ರೋಜಾ

ಚಿತ್ರ: ಅಲೆಕ್ಸಾ / ಪಿಕ್ಸಾಬೇ
ಚಿತ್ರ: ಅಲೆಕ್ಸಾ / ಪಿಕ್ಸಾಬೇ

ಅಮಾವಾಸ್ಯೆಯ ಮರುದಿನ ಸಂಜೆಯಷ್ಟು ಹೊತ್ತಿಗೆ ಆಕಾಶದಲ್ಲಿ ಚಂದ್ರ ದರ್ಶನವಾಯಿತು.  ಗಲ್ಲಿಯಲ್ಲಿ ಸಂಭ್ರಮ.  ಸಾರಾಬೂ ಬೀದಿಗೆ ಬಂದು ತನ್ನ ನಾಲ್ಕು ಮಕ್ಕಳಿಗೂ ಚಂದ್ರನನ್ನು ತೋರಿಸಿದಳು.  “ನಾಳೆ ರೋಜಾ ಚಾಲು”  ಎಂದಳು.  ಅವಳ ಮೂರು ಗಂಡು ಮಕ್ಕಳು “ನಾವೂ ನಾಳೆಗೆ ರೋಜಾ ಇರ್ತೀವಿ” ಎಂದರು.

ಮಾತಿನಲ್ಲಿ ಚುರುಕಾಗಿದ್ದ ಎಂಟು ವರ್ಷದ ನಫೀಸಾ “ನಾನೂ ರೋಜಾ ಮಾಡ್ತೀನಿ ಅಮ್ಮಾ” ಎಂದಳು.

“ನಿನಗೆ ಆಗುದಿಲ್ಲ ಬಿಡು” ಎಂದ ಅವಳ ಅಣ್ಣ.

“ನಾನು ರೋಜಾ ಮಾಡ್ತೀನಿ” ನಫೀಸಾ ಹಟದ ಧೋರಣೆಯಲ್ಲಿ ಹೇಳಿದಳು.

“ಬೇಟಿ ರೋಜಾ ಅಂದ್ರ ಬಾಯಲ್ಲಿ ಹನಿ ನೀರೂ ಹಾಕಬಾರ್‍ದು.  ಹಾಗಾದರೆ ರೋಜಾ ಕಬುಲು ಆಗುವುದು.  ನೀನಿನ್ನೂ ಚಿಕ್ಕವಳು, ನಿನಗೆ ತ್ರಾಸಾಗುವುದು” ಸಾರಾಬೂ ಮಗಳನ್ನು ರಮಿಸಿದಳು.

“ನನ್ಗೇನೂ ಆಗುದಿಲ್ಲ ನಾನು ರೋಜಾ ಮಾಡ್ತೀನಿ” ಉತ್ಸಾಹ ತೋರಿದಳು ನಫೀಸಾ.

“ಒಂದು ಕಡ್ಡಿ ಕೂಡಾ ಬಾಯಲ್ಲಿ ಹಾಕಬಾರ್‍ದು.  ಅದೆಲ್ಲ ನಿನ್ನಿಂದ ಆಗುದಿಲ್ಲ.  ಇನ್ನಷ್ಟು ದೊಡ್ಡವಳಾದ ಮೇಲೆ ರೋಜಾ ಹಿಡಿಯುವಂತೆ ಬೇಟಿ” ತಂದೆ ಹುಸೇನಲಿ ಹೇಳಿದ.

“ನಾನು ರೋಜಾಮಾಡ್ತೀನಿ” ನಫೀಸಾ ಹಟ ಬಿಡಲಿಲ್ಲ.

“ಇನ್ ಷಾ ಅಲ್ಲಾ!” ಎಂದು ಸುಮ್ಮನಾದರು ಸಾರಾಬೂ-ಹುಸೇನಲಿ.

ಮಸೀದಿಯ ಮೀನಾರಿನಿಂದ ಸೈರಿಗೆ ಕರೆ ಕೇಳಿಸಿತು.  ಮಕ್ಕಳು ಉತ್ಸಾಹದಿಂದಲೇ ಎದ್ದರು.  ಮನೆಯಲ್ಲಿ ಇದ್ದದ್ದು ಮೂರು ರೊಟ್ಟಿ ಮಾತ್ರ.  ಮಕ್ಕಳು ಹಂಚಿಕೊಂಡು ತಿಂದು ನಿಯತ್ತು ಹೇಳಿ ರೋಜಾ ಹಿಡಿದರು.  ಸಾರಾಬೂ ಕರಿ ಚಹ ಕುಡಿದಳು.  ಹುಸೇನಲಿ ಹಮಾಲಿ ಮಾಡಬೇಕು ಅವನು ರೋಜಾ ಹಿಡಿಯಲಿಲ್ಲ.

ಹೊತ್ತೇರ ತೊಡಗಿದ್ದಂತೆ ಸಾರಾಬೂ ಚಿಂತೆಗೊಳಗಾದಳು.  ಮಗಳ ರೋಜಾ ಪೂರ್ತಿಯಾಗುವುದೋ ಇಲ್ಲವೋ ಎಂಬ ಅನುಮಾನ ಕಾಡಿತು.  “ಹೇ ಅಲ್ಲಾಹುವೆ!  ಮಗು ಉಪವಾಸ ಅರ್ಧಕ್ಕೆ ನಿಲ್ಲಿಸಿದರೆ ತಪ್ಪು ಮನ್ನಿಸು” ಎಂದು ಹತ್ತಾರು ಸಲ ಪ್ರಾರ್ಥಿಸಿದಳು.

ನಫೀಸಾ ಮಾತ್ರ ಲವಲವಿಕೆಯಿಂದಲೇ ಇದ್ದಳು.  ಶಾಲೆಗೂ ಹೋಗಿ ಬಂದಳು.  ಒಂದು ಹನಿ ನೀರೂ ಎನ್ನಲಿಲ್ಲ.  ಮಧ್ಯಾಹ್ನದ ಇಳಿ ಹೊತ್ತಿಗೆ ಆಟದಲ್ಲಿ ಮಗ್ನಳಾದಳು.

ಸೂರ್ಯ ಮುಳುಗಿದ.  ಅಂದಿನ ರೋಜಾದ ವ್ರತ ಮುಗಿಯಿತು.

“ಬೇಟಿ ನಿನಗೆ ಹಸಿವು ಅನಿಸಲಿಲ್ಲವೆ?” ಸಾರಾಬೂ ಕೇಳಿದಳು.

“ಇಲ್ಲಾ ಅಮ್ಮಾ”

“ಸ್ವಲ್ಪೂ ತ್ರಾಸು ಅನಿಸಿಲ್ಲ” ಕೆದಕಿ ಕೇಳಿದ ಹಿರಿಯಣ್ಣ.

“ರೋಜಾ ಅಂದ್ರ ಉಪವಾಸ.  ಅದು ನಮ್ಗ ರೂಢಿ ಐತಲ್ಲ ಭಯ್ಯಾ” ಎಂದು ಗಳಿಬಿಳಿ ಮಾತಾಡಿ ಒಣಚುರುಮುರಿಯನ್ನು ಬಾಯಿ ತುಂಬಿಕೊಂಡಳು ನಫೀಸಾ.  ಸಾರಬೂ ಕಣ್ಣಲ್ಲಿ ಹನಿಯೊಡೆದಿತ್ತು.

*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...