Home / ಕವನ / ಕವಿತೆ / ಹೀಗೂ ಆಯಿತೊಮ್ಮೆ

ಹೀಗೂ ಆಯಿತೊಮ್ಮೆ

ತೀರ ಇತ್ತೀಚಿಗೆ ಸಂಜೆಹೊತ್ತಿನ
ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ
ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು
ಅದು ~ಆಕ್ಸಿಡೆಂಟೇ ಅಲ್ಲ
ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು
ಕಿರುಗುಟ್ಟಿದ ಗಾಲಿ –
ಮುಂದಿನ ಕಾರು ಚಾಲಕ ಅರ್ಧಬೋಳು ತಲೆಯ
ಕರಿಯ ಹೊಟ್ಟಡುಮ್ಮ ಹೈದಗಳು
‘ಏನು ಗುಂಡಹಾಕಿ
ಕಾರು ಹೊಡೆತಾ ಇದ್ದಿಯಾ ಅಮ್ಮಣ್ಣಿ
ಕೆಳಗಿಳಿದು ದಂಡಕೊಟ್ಟು ಹೋಗು
ಕಾಸಿಲ್ಲದೆ ಕಾರು ಬಿಡುವುದಿಲ್ಲ’ ಕಿರುಚಾಟ ಕೂಗಾಟ
ಕೈಗೆ ಸಿಕ್ಕ ಶಾಪಿಂಗ್ ಬ್ಯಾಗ್ ಕಿತ್ತು
ದುರುಗುಟ್ಟುತ್ತ ಹೋದವು.

ಮರೆತು ಬಿಡಬಹುದಾದಂತಹುದೇ ವಿಷಯ
ನಾಲ್ಕಾರು ದಿನ ಕಳೆದರೂ ಪದೇ ಪದೇ
~ಆಕ್ಸಿಡೆಂಟ್ ಅಲ್ಲದ ~ಆಕ್ಸಿಡೆಂಟದ್ದೆ ಚಿತ್ರ
ಮನೆಯಲ್ಲಿ ಹೇಳಿ ಹಗುರಾಗಿದ್ದರೂ
ಮತ್ತದೇ ರಸ್ತೆ, ಕಾರು ಗಲಾಟೆ ಗಜಿಬಿಜಿ ಚಿತ್ರ.

ಮೊನ್ನೆ ಇದ್ದಕ್ಕಿದ್ದಂತೆ ಬಂತು
ಅದೇ ಹೈದಗಳ ಕಾರು ಮನೆಮುಂದಿನ
ರಸ್ತೆಯ ಆಚೆಗೆ
ತಬ್ಬಿಬ್ಬಾದೆ
ಒಳಗಡೆಯ ಮುಖಗಳೆಲ್ಲಾ ಅವೇ

ಭಯ ನಡುಕ ಸಣ್ಣಗೆ ಬೆವರು
ಹಾಗಾಗಬಾರದಿತ್ತು ನನಗೆ
ಐದು ಹತ್ತು ನಿಮಿಷ ಅರ್ಧಗಂಟೆ
ಇಳಿಯಲೊಲ್ಲವು ಹೋಗಲೊಲ್ಲವು ಪಾಪಿಗಳು
ಇಳಿಯತೊಡಗಿದವು ಒಂದೊಂದಾಗಿ.

ಅದೇನೇನೋ ಹುಡುಕತೊಡಗಿದವು
ಇಳಿಬಿಟ್ಟ ಬಗಲ ಚೀಲದಲಿ
ಇರಬಹುದೆ ಬಾಂಬು ಬಂದೂಕು ಚಾಕು ಚೂರಿ
(ಪೇಪರ ಸುದ್ದಿಗಳು ಒಬ್ಬೊಂಟಿಮಹಿಳೆಯ ಕೊಲೆ, ಹತ್ಯ)
ಒತ್ತಿದವು ಕರೆಗಂಟೆ ನೆತ್ತಿಗೆ ಬಂತು ಜೀವ
ಕಿಟಕಿ ಈಚೆಯಿಂದಲೇ ಯಾರು? ಎಂದೆ
ಏನೇನೂ ಗೊತ್ತಿಲ್ಲದವರಂತೆ.

ನಾವು ನಾವು ಅದೇs…….
ಕ್ಷಮಿಸಿ ಮೇಡಂ ನೀವು….
ನಿಮ್ಮ ಬ್ಯಾಗಿನಲ್ಲಿ ಸಿಕ್ಕ ಪುಸ್ತಕಗಳು….
ಕ್ಷಮಿಸಿ ಮೇಡಂ…..
ನಿಮ್ಮೊಂದಿಗೆ ಮಾತನಾಡಬೇಕು…..

ಸಾವರಿಸಿಕೊಂಡು
ಒಳಗೆ ಕರೆಯದೆ ಗೇಟಿನವರೆಗೆ ನಾನೇ ಹೋದೆ
’ನಮಸ್ಕಾರ ಮೇಡಂ ನೀವು ಅಂತಾ ಗೊತ್ತಾಗ್ಲಿಲ್ಲ
ಹೊರರಾಜ್ಯದವರ ಐಟಿ ಬಿಟಿ ಯವರ ಹಾವಳಿ
ಜಾಸ್ತಿ ನೋಡಿ ನಾವು ಕನ್ನಡಾಭಿಮಾನಿಗಳು’
‘ಮಾತನಾಡಿದಿರಲ್ಲ ಕನ್ನಡದಲ್ಲಿ’ ಅಂದೆ

ಮತ್ತೆ ಮತ್ತೆ ಬಗಲಚೀಲದಲಿ
ಕೈಯಾಡಿಸುವುದ ನೋಡಿ ಇದೇನೋ
ಆಪತ್ಕಾಲ ಬಂತೆಂದೆ
ದೊಡ್ಡಮಾಲೆ ತೆಗೆದು ಕೈಗಿಟ್ಟು
’ಕ್ಷಮಿಸಿಮೆಡಂ’ ಎಲ್ಲಾ ಒಟ್ಟಾಗಿ ಅಂದವು
ಬೆವೆತು ಕಂಪಿಸಿದೆ ಮಂಪರು ಏನಾದರು ಇದ್ದರೆ –

‘ನಮ್ಮ ಸಂಘದ ರಾಜ್ಯೋತ್ಸವ ಅಧ್ಯಕ್ಷತೆಗೆ
ನೀವು ಬರಲೇಬೇಕು
ನಿಮ್ಮ ಒಪ್ಪಿಗೆ ಬೇಕು ಮೆಡಂ’
ನಾನು ಮರೆತೂ ಒಳಗಡೆ ಕರೆಯಲಿಲ್ಲ
ಯಾರಿಗೆಗೊತ್ತು ಯಾವಯಾವ ರೂಪಿನವರೆಂದು
ಫೋನ್‌ದಲ್ಲಿ ಹೇಳುವುದಾಗಿ ಕಳಿಸಿ
ಅದು ಬರದೇ ಇದ್ದರೆ ಸಾಕಪ್ಪ ದೇವರೆ
ಎಂದೆನ್ನುತ್ತ ಒಳಗೆ ಬಂದು
ಸೋಫಾದಲ್ಲಿ ದೊಪ್ಪನೆ ಬಿದ್ದುಕೊಂಡೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...