Home / ಕವನ / ಕವಿತೆ / ಕಾಬೂಲಿವಾಲಾ

ಕಾಬೂಲಿವಾಲಾ

ಅಂದು –
ಉದ್ದನೆಯ ದಾಡಿ ತಲೆಗೆ ಸಡಿಲಾದ ಪೇಟಾ
ಕಂದುಬಣ್ಣದ ದೊಗಲೆ ಜುಬ್ಬಾ
ಹೆಗಲ ಮೇಲಿನ ಕೋಲಿನ ಅಂಚಿಗೆ
ತೂಗಾಡುವ ಬುಟ್ಟಿಗಳು
ಬದಾಮ್ ಪಿಸ್ತಾ ಕಲ್ಲುಸಕ್ಕರೆ ಒಂದೆಡೆ
ಮತ್ತೊಂದೆಡೆ ಉಪ್ಪುಪ್ಪಿನ ಕಡಲೇಬೀಜಗಳು
ನನಗಿನ್ನೂ ಚೆನ್ನಾಗಿ ನೆನಪಿದೆ
ಅತನೇ ಕಾಬೂಲಿವಾಲಾ ಎಂದು.
ಕಾಬೂಲು ಕಂದಹಾರ ಸುತ್ತಾಡಿ
ಹೆಂಡತಿ ಮಕ್ಕಳನು ಬಿಟ್ಟು
ಹೊಟ್ಟೆಪಾಡಿಗಾಗಿ ಇಲ್ಲಿಗೆ ಬಂದಿದ್ದವನೂ ಎಂದು-
ಅದೇ ಅದೇ ನನ್ನ ಮದುವೆಯ ದಿನದಂದು
ಬೆಳೆದ ತನ್ನ ಮಗಳ ನೆನೆದು ಕಣ್ಣೀರು ತುಂಬಿ
ಕಾಬೂಲಿಗೆ ಮರಳಿದವನೂ ಎಂದು.

ಇಂದು –
ಕಾಬೂಲಿವಾಲಾ,
ಈಗ ಇದೆಲ್ಲಾ ಏನಾಗುತ್ತಿದೆ ನಿನ್ನ ನಾಡಿನಲ್ಲಿ
ಅಮೇರಿಕದ ವ್ಯಾಪಾರಿಮಳಿಗೆಯಡಿ
ಭಯೋತ್ಪಾದಕ ಪಾತಕಿಗಳಿಗೆ ಸಿಲುಕಿ ಸತ್ತ
ಸಾವಿರಾರು ಅತ್ಮಗಳ ಶಾಪ.
ಕಾಬೂಲು ಕಂದಹಾರಗಳ ತುಂಬೆಲ್ಲ ಗುಂಡುರಾಶಿಗಳ ಸುರಿಮಳೆ
ಭೂಮಿಯೂ ನಡುಗಿ ಭ್ರೂಣಗಳು ಪಾತಿಸುತ್ತಿರುವದು,
ಮುಖ ಪಾದ ಕಾಣಿಸಿದ್ದಕ್ಕೆ
ಹಾಡೇ ಹಗಲು ಹೆಂಗಸರನು ಕೊಂದು
ಧರ್ಮಾಂಧತೆಯಲಿ ಮೆರೆದ ತಾಲಿಬಾನ್ ತಲೆಹಿಡುಕರು
ಮುಗ್ಧತೆಯಲಿ ಕಕ್ಕಾಬಿಕ್ಕಿಯಾಗಿ ಬಿಕ್ಕುವ
ತೊಟ್ಟಿಕ್ಕುವ ಕಣ್ಣೀರು ಕಥೆಗಳು.

ಈಗ-
ಜಗಗೆಲ್ಲ ಬಯಸುವ ಕ್ರೂರಿಗಳನು ಹಿಮ್ಮೆಟ್ಟಿಸಲು
ನೀನು ಹೆಗಲಿಗೆ ಬಂದೂಕು ಏರಿಸಿದ್ದು ತಪ್ಪೇನಿಲ್ಲ,
ಸುಕ್ಕುಗಟ್ಟಿದ ನಿನ್ನ ಹಣೆಯ ಗೆರೆಗಳ ತುಂಬ ಬೆವರು
ಅದರೊಳಗೆ ಮೆತ್ತಿದ ಭೂಮಿಯ ದುರಂತ ಧೂಳು
ಸಾವು ನೋವಿನ ವ್ಯಥೆಯ ಹಾಡುಗಳಿಗೆ
ಕೊನೆ ಎಂದು? ಹೇಗೆ?

ಪ್ರೀತಿವಿಶ್ವಾಸತೆಗೆ ಏನೆಲ್ಲ ಗೆಲ್ಲುವ ಶಕ್ತಿ ಇದೆ
ಗಾಂಧಿ ಹೇಳಿದ್ದು, ಅಂದು ನೀನೂ ಹೇಳಿದ್ದೆ, ನೆನಪಿಸಿಕೋ-
ಕಲ್ಲು ಸಕ್ಕರೆ ಪ್ರೀತಿಯಿಂದ ಕೊಡುತ್ತಿದ್ದ ನಿನ್ನ ಕೈ
ಈಗ ಬಂದೂಕು ಹಿಡಿದದ್ದು
ತಪ್ಪೋ ಒಪ್ಪೋ ಒಂದಿಷ್ಟು ಯೋಚಿಸು
ಯಾರೋ ಮಾಡುವ ತಪ್ಪಿಗೆ
ಯಾರ್ಯಾರೋ ಅನುಭವಿಸುವ ತಳಮಳ.

“ಖಂಡಿಸಬೇಕಾಗಿದೆ ಯುದ್ಧ ಕೊಲೆ
ಬೆಳೆಸಿಕೊಳ್ಳಬೇಕಾಗಿದೆ ನಾಗರಿಕತೆ.
ಎಂದೇ ಟ್ಯಾಂಕರು ಬಂಕರು ಬಂದೂಕು
ಮಿಸೈಲ್ಸ್‌ಗಳ ಕ್ರೂರ ತಲೆಗಳ ತುಂಬೆಲ್ಲ
ಪ್ರೀತಿವಿಶ್ವಾಸಗಳ ಕಲ್ಲು ಸಕ್ಕರೆ ತುಂಬಿಸಿ
ಭಯೋತ್ಪಾದಕರಿಗೆ ಸವಾಲೊಡ್ಡಿದರೆ
ಶಾಂತಿ ನೆಲೆಸೀತು ನಮ್ಮ ನಿಮ್ಮೆಲ್ಲರ ನಾಡುಗಳಲಿ”
******
(ರವೀಂದ್ರನಾಥ್ ಟ್ಯಾಗೂರ ಅವರ ಕಥೆ “ಕಾಬೂಲಿವಾಲಾ” ನೆನಪಿಸಿಕೊಂಡು, ಈಗ ಕಾಬೂಲಿವಾಲಾ ಉತ್ತರ ಮೈತ್ರಿಕೂಟದಲ್ಲೊಬ್ಬ ಎಂದೇ ತಿಳಿದುಕೊಂಡು ಅವನೊಂದಿಗೆ ಒಂದೆರಡು ಮಾತುಗಳು)
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...