Home / ಕವನ / ಕವಿತೆ / ಆದರ್ಶಕ್ಕೆ

ಆದರ್ಶಕ್ಕೆ

ದೂರದೂರ ದಿಕ್ದಿಗಂತದಿಂದ ದೂರಕೆ
ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ
ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಕಣ್ಣ ಮುಚ್ಚಿ
ಹೃದಯ ಮುಚ್ಚಿ
ಒಮ್ಮೆ ಅಂದು ಕಾತರಿಸಲು
ಮಿಂಚಿನಂತೆ ತೂರಿ ನೀನು
ಜೀವ ತೋರಿದೆ
ಬಲವ ಕಲಕಿದೆ!

ಯಾರಿಗಾಗಿ ಕೊರಗುತಿಹೆನೊ ಅದನೆ ಅರಿಯದೆ
ಸಾಗುತಿಹುದು ಜೀವ ನನ್ನ ನೆಲೆಯ ಕಾಣದೆ!   ೧

ಎಲ್ಲೆಡೆಯಲು ಬೆಳಕು ಇರಲು ನನಗೆ ಕತ್ತಲು!
ಅಲೆಗಳಂತೆ ಜಿಗಿದು ಜಿಗಿದ ಬಾಳು ಬತ್ತಲು
ಕಂಡುದೊಮ್ಮೆ-ಕಾಂಬುದೆಲ್ಲಿ-ಶೂನ್ಯ ಸುತ್ತಲು!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಮನಸು ಸೊರಗಿ
ಜೀವ ಕೊರಗಿ
ಸುತ್ತಮುತ್ತು ತಿರುಗಿ ತಿರುಗಿ
ಮೌನದಲ್ಲೆ ಮರುಗಿ ಮರುಗಿ
ನಿನ್ನ ಕಾಣದೆ
ಬಾಡಿ ಒರಗಿದೆ!

ಕಾಲ ದುಗುಡದಾಳದಲ್ಲಿ ಹರಿದು ಸಾಗಿದೆ
ಸಾಗುತಿಹುದು ಜೀವನಿನ್ನ ನೆಲೆಯ ಕಾಣದೆ!   ೨

ಎಳೆಮಂಜಿನ ಮೇಲ್ಮೈಯಿನ ಮೃದುತೆಯಂತೆದೆ
ಎಳೆಹರಯದ ದಳಗಳೊಳಗೆ ಹುದುಗಿ ಹೋಗಿರೆ
ಬೀಗಿ ಬಳುಕಿ ಸಾರಿಹೋದ ಬೆಳಗಿನ ಕನಸೆ!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ತಾಯ ಮಮತೆ
ಎದೆಯ ಕೊರತೆ
ನೀಗುತೆನ್ನ ಮನಕೆ ಶಾಂತಿ
ತರುವುದೆಂಬ ಬಯಕೆ ಭ್ರಾಂತಿ
ಕಂಡುದೇನನು?
-ತನ್ನತನವನು!

ಪ್ರೇಮ ತನ್ನ ಬೆಲೆಯಿದೆಂದು ಬೇಡಲು ಬಹುದೆ?
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೩

ಹೆಣ್ಣೊಂದರ ಕಣ್ಣಿನಲ್ಲಿ ಮಿಂಚಿನ ಮಿಣುಕು
ಕಂಡೆನೊಮ್ಮೆ ಅಲ್ಲೆ ಇಹುದು ಒಲವಿನ ಬದುಕು
ಎನುತ ಹಾರಿಹೋದೆನಾಗ ಆಕೆಯ ಬಳಿಗು
ಸಾಗುತಿರಲು ಜೀವ ನಿನ್ನ ಮೂರ್ತಿಯರಸುತೆ!

ಇನಿತು ದಿನವು
ಕಾಣದಿರವು
ಹೃದಯ ಬಯಸಿ ಬೆಳೆಸಿದೊಲವು
ಹೂವಾಗಿದೆ ಆಕೆ ಚೆಲುವು
ಎನುವ ಭರವಸೆ
ಎದೆಯ ತುಂಬಿರೆ
ಆಸೆಯೊಡೆದು ಒಲವು ಸಿಡಿದು ಹೃದಯ ಬಿರಿದಿದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೪

ಮುಳುಗುತಿರುವ ತಾರೆ ತನ್ನ ಕಂಗಳ ತೊಳೆದು
ಕಳುಹುತಿರಲು ಭುವಿಯ ಕಡೆಗೆ ಮಂಜಿನ ಹರಳು
ಹಾತೊರೆಯುತ ಕಾಯುವಂತೆ ಹೂವಿನ ಎದೆಯು
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ನೆಲೆಯನರಸಿ
ಬದುಕ ಸವೆಸಿ
ಕೊನೆಯಿಲ್ಲದ ಕಡಲಿನಲ್ಲಿ
ಕೊರಗು ಕೊಟ್ಟ ದೋಣಿಯಲ್ಲಿ
ಅಲೆಗೆ ಬೆದರುತೆ
ಜೀವ ಸಾಗಿದೆ!

ಒಲವವಸತಿ ಕಾತರಿಸಿದೆ ನಾಳೆಯರಿಯದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೫
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...