Home / ಕವನ / ಕವಿತೆ / ಆದರ್ಶಕ್ಕೆ

ಆದರ್ಶಕ್ಕೆ

ದೂರದೂರ ದಿಕ್ದಿಗಂತದಿಂದ ದೂರಕೆ
ಹಗಲು ಮುಗಿಲು ಮಿಲನವಾಗಿ ಕುಣಿಯುತಿರುವೆಡೆ
ಜಗವೆ ಒಲವ ಕೊಳಲು ಆಗಿ ಗಾನ ಸುರಿವೆಡೆ
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಕಣ್ಣ ಮುಚ್ಚಿ
ಹೃದಯ ಮುಚ್ಚಿ
ಒಮ್ಮೆ ಅಂದು ಕಾತರಿಸಲು
ಮಿಂಚಿನಂತೆ ತೂರಿ ನೀನು
ಜೀವ ತೋರಿದೆ
ಬಲವ ಕಲಕಿದೆ!

ಯಾರಿಗಾಗಿ ಕೊರಗುತಿಹೆನೊ ಅದನೆ ಅರಿಯದೆ
ಸಾಗುತಿಹುದು ಜೀವ ನನ್ನ ನೆಲೆಯ ಕಾಣದೆ!   ೧

ಎಲ್ಲೆಡೆಯಲು ಬೆಳಕು ಇರಲು ನನಗೆ ಕತ್ತಲು!
ಅಲೆಗಳಂತೆ ಜಿಗಿದು ಜಿಗಿದ ಬಾಳು ಬತ್ತಲು
ಕಂಡುದೊಮ್ಮೆ-ಕಾಂಬುದೆಲ್ಲಿ-ಶೂನ್ಯ ಸುತ್ತಲು!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ಮನಸು ಸೊರಗಿ
ಜೀವ ಕೊರಗಿ
ಸುತ್ತಮುತ್ತು ತಿರುಗಿ ತಿರುಗಿ
ಮೌನದಲ್ಲೆ ಮರುಗಿ ಮರುಗಿ
ನಿನ್ನ ಕಾಣದೆ
ಬಾಡಿ ಒರಗಿದೆ!

ಕಾಲ ದುಗುಡದಾಳದಲ್ಲಿ ಹರಿದು ಸಾಗಿದೆ
ಸಾಗುತಿಹುದು ಜೀವನಿನ್ನ ನೆಲೆಯ ಕಾಣದೆ!   ೨

ಎಳೆಮಂಜಿನ ಮೇಲ್ಮೈಯಿನ ಮೃದುತೆಯಂತೆದೆ
ಎಳೆಹರಯದ ದಳಗಳೊಳಗೆ ಹುದುಗಿ ಹೋಗಿರೆ
ಬೀಗಿ ಬಳುಕಿ ಸಾರಿಹೋದ ಬೆಳಗಿನ ಕನಸೆ!
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ತಾಯ ಮಮತೆ
ಎದೆಯ ಕೊರತೆ
ನೀಗುತೆನ್ನ ಮನಕೆ ಶಾಂತಿ
ತರುವುದೆಂಬ ಬಯಕೆ ಭ್ರಾಂತಿ
ಕಂಡುದೇನನು?
-ತನ್ನತನವನು!

ಪ್ರೇಮ ತನ್ನ ಬೆಲೆಯಿದೆಂದು ಬೇಡಲು ಬಹುದೆ?
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೩

ಹೆಣ್ಣೊಂದರ ಕಣ್ಣಿನಲ್ಲಿ ಮಿಂಚಿನ ಮಿಣುಕು
ಕಂಡೆನೊಮ್ಮೆ ಅಲ್ಲೆ ಇಹುದು ಒಲವಿನ ಬದುಕು
ಎನುತ ಹಾರಿಹೋದೆನಾಗ ಆಕೆಯ ಬಳಿಗು
ಸಾಗುತಿರಲು ಜೀವ ನಿನ್ನ ಮೂರ್ತಿಯರಸುತೆ!

ಇನಿತು ದಿನವು
ಕಾಣದಿರವು
ಹೃದಯ ಬಯಸಿ ಬೆಳೆಸಿದೊಲವು
ಹೂವಾಗಿದೆ ಆಕೆ ಚೆಲುವು
ಎನುವ ಭರವಸೆ
ಎದೆಯ ತುಂಬಿರೆ
ಆಸೆಯೊಡೆದು ಒಲವು ಸಿಡಿದು ಹೃದಯ ಬಿರಿದಿದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೪

ಮುಳುಗುತಿರುವ ತಾರೆ ತನ್ನ ಕಂಗಳ ತೊಳೆದು
ಕಳುಹುತಿರಲು ಭುವಿಯ ಕಡೆಗೆ ಮಂಜಿನ ಹರಳು
ಹಾತೊರೆಯುತ ಕಾಯುವಂತೆ ಹೂವಿನ ಎದೆಯು
ಸಾಗುತಿಹುದು ಜೀವ ನಿನ್ನ ಮೂರ್ತಿಯರಸುತೆ!

ನೆಲೆಯನರಸಿ
ಬದುಕ ಸವೆಸಿ
ಕೊನೆಯಿಲ್ಲದ ಕಡಲಿನಲ್ಲಿ
ಕೊರಗು ಕೊಟ್ಟ ದೋಣಿಯಲ್ಲಿ
ಅಲೆಗೆ ಬೆದರುತೆ
ಜೀವ ಸಾಗಿದೆ!

ಒಲವವಸತಿ ಕಾತರಿಸಿದೆ ನಾಳೆಯರಿಯದೆ!
ಸಾಗುತಿಹುದು ಜೀವ ನಿನ್ನ ನೆಲೆಯ ಕಾಣದೆ!   ೫
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...