Home / ಕವನ / ಕವಿತೆ / ಪ್ರಾಚೀನ

ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ
ಕಲಾಯಿ ಇಲ್ಲದೇ ಅಟ್ಟಕ್ಕೇರಿದ
ಹಿತ್ತಾಳೆ ತಾಮ್ರದ ಪಾತ್ರೆ

ಮುತ್ತಜ್ಜ ಅಜ್ಜ ಅಪ್ಪ
ಮತ್ತಿನ್ಯಾರೋ ಮಲಗೆದ್ದ
ತೊಟ್ಟಿಲು ಉಯ್ಯಾಲೆ
ಭೂತಾಕಾರದ ಮಂಚ
ಮೂಲೆಯಲಿ ತೂಗುವ ಕಂದೀಲು,
ಮುಖ ಕಾಣದ ಕನ್ನಡಿ
ಪ್ರಾಚ್ಯ ವಸ್ತು ಸಂಗ್ರಹದ ಸರಕು
ತಲೆತಲಾಂತರದಿಂದ ಬಂದ ಮುರುಕು
ಉಪಯೋಗಕ್ಕೆ ಬರುವಂತಿಲ್ಲ
ಉಪಯೋಗಿಸದೇ ಇರುವಂತಿಲ್ಲ.

ಅಪ್ಪ? ಅಲ್ಲಲ್ಲ ಅಜ್ಜ? ಅಲ್ಲ
ಮುತ್ತಜ್ಜ ಅಥವ ಅವನಜ್ಜ ನೆಟ್ಟ ಆಲ
ದಪ್ಪ ಬಿಳಲುಗಳಾಗಿ ಭೂಮಿ ಕೊರೆದು
ಈಗ ಬೇರಾವುದೋ ಬಿಳಲಾವುದೋ
ಎಲ್ಲ ಅಯೋಮಯ

ಒಂದೊಂದು ವಸ್ತುವಿನೊಂದಿಗೂ
ಒಂದೊಂದು ಹಳೆಮುಖಗಳು
ತಳುಕು ಹಾಕಿಕೊಂಡು ಎಲ್ಲಾ
ಸಿಕ್ಕಷ್ಟಕ್ಕೇ ಸೀದು
ಕೈ ತೊಳೆಯೋಣವೆಂದರೆ
ಕಳೆದುಹೋದ ಆತ್ಮಗಳು
ಕಣ್ಮುಂದೆ ಸುಳಿದು
ವೈಭವದ ಗತ ಇತಿಹಾಸ ಸಾರುತ್ತಾ
ಗಿರ್‍ರನೆ ರಾಟವಾಳ ಸುತ್ತಿದಂತೆ
ಮನಮಂದಿರದಲ್ಲಿ ನೆನಪುಗಳ ಸರಮಾಲೆ
ಹಳೆಬೇರು ಕಿತ್ತರೆ? ಹೊಸಚಿಗುರು ನೆಟ್ಟರೆ?
ತುಮುಲಗಳ ಒಡಲೊಳಗೆ
ಹಳೆಪಳೆ ಮುರುಕುಗಳೊಳಗೆ
ನನ್ನದೇ ಪ್ರತಿರೂಪ
ಥಟ್ಟನೆ ಕಂಡಂತಾಗಿ,

ಬಹುಶಃ ಹಿರಿಯ ಆತ್ಮಗಳು ಆಲನೆಟ್ಟಿದ್ದು
ನೇಣಿಗಲ್ಲ ಉಯ್ಯಾಲೆ ಜೀಕಲು
ಬೇಕೆಂದರೆ ಎಲ್ಲಾ ಬೇಕು
ಬೇಡೆಂದರೆ ಏನೂ ಬೇಡ!

ನೆನ್ನೆಯವರಿಗೆ ರಸ,
ಇಂದಿಗೆ ಕಸ
ಇಂದಿನ ನಮ್ಮ ಹಾಸು
ನಾಳಿನವರಿಗೆ ಕಾಲೊರೆಸು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...