ರಮಣನೊಡಗೂಡಿ ನೆರೆದಿಂಗಳೂಟವನುಣಲು-
ಅವಳಿಗೆನಿಸಿತು ಬಾಳ್ವ ಸುಖದ ಬಿದ್ದಣವೆಂದು.
ಭಾವಿಸಿದಳವಳದುವೆ ಚಿಂತೆಗಿಹ ಬಯಲೆಂದು
ಮೋಡ ಮುತ್ತುತ, ನಸುವೆ ಓರೆಯಾಗಿರೆ ಹಗಲು.
ಮಳೆಯಾಗಿ ಮಿಂಚು ಸಿಡಿಲಿಂದ ಕೂಡಿರೆ ಮುಗಿಲು,
ಸೂರ್‍ಯನಾರಾಯಣನು ಕಾಣದಾಗಿರೆ, ನೊಂದು
ಧೇನಿಸಿದಳಾ ಸತಿಯು ಬಾಳುವೆಯ ಕುರಿತಂದು :-
ಇದು ಭಯಾನಕವಾದ ಕೂಟಪ್ರಶ್ನೆಯು, ದಿಗಿಲು !

ಮುಂದೊಮ್ಮೆ ನಲ್ಲನೊಡಗೂಡಿ ಸಮರಸವಾಗಿ
ಬೆರೆತಿರಲು ಹೊಳೆಯಿತೀ ಮಾತವಳ ಚಿತ್ತದಲಿ :
ಬಾಳುವೆಯು ನಲುಮೆಯಿಂದಿತ್ತೊಂದು ಮುತ್ತಲ್ಲೆ ?
ಪ್ರೇಮಯುಗಲಕೆ ದೇವನಿತ್ತ ಕಾಣಿಕೆಯಲ್ಲೆ ?
ದೇವದೇವನು ಕೂಡ ಬರುವ ಮೋಹಿತನಾಗಿ,-
ಅನುದಿನವು ಜೀವಿಸಲು ನಾವಿಂತು ನೇಹದಲಿ !
*****