ಯಾಕೆ ಹರಿಯುತಿದೆ ಈ ನದಿ ಹೀಗೆ ದಡಗಳನ್ನೆ ದೂಡಿ
ತನ್ನನು ಕಾಯುವ ಎಲ್ಲೆಗಳನ್ನೇ ಇಲ್ಲದಂತೆ ಮಾಡಿ
ಹೀಗೆ ಹಾಯುವುದೇ ಮಲ್ಲಿಗೆ ಕಂಪು ಗಡಿಗಳನ್ನು ಮೀರಿ
ತನ್ನಿರುವನ್ನೇ ಬಯಲುಗೊಳಿಸುವುದೆ ಬನದ ಆಚೆ ಸಾರಿ
ಯಾರು ನುಡಿಸುವರು ಎಲ್ಲೋ ದೂರದಿ ಮತ್ತೆ ಮತ್ತೆ ಕೊಳಲ
ಯಾಕೆ ಮೀಟುವುದು ಆ ದನಿ ಹೀಗೆ ನನ್ನ ಆಳದಳಲ
ತುಂಬಿದ ಜೇನಿನ ಗಡಿಗೆಗೆ ಯಾರೋ ಕಲ್ಲನು ಬೀರಿದರು
ಒಳಗಿನ ಸವಿಯು ಹೊರಗೆ ಹರಿವ ಥರ ತಂತ್ರವ ಹೂಡಿದರು
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.