Home / ಕವನ / ಕವಿತೆ / ಸುವರ್ಣ ಸ್ವಾತಂತ್ರ್ಯ

ಸುವರ್ಣ ಸ್ವಾತಂತ್ರ್ಯ

ಭಾರತ ದೇಶದ ಸ್ವಾತಂತ್ರ್ಯೋತ್ಸವದ
ಸುವರ್ಣ ಹಬ್ಬವ ಮಾಡೋಣ
ಬನ್ನಿರಿ ಗೆಳೆಯರೆ ದೇಶ ಬಾಂಧವರೆ
ಸ್ವಾತಂತ್ರ್ಯವ ಕೊಂಡಾಡೋಣ

ತಿಲಕ್ ಗೋಖಲೆ ಮಹಾತ್ಮ ಗಾಂಧಿ
ಸುಭಾಷ್ ವಲ್ಲಭ ಜವಾಹರ
ಸಾವಿರ ಸಾವಿರ ದೇಶಭಕ್ತ ಜನ
ಹೋರಾಡುತ ಗಳಿಸಿದಾ ವರ

ಎಷ್ಟೋ ಜನ ಪ್ರಾಣಗಳನು ತೆತ್ತರೊ
ತಾಯಿಯ ಪಾದಕ್ಕೆ ನೈವೇದ್ಯ
ರಕ್ತದಿ ಬರೆದರೊ ತ್ಯಾಗದ ಕತೆಗಳ
ಎಲರಿಗೂ ವಂದನೆಯಾದ್ಯ

ಬ್ರಿಟಿಷರ ಬೂಟಿನ ತುಳಿತಕ್ಕೆ ಸಿಕ್ಕು
ಜೈಲಲಿ ಕೊಳೆತರೊ ಎಷ್ಟೊ ಜನಾ
ಹೆಂಡಿರು ಮಕ್ಕಳ ಮನೆಗಳ ತೊರೆದು
ನರಳಿ ಗೈದರೋ ಬಲಿದಾನ

ಅಂಥ ಎಲ್ಲ ಸ್ವಾತಂತ್ರ್ಯ ವೀರರಿಗೆ
ಅಶ್ರುತರ್ಪಣವ ಕೊಡಬೇಕು
ಅವರು ಕೊಟ್ಟ ಸ್ವಾತಂತ್ರ್ಯ ಸಂಪದವ
ಎಚ್ಚರದಲಿ ಬಳಸಲು ಬೇಕು

ಐವತ್ತು ವರುಷ ಬಂಗಾರ ಹರುಷ
ಕಳೆದುದು ಪಡೆದುದು ಏನೇನು
ಬಂಗಾರವೇನು ಬೆಳ್ಳಿಯೋ ಮಣ್ಣೋ
ಗಳಿಸಿದ್ದು ಸಾಧಿಸಿದ್ದೇನು
***

ಪ್ರತೀವರ್ಷವೂ ಮಾಡುತ ಬಂದೆವು
ಸ್ವಾತಂತ್ರ್ಯೋತ್ಸವ ಹಬ್ಬ
ಪ್ರತೀ ಸಾರಿಯು ವಿಷಾದದಿಂದಲೇ
ಕಂಡೆವು ಕವಿದಿಹ ಮಬ್ಬ

ಕಛೇರಿ ಶಾಲಾ ವಿದ್ಯಾಲಯಗಳು
ಮಕ್ಕಳ ಮೆರವಣಿಗೆಯಲಿ
ಧ್ವಜವ ಹಾರಿಸುವ ನಾಟಕ ಮಾಡುತ
ಕಳೆದೆವು ವರ್ಷಗಳಲ್ಲಿ

ಪ್ರತೀ ವರ್ಷವೂ ಕೇಳುತ ಬಂದೆವು
ಯಾರಿಗೆ ಬಂತೀ ಸ್ವಾತಂತ್ರ್ಯ
ದೀನ ದಲಿತರಿಗೆ ನೋವು ನರಳಿಕೆಯು
ಕೆಲವರಿಗಷ್ಟೇ ಸ್ವಾತಂತ್ರ್ಯ

ಘಟಸರ್ಪಗಳನು ಇಲಿ ಕಪ್ಪೆಗಳನು
ತೋಳಗಳನ್ನೂ ಕುರಿಗಳನು
ಒಂದೆ ಕೋಣೆಯಲಿ ಕೂಡಿ ಹಾಕಿದೊಲು
ಮಾಡಲು ಸ್ವತಂತ್ರ ದೇಶವನು

ಆಕಳು ಮೊಲಗಳ ಹುಲಿಸಿಂಹಗಳನು
ಒಂದೇ ಕಣದಲಿ ಹಾಕಿ
ಕೂಡಿ ಬಾಳಿ ಸಹ ಜೀವನ ಎನ್ನುತ
ತಂದರು ಸ್ವತಂತ್ರ ಬೆರಕಿ

ಕೋಟಿ ಕೋಟಿಗಳ ಕಬಳಿಸುವಂಥಾ
ಅಧಿಕೃತ ದರೋಡೆಯವರ
ಪ್ರಜಾರಾಜ್ಯವಿದು ಸೃಷ್ಟಿ ಮಾಡುತಿದೆ
ದೇಶ ಕೊಳ್ಳೆ ಹೊಡೆಯುವವರ

ಹಣವುಳ್ಳವರಿಗೆ ಸೇವೆಗೆ ನಿಂತಿವೆ
ಖಾಕೀ ಬಿಳಿ ಕರಿ ಡ್ರೆಸ್ಸು
ಹಣವಿಲ್ಲದವರ ಪಾಲಿಗೆ ಎಲ್ಲಾ
ಕಾನೂನ್ ವ್ಯವಸ್ಥೆ ಟಿಸ್ಸು

ಕಾಳಸಂತೆಗಳು ಕಪ್ಪು ದಂಧೆಗಳು
ರಾಜಾರೋಷದಿ ನಡೆದಾವೆ
ಗೂಂಡಾದಾದರು ರಾಜಕಾರಣವು
ಕೈಕೈ ಹಿಡಿದೇ ಸಾಗ್ಯಾವೆ

ಬಂಗಲೆ ಬಿಲ್ಡಿಂಗ್ ಬೆಳೆದೇ ಬೆಳೆದಿವೆ
ರಕ್ಕಸ ಬೊಜ್ಜಿನ ನಗರಗಳು
ಗೂಡೇ ಇಲ್ಲದೆ ಗೋಳಿಡುತ್ತಿದ್ದರು
ಬಡವರು ಕೊಚ್ಚೆಯ ಪ್ರಾಣಿಗಳು

ನೌಕರಿಗಳದೇ ಮಾರ್ಕೆಟ್ ಇರುವುದು
ಲಕ್ಷಲಕ್ಷಗಳ ವ್ಯಾಪಾರ
ಮದುವೆಯ ಮಾರ್ಕೆಟ್ ಮೆರೆಯುತ್ತಿರುವುದು
ಲಕ್ಷಗಳ ಬೆಲೆಯ ಗಂಡುವರ

ನೌಕರಿದಾರರ ಗುರಿಯು ಗಳಿಸುವುದು
ಅಪ್ರಮಾಣಿಕತೆ ದಾರಿ
ಎಷ್ಟೇ ಸುರಿದರೂ ಹೆಣ್ಣಿಗೆ ಉಳಿವುದು
ಹಿಂಸೆಯ ಬೆಂಕಿಯ ದಾರಿ

ಜಾತಿ ಧರ್ಮಗಳು ಮೌಢ್ಯಾಚಾರ
ಹಳೆಯ ಭೂತಗಳು ಬೆಳೆಯುತಿವೆ
ಹೊಸಯುಗದಿ ಹೊಸುತು ರೂಪವ ತಳೆದಿವೆ
ಜನಗಳ ಮತಿಯನು ಮಸಳಿಸಿವೆ

ಅಯೋಧ್ಯೆಯಲ್ಲೋ ಕಾಶ್ಮೀರದಲ್ಲೋ
ಕೆಂಪು ಚಿತ್ತಾರಗಳು ಬರೆದಾವೋ
ಬೊಂಬಾಯಿಯಲ್ಲೋ ಅಸ್ಸಾಮಿನಲ್ಲೋ
ಬಾಂಬು ರಂಗೋಲಿ ಹಾಕ್ಯಾವೋ

ಕೋಟಿ ಕೋಟಿಗಳ ಹಗರಣಗಳಲೂ
ದೇಶದ ಮುನ್ನಡೆ ಅಂತೀವೋ
ಸುವರ್ಣ ಸ್ವತಂತ್ರ ಭಾರತದಲ್ಲಿ
ತಿಪ್ಪೆಯ ಮ್ಯಾಲೇ ಕುಂತೀವೋ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...