ನೀರನು ಚೆಲ್ಲುವ ಮೋಡಕ್ಕೆ
ಭೇದ ಬುದ್ಧಿ ಇಲ್ಲ,
ಬಿಸಿಲನು ಸುರಿಸುವ ಸೂರ್ಯನಿಗೆ
ಪಕ್ಷಪಾತವಿಲ್ಲ,
ಪರಿಮಳ ಹರಡುವ ವಾಯುವಿಗೆ
ಜಾತಿ ಪಂಥವಿಲ್ಲ,
ಮಾನವರಲ್ಲಿ ಮಾತ್ರವೆ ಇಂಥ
ಏರು ತಗ್ಗು ಎಲ್ಲ.
ಎಲ್ಲರ ಮೈಲೂ ಹರಿಯುವುದು
ರಕ್ತ ಮಾತ್ರವೇನೇ,
ಚಳಿ ಮಳೆ ಗಾಳಿಯ ಪರಿಣಾಮ
ಎಲ್ಲರಿಗೊಂದೇನೆ,
ಹಸಿವು ದಾಹಗಳ ಬಾಧೆಗಳು
ಇಲ್ಲದವರು ಯಾರು?
ಕೊಂಬೆ ರೆಂಬೆಗಳು ಎಷ್ಟೇ ಇರಲಿ
ಕೆಳಗೆ ಒಂದೆ ಬೇರು.
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.