Home / ಕವನ / ಕವಿತೆ / ಚೈತನ್ಯ ಚಿಮ್ಮಿದಾಗ

ಚೈತನ್ಯ ಚಿಮ್ಮಿದಾಗ

ಎಲ್ಲಿಂದ ಬರ್ತೀಯೊ ಯಾವ ಗಳಿಗೆ ಬರ್ತೀಯೊ
ಯಾವ್ಮಾತ್ನಾಗೆ ಹೊಳಿತಿಯೊ ತಿಳಿಯದಲ್ಲಾ
ಹೊರಗೆಲ್ಲ ಹುಡುಕಿದ್ದೆ ಹುಡುಹುಡುಕಿ ದಣಿದಿದ್ದೆ
ಯಾವಾಗ್ಲೋ ಒಳಬಂದು ಕುಂತಿಯಲ್ಲಾ ||೧||

ಹೆಣದಾಗೆ ಚೈತನ್ಯ ಮೈತುಂಬಿ ನಿಂತಂಗೆ
ತುಂಬ್ಕೊಂಡೆ ಬಂದಿತ್ತು ಯಾವ್ದೋ ಶಕ್ತಿ
ಬರಡಾದ ಭೂಮಿಗೆ ಸ್ವರ್ಗಾನೆ ಇಳಿದಿತ್ತು
ಮಂತ್ರ ಹಾಕಿದಂತೆ ಯಾವ್ದೋ ಯುಕ್ತಿ ||೨ ||

ಮರುಭೂಮ್ಯಾಗೆ ಚಿಲುಮೆದ್ದು ಚಿಮ್ದಂಗೆ ಮ್ಯಾಲಕ್ಕೆ
ಎಲ್ಲಿತ್ತೊ ಒಳಸೆಲೆ ಕಾಣ್ಲೆ ಇಲ್ಲ
ಒಣಗಿದ್ದ ಮರದಾಗೆ ಒಮ್ಮಿಂದೊಮ್ಗೆ ಹಸಿರು
ಉಸಿರಾಡಿ ಉಡಿಯಾಗೆ ತುಂಬಿತಲ್ಲ ||೩||

ಆಲಸ್ಯ ಅಡಗ್ಹೋತು ಭಯವೆಲ್ಲ ಕಡೆಗಾಯ್ತು
ಕೋಪ ತಾಪವೆಲ್ಲ ತಣ್ಣಗಾಯ್ತು
ನಿದ್ದೆಲ್ಲ ಎಚ್ರಾತು ಎಚ್ರಾನೆ ಮುದ್ದಾಯ್ತು
ಕಲ್ಲಾಗೆ ಕಣ್ಣೀರು ಬಂದಂಗಾಯ್ತು ||೪||

ಒಬ್ಬನೆ ಇದ್ದವಗೆ ನೂರ್ ಜನ ಬಲಬಂತು
ನಾನೊಬ್ನೆ ಅಲ್ಲಂತ ಧೈರ್ಯ ಬಂತು
ರಾತ್ರೆಲ್ಲ ಬೆಳಕಾತು ಹಗಲೆಲ್ಲ ಬಯಲಾತು
ಹುಚ್ಚೆದ್ದು ಕುಣಿವಂಥ ಸ್ಫೂರ್ತಿ ಬಂತು ||೫||

ನೆಲದಲ್ಲಿ ನಿಂತವ್ಗೆ ಗಗನದ್ಹೂ ಸಿಕ್ಕಿತ್ತು
ಆಳಕ್ಕೆ ಬೇರುಗಳು ಹಬ್ಬಿದ್ದವು
ಒಳಗೆಲ್ಲಾ ಬೆಳೆದಂತೆ ಕೊಂಬೆಗಳು ಬೆಳೆದಿದ್ದು
ವಿಶ್ವಾನೆ ಹಬ್ಬಿದಂತೆ ಚಾಚಿದ್ದವು ||೬||

ಕಷ್ಟಗಳ ಗುಡ್ಡಗಳು ಬಿಳಿ ಮೋಡಗಳಾದವು
ಚಿಂತೆಲ್ಲ ಸಂತೆಲ್ಲ ಬಯಲಾಯಿತು
ದುಃಖಾದ ನೀರಲ್ಲು ಸುಖ ತುಂಬಿ ಕಣ್ಣೀರು
ಸಂಕಟದ ನೋವೆಲ್ಲ ಸಯವಾಯಿತು ||೭||

ನಂಗೊತ್ತು ಈ ಸೊಗಸು ಒಂದೇ ಕ್ಷಣಂಬೋದು
ಜೀವಾ ಹಿಡಿಯಾಕೊಂದೆ ಬೊಗಸೆ ಸಾಕು
ವಿಷಯ ಸಾಗರದಾಗ ಈಜಾಡ್ತಾ ಸಾಗಿದ್ರು
ಒಂದೆ ಹನಿ ಅಮೃತಾವು ಸಾಕೆ ಸಾಕು ||೮||

ಭೂಮಿ ಸೀಮೀ ಬಿಟ್ಟು ಬರಿ ಬಾನು ಬೇಕಿಲ್ಲ
ಬಾನ್ನ್ಯಾಗೆ ಸ್ವರ್ಗಾನೆ ಇರವೊಲ್ದ್ಯಾಕೆ
ಆಕಾಶ್ದಾಗ ಹಾರ್ವಂಥ ಹಕ್ಕೀನೆ ಆಗ್ಬೇಕೆ
ಮಣ್ಣಾಗಿನ ಮಣಿಯಾಗಿ ಇರಬಾರ್ದ್ಯೇಕೆ ||೯||
***

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...