ರಾಜಒಡೆಯರ ತರುವಾಯ ಚಾಮರಾಜಒಡೆಯರೆಂಬುವರು ರಾಜ್ಯವನ್ನಾಳಿದರು. ಇವರ ಕಾಲದಲ್ಲಿ ರಾಜ್ಯವು ವಿಸ್ತಾರವಾಯಿತು. ಮೈಸೂರಿನ ಸೇನೆಯವರು ಸುತ್ತಮುತ್ತಣ ಸ್ಥಳಗಳನ್ನು ಗೆಲ್ಲುತ್ತಿದ್ದರು. ಆಗ ಹೆಗ್ಗಡದೇವನಕೋಟೆಯನ್ನು ಹಿಡಿಯಲು ಒಂದು ದಳವು ಹೊರಟಿತು.

ಆ ಕೋಟೆಯ ಯಜಮಾನನಾಗಿದ್ದ ಚನ್ನರಾಜಒಡೆಯನೆಂಬಾತನು ಆಗ ಕೋಟೆಯಲ್ಲಿರಲಿಲ್ಲ. ತನ್ನ ಸೈನ್ಯವನ್ನು ತೆಗೆದುಕೊಂಡು ದೂರವಾಗಿ ಹೋಗಿದ್ದರು. ಮೈಸೂರಿನ ದಳವು ಕೋಟೆಯನ್ನು ಮುತ್ತಿದಾಗ ಕೋಟೆಯ ಒಳಗಿದ್ದವರು ನಿಸ್ಸಹಾಯರಾಗಿದ್ದರು. ಅವರ ಕಡೆಯ ವಕೀಲನು ಅತಿಸಾಧುವಾಗಿದ್ದನು; ಆತನು ಕಾಣಿಸಿಕೊಂಡು “ನಮ್ಮ ಒಡೆಯರವರು ಸೈನ್ಯವನ್ನು ಕರೆದುಕೊಂಡು ದೂರದೇಶದಲ್ಲಿದ್ದಾರೆ. ರಾಣಿಯವರು ಗರ್ಭಿಣಿಯಾಗಿದ್ದಾರೆ ಮತ್ತು ನಿಮ್ಮ ಮುತ್ತಿಗೆಯಿಂದ ಬಹಳ ಗಾಬರಿಪಟ್ಟಿದ್ದಾರೆ. ಕೋಟೆಯಲ್ಲಿರುವವರು ೫೦ ಸೈನಿಕರು ಮಾತ್ರ. ಅಲ್ಲದೆ ದಕ್ಷಿಣಮುಖಕ್ಕೂ ಪೂರ್ವಮುಖಕ್ಕೂ ಮಳೆಗಾಲದ ಹಾವಳಿಯಿಂದ ಪೌಳಿಗೋಡೆಯು ಹಾಳಾಗಿದೆ. ಇಂತಹ ಸಮಯದಲ್ಲಿ ತೀವ್ರ ಬಂದು ಮುತ್ತುವುದು ಧರ್ಮವಲ್ಲ” ಎಂದು ಹೇಳಿದನು. ಮೈಸೂರಿನವರು ಕೊಳ್ಳೆಯನ್ನು ದಕ್ಕಿಸಿಕೊಂಡು ಹಿಂತಿರುಗಿದರು.
*****
[ವಿಲ್ಕ್ಸ್, ಸಂ. ೧ ಪುಟ ೨೯]