ನಾನು ಆ ದಿವಸ ತೈರೊಳ್ಳಿಯ ನಮ್ಮ ಅಡಿಕೆ ತೋಟಕ್ಕೆ ಹೋಗಿದ್ದೆ. ವಾರಾಹಿ ಯೋಜನೆಯಿಂದಾಗಿ ನಮ್ಮ ಹಳ್ಳಿ ದ್ವೀಪವಾಗಿ ಮಾರ್ಪಾಟಿಗಿತ್ತು. ಈ ಮೊದಲು ನಮ್ಮೂರು ಬೇಗ ದಾಳಿ, ಕಟ್ಟಿನ ಮನೆ, ಕಡಗೋಡು, ಯಡೂರು, ತಮ್ಮಮನೆ ಈ ಊರುಗಳಿಗೆಲ್ಲಾ ಕೇಂದ್ರ ಸ್ಥಾನದಲ್ಲಿ ಇತ್ತು. ಆ ಊರಿನಿಂದ ಈ ಊರಿಗೆ ಈ ಊರಿನಿಂದ ಆ ಊರಿಗೆ ದಿನನಿತ್ಯದ ಜನಸಂಚಾರ ನಡೆಯುತ್ತಿತ್ತು. ಆಗೆಲ್ಲಾ ಕಾಲು ನಡಿಗೆ ಯಲ್ಲಿ ಪ್ರಯಾಣವು ಮಾಮೂಲಿ. ಇಂತಹ ಊರು ಮುಳುಗಡೆಯಾಗಿ ದ್ವೀಪವಾಗಿ ಮಾರ್ಪಟ್ಟಿತ್ತು. ಊರಿನಲ್ಲಿರುವ ದೊಡ್ಡ ಕುಳಗಳೆಲ್ಲಾ ಜಮೀನು ಬಿಟ್ಟು ಪರೂರುಗಳಲ್ಲಿ ಮನೆ ಜಮೀನು ಕೊಂಡು ಅಡಿಕೆ ಕೊಯ್ಲು ಸಮಯಕ್ಕೆ ಬಂದು ಇಲ್ಲಿ ಕ್ಯಾಂಪ್ ಹಾಕುತ್ತಿದ್ದರು. ಉಳಿದಂತೆ ಈ ಊರಿಗೆ ಅಕ್ಕಪಕ್ಕದ ಊರುಗಳ ಜಮೀನುಗಳನ್ನು ಕಳೆದುಕೊಂಡ ನಿರ್ಗತಿಕರು ಬಂದು ಸೇರಿ ಊರಿನ ಜನಸಂಖ್ಯೆ ಹೆಚ್ಚಿಸಿದರು.
ಇಂತಹ ಇತಿಹಾಸ ಇರುವ ನಮ್ಮೂರಿಗೆ ಹೋಗಲು ಸುಮಾರು ಆರು ಮೈಲು ಕಾಲು ನಡಿಗೆಯಲ್ಲಿ ಪ್ರಯಾಣ ಮಾಡ ಬೇಕು. ತೀರ್ಥಹಳ್ಳಿಯಿಂದ ನಾಲ್ಕು ಬಸ್ಸುಗಳಿದ್ದರೂ ಅವು ಗಾರ್ಡರಗದ್ದೆಯ ವರೆಗೆ ಮಾತ್ರವೇ ಬರುತ್ತವೆ. ಗಾರ್ಡರ ಗದ್ದೆ ಒಂದು ಕಾಲದಲ್ಲಿ ಕೊಂಪೆಯಾಗಿತ್ತು. ಇಲ್ಲಿ ಮುಳುಗಡೆ ಸಮಯದಲ್ಲಿ ಜಲಾಶಯದಲ್ಲಿ ಮುಳುಗಿದ ಪ್ರದೇಶ ಮರಗಳನ್ನು ಕಡಿಯಲು ಕೇರಳದಿಂದ ಮಲೆಯಾಳಿಗಳು ಬಂದು ಕ್ಯಾಂಪ್ ಹಾಕಿದ್ದರು. ಆಗ ಈ ಊರಿನಲ್ಲಿ ಅರಣ್ಯ ಇಲಾಖೆಯ ಗಾರ್ಡ್ಗಳು ಕ್ಯಾಂಪ್ ಹಾಕುತ್ತಿದ್ದರು. ಕಾಡುಕಡಿದು ಊರಾದ ಮೇಲೆ ಊರಿಗೆ ಗಾರ್ಡರು ಮತ್ತೆ ಗದ್ದೆ ಸೇರಿಕೊಂಡು “ಗಾರ್ಡರ ಗದ್ದೆ” ಎನ್ನುವ ಹೊಸ ಹೆಸರು ನಾಮಕರಣವಾಯಿತು.
ನಾನು ಆ ದಿವಸ ಗಾರ್ಡರಗದ್ದೆಗೆ ಬಂದು ಸಹ್ಯಾದ್ರಿ ಬಸ್ಸಿನಲ್ಲಿ ಶಿವಮೊಗ್ಗಕ್ಕೆ ಹೊರಟಿದ್ದೆ. ಬಸ್ಸು ವಿಪರೀತ ರಶ್ ಇತ್ತು. ಹಾಗೂ ಹೀಗೂ ವಡದಕುಡಿಗೆ ಬಸ್ಸು ಸ್ಟಾಪು ಬರುವಾಗ ನನಗೆ ಸೀಟು ಸಿಕ್ಕಿತು. ನನ್ನ ಎದುರಿಗೆ ಒಬ್ಬ ಪುರುಷ ನನ್ನನ್ನೇ ನೋಡುತ್ತಾ ಕುಳಿತಿದ್ದ. ನನ್ನ ಪಕ್ಕದ ಸೀಟು ನಾಲೂರು ಬಂದಾಗ ಖಾಲಿಯಾಯಿತು. ಆ ಅಸಾಮಿ ನನ್ನ ಪಕ್ಕದಲ್ಲಿ ಬಂದು ಕುಳಿತ. ನನ್ನ ಜೊತೆ ಸಂದರ್ಶನಕ್ಕಿಳಿದ.
– “ನಿಮ್ಮ ಹೆಸರೇನು?”
ನಾನಂದೆ.
“ಸೂರ್ಯಕಾಂತ”
ಮತ್ತೆ ನಾನು ಕೇಳಿದೆ.
– “ನಿಮ್ಮದು”
“ಬಾಲಚಂದ್ರ ಮೊದಲಿಯಾರ್”
“ನಿಮ್ಮ ಊರು”
“ನಮ್ಮದು ಮೂಲ ಸತ್ಯಮಂಗಲ, ನಮ್ಮ ತಂದೆ ತಾಯಿ ಚಾಮರಾಜನಗರದಲ್ಲಿದ್ದಾರೆ. ನಾನು ಉದ್ಯೋಗ ನಿಮಿತ್ತ ಶಿವಮೊಗ್ಗದಲ್ಲಿರುವೆ”
“ನಿಮ್ಮ ಉದ್ಯೋಗವೇನು?”
“ಸೋಲಾರ್ ವಾಟರ್ಹೀಟರ್ ಏಜೆಂಟ್”
ಹೀಗೆ ನಮ್ಮಿಬ್ಬರ ನಡುವೆ ಮಾತುಕತೆಗಳು ವಿನಿಮಯವಾಯಿತು. ನಂತರ ಅವನು
– “ಸಾರ್ ನಾನು ಮುಡುಬದಲ್ಲಿ ಇಳಿಯಬೇಕು. ಅಲ್ಲಿ ಸಮೀಪದ ಹಳ್ಳಿಯಲ್ಲಿ ದೇವಸ್ಥಾನವೊಂದಕ್ಕೆ ನನ್ನ ಹೆಂಡತಿ ಸಿಕ್ಕರೆ ಹಣ್ಣು ಕಾಯಿ ಕೊಡುವೆನೆಂದು ಹರಿಕೆ ಹೊತಿದ್ದೆ, ಆಕೆ ಸ್ವಲ್ಪ ಹುಚ್ಚು, ಮೊನ್ನೆ ಕಳೆದುವಳು ಸಿಕ್ಕಿದ್ದಾಳೆ. ಅದಕ್ಕೆ ದೇವಸ್ಥಾನಕ್ಕೆ ಹೊರಟಿರುವ ಸ್ಟಾಪ್ ಬಂದಾಗ ಹೇಳಿ” ಎಂದು.
ತೀರ್ಥಹಳ್ಳಿ ಕಳೆದು ಮುಡುಬ ಬಂತು. ನಾನು ಪಕ್ಕದಲ್ಲಿ ಕುಳಿತ ಅಸಾಮಿಯನ್ನು ಎಬ್ಬಿಸಿದೆ. ಅವನು ‘ಥ್ಯಾಂಕ್ಸ್ ಹೇಳಿ ಎದ್ದವನೇ ಡ್ರೈವರ್’ ಎದುರು ಸೀಟಿನಲ್ಲಿ ಕುಳಿತ ಮಹಿಳೆಗೆ
– “ಬಾ ಹೋಗೋಣ” ಅಂದ
ಅದಕ್ಕೆ ಆಕೆ
“ನೀನು ಯಾರು?”
ಜೋರಾಗಿ ಅಬ್ಬರಿಸಿದಳು.
ಅದಕ್ಕೆ ಅವನು ನನ್ನ ಕಡೆ ತಿರುಗಿ
– “ಸಾರ್ ಈಕೆಯೇ ನನ್ನ ಹೆಂಡತಿ”
ನಾನು ಬಸ್ಸಿನವರಿಗೆಲ್ಲಾ ಅವರ ಕತೆ ಹೇಳಿ ಆ ಮಹಿಳೆಯನ್ನು ಅಲ್ಲೇ ಇಳಿಸಿದೆನು. ಬಸ್ಸು ಸೀದಾ ಮಂಡಗದ್ದೆ, ಗಾಜನೂರು ಮಾರ್ಗವಾಗಿ ಶಿವಮೊಗ್ಗ ತಲುಪಿತು.
ಶಿವಮೊಗ್ಗದಲ್ಲಿ ನಾನು ಎ.ಪಿ.ಎಂ.ಸಿ ಯಾರ್ ಡಿಗೆ ಹೋಗಿ ಅಡಿಕೆ ವ್ಯಾಪಾರ ಮಾಡಿ ಸಂಜೆ ಊರಿಗೆ ಹೊರಟು. ಆಗ ಹುಡುಗನೊಬ್ಬ ಸಂಜೆ ಪತ್ರಿಕೆ ಹಂಚುತ್ತಿದ್ದನು. ನಾನು ಪತ್ರಿಕೆ ಕೊಂಡು ಓದು ತೊಡಗಿದೆ. ಅಲ್ಲೊಂದು ಸುದ್ದಿ ನನ್ನ ತಲ್ಲಣಗೊಳಿಸಿತ್ತು.
“ಮಹಿಳೆ ಅಪಹರಣ”
ಚಿತ್ರದ ಜೊತೆ ಸುದ್ದಿ ಪ್ರಕಟವಾಗಿತ್ತು. ಬೆಳಿಗ್ಗೆ ನನ್ನ ಪರಿಚಯಿಸಿಕೊಂಡ ಆ ವ್ಯಕ್ತಿ ಮಹಿಳೆಯರನ್ನು ವೇಶ್ಯಾಗೃಹಕ್ಕೆ ಮಾರುವ ಖದೀಮನಾಗಿದ್ದ. ನನಗೆ ಬೇಡ ಬೇಡವೆಂದರೂ ಆ ಹೆಂಗಸಿನ ದಯನೀಯವಾದ ಮುಖ ಕಣ್ಣು ಮುಂದೆ ಬಂದು ನಿಲ್ಲುತ್ತಿತ್ತು. ಆ ಇಡೀ ಪ್ರಕರಣದಲ್ಲಿ ಅವನಷ್ಟು ದೋಷಿ ನಾನು ಅಂತ ನನ್ನ ಒಳ ಮನಸ್ಸು ಕೂಗಿ ಹೇಳುತ್ತಿತ್ತು.
*****


















