ಪೂರ್ಣ ಪುಣ್ಯೋದಯದ ಪೂರ್ವ ದಿಕ್ತಟದಲ್ಲಿ
ಹೊನ್ನಿನುರಿ ಹೊಮ್ಮುತ್ತಿದೆ ಹೊಸತು ಹೊಸ್ತಿಲಹಾರಿ
ಮುನ್ನಾಸೆ ಮುನ್ನೊಟದಮೃತವನು ಮನ ಮೀರಿ
ಪೂರ್ಣತೆಯ ಪ್ರಾಣದುಸಿರನವರತ ಪರಿವಲ್ಲಿ
ಚಂದಿರನ ಸುಂದರನ ಬಂಧುರನ ಭಾಗ್ಯದಲಿ
ಮಂದ ಮಾರುತ ಮನದ ಲೀಲಾ ವಿನೋದದಲಿ
ಮುಂದೆ ಬಹ ಮುಕ್ಕೋಟಿ ಜನುಮ ಜಯ ಗಂಗೆಯಲಿ
ಮಿಂದು ಬಾಳುವ ದಿವ್ಯ ಭವ್ಯಾನು ಭೂತಿಯಲಿ
ತೇಲಿ ಮೇಲಾಟವನ್ನಾಡಿ ಮುದವನು ಬೇಡಿ;
ಕಾಲ ರುದ್ರನ ಕಾಲಗೆಜ್ಜೆ ತಕಥೈಯೆಂದು
ಮೂಲೋಕ ಮನುಜನೊಲು ತನ್ನ ಮೈ ಮರೆತಂದು
ಗೇಲಿಗೈಯ್ಯುವ ದೇವಗಣಿಕೆಯರ ನೆಡಗೂಡಿ
ಸಾಗಿ ಬರುತಿಹನದೋ ಸೂರ್ಯ ತೇಜೋರಾಶಿ!
ಬಾಗರಾರೀ ಭಾಗ್ಯ ಪುರುಷ ಬರೆ ಕೈವೀಸಿ!
*****
ಬೆಂಗಳೂರು : ೧೯೪೩

















