ಕರೆ

ಇವನು
ಸಂತೆಯಲ್ಲಿ ವ್ಯಾಪಾರವಿಲ್ಲದೆ ಚಿಂತಿತನಾದ
ಬದುಕಿನ ತದುಕುವಿಗೆ ಮೈಗೊಟ್ಟ
ಬವಣೆಯ ಭಾರಕ್ಕೆ ಬೆಂಬಾಗಿದ
ದುರ್ವಾಸನೆಗಳಿಂದುಸುರು ಕಟ್ಟಿದ
ಪಾಶಗಳಿಂದ ಹೆಡೆಮುರಿ ಕಟ್ಟಿಸಿಕೊಂಡ
ದಾಸ್ಯದೊತ್ತಾಯದ ಜೀತಕ್ಕೆ ಹೆಗಲನಿತ್ತ
ಸ್ವಾತಂತ್ರ್ಯ ಸಂಕೋಲೆಗೆ ಕಾಲನಿತ್ತ
ನಾಯಿ ನರಿ ಗೂಬೆ ಗೋರಿಲ್ಲಾಗಳ
ಎಳೆದಾಟಕ್ಕೆ ನಜ್ಜು ಗೊಜ್ಜಾದ
ಮೀಸಲಡುಗೆಯ ಹಡಬೆನಾಯಿಗಿಕ್ಕಿ ಬಿಕ್ಕಿದ
ಹಣದೊಡನಾಡಿ ಹಾಣಾಹಣಿ ಹೆಣವಾದ
ಕಾಮನ ಕಣ್ಮುಚ್ಚಾಲೆಯಲ್ಲಿ ಕಣ್ಕಟ್ಟಿ
ಗೋಡೆ ಗೋಡೆ ಹಾಯ್ದು ಗಟಾರಕ್ಕೆ ಬಿದ್ದ
ಭೂತವು ಬೆಂಬತ್ತಿ ಬೇತಾಳವಾದಾಗ ತತ್ತಿಹಾಕಿದ
ನರನಾಡಿಗಳೆಲ್ಲ ಇರುಳೆಲ್ಲ ನರಳಿ ರೋಧಿಸಿದರೂ
ಹಗಲ ಹಗರಣದ ಹಡಬಿಟ್ಟಿ ಬಟ್ಟೆಗಳಲ್ಲಿ
ಮೈತೂರಿಸಿಕೊಂಡ ತನ್ನ ತಾ ಕಳಕೊಂಡ
ಹಲವಾರು ಹೆಜ್ಜೆಗಳಲ್ಲೇ ನಡೆದು
ಎಡವಿ‌ಎಡವಿ ದಾರಿ ತಪ್ಪಿದ
ಕೆಲವರು ತೋರಿಸಿದಲ್ಲಿ ತೆವಳಿ ಬವಳಿಬಿದ್ದ
ಒಲವಿನ ನೆಲೆಗಾಣದೆ ನೆಲುವಿಗೆ ಹಾರಿಹಾರಿ
ನೆಲಕಂಡು ನೊಂದು ಅವಡುಗಚ್ಚಿದ
ಸಲ್ಲದ ಸಿಂಗಾರಕ್ಕೆ ಒಲ್ಲದೆ ಅಣಿಯಾಗಿ
ಹೂಮುಡಿದು ಎಣ್ಣೆಯುರಿಸಿ ಕಾದೂಕಾದೂ
ಗಂಡ ಬಾರದೆ ಕಂಗಾಲಾದವಳಂತಾದ
ಅರ್ಥವಿಲ್ಲದ ಮಂತ್ರವೂದಿ ಅನರ್ಥದ ಹೊಗೆ‌ಎಬ್ಬಿಸಿ
ತತ್ವವಿಲ್ಲದ ತಂತ್ರದಲ್ಲಿ ತಂತಿಯಿಲ್ಲದ ತಂಬೂರಿ ಮೀಟಿದ
ದಿಕ್ಕೆಳೆದ ಕಡೆ ನಡೆದು ದಿಕ್ಕೆಟ್ಟ
ಜೀವನವು ಸಾವಿಗಿಂತ ಕಡೆಯಾದಾಗ
ಮನೆ ಮಸಣದಲ್ಲೋ ಗುಡ್ಡ ಗುಡಿಯಲ್ಲೋ
ಹೊಲ ಹಾದಿಯಲ್ಲೋ ನೆಲಜಲದಲ್ಲೋ
ಕೊನೆಗೊಮ್ಮೆ ಒಳಗಿನಾಳದಿಂದ
ಅಖಂಡ ಗೂಢಗರ್ಭಮೂಲದಿಂದ
ಕರೆಯೊಂದು ಕೇಳಿ ಬಂತು
ಈ ಕರೆಗಳಿಗೆ ಎಲ್ಲರೂ ಕಿವಿದೆರೆದಿದ್ದರೆ
ಇವನು ಕಿವುಡಾಗಿದ್ದ
ಆ ಕರೆಗೆಲ್ಲರೂ ಕಿವುಡಾಗಿದ್ದರೆ
ಇವನು ಕಿವಿದೆರೆದಿದ್ದ ಕಾಣದಿದ್ದುದಕೆ ಕಣ್ತೆರೆದಿದ್ದ
(೨೩-೪-೭೪)
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...