Home / ಕವನ / ಕವಿತೆ / ಆದರ್ಶಕ್ಕೆ

ಆದರ್ಶಕ್ಕೆ

ದೂರದೂರ ದಿಕ್ದಿಗಂತದಿಂದ ದೂರಕೆ
ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ
ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಕಣ್ಣ ಮುಚ್ಚಿ
ಹೃದಯ ಮುಚ್ಚಿ
ಒಮ್ಮೆ ಅಂದು ಕಾತರಿಸಲು
ಮಿಂಚಿನಂತೆ ತೂರಿ ನೀನು
ಜೀವ ತೋರಿದೆ
ಬಲವ ಕಲಕಿದೆ!

ಯಾರಿಗಾಗಿ ಕೊರಗುತಿಹೆನೊ ಅದನೆ ಅರಿಯದೆ
ಸಾಗುತಿಹುದು ಜೀವ ನನ್ನ ನೆಲೆಯ ಕಾಣದೆ!   ೧

ಎಲ್ಲೆಡೆಯಲು ಬೆಳಕು ಇರಲು ನನಗೆ ಕತ್ತಲು!
ಅಲೆಗಳಂತೆ ಜಿಗಿದು ಜಿಗಿದ ಬಾಳು ಬತ್ತಲು
ಕಂಡುದೊಮ್ಮೆ-ಕಾಂಬುದೆಲ್ಲಿ-ಶೂನ್ಯ ಸುತ್ತಲು!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಮನಸು ಸೊರಗಿ
ಜೀವ ಕೊರಗಿ
ಸುತ್ತಮುತ್ತು ತಿರುಗಿ ತಿರುಗಿ
ಮೌನದಲ್ಲೆ ಮರುಗಿ ಮರುಗಿ
ನಿನ್ನ ಕಾಣದೆ
ಬಾಡಿ ಒರಗಿದೆ!

ಕಾಲ ದುಗುಡದಾಳದಲ್ಲಿ ಹರಿದು ಸಾಗಿದೆ
ಸಾಗುತಿಹುದು ಜೀವನಿನ್ನ ನೆಲೆಯ ಕಾಣದೆ!   ೨

ಎಳೆಮಂಜಿನ ಮೇಲ್ಮೈಯಿನ ಮೃದುತೆಯಂತೆದೆ
ಎಳೆಹರಯದ ದಳಗಳೊಳಗೆ ಹುದುಗಿ ಹೋಗಿರೆ
ಬೀಗಿ ಬಳುಕಿ ಸಾರಿಹೋದ ಬೆಳಗಿನ ಕನಸೆ!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ತಾಯ ಮಮತೆ
ಎದೆಯ ಕೊರತೆ
ನೀಗುತೆನ್ನ ಮನಕೆ ಶಾಂತಿ
ತರುವುದೆಂಬ ಬಯಕೆ ಭ್ರಾಂತಿ
ಕಂಡುದೇನನು?
-ತನ್ನತನವನು!

ಪ್ರೇಮ ತನ್ನ ಬೆಲೆಯಿದೆಂದು ಬೇಡಲು ಬಹುದೆ?
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೩

ಹೆಣ್ಣೊಂದರ ಕಣ್ಣಿನಲ್ಲಿ ಮಿಂಚಿನ ಮಿಣುಕು
ಕಂಡೆನೊಮ್ಮೆ ಅಲ್ಲೆ ಇಹುದು ಒಲವಿನ ಬದುಕು
ಎನುತ ಹಾರಿಹೋದೆನಾಗ ಆಕೆಯ ಬಳಿಗು
ಸಾಗುತಿರಲು ಜೀವ ನಿನ್ನ ಮೂರ್ತಿಯರಸುತೆ!

ಇನಿತು ದಿನವು
ಕಾಣದಿರವು
ಹೃದಯ ಬಯಸಿ ಬೆಳೆಸಿದೊಲವು
ಹೂವಾಗಿದೆ ಆಕೆ ಚೆಲುವು
ಎನುವ ಭರವಸೆ
ಎದೆಯ ತುಂಬಿರೆ
ಆಸೆಯೊಡೆದು ಒಲವು ಸಿಡಿದು ಹೃದಯ ಬಿರಿದಿದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೪

ಮುಳುಗುತಿರುವ ತಾರೆ ತನ್ನ ಕಂಗಳ ತೊಳೆದು
ಕಳುಹುತಿರಲು ಭುವಿಯ ಕಡೆಗೆ ಮಂಜಿನ ಹರಳು
ಹಾತೊರೆಯುತ ಕಾಯುವಂತೆ ಹೂವಿನ ಎದೆಯು
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ನೆಲೆಯನರಸಿ
ಬದುಕ ಸವೆಸಿ
ಕೊನೆಯಿಲ್ಲದ ಕಡಲಿನಲ್ಲಿ
ಕೊರಗು ಕೊಟ್ಟ ದೋಣಿಯಲ್ಲಿ
ಅಲೆಗೆ ಬೆದರುತೆ
ಜೀವ ಸಾಗಿದೆ!

ಒಲವವಸತಿ ಕಾತರಿಸಿದೆ ನಾಳೆಯರಿಯದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೫
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...