Home / ಕವನ / ಕವಿತೆ / ಸುವರ್ಣ ಸ್ವಾತಂತ್ರ್ಯ

ಸುವರ್ಣ ಸ್ವಾತಂತ್ರ್ಯ

ಭಾರತ ದೇಶದ ಸ್ವಾತಂತ್ರ್ಯೋತ್ಸವದ
ಸುವರ್ಣ ಹಬ್ಬವ ಮಾಡೋಣ
ಬನ್ನಿರಿ ಗೆಳೆಯರೆ ದೇಶ ಬಾಂಧವರೆ
ಸ್ವಾತಂತ್ರ್ಯವ ಕೊಂಡಾಡೋಣ

ತಿಲಕ್ ಗೋಖಲೆ ಮಹಾತ್ಮ ಗಾಂಧಿ
ಸುಭಾಷ್ ವಲ್ಲಭ ಜವಾಹರ
ಸಾವಿರ ಸಾವಿರ ದೇಶಭಕ್ತ ಜನ
ಹೋರಾಡುತ ಗಳಿಸಿದಾ ವರ

ಎಷ್ಟೋ ಜನ ಪ್ರಾಣಗಳನು ತೆತ್ತರೊ
ತಾಯಿಯ ಪಾದಕ್ಕೆ ನೈವೇದ್ಯ
ರಕ್ತದಿ ಬರೆದರೊ ತ್ಯಾಗದ ಕತೆಗಳ
ಎಲರಿಗೂ ವಂದನೆಯಾದ್ಯ

ಬ್ರಿಟಿಷರ ಬೂಟಿನ ತುಳಿತಕ್ಕೆ ಸಿಕ್ಕು
ಜೈಲಲಿ ಕೊಳೆತರೊ ಎಷ್ಟೊ ಜನಾ
ಹೆಂಡಿರು ಮಕ್ಕಳ ಮನೆಗಳ ತೊರೆದು
ನರಳಿ ಗೈದರೋ ಬಲಿದಾನ

ಅಂಥ ಎಲ್ಲ ಸ್ವಾತಂತ್ರ್ಯ ವೀರರಿಗೆ
ಅಶ್ರುತರ್ಪಣವ ಕೊಡಬೇಕು
ಅವರು ಕೊಟ್ಟ ಸ್ವಾತಂತ್ರ್ಯ ಸಂಪದವ
ಎಚ್ಚರದಲಿ ಬಳಸಲು ಬೇಕು

ಐವತ್ತು ವರುಷ ಬಂಗಾರ ಹರುಷ
ಕಳೆದುದು ಪಡೆದುದು ಏನೇನು
ಬಂಗಾರವೇನು ಬೆಳ್ಳಿಯೋ ಮಣ್ಣೋ
ಗಳಿಸಿದ್ದು ಸಾಧಿಸಿದ್ದೇನು
***

ಪ್ರತೀವರ್ಷವೂ ಮಾಡುತ ಬಂದೆವು
ಸ್ವಾತಂತ್ರ್ಯೋತ್ಸವ ಹಬ್ಬ
ಪ್ರತೀ ಸಾರಿಯು ವಿಷಾದದಿಂದಲೇ
ಕಂಡೆವು ಕವಿದಿಹ ಮಬ್ಬ

ಕಛೇರಿ ಶಾಲಾ ವಿದ್ಯಾಲಯಗಳು
ಮಕ್ಕಳ ಮೆರವಣಿಗೆಯಲಿ
ಧ್ವಜವ ಹಾರಿಸುವ ನಾಟಕ ಮಾಡುತ
ಕಳೆದೆವು ವರ್ಷಗಳಲ್ಲಿ

ಪ್ರತೀ ವರ್ಷವೂ ಕೇಳುತ ಬಂದೆವು
ಯಾರಿಗೆ ಬಂತೀ ಸ್ವಾತಂತ್ರ್ಯ
ದೀನ ದಲಿತರಿಗೆ ನೋವು ನರಳಿಕೆಯು
ಕೆಲವರಿಗಷ್ಟೇ ಸ್ವಾತಂತ್ರ್ಯ

ಘಟಸರ್ಪಗಳನು ಇಲಿ ಕಪ್ಪೆಗಳನು
ತೋಳಗಳನ್ನೂ ಕುರಿಗಳನು
ಒಂದೆ ಕೋಣೆಯಲಿ ಕೂಡಿ ಹಾಕಿದೊಲು
ಮಾಡಲು ಸ್ವತಂತ್ರ ದೇಶವನು

ಆಕಳು ಮೊಲಗಳ ಹುಲಿಸಿಂಹಗಳನು
ಒಂದೇ ಕಣದಲಿ ಹಾಕಿ
ಕೂಡಿ ಬಾಳಿ ಸಹ ಜೀವನ ಎನ್ನುತ
ತಂದರು ಸ್ವತಂತ್ರ ಬೆರಕಿ

ಕೋಟಿ ಕೋಟಿಗಳ ಕಬಳಿಸುವಂಥಾ
ಅಧಿಕೃತ ದರೋಡೆಯವರ
ಪ್ರಜಾರಾಜ್ಯವಿದು ಸೃಷ್ಟಿ ಮಾಡುತಿದೆ
ದೇಶ ಕೊಳ್ಳೆ ಹೊಡೆಯುವವರ

ಹಣವುಳ್ಳವರಿಗೆ ಸೇವೆಗೆ ನಿಂತಿವೆ
ಖಾಕೀ ಬಿಳಿ ಕರಿ ಡ್ರೆಸ್ಸು
ಹಣವಿಲ್ಲದವರ ಪಾಲಿಗೆ ಎಲ್ಲಾ
ಕಾನೂನ್ ವ್ಯವಸ್ಥೆ ಟಿಸ್ಸು

ಕಾಳಸಂತೆಗಳು ಕಪ್ಪು ದಂಧೆಗಳು
ರಾಜಾರೋಷದಿ ನಡೆದಾವೆ
ಗೂಂಡಾದಾದರು ರಾಜಕಾರಣವು
ಕೈಕೈ ಹಿಡಿದೇ ಸಾಗ್ಯಾವೆ

ಬಂಗಲೆ ಬಿಲ್ಡಿಂಗ್ ಬೆಳೆದೇ ಬೆಳೆದಿವೆ
ರಕ್ಕಸ ಬೊಜ್ಜಿನ ನಗರಗಳು
ಗೂಡೇ ಇಲ್ಲದೆ ಗೋಳಿಡುತ್ತಿದ್ದರು
ಬಡವರು ಕೊಚ್ಚೆಯ ಪ್ರಾಣಿಗಳು

ನೌಕರಿಗಳದೇ ಮಾರ್ಕೆಟ್ ಇರುವುದು
ಲಕ್ಷಲಕ್ಷಗಳ ವ್ಯಾಪಾರ
ಮದುವೆಯ ಮಾರ್ಕೆಟ್ ಮೆರೆಯುತ್ತಿರುವುದು
ಲಕ್ಷಗಳ ಬೆಲೆಯ ಗಂಡುವರ

ನೌಕರಿದಾರರ ಗುರಿಯು ಗಳಿಸುವುದು
ಅಪ್ರಮಾಣಿಕತೆ ದಾರಿ
ಎಷ್ಟೇ ಸುರಿದರೂ ಹೆಣ್ಣಿಗೆ ಉಳಿವುದು
ಹಿಂಸೆಯ ಬೆಂಕಿಯ ದಾರಿ

ಜಾತಿ ಧರ್ಮಗಳು ಮೌಢ್ಯಾಚಾರ
ಹಳೆಯ ಭೂತಗಳು ಬೆಳೆಯುತಿವೆ
ಹೊಸಯುಗದಿ ಹೊಸುತು ರೂಪವ ತಳೆದಿವೆ
ಜನಗಳ ಮತಿಯನು ಮಸಳಿಸಿವೆ

ಅಯೋಧ್ಯೆಯಲ್ಲೋ ಕಾಶ್ಮೀರದಲ್ಲೋ
ಕೆಂಪು ಚಿತ್ತಾರಗಳು ಬರೆದಾವೋ
ಬೊಂಬಾಯಿಯಲ್ಲೋ ಅಸ್ಸಾಮಿನಲ್ಲೋ
ಬಾಂಬು ರಂಗೋಲಿ ಹಾಕ್ಯಾವೋ

ಕೋಟಿ ಕೋಟಿಗಳ ಹಗರಣಗಳಲೂ
ದೇಶದ ಮುನ್ನಡೆ ಅಂತೀವೋ
ಸುವರ್ಣ ಸ್ವತಂತ್ರ ಭಾರತದಲ್ಲಿ
ತಿಪ್ಪೆಯ ಮ್ಯಾಲೇ ಕುಂತೀವೋ
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...