Home / ಕವನ / ಕವಿತೆ / ಹೀಗೂ ಆಯಿತೊಮ್ಮೆ

ಹೀಗೂ ಆಯಿತೊಮ್ಮೆ

ತೀರ ಇತ್ತೀಚಿಗೆ ಸಂಜೆಹೊತ್ತಿನ
ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ
ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು
ಅದು ~ಆಕ್ಸಿಡೆಂಟೇ ಅಲ್ಲ
ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು
ಕಿರುಗುಟ್ಟಿದ ಗಾಲಿ –
ಮುಂದಿನ ಕಾರು ಚಾಲಕ ಅರ್ಧಬೋಳು ತಲೆಯ
ಕರಿಯ ಹೊಟ್ಟಡುಮ್ಮ ಹೈದಗಳು
‘ಏನು ಗುಂಡಹಾಕಿ
ಕಾರು ಹೊಡೆತಾ ಇದ್ದಿಯಾ ಅಮ್ಮಣ್ಣಿ
ಕೆಳಗಿಳಿದು ದಂಡಕೊಟ್ಟು ಹೋಗು
ಕಾಸಿಲ್ಲದೆ ಕಾರು ಬಿಡುವುದಿಲ್ಲ’ ಕಿರುಚಾಟ ಕೂಗಾಟ
ಕೈಗೆ ಸಿಕ್ಕ ಶಾಪಿಂಗ್ ಬ್ಯಾಗ್ ಕಿತ್ತು
ದುರುಗುಟ್ಟುತ್ತ ಹೋದವು.

ಮರೆತು ಬಿಡಬಹುದಾದಂತಹುದೇ ವಿಷಯ
ನಾಲ್ಕಾರು ದಿನ ಕಳೆದರೂ ಪದೇ ಪದೇ
~ಆಕ್ಸಿಡೆಂಟ್ ಅಲ್ಲದ ~ಆಕ್ಸಿಡೆಂಟದ್ದೆ ಚಿತ್ರ
ಮನೆಯಲ್ಲಿ ಹೇಳಿ ಹಗುರಾಗಿದ್ದರೂ
ಮತ್ತದೇ ರಸ್ತೆ, ಕಾರು ಗಲಾಟೆ ಗಜಿಬಿಜಿ ಚಿತ್ರ.

ಮೊನ್ನೆ ಇದ್ದಕ್ಕಿದ್ದಂತೆ ಬಂತು
ಅದೇ ಹೈದಗಳ ಕಾರು ಮನೆಮುಂದಿನ
ರಸ್ತೆಯ ಆಚೆಗೆ
ತಬ್ಬಿಬ್ಬಾದೆ
ಒಳಗಡೆಯ ಮುಖಗಳೆಲ್ಲಾ ಅವೇ

ಭಯ ನಡುಕ ಸಣ್ಣಗೆ ಬೆವರು
ಹಾಗಾಗಬಾರದಿತ್ತು ನನಗೆ
ಐದು ಹತ್ತು ನಿಮಿಷ ಅರ್ಧಗಂಟೆ
ಇಳಿಯಲೊಲ್ಲವು ಹೋಗಲೊಲ್ಲವು ಪಾಪಿಗಳು
ಇಳಿಯತೊಡಗಿದವು ಒಂದೊಂದಾಗಿ.

ಅದೇನೇನೋ ಹುಡುಕತೊಡಗಿದವು
ಇಳಿಬಿಟ್ಟ ಬಗಲ ಚೀಲದಲಿ
ಇರಬಹುದೆ ಬಾಂಬು ಬಂದೂಕು ಚಾಕು ಚೂರಿ
(ಪೇಪರ ಸುದ್ದಿಗಳು ಒಬ್ಬೊಂಟಿಮಹಿಳೆಯ ಕೊಲೆ, ಹತ್ಯ)
ಒತ್ತಿದವು ಕರೆಗಂಟೆ ನೆತ್ತಿಗೆ ಬಂತು ಜೀವ
ಕಿಟಕಿ ಈಚೆಯಿಂದಲೇ ಯಾರು? ಎಂದೆ
ಏನೇನೂ ಗೊತ್ತಿಲ್ಲದವರಂತೆ.

ನಾವು ನಾವು ಅದೇs…….
ಕ್ಷಮಿಸಿ ಮೇಡಂ ನೀವು….
ನಿಮ್ಮ ಬ್ಯಾಗಿನಲ್ಲಿ ಸಿಕ್ಕ ಪುಸ್ತಕಗಳು….
ಕ್ಷಮಿಸಿ ಮೇಡಂ…..
ನಿಮ್ಮೊಂದಿಗೆ ಮಾತನಾಡಬೇಕು…..

ಸಾವರಿಸಿಕೊಂಡು
ಒಳಗೆ ಕರೆಯದೆ ಗೇಟಿನವರೆಗೆ ನಾನೇ ಹೋದೆ
’ನಮಸ್ಕಾರ ಮೇಡಂ ನೀವು ಅಂತಾ ಗೊತ್ತಾಗ್ಲಿಲ್ಲ
ಹೊರರಾಜ್ಯದವರ ಐಟಿ ಬಿಟಿ ಯವರ ಹಾವಳಿ
ಜಾಸ್ತಿ ನೋಡಿ ನಾವು ಕನ್ನಡಾಭಿಮಾನಿಗಳು’
‘ಮಾತನಾಡಿದಿರಲ್ಲ ಕನ್ನಡದಲ್ಲಿ’ ಅಂದೆ

ಮತ್ತೆ ಮತ್ತೆ ಬಗಲಚೀಲದಲಿ
ಕೈಯಾಡಿಸುವುದ ನೋಡಿ ಇದೇನೋ
ಆಪತ್ಕಾಲ ಬಂತೆಂದೆ
ದೊಡ್ಡಮಾಲೆ ತೆಗೆದು ಕೈಗಿಟ್ಟು
’ಕ್ಷಮಿಸಿಮೆಡಂ’ ಎಲ್ಲಾ ಒಟ್ಟಾಗಿ ಅಂದವು
ಬೆವೆತು ಕಂಪಿಸಿದೆ ಮಂಪರು ಏನಾದರು ಇದ್ದರೆ –

‘ನಮ್ಮ ಸಂಘದ ರಾಜ್ಯೋತ್ಸವ ಅಧ್ಯಕ್ಷತೆಗೆ
ನೀವು ಬರಲೇಬೇಕು
ನಿಮ್ಮ ಒಪ್ಪಿಗೆ ಬೇಕು ಮೆಡಂ’
ನಾನು ಮರೆತೂ ಒಳಗಡೆ ಕರೆಯಲಿಲ್ಲ
ಯಾರಿಗೆಗೊತ್ತು ಯಾವಯಾವ ರೂಪಿನವರೆಂದು
ಫೋನ್‌ದಲ್ಲಿ ಹೇಳುವುದಾಗಿ ಕಳಿಸಿ
ಅದು ಬರದೇ ಇದ್ದರೆ ಸಾಕಪ್ಪ ದೇವರೆ
ಎಂದೆನ್ನುತ್ತ ಒಳಗೆ ಬಂದು
ಸೋಫಾದಲ್ಲಿ ದೊಪ್ಪನೆ ಬಿದ್ದುಕೊಂಡೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...