Home / ಕವನ / ಕವಿತೆ / ಆದರ್ಶಕ್ಕೆ

ಆದರ್ಶಕ್ಕೆ

ದೂರದೂರ ದಿಕ್ದಿಗಂತದಿಂದ ದೂರಕೆ
ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ
ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಕಣ್ಣ ಮುಚ್ಚಿ
ಹೃದಯ ಮುಚ್ಚಿ
ಒಮ್ಮೆ ಅಂದು ಕಾತರಿಸಲು
ಮಿಂಚಿನಂತೆ ತೂರಿ ನೀನು
ಜೀವ ತೋರಿದೆ
ಬಲವ ಕಲಕಿದೆ!

ಯಾರಿಗಾಗಿ ಕೊರಗುತಿಹೆನೊ ಅದನೆ ಅರಿಯದೆ
ಸಾಗುತಿಹುದು ಜೀವ ನನ್ನ ನೆಲೆಯ ಕಾಣದೆ!   ೧

ಎಲ್ಲೆಡೆಯಲು ಬೆಳಕು ಇರಲು ನನಗೆ ಕತ್ತಲು!
ಅಲೆಗಳಂತೆ ಜಿಗಿದು ಜಿಗಿದ ಬಾಳು ಬತ್ತಲು
ಕಂಡುದೊಮ್ಮೆ-ಕಾಂಬುದೆಲ್ಲಿ-ಶೂನ್ಯ ಸುತ್ತಲು!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಮನಸು ಸೊರಗಿ
ಜೀವ ಕೊರಗಿ
ಸುತ್ತಮುತ್ತು ತಿರುಗಿ ತಿರುಗಿ
ಮೌನದಲ್ಲೆ ಮರುಗಿ ಮರುಗಿ
ನಿನ್ನ ಕಾಣದೆ
ಬಾಡಿ ಒರಗಿದೆ!

ಕಾಲ ದುಗುಡದಾಳದಲ್ಲಿ ಹರಿದು ಸಾಗಿದೆ
ಸಾಗುತಿಹುದು ಜೀವನಿನ್ನ ನೆಲೆಯ ಕಾಣದೆ!   ೨

ಎಳೆಮಂಜಿನ ಮೇಲ್ಮೈಯಿನ ಮೃದುತೆಯಂತೆದೆ
ಎಳೆಹರಯದ ದಳಗಳೊಳಗೆ ಹುದುಗಿ ಹೋಗಿರೆ
ಬೀಗಿ ಬಳುಕಿ ಸಾರಿಹೋದ ಬೆಳಗಿನ ಕನಸೆ!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ತಾಯ ಮಮತೆ
ಎದೆಯ ಕೊರತೆ
ನೀಗುತೆನ್ನ ಮನಕೆ ಶಾಂತಿ
ತರುವುದೆಂಬ ಬಯಕೆ ಭ್ರಾಂತಿ
ಕಂಡುದೇನನು?
-ತನ್ನತನವನು!

ಪ್ರೇಮ ತನ್ನ ಬೆಲೆಯಿದೆಂದು ಬೇಡಲು ಬಹುದೆ?
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೩

ಹೆಣ್ಣೊಂದರ ಕಣ್ಣಿನಲ್ಲಿ ಮಿಂಚಿನ ಮಿಣುಕು
ಕಂಡೆನೊಮ್ಮೆ ಅಲ್ಲೆ ಇಹುದು ಒಲವಿನ ಬದುಕು
ಎನುತ ಹಾರಿಹೋದೆನಾಗ ಆಕೆಯ ಬಳಿಗು
ಸಾಗುತಿರಲು ಜೀವ ನಿನ್ನ ಮೂರ್ತಿಯರಸುತೆ!

ಇನಿತು ದಿನವು
ಕಾಣದಿರವು
ಹೃದಯ ಬಯಸಿ ಬೆಳೆಸಿದೊಲವು
ಹೂವಾಗಿದೆ ಆಕೆ ಚೆಲುವು
ಎನುವ ಭರವಸೆ
ಎದೆಯ ತುಂಬಿರೆ
ಆಸೆಯೊಡೆದು ಒಲವು ಸಿಡಿದು ಹೃದಯ ಬಿರಿದಿದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೪

ಮುಳುಗುತಿರುವ ತಾರೆ ತನ್ನ ಕಂಗಳ ತೊಳೆದು
ಕಳುಹುತಿರಲು ಭುವಿಯ ಕಡೆಗೆ ಮಂಜಿನ ಹರಳು
ಹಾತೊರೆಯುತ ಕಾಯುವಂತೆ ಹೂವಿನ ಎದೆಯು
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ನೆಲೆಯನರಸಿ
ಬದುಕ ಸವೆಸಿ
ಕೊನೆಯಿಲ್ಲದ ಕಡಲಿನಲ್ಲಿ
ಕೊರಗು ಕೊಟ್ಟ ದೋಣಿಯಲ್ಲಿ
ಅಲೆಗೆ ಬೆದರುತೆ
ಜೀವ ಸಾಗಿದೆ!

ಒಲವವಸತಿ ಕಾತರಿಸಿದೆ ನಾಳೆಯರಿಯದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೫
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...