ಝೆನ್ ಗುರುಗಳು ಧ್ಯಾನಕ್ಕೆ ಕುಳಿತಾಗ ದುಂಬಿಯ ದಂಡು ಒಂದು ಗುರುಗಳನ್ನು ಸತಾಯಿಸುತಿತ್ತು. ಗುರುಗಳ ಧ್ಯಾನ ಭಂಗವಾಗದಂತೆ ಶಿಷ್ಯ ಬಹಳ ಶ್ರಮವಹಿಸಿ ದುಂಬಿಗಳನ್ನು ಓಡಿಸುತ್ತಿದ್ದ. ದುಂಬಿಗಳು ಝೇಂಕಾರ ಮಾಡುತ್ತ ಕೆಲವೊಮ್ಮೆ ಗುರುಗಳನ್ನು ಕುಟುಕುತಿತ್ತು. ಕಿವಿಯ ಹತ್ತಿರ ಹೋಗಿ ಗುಂಯ್ ಗುಟ್ಟುತಿತ್ತು. ಅತೀವ ಕಳವಳದಿಂದ ಶಿಷ್ಯ ಗುರುಗಳಲ್ಲಿ ಹೇಳಿದ- “ನಿಮಗೆ ತೊಂದರೆ ಕೊಡುತ್ತಿರುವ ಈ ದುಂಬಿ ದುಂಡನ್ನು ನಾನು ಇಂದು ಜಾಲದಲ್ಲಿ ಸೆರೆಹಿಡಿಯುತ್ತೇನೆ” ಎಂದು. ಸರ್ವಪ್ರಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.
ಮಾರನೆಯದಿನ ಶಿಷ್ಯ ದುಂಬಿ ದಂಡನ್ನು ಮರ್ದಿಸಲು ಖಡ್ಗ ಪ್ರಯೋಗ ಮಾಡಲು ಅನುವಾದ. ಇದನ್ನು ನೋಡಿದ ಗುರುಗಳು- “ಶಿಷ್ಯ ದುಡಕಬೇಡ, ಇದಕ್ಕೆ ಒಂದು ಸುಲಭೋಪಾಯವಿದೆ” ಎಂದರು. “ಗುರುಗಳೇ ಹೇಳಿ ನಾನು ಏನು ಮಾಡಬೇಕು?” ಎಂದ ಶಿಷ್ಯ.
ಸುಗಂಧಿತ ಪುಷ್ಪದ ಕುಂಡಗಳಿಂದ ನಮ್ಮ ಬೌದ್ಧ ವಿಹಾರವನ್ನು ಅಲಂಕರಿಸು. ಆಗ ದುಂಬಿದಂಡು ತಮ್ಮ ಧ್ಯಾನವನ್ನು, ಗಮನವನ್ನು ಹೂವಿನ ಹೃದಯದ ಕಡೆ ತಿರುಗಿಸುತ್ತವೆ. ನನ್ನ ಧ್ಯಾನಕ್ಕೆ ಏನು ಅಡ್ಡಿಯಾಗುವುದಿಲ್ಲ.” ಎಂದರು ಗುರುಗಳು.
ಶಿಷ್ಯನ ಕೈಯಲ್ಲಿದ್ದ ಖಡ್ಗದ ಬ್ರಹ್ಮಾಸ್ತ್ರನಾಚಿ ಮೂಲೆ ಸೇರಿತು. ಸ್ವರ್ಣ ಸಂಪಿಗೆ, ಮಲ್ಲಿಗೆ, ಜಾಜಿ, ಕಮಲಗಳು ವಿಹಾರದಲ್ಲಿ ಅರಳಿ ದುಂಬಿವಿಂಡಿಗೆ ಸ್ವಾಗತವಿತ್ತವು. ಸಮಸ್ಯೆಗೆ ಶಾಂತ ಪರಿಹಾರ ಸೂಚಿಸಿದ ಗುರುಗಳಿಗೆ ಶಿಷ್ಯ ನಮಿಸಿದ.
*****

















