ಶ್ರೀ ಕೃಷ್ಣನ ಚರಣಕಮಲ
ಭಜಿಸು ಮನವೆ ನೀ
ಅವಿನಾಶೀ ಶ್ಯಾಮನ ಪದ-
ಕಮಲ ಭಜಿಸು ನೀ
ಲೋಕ ಒಂದು ನೀರ ಗುಳ್ಳೆ,
ಕಂಡರೇನು, ಕಡೆಗೆ ಸುಳ್ಳೇ!
ಬುವಿ ಬಾನಿನ ಮಧ್ಯೆ ಮಾಯೆ
ಮೆರೆವ ಮಿಥ್ಯಕಿಲ್ಲ ಎಲ್ಲೆ,
ಮನೆಯ ಬಿಟ್ಟ ಮಾತ್ರಕೇನು,
ಕಾವಿಯುಟ್ಟ ಶಾಸ್ತ್ರಕೇನು?
ನಾನು ನನ್ನದೆಂಬ ಮೋಹ
ಬಿಡದೆ ಹೇಗೆ ಮುಕ್ತೆ ನೀನು?
ಸಂಜೆ ಸುಳಿದು ಅಳಿಯುವಂಥ
ಹಕ್ಕಿ ದನಿಯು ಈ ಬಾಳು,
ಗಿರಿಧರನೇ ನಿನ್ನ ಮೀರಾ
ಜಗವ ಮೀರುವಂತೆ ಮಾಡು
******
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.