Home / ಕವನ / ಕವಿತೆ / ಹುಲುಸು

ಹುಲುಸು

ಹೊಲಸಲ್ಲೇ ಹೊರಳಾಡುವುದು
ನಮಗೆ ಒಗ್ಗಿ ಹೋಗಿದೆ
ಊರ ಹತ್ತಿರ ಹೊರದಾರಿಗಳೆಲ್ಲ
ಬಯಲು ಕಕ್ಕಸುಗಳು
ಊರೂಳಗೆ ಹೋಗುವಾಗ ನಾವು
ಮೂಗು ಮುಚ್ಚಿಕೊಳ್ಳುವುದಿಲ್ಲ
ಏಕೆಂದರೆ ದುರ್ವಾಸನೆಗೆ ಸಹಜವಾಗಿ
ಒಗ್ಗಿಕೊಂಡ ದುರ್ವಾಸರು ನಾವು
ದೇವರುಗಳಿಗೆ ಮಾತ್ರ ಹೆದರುತ್ತೇವೆ
ವರ್ಷಕ್ಕೊಮ್ಮೆ ದೇವರ ಹಬ್ಬಕ್ಕೆ
ಮನೆ ಮನೆಗೆ ಸುಣ್ಣ ಬಣ್ಣ
ಓಣಿಗಳು ಅಲ್ಪಸ್ವಲ್ಪ ಸ್ವಚ್ಛ
(ಈಗಿನ ದೇವರು ಮಂತ್ರಿ ಮಾನ್ಯರು
ಬಂದಾಗಲು ಅಷ್ಟೆ)
ದೇವರು ಹೇಳಿಕೆ ಕೊಡುತ್ತವೆ
ಕೇಳಿದ್ದು ಕೊಡುತ್ತವೆ
ಎಂಬ ವದಂತಿ ಹಬ್ಬಿದರೆ ಸಾಕು
ಮರ ಸುತ್ತಿ ಚಪ್ಪಲಿ ಗುಡ್ಡೆ ಹಾಕುತ್ತೇವೆ
ಕೊಂಬೆಗಳಿಗೆ ತೊಟ್ಟಿಲು ಕಟ್ಟುತ್ತೇವೆ
ಮೈಮೇಲೆ ಬಂದು ಪೂಜಾರಿ
ಹೂಂಕರಿಸುತ್ತಾನೆ ಅಪ್ಪಣೆ ಕೊಡುತ್ತಾನೆ
ಭಯಭಕ್ತಿಯಿಂದ ಆರು ಮೊಳ ಮೈಯ
ಮೂರು ಗೇಣು ಮಾಡಿಕೊಂಡು
ಅಡ್ಡ ಬೀಳುತ್ತೇವೆ ಕಾಣಿಕೆ ಕೂಡುತ್ತೇವೆ
ತಿಂಗಳು ತಿಂಗಳು ವಾರಾವಾರಾ
ಆ ದೇವರಿಗೆ ತಪ್ಪದೆ ನಡೆದುಕೊಳ್ಳುತ್ತೇವೆ

ವಾಹನಗಳ ಸಾಲು ಸಾಲು
ಗುಂಪು ಗುಂಪು ಕುರಿಗಳ ಜಾತ್ರೆ
ಪುಣ್ಯಕ್ಷೇತ್ರಗಳ ಹೊಳೆಹಳ್ಳಗಳ
ದಂಡೆಗಳು ಶರೀರ ತ್ಯಾಜ್ಯ ತಿಂಡಿ ತ್ಯಾಜ್ಯ
ಗಳಿಂದ ಗಬ್ಬೆದ್ದು ನಾರುತ್ತವೆ
ನಾವು ಅಲ್ಲಿ ಮೂಗು ಮುಚ್ಚಿಕೊಳ್ಳದೆ
ಸೇವೆಗಳ ಮಾಡಲು ಹೋಗುತ್ತೇವೆ
ಧನ್ಯರಾಗುತ್ತೇವೆ
ದೇಹವೇ ದೇವಾಲಯವೆಂದು ಸಾರಿ
ಮೌಢ್ಯಗಳ ಹೊಲಸು ತೊಳೆಯಲು
ನಮ್ಮ ನಿಮ್ಮೊಳಗಿಂದಲೇ ಮೇಲೆದ್ದು ಬಂದ
ಮಾದಾರ ಮೇದಾರ ಡೋಹಾರ ಕುಂಬಾರ
ಕಂಬಾರ ಮಡಿವಾಳ ನೇಕಾರರಾದಿ
ಶರಣರು ಇದೇ ನೆಲದಲ್ಲೇ ಹುಟ್ಟಿಬಂದರೇ!
ಅವರಿಗೂ ಗುಡಿ ಮಠಗಳ
ಕಟ್ಟಿದ್ದೇವೆ ಬಿಡಿ
ನಮ್ಮ ಮಲಿನ ಮೌಢ್ಯಗಳನ್ನೆಲ್ಲ
ಅವುಗಳ ಸುತ್ತ ಗುಡ್ಡೆ ಹಾಕಲು
ಹೊಲಸು ಹುಲುಸು ಎನ್ನುತ್ತೇವೆ
ಹೊಲಸು ನಮಗೆ ಒಗ್ಗಿ ಹೋಗಿದೆ
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...