Home / ಕವನ / ಕವಿತೆ / ಅಪೂರ್ವ ಸಂಧ್ಯಾಚಿತ್ರ

ಅಪೂರ್ವ ಸಂಧ್ಯಾಚಿತ್ರ

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ
ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ
ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ
ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ
ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ
ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು-
ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ
ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ-
ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ
ಹೊಗೆಯ ಹಬ್ಬುಗೆಯ ಮಬ್ಬಿನ ನಿರಾಶೆಯ ಸರ್ವ
ಶೂನ್ಯದಲಿ – ಕಂಡಿದ್ದುದಿಲ್ಲೆನಗೆ ಒಮ್ಮೆಯುಂ
ಸಂಜೆವೆಣ್ಣಿನ ರಾಗಪೂರ್ಣ ಮುಖ ಸರಸಿಜವು.
ಇದ್ದಕಿದ್ದಂತೆಯೇ ಕಂಡೆತೆನಗಿಂದು, ಹಾ!
ದೂರ ಪ್ರತೀಚಿ ದಿಙ್ಮಂಡಲದ ರಾಜ್ಯದಲಿ –
ಕೆಂಪು ಕಡುಗೆಂಪು ಕೆಂಗೆಂಪು ಕಗ್ಗೆಂಪು, ಬರಿ
ಕೆಂಪು – ಹೋಲಿಕೆಗಾಗಿ ಕಲ್ಪನೆಯೆ ಕಂಗೆಟ್ಟು
ಬೇಸತ್ತು ಬಸವಳಿದು ಬಿದ್ದು ರಕ್ತವ ಕಾರೆ,
ಒಡನೆಯೇ ಕಲ್ಪನೆಗೆ ಹೊಳೆಯಿತ್ತು – ಆದೊಡೇಂ,
ಹೋಲಿಕೆಯದಲ್ಲ: ಸಂಧ್ಯಾರಮಣಿ ತಲೆಯಲ್ಲಿ
ತಳೆದ ಬಯ್‌ತಲೆಯ ಮಹ ಮಾಣಿಕದ ಕೆಂಬೆಳಕೊ,
ದಿಗ್ವಧುವಿನಧರ ರಾಗದ ಹರಹೊ – ಎಂಬಿವೇ
ಮೊದಲಪ್ಪ ಕಾವ್ಯದುತ್ಪ್ರೇಕ್ಷೆಗಳ ಹೊಸ ರೂಪ
ತಾನಲ್ಲ: ಅಲ್ಲಲ್ಲಿ ಎಲ್ಲೆಲ್ಲು ನಡೆಯುತಿಹ,
ಯುದ್ಧ ಅಂತಃಕಲಹ ಹಗಲುಕೊಲೆ ಮೊದಲಪ್ಪ
ಘಟನೆಗಳ ಘೋರ ವಾಸ್ತವ ವರ್ಣಚಿತ್ರವದು:
ದಿಕ್ಕು ದಿಕ್ಕುಗಳಿಂದ ಕೆನ್ನೀರ ಕಾಲ್ವೆಗಳು
ಹರಿದು ಬಂದಿಲ್ಲಿ ಹೆಮ್ಮಡುವಾಗಿ ಕೂಡಿಕೊಳೆ,
ಕೆನ್ನೀರ ಕೋಡಿಯಲಿ ತೇಲಿಬಂದಟ್ಟೆಗಳು
ಒಟ್ಟೈಸಿ ನಿಂದಿಹವು: ಇದುವೆ ಪಶ್ಚಿಮ ದಿಶಾ
ಪಟದ ಮೇಲಣ ರಕ್ತ ವರ್ಣ ಚಿತ್ರವದು.

ಇರಲಿರಲು, ನೆತ್ತರ ಸರೋವರದ ನೈದಿಲೆಯೊ
ಎಂಬಂತೆ ಮೂಡಿದನು ಬಾಲ ಶಶಿ: ಮೂಡಿ, ತಾನ್
ನಕ್ಕು ನುಡಿದನು ಇಂತು: “ಧೈರ್‍ಯಗೆಡದಿರು ಗೆಳೆಯ:
ನಂಜುನೆತ್ತರು ಹೊರಗೆ ಬಂದಿತೆಂದೆಂದುಕೊಳು;
ಶಾಂತಿ ಮೂಡುವುದು: ಬರವಸೆಯಾಶೆಗಳ ತಾಳು.”
ಬಾಲಚಂದ್ರನ ಕಾಂತಿ ಕಿರಣಗಳು ನಸು ಬೆಳಗಿ
ಕೆಂಬಣ್ಣ ಮಾಸುತಿರೆ, – ‘ಹುಣ್ಣಿಮೆಯು ಬರದಿಹುದೆ?
ಪೂರ್ಣಚಂದ್ರನು ಪೂರ್ಣ ಕಾಂತಿ ಚಂದ್ರಿಕೆಯನ್ನು
ಚೆಲ್ಲಿ ಸೂಸನೆ?’ – ಎಂಬ ಮಾರ್ದನಿಯು ಮನದಲ್ಲಿ
ಮೊರೆಯುತಿರೆ, ಮರೆಯಾಯ್ತಪೂರ್ವ ಸಂಧ್ಯಾಚಿತ್ರ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...