Home / ಲೇಖನ / ಇತರೆ / ಮಾನವನಾಗುವೆಯೋ ? ಇಲ್ಲ…..

ಮಾನವನಾಗುವೆಯೋ ? ಇಲ್ಲ…..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಪ್ರಿಯ ಸಖಿ ,
ಆಗಲೇ ರಾತ್ರಿ ಹತ್ತು ಗಂಟೆಯಾಗಿ ಹೋಗಿದೆ ಬಾಡಿಗೆಗೆ ಊರಾಚೆ ಹೋಗಿದ್ದ ಟ್ಯಾಕ್ಸಿಯವನು ತನ್ನ ಮನೆಯವರ ನೆನಪಿನಲ್ಲಿ, ಬೇಗ ಮನೆ ಸೇರಬೇಕೆಂಬ ಆತುರದಲಿ ರಭಸವಾಗಿ ಕಾರು ಓಡಿಸುತ್ತಿದ್ದಾನೆ. ಜೊತೆಗೆ ಅಬ್ಬರದ ಸಂಗೀತ ಹಿಂದಿ ಚಿತ್ರಗೀತೆಯೊಂದು ಇವನನ್ನು ಮತ್ತೂ ಉದ್ವಿಗ್ನಗೊಳಿಸುತ್ತಿದೆ. ಗುನುಗುತ್ತಾ ಮೈಮರೆತು ಕಾರು ಓಡಿಸುತ್ತಿದ್ದಾನೆ. ಆಗಲೇ….. ಎದುರಿನಿಂದ ರಭಸವಾಗಿ ಹರಿದು ಬರುತ್ತಿರುವ ಲಾರಿಯನ್ನು ಇವನು ನೋಡಿದ್ದು ತಕ್ಷಣ ಕಾರನ್ನು ಪಕ್ಕಕ್ಕೆ ತಿರುಗಿಸಿಕೊಳ್ಳುತ್ತಾನೆ. ಆಗ ರಸ್ತೆಯಂಚಿನಲ್ಲಿ ನಿಧಾನಕ್ಕೆ ಸಾಗಿದ್ದ ಸೈಕಲ್ ಸವಾರನ ಮೇಲೆ ಇವನ ಕಾರು ಹರಿದು ಮುಂದೆ ಹೋಗುತ್ತದೆ. ಆ ಚೀರಿದವನ ಆರ್ತನಾದ ಕರುಳು ಬಿರಿಯುವಂತೆ ಕೇಳಿಬರುತ್ತದೆ.

ಕ್ಷಣಕಾಲ ಇವನಿಗೆ ದಿಗ್ಬ್ರಾಂತಿ ಛೇ. ಇದೇನಾಗಿಹೋಯ್ತು. ತಾನು ಡ್ರೈವಿಂಗ್ ಕಲಿತ ದಿನದಿಂದ ಒಂದೂ ಅಪಘಾತ ಮಾಡಿಲ್ಲ. ಈಗ…. ಈಗ ತಾನೇನು
ಮಾಡಲಿ? ಹಿಂತಿರುಗಿ ಹೋಗಿ ಏನಾಗಿದೆ ನೋಡಲೇ ? ಅವನು ಬದುಕಿದ್ದಾನೋ ಸತ್ತಿದ್ದಾನೋ? ಅವನು ಬದುಕಿದ್ದರೆ ಅವನನ್ನು ಈಗ ಉಳಿಸುವ ಹೊಣೆ ತನ್ನದಲ್ಲವೇ? ಅಥವಾ ಸತ್ತಿದ್ದರೆ ? ಅದಕ್ಕೂ ತಾನೆ ಜವಾಬ್ದಾರ ! ಒಂದು ಮನಸ್ಸು ಹೀಗೆ ಯೋಚಿಸಿದರೆ, ಇನ್ನೊಂದು ಮನಸ್ಸು ಈ ರಾತ್ರಿಯಲ್ಲಿ ನನ್ನ ಕಾರಿನಿಂದ ಈ ಅಪಘಾತವನ್ನು ಯಾರು ನೋಡಿರುತ್ತಾರೆ ? ಏನೂ ಆಗಿಯೇ ಇಲ್ಲವೆಂಬಂತೆ ಮನೆಗೆ ಹೋಗಿ ನಿದ್ರಿಸಿಬಿಟ್ಟರೆ ಯಾರಿಗೆ ಗೊತ್ತಾಗುತ್ತದೆ ? ಈ ರಾತ್ರಿಯಲ್ಲಿ ನಾನೇ ಅಪಘಾತ ಮಾಡಿದ್ದು ಎನ್ನುವುದಕ್ಕೆ ಸಾಕ್ಷಿ ಯಾರಿದ್ದಾರೆ ? ಎಂದು ಯೋಚಿಸುತ್ತದೆ. ಆದರೆ….ನಿಜ ನಾನು ಸೈಕಲ್ಲಿನವನಿಗೆ ಢಿಕ್ಕಿ ಹೊಡೆದುದನ್ನು ನೋಡಿದ ಸಾಕ್ಷಿಗಳ್ಯಾರೂ ಇಲ್ಲ. ಹಾಗೆಂದು ಅದು ಅಪರಾಧವೇ ಅಲ್ಲವೇ ? ಯಾವ ಪ್ರತ್ಯಕ್ಷ ಸಾಕ್ಷಿ ಇಲ್ಲದಿದ್ದರೂ ನನ್ನ ಮನಸ್ಸಾಕ್ಷಿ ಇದೆಯಲ್ಲವೇ ? ಆಗ ತಾನು ಬದಕಿದ್ದರೂ ಸತ್ತಂತೆ ತಾನೇ ? ಅದಕ್ಕೆ ಬದಲು ನಾನು ಮಾಡಿದ ಈ ತಪ್ಪನ್ನು ಒಪ್ಪಿಕೊಂಡು ಬಂದುದನ್ನು ಧೈರ್ಯದಿಂದ ಎದುರಿಸುವುದೇ ನಿಜವಾದ ಧರ್ಮವಲ್ಲವೇ? ಇಂತಹುದೇ ಮಾನವ-ದಾನವ ಚಿಂತನೆಗಳಂದ ಅವನ ಮನ ಕೆಲ ಹೊತ್ತು ಹೊಯ್ದಾಡುತ್ತದೆ.

ಕೊನೆಗೂ ಅವನ ಮನದಲ್ಲಿದ್ದ ಮಾನವ, ದಾನವನನ್ನು ಮೆಟ್ಟಿ ಗೆಲ್ಲುತ್ತಾನೆ. ಅವನು ಕಾರನ್ನು ಹಿಂತಿರುಗಿಸಿಕೊಳ್ಳುತ್ತಾನೆ. ಅವನಿಗೆ ಈಗ ಯಾವ ಭಯ, ಗೊಂದಲವೂ ಇಲ್ಲ.  ಸತ್ಯದ ಹಾದಿಯಲ್ಲಿದ್ದೇನೆ.  ಮಾಡಿದ ಪಾಪಕ್ಕೆ ತಾನೇ ಹೊಣೆ ಎಂದರಿತು ಪರಿಸ್ಥಿತಿ ಎದುರಿಸಲು ತಯಾರಾಗಿದ್ದಾನೆ. ಬಂದುದೆಲ್ಲವ ಎದುರಿಸುತ್ತೇನೆ ಎಂದುಕೊಳ್ಳುತ್ತಾನೆ. ಕಾರು ರಕ್ತದ ಮಡುವಿನಲ್ಲಿ ಬಿದ್ದು ಹೊರಳಾಡುತ್ತಿರುವ ಸೈಕಲ್ ಸವಾರನ ಎದುರು ನಿಲ್ಲುತ್ತದೆ. ಅದರಿಂದ ಇಳಿದ ಇವನು ಅವಸರದಿಂದ ಅವನೆಡೆಗೆ ಸಾಗಿ ಅವನನ್ನೆತ್ತಲು ಕೈ ಮುಂದೆ ಚಾಚುತ್ತಾನೆ. ಮತ್ತು…..

ಸಖಿ, ನಿನಗೂ ದಾನವನನ್ನು ಮೆಟ್ಟಿ ಮಾನವ ಗೆದ್ದ ಯಾವುದೋ ಘಟನೆ ನೆನಪಾದಂತಿದೆ ? ನನಗೂ ಹೇಳುತ್ತೀಯ ತಾನೇ ?
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...