ಚಿಂತೆ ಏತಕೆ ಗೆಳತಿ?
ಜೀವ ಭಾವ ಹೆಗಲ ಹೂಡಿ
ನೋವು ನಲಿವ ಕೀಲ ಮಾಡಿ
ಸಾಗುತಿಹುದು ಬಾಳಿನ ಗಾಡಿ
ಮೇಲು ಕೀಳು ಎನುವುದುಂಟೆ?
ಹಳಿದು ಉಳಿದ ಹಮ್ಮು ಉಂಟೆ?
ಬದುಕೇ ಸಾವಿನ ಒಲೆಯ ಕುಂಟೆ
ಇಷ್ಷ ಕಷ್ಟ ಯಾಕೆ ದೂರು?
ಈ ಭೂಮಿ ನಾಲ್ಕು ದಿನದ ಊರ
ತಾಳಿ ನಿಂತು ಮುಂದೆ ಸಾಗು
ಬಯಕೆ ಜನಿಸಿ ನಾಕ ನರಕ
ಸಾಕು ಬೇಕು ಎಂಬ ತವಕ
ಇರುಳು ಬಂದು ಕವಿವ ತನಕ
******
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.