Home / ಕವನ / ಕವಿತೆ / ಶಿವರಾಮರಾಯರು

ಶಿವರಾಮರಾಯರು

ಶಿವರಾಮರಾಯರು ಹೆಸರಾಂತ ಲಾಯರು,
ವ್ಯವಹಾರ ಭೂಮಿಯಲಿ ಕಾಮಧೇನು;
ಬೆಟ್ಟಗಲ ಜರತಾರಿಯಂಚಿನ ರುಮಾಲೇನು,
ರಟ್ಟೆಯಷ್ಟೇ ಇರುವ ಮೀಸೆಯೇನು!

ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು.
ಮೈಬಣ್ಣ ಕೆಂಪಿನ ಗುಲಾಬಿಯಂತೆ ;
ಸತ್ಯವಂತರಿಗಿವರು ಸುಲಭದಲಿ ಲಾಯರು
ಇವರಿದ್ದ ಕಡೆ ಗೆಲ್ವು ಸಿದ್ಧವಂತೆ.

ಶಿವರಾಮರಾಯರು ತುಂಬಿರುವ ಸಂಸಾರಿ;
ಹತ್ತೂರ ಮುಂದಾಳು, ಮುತ್ತು ಇವರು.
ಕೈಹಿಡಿದ ಮಡದಿಯೋ ಸಂಕ್ಷಿಪ್ತ ಗಾಂಧಾರಿ.-
ಸಂಸಾರಸಾಗರವ ದಾಟುತಿಹರು.

ಶಿವರಾಮರಾಯರು ಅದೃಷ್ಟಶಾಲಿಗಳೆನ್ನಿ! –
ಆಗರ್ಭ ಶ್ರೀಮಂತರೆನುವ ಬಿರುದು.
ಹತ್ತೂರ ಗೋಜೆಲ್ಲ ಇವರ ಮನೆ ಬಾಗಿಲಲಿ
ಇತ್ಯರ್ಥವಾಗುವುದು, ದಾರಿ ಹೊಳೆದು.

ಶಿವರಾಮರಾಯರು ತುಂಬ ಖಂಡಿತವಾದಿ;
ಮಂದಹಾಸವೆ ಇವರ ಸಿರಿ ಬಾವುಟ.
ನಿರ್ಭಯದಿ ಬಳಸುವರು ‘ಕೋಡು’ಗಳ ಕಾಡಿನಲಿ;
‘ಕೋರ್ಟಿ’ಗೂ ಹಿತವಂತೆ ಇವರಾವುಟ.

ರಜವಿದ್ದ ಸಂಜೆಯಲಿ ಒಳಮುನೆಯ ಬೆಳಕಿನಲಿ
ಪುಸ್ತಕದ ಪಂಕ್ತಿಯಲಿ ವಲ್ಲಿ ಹೊದ್ದು;
ಕನ್ನಡಕದಂಚಿನಲಿ ಜಿಗಿವ ಕಣ್ಮಿಂಚಿನಲಿ
ಮುದ್ದು ಮಗಳೇ ಇಳಿದು ಗುದ್ದು ಕೊಡಲು,

ಪತ್ರ ಓದುತ್ತಲೇ ಚರ್ಚೆ ಮಾಡುತ್ತಲೇ
ಹೆಂಡತಿಯ ಸೂಚನೆಗೆ ಸನ್ನೆಮಾಡಿ,
ಒಂದೆ ನದಿ ಎರಡು ಎತ್ತರಗಳಲಿ ಹರಿವಂತೆ,
ಜೀವನವ ನಡಸುತ್ತ ಗೌರವದಲಿ,

ಗೆದ್ದವರನಾದರಿಸಿ ಸೋತವರ ಸಂತವಿಸಿ
ತಾವು ಎರಡೂ ಕಡೆಗೆ ಬಂಧುವೆನಿಸಿ
ದೇವರಿಗೆ ಕೈಮುಗಿಸಿ ಸ್ನೇಹಗಳ ತಲೆಯುಳಿಸಿ
ಅಲಲ್ಲಿಗಂದಂದೆ ಗಂಟು ಬಿಡಿಸಿ,

ಶಿವರಾಮರಾಯರು, ಹೆಸರಾಂತ ಲಾಯರು
ತಮ್ಮ ಹೊರೆಯೇ ತಮ್ಮ ಬೆನ್ನಿಗಿರಲು,
ಸುಮ್ಮನಿರಲಾರದೆಯೆ ಅವರಿವರ ದುರಿತವನು
ಆಧುನಿಕ ‘ಆಟ್ಲಾಸಿನಂತೆ’ ಹೊತ್ತು-

ಭಗವಂತನಡಿಯಮೇಲಗಣಿತ ವ್ಯೂಹದಲಿ
ಬಣ್ಣ ಬಣ್ಣದ ಬುಗುರಿ ಆಡುತಿರಲು
ಕಂತೆಗಳು, ಚಿಂತೆಗಳು, ಸಂತೆಗಳು ಸುತ್ತಾಡಿ
ಇದ್ದಲ್ಲೆ ಬಿದ್ದಲ್ಲೆ ಬೀಳುತಿರಲು,-

ಹೋರಾಡುತಿರುವರು. ಪಾಪ! ಇವರೊಬ್ಬರು ;
ತಲೆ ಬೆಳ್ಳಗಾಗಿಹುದು ತೊಂದರೆಯಲಿ.
ವಿಧಿನಿಯಮವಿದ್ದಂತೆ, ಹೋದ ಮಳೆ ಬಿದ್ದಂತೆ
ನಡೆವುದೂರಿನ ಬಾಳು ತೋರಿಕೆಯಲಿ.-

ಈ ನಡುನೆ ತಲೆಹಾಕಿ ಕಂಡ ಪಾತಾಳದಲಿ
ಕಾಲಿಟ್ಟು ಬೀಳುವುದು ಒಂದು ತಪ್ಪು.
ಕ್ಷೀರಸಾಗರನೆಂದು ಹಾಡಿರಲಿ ಕವಿತೆಯಲಿ,
ಕಡಲ ನೀರೆಲ್ಲೆಲ್ಲು ತುಂಬ ಉಪ್ಪು.
*****

Tagged:

Leave a Reply

Your email address will not be published. Required fields are marked *

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...

ಒಂದೊಂದೆ ನೀರ ಹನಿಗಳು ಮುಳಿಹುಲ್ಲಿನ ಮಾಡಿನಿಂದ ಜಿನುಗಿ ತೊಟ್ಟಿಕ್ಕಿ ಆತ ಹೊದ್ದ ಕಂಬಳಿಯ ನೆನೆಸಿ ಒಳನುಸುಳಿ ಆತನ ಕುಂಡೆಯ ಭಾಗವೆಲ್ಲಾ ಒದ್ದೆಯಾದ ಕಾರಣವೋ ಹೊತ್ತಿಗೆ ಮುಂಚೆ ಎಂದೂ ಏಳದ ಹೊಲಿಯಪ್ಪ ಅಂದು ದಡಬಡಿಸಿ ಎದ್ದ. ಆತ ಮಲಗಿದ ಕಡೆಯಲ್ಲಿ ನೆಲವೆಲ್ಲಾ ಅದಾಗಲೇ ಹಸಿಯಾಗಿತ್ತಲ್ಲ. ಹ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದಿದ ಭೀಕರ ತಿರುವುಗಳನ್ನು ಹೊಂದಿದ ವಕ...