Home / ಕವನ / ಕವಿತೆ / ಸುವರ್ಣ ಸ್ವಾತಂತ್ರ್ಯ

ಸುವರ್ಣ ಸ್ವಾತಂತ್ರ್ಯ

ಭಾರತ ದೇಶದ ಸ್ವಾತಂತ್ರ್ಯೋತ್ಸವದ
ಸುವರ್ಣ ಹಬ್ಬವ ಮಾಡೋಣ
ಬನ್ನಿರಿ ಗೆಳೆಯರೆ ದೇಶ ಬಾಂಧವರೆ
ಸ್ವಾತಂತ್ರ್ಯವ ಕೊಂಡಾಡೋಣ

ತಿಲಕ್ ಗೋಖಲೆ ಮಹಾತ್ಮ ಗಾಂಧಿ
ಸುಭಾಷ್ ವಲ್ಲಭ ಜವಾಹರ
ಸಾವಿರ ಸಾವಿರ ದೇಶಭಕ್ತ ಜನ
ಹೋರಾಡುತ ಗಳಿಸಿದಾ ವರ

ಎಷ್ಟೋ ಜನ ಪ್ರಾಣಗಳನು ತೆತ್ತರೊ
ತಾಯಿಯ ಪಾದಕ್ಕೆ ನೈವೇದ್ಯ
ರಕ್ತದಿ ಬರೆದರೊ ತ್ಯಾಗದ ಕತೆಗಳ
ಎಲರಿಗೂ ವಂದನೆಯಾದ್ಯ

ಬ್ರಿಟಿಷರ ಬೂಟಿನ ತುಳಿತಕ್ಕೆ ಸಿಕ್ಕು
ಜೈಲಲಿ ಕೊಳೆತರೊ ಎಷ್ಟೊ ಜನಾ
ಹೆಂಡಿರು ಮಕ್ಕಳ ಮನೆಗಳ ತೊರೆದು
ನರಳಿ ಗೈದರೋ ಬಲಿದಾನ

ಅಂಥ ಎಲ್ಲ ಸ್ವಾತಂತ್ರ್ಯ ವೀರರಿಗೆ
ಅಶ್ರುತರ್ಪಣವ ಕೊಡಬೇಕು
ಅವರು ಕೊಟ್ಟ ಸ್ವಾತಂತ್ರ್ಯ ಸಂಪದವ
ಎಚ್ಚರದಲಿ ಬಳಸಲು ಬೇಕು

ಐವತ್ತು ವರುಷ ಬಂಗಾರ ಹರುಷ
ಕಳೆದುದು ಪಡೆದುದು ಏನೇನು
ಬಂಗಾರವೇನು ಬೆಳ್ಳಿಯೋ ಮಣ್ಣೋ
ಗಳಿಸಿದ್ದು ಸಾಧಿಸಿದ್ದೇನು
***

ಪ್ರತೀವರ್ಷವೂ ಮಾಡುತ ಬಂದೆವು
ಸ್ವಾತಂತ್ರ್ಯೋತ್ಸವ ಹಬ್ಬ
ಪ್ರತೀ ಸಾರಿಯು ವಿಷಾದದಿಂದಲೇ
ಕಂಡೆವು ಕವಿದಿಹ ಮಬ್ಬ

ಕಛೇರಿ ಶಾಲಾ ವಿದ್ಯಾಲಯಗಳು
ಮಕ್ಕಳ ಮೆರವಣಿಗೆಯಲಿ
ಧ್ವಜವ ಹಾರಿಸುವ ನಾಟಕ ಮಾಡುತ
ಕಳೆದೆವು ವರ್ಷಗಳಲ್ಲಿ

ಪ್ರತೀ ವರ್ಷವೂ ಕೇಳುತ ಬಂದೆವು
ಯಾರಿಗೆ ಬಂತೀ ಸ್ವಾತಂತ್ರ್ಯ
ದೀನ ದಲಿತರಿಗೆ ನೋವು ನರಳಿಕೆಯು
ಕೆಲವರಿಗಷ್ಟೇ ಸ್ವಾತಂತ್ರ್ಯ

ಘಟಸರ್ಪಗಳನು ಇಲಿ ಕಪ್ಪೆಗಳನು
ತೋಳಗಳನ್ನೂ ಕುರಿಗಳನು
ಒಂದೆ ಕೋಣೆಯಲಿ ಕೂಡಿ ಹಾಕಿದೊಲು
ಮಾಡಲು ಸ್ವತಂತ್ರ ದೇಶವನು

ಆಕಳು ಮೊಲಗಳ ಹುಲಿಸಿಂಹಗಳನು
ಒಂದೇ ಕಣದಲಿ ಹಾಕಿ
ಕೂಡಿ ಬಾಳಿ ಸಹ ಜೀವನ ಎನ್ನುತ
ತಂದರು ಸ್ವತಂತ್ರ ಬೆರಕಿ

ಕೋಟಿ ಕೋಟಿಗಳ ಕಬಳಿಸುವಂಥಾ
ಅಧಿಕೃತ ದರೋಡೆಯವರ
ಪ್ರಜಾರಾಜ್ಯವಿದು ಸೃಷ್ಟಿ ಮಾಡುತಿದೆ
ದೇಶ ಕೊಳ್ಳೆ ಹೊಡೆಯುವವರ

ಹಣವುಳ್ಳವರಿಗೆ ಸೇವೆಗೆ ನಿಂತಿವೆ
ಖಾಕೀ ಬಿಳಿ ಕರಿ ಡ್ರೆಸ್ಸು
ಹಣವಿಲ್ಲದವರ ಪಾಲಿಗೆ ಎಲ್ಲಾ
ಕಾನೂನ್ ವ್ಯವಸ್ಥೆ ಟಿಸ್ಸು

ಕಾಳಸಂತೆಗಳು ಕಪ್ಪು ದಂಧೆಗಳು
ರಾಜಾರೋಷದಿ ನಡೆದಾವೆ
ಗೂಂಡಾದಾದರು ರಾಜಕಾರಣವು
ಕೈಕೈ ಹಿಡಿದೇ ಸಾಗ್ಯಾವೆ

ಬಂಗಲೆ ಬಿಲ್ಡಿಂಗ್ ಬೆಳೆದೇ ಬೆಳೆದಿವೆ
ರಕ್ಕಸ ಬೊಜ್ಜಿನ ನಗರಗಳು
ಗೂಡೇ ಇಲ್ಲದೆ ಗೋಳಿಡುತ್ತಿದ್ದರು
ಬಡವರು ಕೊಚ್ಚೆಯ ಪ್ರಾಣಿಗಳು

ನೌಕರಿಗಳದೇ ಮಾರ್ಕೆಟ್ ಇರುವುದು
ಲಕ್ಷಲಕ್ಷಗಳ ವ್ಯಾಪಾರ
ಮದುವೆಯ ಮಾರ್ಕೆಟ್ ಮೆರೆಯುತ್ತಿರುವುದು
ಲಕ್ಷಗಳ ಬೆಲೆಯ ಗಂಡುವರ

ನೌಕರಿದಾರರ ಗುರಿಯು ಗಳಿಸುವುದು
ಅಪ್ರಮಾಣಿಕತೆ ದಾರಿ
ಎಷ್ಟೇ ಸುರಿದರೂ ಹೆಣ್ಣಿಗೆ ಉಳಿವುದು
ಹಿಂಸೆಯ ಬೆಂಕಿಯ ದಾರಿ

ಜಾತಿ ಧರ್ಮಗಳು ಮೌಢ್ಯಾಚಾರ
ಹಳೆಯ ಭೂತಗಳು ಬೆಳೆಯುತಿವೆ
ಹೊಸಯುಗದಿ ಹೊಸುತು ರೂಪವ ತಳೆದಿವೆ
ಜನಗಳ ಮತಿಯನು ಮಸಳಿಸಿವೆ

ಅಯೋಧ್ಯೆಯಲ್ಲೋ ಕಾಶ್ಮೀರದಲ್ಲೋ
ಕೆಂಪು ಚಿತ್ತಾರಗಳು ಬರೆದಾವೋ
ಬೊಂಬಾಯಿಯಲ್ಲೋ ಅಸ್ಸಾಮಿನಲ್ಲೋ
ಬಾಂಬು ರಂಗೋಲಿ ಹಾಕ್ಯಾವೋ

ಕೋಟಿ ಕೋಟಿಗಳ ಹಗರಣಗಳಲೂ
ದೇಶದ ಮುನ್ನಡೆ ಅಂತೀವೋ
ಸುವರ್ಣ ಸ್ವತಂತ್ರ ಭಾರತದಲ್ಲಿ
ತಿಪ್ಪೆಯ ಮ್ಯಾಲೇ ಕುಂತೀವೋ
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...