Home / ಕವನ / ಕವಿತೆ / ಪ್ರಾಚೀನ

ಪ್ರಾಚೀನ

ಮಣ್ಣಿನ ಮಡಿಕೆ ಕುಡಿಕೆ
ಕಲಾಯಿ ಇಲ್ಲದೇ ಅಟ್ಟಕ್ಕೇರಿದ
ಹಿತ್ತಾಳೆ ತಾಮ್ರದ ಪಾತ್ರೆ

ಮುತ್ತಜ್ಜ ಅಜ್ಜ ಅಪ್ಪ
ಮತ್ತಿನ್ಯಾರೋ ಮಲಗೆದ್ದ
ತೊಟ್ಟಿಲು ಉಯ್ಯಾಲೆ
ಭೂತಾಕಾರದ ಮಂಚ
ಮೂಲೆಯಲಿ ತೂಗುವ ಕಂದೀಲು,
ಮುಖ ಕಾಣದ ಕನ್ನಡಿ
ಪ್ರಾಚ್ಯ ವಸ್ತು ಸಂಗ್ರಹದ ಸರಕು
ತಲೆತಲಾಂತರದಿಂದ ಬಂದ ಮುರುಕು
ಉಪಯೋಗಕ್ಕೆ ಬರುವಂತಿಲ್ಲ
ಉಪಯೋಗಿಸದೇ ಇರುವಂತಿಲ್ಲ.

ಅಪ್ಪ? ಅಲ್ಲಲ್ಲ ಅಜ್ಜ? ಅಲ್ಲ
ಮುತ್ತಜ್ಜ ಅಥವ ಅವನಜ್ಜ ನೆಟ್ಟ ಆಲ
ದಪ್ಪ ಬಿಳಲುಗಳಾಗಿ ಭೂಮಿ ಕೊರೆದು
ಈಗ ಬೇರಾವುದೋ ಬಿಳಲಾವುದೋ
ಎಲ್ಲ ಅಯೋಮಯ

ಒಂದೊಂದು ವಸ್ತುವಿನೊಂದಿಗೂ
ಒಂದೊಂದು ಹಳೆಮುಖಗಳು
ತಳುಕು ಹಾಕಿಕೊಂಡು ಎಲ್ಲಾ
ಸಿಕ್ಕಷ್ಟಕ್ಕೇ ಸೀದು
ಕೈ ತೊಳೆಯೋಣವೆಂದರೆ
ಕಳೆದುಹೋದ ಆತ್ಮಗಳು
ಕಣ್ಮುಂದೆ ಸುಳಿದು
ವೈಭವದ ಗತ ಇತಿಹಾಸ ಸಾರುತ್ತಾ
ಗಿರ್‍ರನೆ ರಾಟವಾಳ ಸುತ್ತಿದಂತೆ
ಮನಮಂದಿರದಲ್ಲಿ ನೆನಪುಗಳ ಸರಮಾಲೆ
ಹಳೆಬೇರು ಕಿತ್ತರೆ? ಹೊಸಚಿಗುರು ನೆಟ್ಟರೆ?
ತುಮುಲಗಳ ಒಡಲೊಳಗೆ
ಹಳೆಪಳೆ ಮುರುಕುಗಳೊಳಗೆ
ನನ್ನದೇ ಪ್ರತಿರೂಪ
ಥಟ್ಟನೆ ಕಂಡಂತಾಗಿ,

ಬಹುಶಃ ಹಿರಿಯ ಆತ್ಮಗಳು ಆಲನೆಟ್ಟಿದ್ದು
ನೇಣಿಗಲ್ಲ ಉಯ್ಯಾಲೆ ಜೀಕಲು
ಬೇಕೆಂದರೆ ಎಲ್ಲಾ ಬೇಕು
ಬೇಡೆಂದರೆ ಏನೂ ಬೇಡ!

ನೆನ್ನೆಯವರಿಗೆ ರಸ,
ಇಂದಿಗೆ ಕಸ
ಇಂದಿನ ನಮ್ಮ ಹಾಸು
ನಾಳಿನವರಿಗೆ ಕಾಲೊರೆಸು!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...