Home / ಕವನ / ಕವಿತೆ / ಚೈತನ್ಯ ಚಿಮ್ಮಿದಾಗ

ಚೈತನ್ಯ ಚಿಮ್ಮಿದಾಗ

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ
ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ
ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ
ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧||

ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ
ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ
ಬರಡಾದ ಭೂಮಿಗೆ ಸ್ವರ್ಗಾನೆ ಇಳಿದಿತ್ತು
ಮಂತ್ರ ಹಾಕಿದಂತೆ ಯಾವ್ದೋ ಯುಕ್ತಿ ||೨ ||

ಮರುಭೂಮ್ಯಾಗೆ ಚಿಲುಮೆದ್ದು ಚಿಮ್ದಂಗೆ ಮ್ಯಾಲಕ್ಕೆ
ಎಲ್ಲಿತ್ತೊ ಒಳಸೆಲೆ ಕಾಣ್ಲೆ ಇಲ್ಲ
ಒಣಗಿದ್ದ ಮರದಾಗೆ ಒಮ್ಮಿಂದೊಮ್ಗೆ ಹಸಿರು
ಉಸಿರಾಡಿ ಉಡಿಯಾಗೆ ತುಂಬಿತಲ್ಲ ||೩||

ಆಲಸ್ಯ ಅಡಗ್ಹೋತು ಭಯವೆಲ್ಲ ಕಡೆಗಾಯ್ತು
ಕೋಪ ತಾಪವೆಲ್ಲ ತಣ್ಣಗಾಯ್ತು
ನಿದ್ದೆಲ್ಲ ಎಚ್ರಾತು ಎಚ್ರಾನೆ ಮುದ್ದಾಯ್ತು
ಕಲ್ಲಾಗೆ ಕಣ್ಣೀರು ಬಂದಂಗಾಯ್ತು ||೪||

ಒಬ್ಬನೆ ಇದ್ದವಗೆ ನೂರ್ ಜನ ಬಲಬಂತು
ನಾನೊಬ್ನೆ ಅಲ್ಲಂತ ಧೈರ್ಯ ಬಂತು
ರಾತ್ರೆಲ್ಲ ಬೆಳಕಾತು ಹಗಲೆಲ್ಲ ಬಯಲಾತು
ಹುಚ್ಚೆದ್ದು ಕುಣಿವಂಥ ಸ್ಫೂರ್ತಿ ಬಂತು ||೫||

ನೆಲದಲ್ಲಿ ನಿಂತವ್ಗೆ ಗಗನದ್ಹೂ ಸಿಕ್ಕಿತ್ತು
ಆಳಕ್ಕೆ ಬೇರುಗಳು ಹಬ್ಬಿದ್ದವು
ಒಳಗೆಲ್ಲಾ ಬೆಳೆದಂತೆ ಕೊಂಬೆಗಳು ಬೆಳೆದಿದ್ದು
ವಿಶ್ವಾನೆ ಹಬ್ಬಿದಂತೆ ಚಾಚಿದ್ದವು ||೬||

ಕಷ್ಟಗಳ ಗುಡ್ಡಗಳು ಬಿಳಿ ಮೋಡಗಳಾದವು
ಚಿಂತೆಲ್ಲ ಸಂತೆಲ್ಲ ಬಯಲಾಯಿತು
ದುಃಖಾದ ನೀರಲ್ಲು ಸುಖ ತುಂಬಿ ಕಣ್ಣೀರು
ಸಂಕಟದ ನೋವೆಲ್ಲ ಸಯವಾಯಿತು ||೭||

ನಂಗೊತ್ತು ಈ ಸೊಗಸು ಒಂದೇ ಕ್ಷಣಂಬೋದು
ಜೀವಾ ಹಿಡಿಯಾಕೊಂದೆ ಬೊಗಸೆ ಸಾಕು
ವಿಷಯ ಸಾಗರದಾಗ ಈಜಾಡ್ತಾ ಸಾಗಿದ್ರು
ಒಂದೆ ಹನಿ ಅಮೃತಾವು ಸಾಕೆ ಸಾಕು ||೮||

ಭೂಮಿ ಸೀಮೀ ಬಿಟ್ಟು ಬರಿ ಬಾನು ಬೇಕಿಲ್ಲ
ಬಾನ್ನ್ಯಾಗೆ ಸ್ವರ್ಗಾನೆ ಇರವೊಲ್ದ್ಯಾಕೆ
ಆಕಾಶ್ದಾಗ ಹಾರ್ವಂಥ ಹಕ್ಕೀನೆ ಆಗ್ಬೇಕೆ
ಮಣ್ಣಾಗಿನ ಮಣಿಯಾಗಿ ಇರಬಾರ್ದ್ಯೇಕೆ ||೯||
***

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...