Home / ಕವನ / ಕವಿತೆ / ಚಂದ್ರ ನೀನೊಬ್ಬನೆ

ಚಂದ್ರ ನೀನೊಬ್ಬನೆ

ಉರಿಯಿಲ್ಲ ಬಿಸಿಯಿಲ್ಲ
ಉರಿಬಿಸಿಲ ಬೇಗೆ ಬವಣೆಗಳಿಲ್ಲ
ಕಿಡಿಸಿಡಿವ ಕೆಂಡದುಂಡೆಯಂತುದಯಕ್ಕೆ
ಅಸ್ತಕ್ಕೆ ರಕ್ತದೋಕುಳಿಯಿಲ್ಲ
ಅವನಂತೆ ನಿಂತಲ್ಲೇ ನಿಂತು ಜಗವೆಲ್ಲ ತನ್ನನ್ನೇ ಸುತ್ತಿ
ಠಳಾಯಿಸಲೆಂಬ ಠೇಂಕಾರದವನಲ್ಲ.
ಏನಾದರೂ ಹೋದರು ಲೆಖ್ಖಿಸಿದೆ ಬೆಳಗು ಬೈಗಿನ ಕಾಲಚಕ್ರದ
ನಿಷ್ಠುರಕ್ಕೆ ನಿಷ್ಠನಾಗಿ ಸದಾ ಹೊತ್ತಿಕೊಂಡುರಿವ ಅಮಾನುಷನಲ್ಲ
ಅಹರ್ನಿಶಿ ನಮ್ಮ ಸುತ್ತ ಪ್ರೀತಿಯಲಿ ಸುತ್ತುತ್ತಲೇ ಇರುವ
ಪರಿವೀಕ್ಷಕ ನಿರಂತರ ಪರಿಕ್ರಮದ ಸಜೀವ ಮಾನುಷ್ಯಕಾಯ
ಈ ಇಳೆಯ ನಿಜಗೆಳೆಯ ಅಜಾತ ಶತ್ರು; ಲಕ್ಷ ನಕ್ಷತ್ರಗಳ
ರಾಜಾಧಿರಾಜ.

ಓ ಮನಃಕಾರಕನೇ
ಮನುಜನೊಳಗಿನ ಮನಸು
ನೂರಾರು ಕನಸು ಪ್ರೀತಿ ಪ್ರೇಮ

ನಿನ್ನದೇ ಸೋಮ, ನಮ್ಮೊಳಗಿನೆಲ್ಲ ಚಿತ್ರ ವಿಚಿತ್ರ ಬಯಕೆ ಕಾಮ.
ಧೀಶಕ್ತಿ, ಚಿತ್ರ ವೃತ್ತಿ, ಅನುರಕ್ತಿ ತೃಪ್ತಿ ಸಂತುಷ್ಟಿ
ಭಾವ ರಾಗ ಅನುರಾಗ ಭಾವಾವೇಶ
ಅನ್ಯೊನ್ಯದನುಬಂಧ, ಆತ್ಮೀಯದೊಲುಮೆ ಮೈತ್ರಿಬಾಂಧವ್ಯ

ಭೂಮಿಯೊಳಗಣ ನೀರು
ಸಸ್ಯ ಔಷಧ ವನಸ್ಪತಿ
ಜ್ಞಾನ, ವಿಜ್ಞಾನ ರಸ ರಸಾಯನ ಋತುಮಾನದಧಿಪತಿ

ಎಂದೆಂದೂ ಆರದಂತಮೃತದೆಣ್ಣೆಯನೆರೆದು
ಬೆಣ್ಣೆಮುದ್ದೆಯ ಒಳಗೆ ಯಾರೋ ಹಚ್ಚಿ ಬಚ್ಚಿಟ್ಟ
ಆಕಾಶದದ್ಭುತ ದೀಪ, ನೀನು ಓ ತಿಂಗಳು
ತಂಗಳು ಕೈತುತ್ತಿನನ್ನಕ್ಕು ಇನ್ನಿರದ ರುಚಿಕೊಡುವ
ನಿನ್ನ ಬೆಳ್ಳಿ ಬೆಳದಿಂಗಳು.

ಮಧು ನಿನ್ನದು; ಮುದ ನಿನ್ನದು
ನಿನ್ನದೇ ಅದು; ಗಂಡು ಹೆಣ್ಣುಗಳ ಹೃದಯ
ಕವಾಟಗಳ ಕದ ತೆಗೆವ ಮಧುಚಂದ್ರ.

ವೃದ್ಧಿ ಕ್ಷಯ, ಭರತ ಕುಸಿತ, ಏರಿಳಿತ
ಎಲ್ಲ ನಮ್ಮಂತೆಯೇ ಅನ್ನು;
ಎಂದಮಾತ್ರಕ್ಕೆ ಓ ಚಗಚ್ಚಕ್ಷುವೇ
ದೇವರಲ್ಲವೆನ್ನುವರುಂಟೇ ನಿನ್ನನ್ನು
ಇರಬಹುದು ಬಿಡು ಸೂರ್ಯ ಅವನೊಬ್ಬನೆ
ಆದರೆ ಓ ಇಂದುವೇ, ಪೃಥ್ವಿಗತಿಸನಿಹದ ಬಂಧುವೇ
ಇಂದು, ಮುಂದು, ಎಂದೆಂದೂ,
ನಮಗೆ ನಮ್ಮ ಪ್ರೀತಿಯ ಚಂದ್ರ ನೀನೊಬ್ಬನೆ
ಚಂದ್ರನೆಂಬುವನೊಬ್ಬನೆ
ಚಂದ್ರ ನೀನೊಬ್ಬನೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...