Home / ಕವನ / ಕವಿತೆ / ಹುಲುಸು

ಹುಲುಸು

ಹೊಲಸಲ್ಲೇ ಹೊರಳಾಡುವುದು
ನಮಗೆ ಒಗ್ಗಿ ಹೋಗಿದೆ
ಊರ ಹತ್ತಿರ ಹೊರದಾರಿಗಳೆಲ್ಲ
ಬಯಲು ಕಕ್ಕಸುಗಳು
ಊರೂಳಗೆ ಹೋಗುವಾಗ ನಾವು
ಮೂಗು ಮುಚ್ಚಿಕೊಳ್ಳುವುದಿಲ್ಲ
ಏಕೆಂದರೆ ದುರ್ವಾಸನೆಗೆ ಸಹಜವಾಗಿ
ಒಗ್ಗಿಕೊಂಡ ದುರ್ವಾಸರು ನಾವು
ದೇವರುಗಳಿಗೆ ಮಾತ್ರ ಹೆದರುತ್ತೇವೆ
ವರ್ಷಕ್ಕೊಮ್ಮೆ ದೇವರ ಹಬ್ಬಕ್ಕೆ
ಮನೆ ಮನೆಗೆ ಸುಣ್ಣ ಬಣ್ಣ
ಓಣಿಗಳು ಅಲ್ಪಸ್ವಲ್ಪ ಸ್ವಚ್ಛ
(ಈಗಿನ ದೇವರು ಮಂತ್ರಿ ಮಾನ್ಯರು
ಬಂದಾಗಲು ಅಷ್ಟೆ)
ದೇವರು ಹೇಳಿಕೆ ಕೊಡುತ್ತವೆ
ಕೇಳಿದ್ದು ಕೊಡುತ್ತವೆ
ಎಂಬ ವದಂತಿ ಹಬ್ಬಿದರೆ ಸಾಕು
ಮರ ಸುತ್ತಿ ಚಪ್ಪಲಿ ಗುಡ್ಡೆ ಹಾಕುತ್ತೇವೆ
ಕೊಂಬೆಗಳಿಗೆ ತೊಟ್ಟಿಲು ಕಟ್ಟುತ್ತೇವೆ
ಮೈಮೇಲೆ ಬಂದು ಪೂಜಾರಿ
ಹೂಂಕರಿಸುತ್ತಾನೆ ಅಪ್ಪಣೆ ಕೊಡುತ್ತಾನೆ
ಭಯಭಕ್ತಿಯಿಂದ ಆರು ಮೊಳ ಮೈಯ
ಮೂರು ಗೇಣು ಮಾಡಿಕೊಂಡು
ಅಡ್ಡ ಬೀಳುತ್ತೇವೆ ಕಾಣಿಕೆ ಕೂಡುತ್ತೇವೆ
ತಿಂಗಳು ತಿಂಗಳು ವಾರಾವಾರಾ
ಆ ದೇವರಿಗೆ ತಪ್ಪದೆ ನಡೆದುಕೊಳ್ಳುತ್ತೇವೆ

ವಾಹನಗಳ ಸಾಲು ಸಾಲು
ಗುಂಪು ಗುಂಪು ಕುರಿಗಳ ಜಾತ್ರೆ
ಪುಣ್ಯಕ್ಷೇತ್ರಗಳ ಹೊಳೆಹಳ್ಳಗಳ
ದಂಡೆಗಳು ಶರೀರ ತ್ಯಾಜ್ಯ ತಿಂಡಿ ತ್ಯಾಜ್ಯ
ಗಳಿಂದ ಗಬ್ಬೆದ್ದು ನಾರುತ್ತವೆ
ನಾವು ಅಲ್ಲಿ ಮೂಗು ಮುಚ್ಚಿಕೊಳ್ಳದೆ
ಸೇವೆಗಳ ಮಾಡಲು ಹೋಗುತ್ತೇವೆ
ಧನ್ಯರಾಗುತ್ತೇವೆ
ದೇಹವೇ ದೇವಾಲಯವೆಂದು ಸಾರಿ
ಮೌಢ್ಯಗಳ ಹೊಲಸು ತೊಳೆಯಲು
ನಮ್ಮ ನಿಮ್ಮೊಳಗಿಂದಲೇ ಮೇಲೆದ್ದು ಬಂದ
ಮಾದಾರ ಮೇದಾರ ಡೋಹಾರ ಕುಂಬಾರ
ಕಂಬಾರ ಮಡಿವಾಳ ನೇಕಾರರಾದಿ
ಶರಣರು ಇದೇ ನೆಲದಲ್ಲೇ ಹುಟ್ಟಿಬಂದರೇ!
ಅವರಿಗೂ ಗುಡಿ ಮಠಗಳ
ಕಟ್ಟಿದ್ದೇವೆ ಬಿಡಿ
ನಮ್ಮ ಮಲಿನ ಮೌಢ್ಯಗಳನ್ನೆಲ್ಲ
ಅವುಗಳ ಸುತ್ತ ಗುಡ್ಡೆ ಹಾಕಲು
ಹೊಲಸು ಹುಲುಸು ಎನ್ನುತ್ತೇವೆ
ಹೊಲಸು ನಮಗೆ ಒಗ್ಗಿ ಹೋಗಿದೆ
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...