Home / ಕವನ / ಕವಿತೆ / ಅಪೂರ್ವ ಸಂಧ್ಯಾಚಿತ್ರ

ಅಪೂರ್ವ ಸಂಧ್ಯಾಚಿತ್ರ

ನಾಗರಿಕ ಜೀವನದ ಗರ್ಭದೊಳಗಡೆ ಸಿಲುಕಿ
ಕತ್ತಲೆಯೆ ಬೆಳಕೆನಿಸಿ, ಬೆಳಗು ಬೈಗುಗಳೆಂಬ
ಭೇದ ಬರಿ ನೆನಪಾಗಿ, ಗಾಣದೆತ್ತಿನ ದುಡಿತ
ಹವಣಿಸುವ ಬೇಸರದ ಜೊತೆಗೆ, ನಿತ್ಯವು ಹೊಟ್ಟೆ
ಬಟ್ಟೆಗಳ ಹಂಚಿಕೆಯ ಹೊಂಚಿಕೆಯ ಹುಸಿ ಬಾಳ
ಲಂಚ ಪ್ರಪಂಚದಲಿ ಸತ್ಯನಿಷ್ಠನ ಸಾವು-
ಬದುಕಿನಾ ಧಗೆಯ ಬಿರು ಹೊಯ್ಲಿನಲಿ, ಭಾರತದ
ಯಾವುದೋ ಮೂಲೆಯಲಿ ಹೊತ್ತಿ ಹಬ್ಬಿದ ಮತ-
ದ್ವೇಷದನಿರೀಕ್ಷಿತದ ಕಾಳ್ಕಿಚ್ಚಿನಿಂದೊಗೆದ
ಹೊಗೆಯ ಹಬ್ಬುಗೆಯ ಮಬ್ಬಿನ ನಿರಾಶೆಯ ಸರ್ವ
ಶೂನ್ಯದಲಿ – ಕಂಡಿದ್ದುದಿಲ್ಲೆನಗೆ ಒಮ್ಮೆಯುಂ
ಸಂಜೆವೆಣ್ಣಿನ ರಾಗಪೂರ್ಣ ಮುಖ ಸರಸಿಜವು.
ಇದ್ದಕಿದ್ದಂತೆಯೇ ಕಂಡೆತೆನಗಿಂದು, ಹಾ!
ದೂರ ಪ್ರತೀಚಿ ದಿಙ್ಮಂಡಲದ ರಾಜ್ಯದಲಿ –
ಕೆಂಪು ಕಡುಗೆಂಪು ಕೆಂಗೆಂಪು ಕಗ್ಗೆಂಪು, ಬರಿ
ಕೆಂಪು – ಹೋಲಿಕೆಗಾಗಿ ಕಲ್ಪನೆಯೆ ಕಂಗೆಟ್ಟು
ಬೇಸತ್ತು ಬಸವಳಿದು ಬಿದ್ದು ರಕ್ತವ ಕಾರೆ,
ಒಡನೆಯೇ ಕಲ್ಪನೆಗೆ ಹೊಳೆಯಿತ್ತು – ಆದೊಡೇಂ,
ಹೋಲಿಕೆಯದಲ್ಲ: ಸಂಧ್ಯಾರಮಣಿ ತಲೆಯಲ್ಲಿ
ತಳೆದ ಬಯ್‌ತಲೆಯ ಮಹ ಮಾಣಿಕದ ಕೆಂಬೆಳಕೊ,
ದಿಗ್ವಧುವಿನಧರ ರಾಗದ ಹರಹೊ – ಎಂಬಿವೇ
ಮೊದಲಪ್ಪ ಕಾವ್ಯದುತ್ಪ್ರೇಕ್ಷೆಗಳ ಹೊಸ ರೂಪ
ತಾನಲ್ಲ: ಅಲ್ಲಲ್ಲಿ ಎಲ್ಲೆಲ್ಲು ನಡೆಯುತಿಹ,
ಯುದ್ಧ ಅಂತಃಕಲಹ ಹಗಲುಕೊಲೆ ಮೊದಲಪ್ಪ
ಘಟನೆಗಳ ಘೋರ ವಾಸ್ತವ ವರ್ಣಚಿತ್ರವದು:
ದಿಕ್ಕು ದಿಕ್ಕುಗಳಿಂದ ಕೆನ್ನೀರ ಕಾಲ್ವೆಗಳು
ಹರಿದು ಬಂದಿಲ್ಲಿ ಹೆಮ್ಮಡುವಾಗಿ ಕೂಡಿಕೊಳೆ,
ಕೆನ್ನೀರ ಕೋಡಿಯಲಿ ತೇಲಿಬಂದಟ್ಟೆಗಳು
ಒಟ್ಟೈಸಿ ನಿಂದಿಹವು: ಇದುವೆ ಪಶ್ಚಿಮ ದಿಶಾ
ಪಟದ ಮೇಲಣ ರಕ್ತ ವರ್ಣ ಚಿತ್ರವದು.

ಇರಲಿರಲು, ನೆತ್ತರ ಸರೋವರದ ನೈದಿಲೆಯೊ
ಎಂಬಂತೆ ಮೂಡಿದನು ಬಾಲ ಶಶಿ: ಮೂಡಿ, ತಾನ್
ನಕ್ಕು ನುಡಿದನು ಇಂತು: “ಧೈರ್‍ಯಗೆಡದಿರು ಗೆಳೆಯ:
ನಂಜುನೆತ್ತರು ಹೊರಗೆ ಬಂದಿತೆಂದೆಂದುಕೊಳು;
ಶಾಂತಿ ಮೂಡುವುದು: ಬರವಸೆಯಾಶೆಗಳ ತಾಳು.”
ಬಾಲಚಂದ್ರನ ಕಾಂತಿ ಕಿರಣಗಳು ನಸು ಬೆಳಗಿ
ಕೆಂಬಣ್ಣ ಮಾಸುತಿರೆ, – ‘ಹುಣ್ಣಿಮೆಯು ಬರದಿಹುದೆ?
ಪೂರ್ಣಚಂದ್ರನು ಪೂರ್ಣ ಕಾಂತಿ ಚಂದ್ರಿಕೆಯನ್ನು
ಚೆಲ್ಲಿ ಸೂಸನೆ?’ – ಎಂಬ ಮಾರ್ದನಿಯು ಮನದಲ್ಲಿ
ಮೊರೆಯುತಿರೆ, ಮರೆಯಾಯ್ತಪೂರ್ವ ಸಂಧ್ಯಾಚಿತ್ರ.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...