Home / ಕವನ / ಕವಿತೆ / ಹೀಗೂ ಆಯಿತೊಮ್ಮೆ

ಹೀಗೂ ಆಯಿತೊಮ್ಮೆ

ತೀರ ಇತ್ತೀಚಿಗೆ ಸಂಜೆಹೊತ್ತಿನ
ಜನನಿಬಿಡ ವಾಹನ ದಟ್ಟನೆಯ ರಸ್ತೆಯಲಿ
ಸಣ್ಣ ~ಆಕ್ಸಿಡೆಂಟ್ ನನ್ನ ಕಾರಿಗೆ ಆಗಿಯೇ ಹೋಯಿತು
ಅದು ~ಆಕ್ಸಿಡೆಂಟೇ ಅಲ್ಲ
ಹಾಗೆ ನೋಡಿದರೆ ತಕ್ಷಣದ ಬ್ರೆಕ್ಕು
ಕಿರುಗುಟ್ಟಿದ ಗಾಲಿ –
ಮುಂದಿನ ಕಾರು ಚಾಲಕ ಅರ್ಧಬೋಳು ತಲೆಯ
ಕರಿಯ ಹೊಟ್ಟಡುಮ್ಮ ಹೈದಗಳು
‘ಏನು ಗುಂಡಹಾಕಿ
ಕಾರು ಹೊಡೆತಾ ಇದ್ದಿಯಾ ಅಮ್ಮಣ್ಣಿ
ಕೆಳಗಿಳಿದು ದಂಡಕೊಟ್ಟು ಹೋಗು
ಕಾಸಿಲ್ಲದೆ ಕಾರು ಬಿಡುವುದಿಲ್ಲ’ ಕಿರುಚಾಟ ಕೂಗಾಟ
ಕೈಗೆ ಸಿಕ್ಕ ಶಾಪಿಂಗ್ ಬ್ಯಾಗ್ ಕಿತ್ತು
ದುರುಗುಟ್ಟುತ್ತ ಹೋದವು.

ಮರೆತು ಬಿಡಬಹುದಾದಂತಹುದೇ ವಿಷಯ
ನಾಲ್ಕಾರು ದಿನ ಕಳೆದರೂ ಪದೇ ಪದೇ
~ಆಕ್ಸಿಡೆಂಟ್ ಅಲ್ಲದ ~ಆಕ್ಸಿಡೆಂಟದ್ದೆ ಚಿತ್ರ
ಮನೆಯಲ್ಲಿ ಹೇಳಿ ಹಗುರಾಗಿದ್ದರೂ
ಮತ್ತದೇ ರಸ್ತೆ, ಕಾರು ಗಲಾಟೆ ಗಜಿಬಿಜಿ ಚಿತ್ರ.

ಮೊನ್ನೆ ಇದ್ದಕ್ಕಿದ್ದಂತೆ ಬಂತು
ಅದೇ ಹೈದಗಳ ಕಾರು ಮನೆಮುಂದಿನ
ರಸ್ತೆಯ ಆಚೆಗೆ
ತಬ್ಬಿಬ್ಬಾದೆ
ಒಳಗಡೆಯ ಮುಖಗಳೆಲ್ಲಾ ಅವೇ

ಭಯ ನಡುಕ ಸಣ್ಣಗೆ ಬೆವರು
ಹಾಗಾಗಬಾರದಿತ್ತು ನನಗೆ
ಐದು ಹತ್ತು ನಿಮಿಷ ಅರ್ಧಗಂಟೆ
ಇಳಿಯಲೊಲ್ಲವು ಹೋಗಲೊಲ್ಲವು ಪಾಪಿಗಳು
ಇಳಿಯತೊಡಗಿದವು ಒಂದೊಂದಾಗಿ.

ಅದೇನೇನೋ ಹುಡುಕತೊಡಗಿದವು
ಇಳಿಬಿಟ್ಟ ಬಗಲ ಚೀಲದಲಿ
ಇರಬಹುದೆ ಬಾಂಬು ಬಂದೂಕು ಚಾಕು ಚೂರಿ
(ಪೇಪರ ಸುದ್ದಿಗಳು ಒಬ್ಬೊಂಟಿಮಹಿಳೆಯ ಕೊಲೆ, ಹತ್ಯ)
ಒತ್ತಿದವು ಕರೆಗಂಟೆ ನೆತ್ತಿಗೆ ಬಂತು ಜೀವ
ಕಿಟಕಿ ಈಚೆಯಿಂದಲೇ ಯಾರು? ಎಂದೆ
ಏನೇನೂ ಗೊತ್ತಿಲ್ಲದವರಂತೆ.

ನಾವು ನಾವು ಅದೇs…….
ಕ್ಷಮಿಸಿ ಮೇಡಂ ನೀವು….
ನಿಮ್ಮ ಬ್ಯಾಗಿನಲ್ಲಿ ಸಿಕ್ಕ ಪುಸ್ತಕಗಳು….
ಕ್ಷಮಿಸಿ ಮೇಡಂ…..
ನಿಮ್ಮೊಂದಿಗೆ ಮಾತನಾಡಬೇಕು…..

ಸಾವರಿಸಿಕೊಂಡು
ಒಳಗೆ ಕರೆಯದೆ ಗೇಟಿನವರೆಗೆ ನಾನೇ ಹೋದೆ
’ನಮಸ್ಕಾರ ಮೇಡಂ ನೀವು ಅಂತಾ ಗೊತ್ತಾಗ್ಲಿಲ್ಲ
ಹೊರರಾಜ್ಯದವರ ಐಟಿ ಬಿಟಿ ಯವರ ಹಾವಳಿ
ಜಾಸ್ತಿ ನೋಡಿ ನಾವು ಕನ್ನಡಾಭಿಮಾನಿಗಳು’
‘ಮಾತನಾಡಿದಿರಲ್ಲ ಕನ್ನಡದಲ್ಲಿ’ ಅಂದೆ

ಮತ್ತೆ ಮತ್ತೆ ಬಗಲಚೀಲದಲಿ
ಕೈಯಾಡಿಸುವುದ ನೋಡಿ ಇದೇನೋ
ಆಪತ್ಕಾಲ ಬಂತೆಂದೆ
ದೊಡ್ಡಮಾಲೆ ತೆಗೆದು ಕೈಗಿಟ್ಟು
’ಕ್ಷಮಿಸಿಮೆಡಂ’ ಎಲ್ಲಾ ಒಟ್ಟಾಗಿ ಅಂದವು
ಬೆವೆತು ಕಂಪಿಸಿದೆ ಮಂಪರು ಏನಾದರು ಇದ್ದರೆ –

‘ನಮ್ಮ ಸಂಘದ ರಾಜ್ಯೋತ್ಸವ ಅಧ್ಯಕ್ಷತೆಗೆ
ನೀವು ಬರಲೇಬೇಕು
ನಿಮ್ಮ ಒಪ್ಪಿಗೆ ಬೇಕು ಮೆಡಂ’
ನಾನು ಮರೆತೂ ಒಳಗಡೆ ಕರೆಯಲಿಲ್ಲ
ಯಾರಿಗೆಗೊತ್ತು ಯಾವಯಾವ ರೂಪಿನವರೆಂದು
ಫೋನ್‌ದಲ್ಲಿ ಹೇಳುವುದಾಗಿ ಕಳಿಸಿ
ಅದು ಬರದೇ ಇದ್ದರೆ ಸಾಕಪ್ಪ ದೇವರೆ
ಎಂದೆನ್ನುತ್ತ ಒಳಗೆ ಬಂದು
ಸೋಫಾದಲ್ಲಿ ದೊಪ್ಪನೆ ಬಿದ್ದುಕೊಂಡೆ.
*****

ಪುಸ್ತಕ: ಇರುವಿಕೆ

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...