Home / ಕವನ / ಕವಿತೆ / ಸುವರ್ಣ ಸ್ವಾತಂತ್ರ್ಯ

ಸುವರ್ಣ ಸ್ವಾತಂತ್ರ್ಯ

ಭಾರತ ದೇಶದ ಸ್ವಾತಂತ್ರ್ಯೋತ್ಸವದ
ಸುವರ್ಣ ಹಬ್ಬವ ಮಾಡೋಣ
ಬನ್ನಿರಿ ಗೆಳೆಯರೆ ದೇಶ ಬಾಂಧವರೆ
ಸ್ವಾತಂತ್ರ್ಯವ ಕೊಂಡಾಡೋಣ

ತಿಲಕ್ ಗೋಖಲೆ ಮಹಾತ್ಮ ಗಾಂಧಿ
ಸುಭಾಷ್ ವಲ್ಲಭ ಜವಾಹರ
ಸಾವಿರ ಸಾವಿರ ದೇಶಭಕ್ತ ಜನ
ಹೋರಾಡುತ ಗಳಿಸಿದಾ ವರ

ಎಷ್ಟೋ ಜನ ಪ್ರಾಣಗಳನು ತೆತ್ತರೊ
ತಾಯಿಯ ಪಾದಕ್ಕೆ ನೈವೇದ್ಯ
ರಕ್ತದಿ ಬರೆದರೊ ತ್ಯಾಗದ ಕತೆಗಳ
ಎಲರಿಗೂ ವಂದನೆಯಾದ್ಯ

ಬ್ರಿಟಿಷರ ಬೂಟಿನ ತುಳಿತಕ್ಕೆ ಸಿಕ್ಕು
ಜೈಲಲಿ ಕೊಳೆತರೊ ಎಷ್ಟೊ ಜನಾ
ಹೆಂಡಿರು ಮಕ್ಕಳ ಮನೆಗಳ ತೊರೆದು
ನರಳಿ ಗೈದರೋ ಬಲಿದಾನ

ಅಂಥ ಎಲ್ಲ ಸ್ವಾತಂತ್ರ್ಯ ವೀರರಿಗೆ
ಅಶ್ರುತರ್ಪಣವ ಕೊಡಬೇಕು
ಅವರು ಕೊಟ್ಟ ಸ್ವಾತಂತ್ರ್ಯ ಸಂಪದವ
ಎಚ್ಚರದಲಿ ಬಳಸಲು ಬೇಕು

ಐವತ್ತು ವರುಷ ಬಂಗಾರ ಹರುಷ
ಕಳೆದುದು ಪಡೆದುದು ಏನೇನು
ಬಂಗಾರವೇನು ಬೆಳ್ಳಿಯೋ ಮಣ್ಣೋ
ಗಳಿಸಿದ್ದು ಸಾಧಿಸಿದ್ದೇನು
***

ಪ್ರತೀವರ್ಷವೂ ಮಾಡುತ ಬಂದೆವು
ಸ್ವಾತಂತ್ರ್ಯೋತ್ಸವ ಹಬ್ಬ
ಪ್ರತೀ ಸಾರಿಯು ವಿಷಾದದಿಂದಲೇ
ಕಂಡೆವು ಕವಿದಿಹ ಮಬ್ಬ

ಕಛೇರಿ ಶಾಲಾ ವಿದ್ಯಾಲಯಗಳು
ಮಕ್ಕಳ ಮೆರವಣಿಗೆಯಲಿ
ಧ್ವಜವ ಹಾರಿಸುವ ನಾಟಕ ಮಾಡುತ
ಕಳೆದೆವು ವರ್ಷಗಳಲ್ಲಿ

ಪ್ರತೀ ವರ್ಷವೂ ಕೇಳುತ ಬಂದೆವು
ಯಾರಿಗೆ ಬಂತೀ ಸ್ವಾತಂತ್ರ್ಯ
ದೀನ ದಲಿತರಿಗೆ ನೋವು ನರಳಿಕೆಯು
ಕೆಲವರಿಗಷ್ಟೇ ಸ್ವಾತಂತ್ರ್ಯ

ಘಟಸರ್ಪಗಳನು ಇಲಿ ಕಪ್ಪೆಗಳನು
ತೋಳಗಳನ್ನೂ ಕುರಿಗಳನು
ಒಂದೆ ಕೋಣೆಯಲಿ ಕೂಡಿ ಹಾಕಿದೊಲು
ಮಾಡಲು ಸ್ವತಂತ್ರ ದೇಶವನು

ಆಕಳು ಮೊಲಗಳ ಹುಲಿಸಿಂಹಗಳನು
ಒಂದೇ ಕಣದಲಿ ಹಾಕಿ
ಕೂಡಿ ಬಾಳಿ ಸಹ ಜೀವನ ಎನ್ನುತ
ತಂದರು ಸ್ವತಂತ್ರ ಬೆರಕಿ

ಕೋಟಿ ಕೋಟಿಗಳ ಕಬಳಿಸುವಂಥಾ
ಅಧಿಕೃತ ದರೋಡೆಯವರ
ಪ್ರಜಾರಾಜ್ಯವಿದು ಸೃಷ್ಟಿ ಮಾಡುತಿದೆ
ದೇಶ ಕೊಳ್ಳೆ ಹೊಡೆಯುವವರ

ಹಣವುಳ್ಳವರಿಗೆ ಸೇವೆಗೆ ನಿಂತಿವೆ
ಖಾಕೀ ಬಿಳಿ ಕರಿ ಡ್ರೆಸ್ಸು
ಹಣವಿಲ್ಲದವರ ಪಾಲಿಗೆ ಎಲ್ಲಾ
ಕಾನೂನ್ ವ್ಯವಸ್ಥೆ ಟಿಸ್ಸು

ಕಾಳಸಂತೆಗಳು ಕಪ್ಪು ದಂಧೆಗಳು
ರಾಜಾರೋಷದಿ ನಡೆದಾವೆ
ಗೂಂಡಾದಾದರು ರಾಜಕಾರಣವು
ಕೈಕೈ ಹಿಡಿದೇ ಸಾಗ್ಯಾವೆ

ಬಂಗಲೆ ಬಿಲ್ಡಿಂಗ್ ಬೆಳೆದೇ ಬೆಳೆದಿವೆ
ರಕ್ಕಸ ಬೊಜ್ಜಿನ ನಗರಗಳು
ಗೂಡೇ ಇಲ್ಲದೆ ಗೋಳಿಡುತ್ತಿದ್ದರು
ಬಡವರು ಕೊಚ್ಚೆಯ ಪ್ರಾಣಿಗಳು

ನೌಕರಿಗಳದೇ ಮಾರ್ಕೆಟ್ ಇರುವುದು
ಲಕ್ಷಲಕ್ಷಗಳ ವ್ಯಾಪಾರ
ಮದುವೆಯ ಮಾರ್ಕೆಟ್ ಮೆರೆಯುತ್ತಿರುವುದು
ಲಕ್ಷಗಳ ಬೆಲೆಯ ಗಂಡುವರ

ನೌಕರಿದಾರರ ಗುರಿಯು ಗಳಿಸುವುದು
ಅಪ್ರಮಾಣಿಕತೆ ದಾರಿ
ಎಷ್ಟೇ ಸುರಿದರೂ ಹೆಣ್ಣಿಗೆ ಉಳಿವುದು
ಹಿಂಸೆಯ ಬೆಂಕಿಯ ದಾರಿ

ಜಾತಿ ಧರ್ಮಗಳು ಮೌಢ್ಯಾಚಾರ
ಹಳೆಯ ಭೂತಗಳು ಬೆಳೆಯುತಿವೆ
ಹೊಸಯುಗದಿ ಹೊಸುತು ರೂಪವ ತಳೆದಿವೆ
ಜನಗಳ ಮತಿಯನು ಮಸಳಿಸಿವೆ

ಅಯೋಧ್ಯೆಯಲ್ಲೋ ಕಾಶ್ಮೀರದಲ್ಲೋ
ಕೆಂಪು ಚಿತ್ತಾರಗಳು ಬರೆದಾವೋ
ಬೊಂಬಾಯಿಯಲ್ಲೋ ಅಸ್ಸಾಮಿನಲ್ಲೋ
ಬಾಂಬು ರಂಗೋಲಿ ಹಾಕ್ಯಾವೋ

ಕೋಟಿ ಕೋಟಿಗಳ ಹಗರಣಗಳಲೂ
ದೇಶದ ಮುನ್ನಡೆ ಅಂತೀವೋ
ಸುವರ್ಣ ಸ್ವತಂತ್ರ ಭಾರತದಲ್ಲಿ
ತಿಪ್ಪೆಯ ಮ್ಯಾಲೇ ಕುಂತೀವೋ
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...