ಶಿವರಾಮರಾಯರು

ಶಿವರಾಮರಾಯರು ಹೆಸರಾಂತ ಲಾಯರು,
ವ್ಯವಹಾರ ಭೂಮಿಯಲಿ ಕಾಮಧೇನು;
ಬೆಟ್ಟಗಲ ಜರತಾರಿಯಂಚಿನ ರುಮಾಲೇನು,
ರಟ್ಟೆಯಷ್ಟೇ ಇರುವ ಮೀಸೆಯೇನು!

ಮೇಲ್ಮನೆಯೆ ಮೆಲ್ದನಿಯ ಶಿವರಾಮರಾಯರು.
ಮೈಬಣ್ಣ ಕೆಂಪಿನ ಗುಲಾಬಿಯಂತೆ ;
ಸತ್ಯವಂತರಿಗಿವರು ಸುಲಭದಲಿ ಲಾಯರು
ಇವರಿದ್ದ ಕಡೆ ಗೆಲ್ವು ಸಿದ್ಧವಂತೆ.

ಶಿವರಾಮರಾಯರು ತುಂಬಿರುವ ಸಂಸಾರಿ;
ಹತ್ತೂರ ಮುಂದಾಳು, ಮುತ್ತು ಇವರು.
ಕೈಹಿಡಿದ ಮಡದಿಯೋ ಸಂಕ್ಷಿಪ್ತ ಗಾಂಧಾರಿ.-
ಸಂಸಾರಸಾಗರವ ದಾಟುತಿಹರು.

ಶಿವರಾಮರಾಯರು ಅದೃಷ್ಟಶಾಲಿಗಳೆನ್ನಿ! –
ಆಗರ್ಭ ಶ್ರೀಮಂತರೆನುವ ಬಿರುದು.
ಹತ್ತೂರ ಗೋಜೆಲ್ಲ ಇವರ ಮನೆ ಬಾಗಿಲಲಿ
ಇತ್ಯರ್ಥವಾಗುವುದು, ದಾರಿ ಹೊಳೆದು.

ಶಿವರಾಮರಾಯರು ತುಂಬ ಖಂಡಿತವಾದಿ;
ಮಂದಹಾಸವೆ ಇವರ ಸಿರಿ ಬಾವುಟ.
ನಿರ್ಭಯದಿ ಬಳಸುವರು ‘ಕೋಡು’ಗಳ ಕಾಡಿನಲಿ;
‘ಕೋರ್ಟಿ’ಗೂ ಹಿತವಂತೆ ಇವರಾವುಟ.

ರಜವಿದ್ದ ಸಂಜೆಯಲಿ ಒಳಮುನೆಯ ಬೆಳಕಿನಲಿ
ಪುಸ್ತಕದ ಪಂಕ್ತಿಯಲಿ ವಲ್ಲಿ ಹೊದ್ದು;
ಕನ್ನಡಕದಂಚಿನಲಿ ಜಿಗಿವ ಕಣ್ಮಿಂಚಿನಲಿ
ಮುದ್ದು ಮಗಳೇ ಇಳಿದು ಗುದ್ದು ಕೊಡಲು,

ಪತ್ರ ಓದುತ್ತಲೇ ಚರ್ಚೆ ಮಾಡುತ್ತಲೇ
ಹೆಂಡತಿಯ ಸೂಚನೆಗೆ ಸನ್ನೆಮಾಡಿ,
ಒಂದೆ ನದಿ ಎರಡು ಎತ್ತರಗಳಲಿ ಹರಿವಂತೆ,
ಜೀವನವ ನಡಸುತ್ತ ಗೌರವದಲಿ,

ಗೆದ್ದವರನಾದರಿಸಿ ಸೋತವರ ಸಂತವಿಸಿ
ತಾವು ಎರಡೂ ಕಡೆಗೆ ಬಂಧುವೆನಿಸಿ
ದೇವರಿಗೆ ಕೈಮುಗಿಸಿ ಸ್ನೇಹಗಳ ತಲೆಯುಳಿಸಿ
ಅಲಲ್ಲಿಗಂದಂದೆ ಗಂಟು ಬಿಡಿಸಿ,

ಶಿವರಾಮರಾಯರು, ಹೆಸರಾಂತ ಲಾಯರು
ತಮ್ಮ ಹೊರೆಯೇ ತಮ್ಮ ಬೆನ್ನಿಗಿರಲು,
ಸುಮ್ಮನಿರಲಾರದೆಯೆ ಅವರಿವರ ದುರಿತವನು
ಆಧುನಿಕ ‘ಆಟ್ಲಾಸಿನಂತೆ’ ಹೊತ್ತು-

ಭಗವಂತನಡಿಯಮೇಲಗಣಿತ ವ್ಯೂಹದಲಿ
ಬಣ್ಣ ಬಣ್ಣದ ಬುಗುರಿ ಆಡುತಿರಲು
ಕಂತೆಗಳು, ಚಿಂತೆಗಳು, ಸಂತೆಗಳು ಸುತ್ತಾಡಿ
ಇದ್ದಲ್ಲೆ ಬಿದ್ದಲ್ಲೆ ಬೀಳುತಿರಲು,-

ಹೋರಾಡುತಿರುವರು. ಪಾಪ! ಇವರೊಬ್ಬರು ;
ತಲೆ ಬೆಳ್ಳಗಾಗಿಹುದು ತೊಂದರೆಯಲಿ.
ವಿಧಿನಿಯಮವಿದ್ದಂತೆ, ಹೋದ ಮಳೆ ಬಿದ್ದಂತೆ
ನಡೆವುದೂರಿನ ಬಾಳು ತೋರಿಕೆಯಲಿ.-

ಈ ನಡುನೆ ತಲೆಹಾಕಿ ಕಂಡ ಪಾತಾಳದಲಿ
ಕಾಲಿಟ್ಟು ಬೀಳುವುದು ಒಂದು ತಪ್ಪು.
ಕ್ಷೀರಸಾಗರನೆಂದು ಹಾಡಿರಲಿ ಕವಿತೆಯಲಿ,
ಕಡಲ ನೀರೆಲ್ಲೆಲ್ಲು ತುಂಬ ಉಪ್ಪು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭಗ್ನ ಹೃದಯ
Next post ಹಣ್ಣು ಮರಗಳ ಮುಡಿಯಲ್ಲಿ

ಸಣ್ಣ ಕತೆ

  • ಕನಸುಗಳಿಗೆ ದಡಗಳಿರುದಿಲ್ಲ

    ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

  • ತ್ರಿಪಾದ

    ವಿಲಿಯಂ ಜೋನ್ಸ್ ಭಾರತದ ದೇವನಹಳ್ಳಿ ವಿಮಾನ ನಿಲ್ದಾಣದಲ್ಲಿ ಇಳಿದಾಗ, ಅವನ ಮನವನ್ನು ಕಾಡುತ್ತಿದ್ದ ಪ್ರೀತಿ ಅವನ ಹೆಂಡತಿ ಮಕ್ಕಳೊಂದಿಗೆ ಅವನನ್ನು ಅತಿಯಾಗಿ ಹಚ್ಚಿಕೊಂಡಿದ್ದ ಅವನ ಪ್ರೀತಿಯ ನಾಯಿ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

cheap jordans|wholesale air max|wholesale jordans|wholesale jewelry|wholesale jerseys