೀ ಪ್ರಕೃತಿಯು ಹೊಸಕಳೆಯಿಂದೀ ತೆರದಿ
ವಾನರನ ರೂಪದಲ್ಲವತರಿಸಿ ಜಗದೆ
ಮಾರುತಿಯು ಹನುಮಂತ ಘನವಂತನೆಂದೆನಿಸಿ
ದಿವ್ಯ ತೇಜಸ್ವಿ ಶರೀರದಿಂದುದಿಸೆ!

ಅಂಜನಿಯ ಸಿರಿವದನ ಸಂತಸದ ಹಿರಿಹಿಗ್ಗು
ಶ್ರೀರಾಮೋದ್ಭವಕೆ ಆ ಕೌಸಲ್ಯೆಯಂತೆ;
ಧೀರ ಸತಿಯುತ್ಸಾಹ ಜಗಕೆ ಪುತ್ರೋತ್ಸವವು,
ಕಣ್ಮನದ ಕಾಂಕ್ಷೆ ಬಂದೊಡಮೂಡಿದಂತೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಲಿಂಗಮ್ಮನ ವಚನಗಳು – ೨೯
Next post ಸ್ನಾನಕ್ಕೆ ಬಂದ ಚಂದ್ರ

ಸಣ್ಣ ಕತೆ

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಟೋಪಿ ಮಾರುತಿ

    "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಅಪರೂಪದ ಬಾಂಧವ್ಯ

    ಹೆತ್ತ ತಾಯಿ ಬಿಟ್ಟುಹೋದ ಎರಡು ಮುಂಗಸಿ ಮರಿಗಳು ಅನಾಥವಾಗಿ ಚೀರಾಡುತ್ತಿದ್ದುದು, ಮನೆಯ ಮಕ್ಕಳ ಕಣ್ಣಿಗೆ ಬಿದ್ದಿತು. "ಅಪ್ಪಾ ಇಲ್ಲಿ ನೋಡು, ಮುಂಗುಸಿ ಮರಿ ಅಳುತ್ತಾ ಇವೆ. ಅದಕ್ಕೆ… Read more…