ಶಿವರಾಮರಾಯರು

ಶಿವರಾಮರಾಯರು ಹೆಸರಾಂತ ಲಾಯರು,
ವ್ಯವಹಾರ ಭೂಮಿಯಲಿ ಕಾಮಧೇನು;
ಬೆಟ್ಟಗಲ ಜರತಾರಿಯಂಚಿನ ರುಮಾಲೇನು,
ರಟ್ಟೆಯಷ್ಟೇ ಇರುವ ಮೀಸೆಯೇನು!

ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು.
ಮೈಬಣ್ಣ ಕೆಂಪಿನ ಗುಲಾಬಿಯಂತೆ ;
ಸತ್ಯವಂತರಿಗಿವರು ಸುಲಭದಲಿ ಲಾಯರು
ಇವರಿದ್ದ ಕಡೆ ಗೆಲ್ವು ಸಿದ್ಧವಂತೆ.

ಶಿವರಾಮರಾಯರು ತುಂಬಿರುವ ಸಂಸಾರಿ;
ಹತ್ತೂರ ಮುಂದಾಳು, ಮುತ್ತು ಇವರು.
ಕೈಹಿಡಿದ ಮಡದಿಯೋ ಸಂಕ್ಷಿಪ್ತ ಗಾಂಧಾರಿ.-
ಸಂಸಾರಸಾಗರವ ದಾಟುತಿಹರು.

ಶಿವರಾಮರಾಯರು ಅದೃಷ್ಟಶಾಲಿಗಳೆನ್ನಿ! –
ಆಗರ್ಭ ಶ್ರೀಮಂತರೆನುವ ಬಿರುದು.
ಹತ್ತೂರ ಗೋಜೆಲ್ಲ ಇವರ ಮನೆ ಬಾಗಿಲಲಿ
ಇತ್ಯರ್ಥವಾಗುವುದು, ದಾರಿ ಹೊಳೆದು.

ಶಿವರಾಮರಾಯರು ತುಂಬ ಖಂಡಿತವಾದಿ;
ಮಂದಹಾಸವೆ ಇವರ ಸಿರಿ ಬಾವುಟ.
ನಿರ್ಭಯದಿ ಬಳಸುವರು ‘ಕೋಡು’ಗಳ ಕಾಡಿನಲಿ;
‘ಕೋರ್ಟಿ’ಗೂ ಹಿತವಂತೆ ಇವರಾವುಟ.

ರಜವಿದ್ದ ಸಂಜೆಯಲಿ ಒಳಮುನೆಯ ಬೆಳಕಿನಲಿ
ಪುಸ್ತಕದ ಪಂಕ್ತಿಯಲಿ ವಲ್ಲಿ ಹೊದ್ದು;
ಕನ್ನಡಕದಂಚಿನಲಿ ಜಿಗಿವ ಕಣ್ಮಿಂಚಿನಲಿ
ಮುದ್ದು ಮಗಳೇ ಇಳಿದು ಗುದ್ದು ಕೊಡಲು,

ಪತ್ರ ಓದುತ್ತಲೇ ಚರ್ಚೆ ಮಾಡುತ್ತಲೇ
ಹೆಂಡತಿಯ ಸೂಚನೆಗೆ ಸನ್ನೆಮಾಡಿ,
ಒಂದೆ ನದಿ ಎರಡು ಎತ್ತರಗಳಲಿ ಹರಿವಂತೆ,
ಜೀವನವ ನಡಸುತ್ತ ಗೌರವದಲಿ,

ಗೆದ್ದವರನಾದರಿಸಿ ಸೋತವರ ಸಂತವಿಸಿ
ತಾವು ಎರಡೂ ಕಡೆಗೆ ಬಂಧುವೆನಿಸಿ
ದೇವರಿಗೆ ಕೈಮುಗಿಸಿ ಸ್ನೇಹಗಳ ತಲೆಯುಳಿಸಿ
ಅಲಲ್ಲಿಗಂದಂದೆ ಗಂಟು ಬಿಡಿಸಿ,

ಶಿವರಾಮರಾಯರು, ಹೆಸರಾಂತ ಲಾಯರು
ತಮ್ಮ ಹೊರೆಯೇ ತಮ್ಮ ಬೆನ್ನಿಗಿರಲು,
ಸುಮ್ಮನಿರಲಾರದೆಯೆ ಅವರಿವರ ದುರಿತವನು
ಆಧುನಿಕ ‘ಆಟ್ಲಾಸಿನಂತೆ’ ಹೊತ್ತು-

ಭಗವಂತನಡಿಯಮೇಲಗಣಿತ ವ್ಯೂಹದಲಿ
ಬಣ್ಣ ಬಣ್ಣದ ಬುಗುರಿ ಆಡುತಿರಲು
ಕಂತೆಗಳು, ಚಿಂತೆಗಳು, ಸಂತೆಗಳು ಸುತ್ತಾಡಿ
ಇದ್ದಲ್ಲೆ ಬಿದ್ದಲ್ಲೆ ಬೀಳುತಿರಲು,-

ಹೋರಾಡುತಿರುವರು. ಪಾಪ! ಇವರೊಬ್ಬರು ;
ತಲೆ ಬೆಳ್ಳಗಾಗಿಹುದು ತೊಂದರೆಯಲಿ.
ವಿಧಿನಿಯಮವಿದ್ದಂತೆ, ಹೋದ ಮಳೆ ಬಿದ್ದಂತೆ
ನಡೆವುದೂರಿನ ಬಾಳು ತೋರಿಕೆಯಲಿ.-

ಈ ನಡುನೆ ತಲೆಹಾಕಿ ಕಂಡ ಪಾತಾಳದಲಿ
ಕಾಲಿಟ್ಟು ಬೀಳುವುದು ಒಂದು ತಪ್ಪು.
ಕ್ಷೀರಸಾಗರನೆಂದು ಹಾಡಿರಲಿ ಕವಿತೆಯಲಿ,
ಕಡಲ ನೀರೆಲ್ಲೆಲ್ಲು ತುಂಬ ಉಪ್ಪು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗ್ನ ಹೃದಯ
Next post ಹಣ್ಣು ಮರಗಳ ಮುಡಿಯಲ್ಲಿ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…