Home / ಕವನ / ಕವಿತೆ / ಡೊಳ್ಳನ ಪದ

ಡೊಳ್ಳನ ಪದ

ಗುರುವೇ ನಮ್ಮಾಯ ದೇವಾರ್ ಬಂದಾವ ಬನ್ನಿರೂ
ಹರನೇ ನಮ್ಮಾಯ್ ದೇವರಿಗೆ ಶರಣೆನ್ನಿರೋ
ಸ್ವಾಮಿ ನಮ್ಮಾಯ್ ದೇವಾರ್ ಬಂದಾವ ಬನ್ನಿರೋ ||ಪ||

ದೇವರು ಊರಿಗೆ ಬಂದಾವೇ ಅಕ್ಷರ ವರವಾ ತಂದಾವೆ
ಸಾವಿರದಂಥ ನೋವಿರದಂಥ ವಿದ್ಯೆಯ ಅಮೃತ ತಂದಾವೆ ||೧||

ವಿದ್ಯೆಯ ಕಲಿಯಿರಿ ಬುದ್ದಿಯ ಬೆಳೆಸಿರಿ ಅದುವೇ ಸಂಪತ್ತು ಅಂದಾವೆ
ನಿಮ್ಮ ಉದ್ದಾರ ನಿಮ್ಮ್ಮ ಕೈಯಾಗೆ ಎನ್ನುತ ಕತ್ತಲೆ ಕೊಂದಾವೆ ||೨||

ಹೆಬ್ಬಟ್ಟು ಗುರುತು ನರನಿಗೆ ಶಾಪಾ
ಶಾಪವ ಬಿಡಿಸಾಕೆ ಬಂದಾವೆ
ದೇವರ ಲೋಕದ ಒಳಗಡೆ ಪರವೇಶ
ಅಂಥಾವ್ರಿಗಿಲ್ಲಂತ ಸಾರ್ಯಾವೆ ||೩||

ಇಲ್ಲಿಯವರೆಗೆಲ್ಲ ಓದಿದ್ದ ತಲೆಗಳು
ನಮ್ಮನ್ನ ಕಾಲಾಗೆ ತುಳಿದಾವೆ
ಕೆಳಗೆ ಬಿದ್ದವರೆಲ್ಲ ಮ್ಯಾಲೆದ್ದು ನಿಲ್ಲಾಕ
ಆಸರೆ ಒಂದಾ ತಂದಾವೆ ||೪||

ಮಕ್ಕಳು ಭಾಳಾ ದೇಶಕೆ ಭಾರಾ
ಭಾರತ ಮಾತೆಯ ಕೊಂದಾವೆ
ಒಂದೊಂದು ಮನಿಯಾಗೆ ಇಬ್ಬರು ಮಕ್ಕಳು
ಸಾಕೇ ಸಾಕು ಅಂದಾವೆ ||೫||

ಆರೋಗ್ಯ ಜೀವನ ಸ್ವಚ್ಛತೆ ಜೀವನ
ಅದುವೇ ಸ್ವರ್ಗಾ ಅಂದಾವೆ
ಕಾಯಿಲೆಗಳಿಗೆಲ್ಲ ದೇವರ ಗುರಿ ಮಾಡಿ
ಮೂಢರಾಗಬೇಡಿ ಅಂದಾವೆ ||೬||

ಹೆಣ್ಣು ಗಂಡೂ ಒಲವಿನ ಬಾಳಿಗೆ
ಸರಳ ವಿವಾಹವೆ ಸರಿ ನೋಡ್ರಿ
ಅದ್ದೂರಿ ಗದ್ದಲ ವೈಭವದ ಮದುವೆಯ
ಮಾಡುತ ಸಾಲದಿ ಕೊಳಿಬ್ಯಾಡ್ರಿ ||೭||

ಗಂಡೂ ಹೆಣ್ಣೂ ಎರಡೂ ಕಣ್ಣು
ದೇವರ ಲೀಲ್ಯಾಗ ಅಂದಾವೆ
ಹೆಣ್ಣನು ತುಳಿಯುತ ಬದುಕುವ ಗಂಡು
ಗಂಡಲ್ಲ ಭಂಡಾ ಅಂದಾವೆ ||೮||

ಪುರಾಣ ಕತೆಗಳ ಕತೆಯಂತೆ ನೋಡಿರಿ
ನೂರಕ್ಕೆ ನೂರು ನಿಜವಲ್ಲ
ಧರ್ಮದ ಮರ್ಮವ ಸರಿಯಾಗಿ ತಿಳಿಯಿರಿ
ಧರ್ರ್ಮಾಂಧತೆಯಿಂದ ಉಳಿವಿಲ್ಲ ||೯||

ಮಾನವರೆಲ್ಲ ಒಂದೇ ಎನ್ನಿರಿ
ಭೇದವ ಮಾಡೋದು ಮಹಾಪಾಪ
ಮೇಲು ಕೀಳೆನ್ನುತ ಮೆರೆಯುವ ಮೂರ್ಖರಿಗೆ
ದೇವರು ಕೊಡತಾವ ಹಿಡಿಶಾಪ ||೧೦||

ಎಲ್ಲರು ಕೂಡುತ ದುಡಿಯುತ ಹಾಡುತ
ಬಾಳಿರಿ ಎನ್ನುತ ಹರಸ್ಯಾವೆ
ಎಲ್ಲರಿಗಾಗಿಯೆ ಎಲ್ಲರು ಇದುವೇ
ಮಾನವ ಧರ್ಮೆಂದು ಸಾರ್ಯಾವೆ ||೧೧||

******

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...