Home / ಕವನ / ಕವಿತೆ / ಅಪೂರ್ವ ಸಂಧ್ಯಾಚಿತ್ರ

ಅಪೂರ್ವ ಸಂಧ್ಯಾಚಿತ್ರ

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ
ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ
ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ
ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ
ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ
ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು-
ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ
ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ-
ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ
ಹೊಗೆಯ ಹಬ್ಬುಗೆಯ ಮಬ್ಬಿನ ನಿರಾಶೆಯ ಸರ್ವ
ಶೂನ್ಯದಲಿ – ಕಂಡಿದ್ದುದಿಲ್ಲೆನಗೆ ಒಮ್ಮೆಯುಂ
ಸಂಜೆವೆಣ್ಣಿನ ರಾಗಪೂರ್ಣ ಮುಖ ಸರಸಿಜವು.
ಇದ್ದಕಿದ್ದಂತೆಯೇ ಕಂಡೆತೆನಗಿಂದು, ಹಾ!
ದೂರ ಪ್ರತೀಚಿ ದಿಙ್ಮಂಡಲದ ರಾಜ್ಯದಲಿ –
ಕೆಂಪು ಕಡುಗೆಂಪು ಕೆಂಗೆಂಪು ಕಗ್ಗೆಂಪು, ಬರಿ
ಕೆಂಪು – ಹೋಲಿಕೆಗಾಗಿ ಕಲ್ಪನೆಯೆ ಕಂಗೆಟ್ಟು
ಬೇಸತ್ತು ಬಸವಳಿದು ಬಿದ್ದು ರಕ್ತವ ಕಾರೆ,
ಒಡನೆಯೇ ಕಲ್ಪನೆಗೆ ಹೊಳೆಯಿತ್ತು – ಆದೊಡೇಂ,
ಹೋಲಿಕೆಯದಲ್ಲ: ಸಂಧ್ಯಾರಮಣಿ ತಲೆಯಲ್ಲಿ
ತಳೆದ ಬಯ್‌ತಲೆಯ ಮಹ ಮಾಣಿಕದ ಕೆಂಬೆಳಕೊ,
ದಿಗ್ವಧುವಿನಧರ ರಾಗದ ಹರಹೊ – ಎಂಬಿವೇ
ಮೊದಲಪ್ಪ ಕಾವ್ಯದುತ್ಪ್ರೇಕ್ಷೆಗಳ ಹೊಸ ರೂಪ
ತಾನಲ್ಲ: ಅಲ್ಲಲ್ಲಿ ಎಲ್ಲೆಲ್ಲು ನಡೆಯುತಿಹ,
ಯುದ್ಧ ಅಂತಃಕಲಹ ಹಗಲುಕೊಲೆ ಮೊದಲಪ್ಪ
ಘಟನೆಗಳ ಘೋರ ವಾಸ್ತವ ವರ್ಣಚಿತ್ರವದು:
ದಿಕ್ಕು ದಿಕ್ಕುಗಳಿಂದ ಕೆನ್ನೀರ ಕಾಲ್ವೆಗಳು
ಹರಿದು ಬಂದಿಲ್ಲಿ ಹೆಮ್ಮಡುವಾಗಿ ಕೂಡಿಕೊಳೆ,
ಕೆನ್ನೀರ ಕೋಡಿಯಲಿ ತೇಲಿಬಂದಟ್ಟೆಗಳು
ಒಟ್ಟೈಸಿ ನಿಂದಿಹವು: ಇದುವೆ ಪಶ್ಚಿಮ ದಿಶಾ
ಪಟದ ಮೇಲಣ ರಕ್ತ ವರ್ಣ ಚಿತ್ರವದು.

ಇರಲಿರಲು, ನೆತ್ತರ ಸರೋವರದ ನೈದಿಲೆಯೊ
ಎಂಬಂತೆ ಮೂಡಿದನು ಬಾಲ ಶಶಿ: ಮೂಡಿ, ತಾನ್
ನಕ್ಕು ನುಡಿದನು ಇಂತು: “ಧೈರ್‍ಯಗೆಡದಿರು ಗೆಳೆಯ:
ನಂಜುನೆತ್ತರು ಹೊರಗೆ ಬಂದಿತೆಂದೆಂದುಕೊಳು;
ಶಾಂತಿ ಮೂಡುವುದು: ಬರವಸೆಯಾಶೆಗಳ ತಾಳು.”
ಬಾಲಚಂದ್ರನ ಕಾಂತಿ ಕಿರಣಗಳು ನಸು ಬೆಳಗಿ
ಕೆಂಬಣ್ಣ ಮಾಸುತಿರೆ, – ‘ಹುಣ್ಣಿಮೆಯು ಬರದಿಹುದೆ?
ಪೂರ್ಣಚಂದ್ರನು ಪೂರ್ಣ ಕಾಂತಿ ಚಂದ್ರಿಕೆಯನ್ನು
ಚೆಲ್ಲಿ ಸೂಸನೆ?’ – ಎಂಬ ಮಾರ್ದನಿಯು ಮನದಲ್ಲಿ
ಮೊರೆಯುತಿರೆ, ಮರೆಯಾಯ್ತಪೂರ್ವ ಸಂಧ್ಯಾಚಿತ್ರ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...