ಕರೆ

ಇವನು
ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ
ಬದುಕಿನ ತದುಕುವಿಗೆ ಮೈಗೊಟ್ಟ
ಬವಣೆಯ ಭಾರಕ್ಕೆ ಬೆಂಬಾಗಿದ
ದುರ್ವಾಸನೆಗಳಿಂದುಸುರು ಕಟ್ಟಿದ
ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ
ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ
ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ
ನಾಯಿ ನರಿ ಗೂಬೆ ಗೋರಿಲ್ಲಾಗಳ
ಎಳೆದಾಟಕ್ಕೆ ನಜ್ಜು ಗೊಜ್ಜಾದ
ಮೀಸಲಡುಗೆಯ ಹಡಬೆನಾಯಿಗಿಕ್ಕಿ ಬಿಕ್ಕಿದ
ಹಣದೊಡನಾಡಿ ಹಾಣಾಹಣಿ ಹೆಣವಾದ
ಕಾಮನ ಕಣ್ಮುಚ್ಚಾಲೆಯಲ್ಲಿ ಕಣ್ಕಟ್ಟಿ
ಗೋಡೆ ಗೋಡೆ ಹಾಯ್ದು ಗಟಾರಕ್ಕೆ ಬಿದ್ದ
ಭೂತವು ಬೆಂಬತ್ತಿ ಬೇತಾಳವಾದಾಗ ತತ್ತಿಹಾಕಿದ
ನರನಾಡಿಗಳೆಲ್ಲ ಇರುಳೆಲ್ಲ ನರಳಿ ರೋಧಿಸಿದರೂ
ಹಗಲ ಹಗರಣದ ಹಡಬಿಟ್ಟಿ ಬಟ್ಟೆಗಳಲ್ಲಿ
ಮೈತೂರಿಸಿಕೊಂಡ ತನ್ನ ತಾ ಕಳಕೊಂಡ
ಹಲವಾರು ಹೆಜ್ಜೆಗಳಲ್ಲೇ ನಡೆದು
ಎಡವಿ‌ಎಡವಿ ದಾರಿ ತಪ್ಪಿದ
ಕೆಲವರು ತೋರಿಸಿದಲ್ಲಿ ತೆವಳಿ ಬವಳಿಬಿದ್ದ
ಒಲವಿನ ನೆಲೆಗಾಣದೆ ನೆಲುವಿಗೆ ಹಾರಿಹಾರಿ
ನೆಲಕಂಡು ನೊಂದು ಅವಡುಗಚ್ಚಿದ
ಸಲ್ಲದ ಸಿಂಗಾರಕ್ಕೆ ಒಲ್ಲದೆ ಅಣಿಯಾಗಿ
ಹೂಮುಡಿದು ಎಣ್ಣೆಯುರಿಸಿ ಕಾದೂಕಾದೂ
ಗಂಡ ಬಾರದೆ ಕಂಗಾಲಾದವಳಂತಾದ
ಅರ್ಥವಿಲ್ಲದ ಮಂತ್ರವೂದಿ ಅನರ್ಥದ ಹೊಗೆ‌ಎಬ್ಬಿಸಿ
ತತ್ವವಿಲ್ಲದ ತಂತ್ರದಲ್ಲಿ ತಂತಿಯಿಲ್ಲದ ತಂಬೂರಿ ಮೀಟಿದ
ದಿಕ್ಕೆಳೆದ ಕಡೆ ನಡೆದು ದಿಕ್ಕೆಟ್ಟ
ಜೀವನವು ಸಾವಿಗಿಂತ ಕಡೆಯಾದಾಗ
ಮನೆ ಮಸಣದಲ್ಲೋ ಗುಡ್ಡ ಗುಡಿಯಲ್ಲೋ
ಹೊಲ ಹಾದಿಯಲ್ಲೋ ನೆಲಜಲದಲ್ಲೋ
ಕೊನೆಗೊಮ್ಮೆ ಒಳಗಿನಾಳದಿಂದ
ಅಖಂಡ ಗೂಢಗರ್ಭಮೂಲದಿಂದ
ಕರೆಯೊಂದು ಕೇಳಿ ಬಂತು
ಈ ಕರೆಗಳಿಗೆ ಎಲ್ಲರೂ ಕಿವಿದೆರೆದಿದ್ದರೆ
ಇವನು ಕಿವುಡಾಗಿದ್ದ
ಆ ಕರೆಗೆಲ್ಲರೂ ಕಿವುಡಾಗಿದ್ದರೆ
ಇವನು ಕಿವಿದೆರೆದಿದ್ದ ಕಾಣದಿದ್ದುದಕೆ ಕಣ್ತೆರೆದಿದ್ದ
(೨೩-೪-೭೪)
*****

Tagged:

Leave a Reply

Your email address will not be published. Required fields are marked *

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...