Home / ಕವನ / ಕವಿತೆ / ಶಿವರಾಮರಾಯರು

ಶಿವರಾಮರಾಯರು

ಶಿವರಾಮರಾಯರು ಹೆಸರಾಂತ ಲಾಯರು,
ವ್ಯವಹಾರ ಭೂಮಿಯಲಿ ಕಾಮಧೇನು;
ಬೆಟ್ಟಗಲ ಜರತಾರಿಯಂಚಿನ ರುಮಾಲೇನು,
ರಟ್ಟೆಯಷ್ಟೇ ಇರುವ ಮೀಸೆಯೇನು!

ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು.
ಮೈಬಣ್ಣ ಕೆಂಪಿನ ಗುಲಾಬಿಯಂತೆ ;
ಸತ್ಯವಂತರಿಗಿವರು ಸುಲಭದಲಿ ಲಾಯರು
ಇವರಿದ್ದ ಕಡೆ ಗೆಲ್ವು ಸಿದ್ಧವಂತೆ.

ಶಿವರಾಮರಾಯರು ತುಂಬಿರುವ ಸಂಸಾರಿ;
ಹತ್ತೂರ ಮುಂದಾಳು, ಮುತ್ತು ಇವರು.
ಕೈಹಿಡಿದ ಮಡದಿಯೋ ಸಂಕ್ಷಿಪ್ತ ಗಾಂಧಾರಿ.-
ಸಂಸಾರಸಾಗರವ ದಾಟುತಿಹರು.

ಶಿವರಾಮರಾಯರು ಅದೃಷ್ಟಶಾಲಿಗಳೆನ್ನಿ! –
ಆಗರ್ಭ ಶ್ರೀಮಂತರೆನುವ ಬಿರುದು.
ಹತ್ತೂರ ಗೋಜೆಲ್ಲ ಇವರ ಮನೆ ಬಾಗಿಲಲಿ
ಇತ್ಯರ್ಥವಾಗುವುದು, ದಾರಿ ಹೊಳೆದು.

ಶಿವರಾಮರಾಯರು ತುಂಬ ಖಂಡಿತವಾದಿ;
ಮಂದಹಾಸವೆ ಇವರ ಸಿರಿ ಬಾವುಟ.
ನಿರ್ಭಯದಿ ಬಳಸುವರು ‘ಕೋಡು’ಗಳ ಕಾಡಿನಲಿ;
‘ಕೋರ್ಟಿ’ಗೂ ಹಿತವಂತೆ ಇವರಾವುಟ.

ರಜವಿದ್ದ ಸಂಜೆಯಲಿ ಒಳಮುನೆಯ ಬೆಳಕಿನಲಿ
ಪುಸ್ತಕದ ಪಂಕ್ತಿಯಲಿ ವಲ್ಲಿ ಹೊದ್ದು;
ಕನ್ನಡಕದಂಚಿನಲಿ ಜಿಗಿವ ಕಣ್ಮಿಂಚಿನಲಿ
ಮುದ್ದು ಮಗಳೇ ಇಳಿದು ಗುದ್ದು ಕೊಡಲು,

ಪತ್ರ ಓದುತ್ತಲೇ ಚರ್ಚೆ ಮಾಡುತ್ತಲೇ
ಹೆಂಡತಿಯ ಸೂಚನೆಗೆ ಸನ್ನೆಮಾಡಿ,
ಒಂದೆ ನದಿ ಎರಡು ಎತ್ತರಗಳಲಿ ಹರಿವಂತೆ,
ಜೀವನವ ನಡಸುತ್ತ ಗೌರವದಲಿ,

ಗೆದ್ದವರನಾದರಿಸಿ ಸೋತವರ ಸಂತವಿಸಿ
ತಾವು ಎರಡೂ ಕಡೆಗೆ ಬಂಧುವೆನಿಸಿ
ದೇವರಿಗೆ ಕೈಮುಗಿಸಿ ಸ್ನೇಹಗಳ ತಲೆಯುಳಿಸಿ
ಅಲಲ್ಲಿಗಂದಂದೆ ಗಂಟು ಬಿಡಿಸಿ,

ಶಿವರಾಮರಾಯರು, ಹೆಸರಾಂತ ಲಾಯರು
ತಮ್ಮ ಹೊರೆಯೇ ತಮ್ಮ ಬೆನ್ನಿಗಿರಲು,
ಸುಮ್ಮನಿರಲಾರದೆಯೆ ಅವರಿವರ ದುರಿತವನು
ಆಧುನಿಕ ‘ಆಟ್ಲಾಸಿನಂತೆ’ ಹೊತ್ತು-

ಭಗವಂತನಡಿಯಮೇಲಗಣಿತ ವ್ಯೂಹದಲಿ
ಬಣ್ಣ ಬಣ್ಣದ ಬುಗುರಿ ಆಡುತಿರಲು
ಕಂತೆಗಳು, ಚಿಂತೆಗಳು, ಸಂತೆಗಳು ಸುತ್ತಾಡಿ
ಇದ್ದಲ್ಲೆ ಬಿದ್ದಲ್ಲೆ ಬೀಳುತಿರಲು,-

ಹೋರಾಡುತಿರುವರು. ಪಾಪ! ಇವರೊಬ್ಬರು ;
ತಲೆ ಬೆಳ್ಳಗಾಗಿಹುದು ತೊಂದರೆಯಲಿ.
ವಿಧಿನಿಯಮವಿದ್ದಂತೆ, ಹೋದ ಮಳೆ ಬಿದ್ದಂತೆ
ನಡೆವುದೂರಿನ ಬಾಳು ತೋರಿಕೆಯಲಿ.-

ಈ ನಡುನೆ ತಲೆಹಾಕಿ ಕಂಡ ಪಾತಾಳದಲಿ
ಕಾಲಿಟ್ಟು ಬೀಳುವುದು ಒಂದು ತಪ್ಪು.
ಕ್ಷೀರಸಾಗರನೆಂದು ಹಾಡಿರಲಿ ಕವಿತೆಯಲಿ,
ಕಡಲ ನೀರೆಲ್ಲೆಲ್ಲು ತುಂಬ ಉಪ್ಪು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...