Home / ಕವನ / ಕವಿತೆ / ನಟ್ಟಿರುಳಿನಲ್ಲೊಂದು ಸಂವಾದ

ನಟ್ಟಿರುಳಿನಲ್ಲೊಂದು ಸಂವಾದ

ಬೆಳಕು

ಬೇಡವಾದರೆ
ಇಲ್ಲ
ಇಲ್ಲಿ ಏನೂ ಆಗಿಯೇ ಇಲ್ಲ
ಆಗಿದ್ದು ಆಟವಷ್ಟೇ
ಲೆಕ್ಕವಲ್ಲ
ಜಮಾ ಆಗಿಲ್ಲ
ಎನ್ನುತ್ತಾ ಯಾವುದಕ್ಕೂ ಬದ್ಧವಾಗದೇ
ಎಲ್ಲಾ ಕೊಡವಿ
ಎದ್ದು ಹೋಗಿಬಿಡಬಹುದು
ಕತ್ತಲು

ಬೇಡದ್ದೆಲ್ಲಾ ಒಪ್ಪಿ
ತೋಳ್ತೆರೆದು ಅಪ್ಪಿ
ತುಂಬಿ ತುಂಬಿ
ಮೇಲೇರಿ ಬರುವ
ಎಲ್ಲ ಅಮಲುಗಳ
ಒಳಕದುಮಿ ಗುದ್ದಿ
ಹೇಗೆ ಬರೆಯುವುದು
ಪರಂಪರಾಗತವಲ್ಲದ
ಶಾಸ್ತ್ರೋಕ್ತವಲ್ಲದ
ಛಂದೋಬದ್ಧವಲ್ಲದ
ಆದರೂ ಅರ್ಥಪೂರ್ಣ ಕವಿತೆ!

ಬೆಳಕು

ಬಿಡು ಮನಸು ಮಾಡಿದರೆ
ಸಮುದ್ರಗಳನ್ನೇ ದಾಟಿಬಿಡಬಹುದು

ಕತ್ತಲು

ಹೌದು. ಆದರೆ ಎಲ್ಲಕ್ಕೂ ಮೊದಲು
ದಾಟಬೇಕು ಹೊಸಿಲು !
ಹೊಸಿಲಿನೊಳಗಿಂದ ಜಗ್ಗುವ
ಗೋಜಲು ಬೇರುಗಳು
ಹೊರಗಿನಿಂದ ಸೆಳೆಯುವ
ಆಕಾರವಿಲ್ಲದ ಅಸ್ಪಷ್ಟಾಕಾರಗಳು.

ಬೆಳಕು

ಇಲ್ಲಿ ಯಾವುದೂ
ಪರಿಪೂರ್ಣ ಆಕಾರವಲ್ಲ
ನಿರಾಕಾರಕ್ಕೆ ಆಕಾರ ಕೊಡುವುದೇ
ಕರಗಳ ಕೆಲಸವೆಲ್ಲ
ಇತಿಹಾಸವಾಗಿ ಬಿಡುತ್ತದೆ
ಆಕಾರವಾದದ್ದೆಲ್ಲ.

ಕತ್ತಲು

ಹೊಸಿಲು ದಾಟಿದವರಿಗೆಲ್ಲ
ಒಂದೋ ಪ್ರಪಾತ
ಇಲ್ಲವೇ ಆಕಾಶ
ಬೇರೆಲ್ಲಿದೆ ಅವಕಾಶ?
ಎರಡು ಅತಿಗಳ ನಡುವೆ
ಇದೆಯೇ ಎಲ್ಲೆ ಮೀರುವ ಮಿತಿ?

ಬೆಳಕು

ಸವಕಲಾದ ಬೊಟ್ಟಿನ
ತೂಗುವ ತಕ್ಕಡಿಯ
ಅಳತೆಗಾಗಿಯೇ
ಬದುಕಲಾಗುವುದಿಲ್ಲ
ಅತೀತರೆಲ್ಲ ಅಳತೆಗೆ ಸಿಕ್ಕುವುದಿಲ್ಲ
ಅಳತೆಗಳ ಮಿತಿಗೆ ಬಿದ್ದವರು
ಬಿಡು ಅತೀತರಾಗುವುದಿಲ್ಲ!
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...