Home / ಕವನ / ಕವಿತೆ / ಕವನ ಕಾಮಿನಿ

ಕವನ ಕಾಮಿನಿ

ಬಾಲ್ಯ ಕಳೆದೆಯೆಂದು ಲಜ್ಜೆ-
ಯೇನು ಕವನ ಕಾಮಿನಿ?
ಮೊಗವ ತೋರದೆನಗೆ ನೀನು
ಕವಿಸುತಿರುವೆ ಯಾಮಿನಿ

ಮೊದಲು ತೊದಲುನುಡಿಯೊಳಾದ-
ರೇನು ಭಾವವೆರೆದೆ ನೀ
ಸಹಜ ಕಲ್ಪನಾ ವಿಲಾಸ
ಹಾಸವಿತ್ತು ಪಡಿದನಿ

ಆದರೀಗ ನಿನ್ನ ಸುಳಿವು
ವಿರಳವಿರುವುದೀಕಡೆ
ನೆಲಸಲೆಂದು ನನ್ನ ಮನದೊ-
ಳಿಲ್ಲವೇನು ನಿನಗೆಡೆ?

ಎಲೆಯ ಮರೆಯ ಕಾಯಿಯಂತೆ,
ತಳಿರ ಮರೆಯ ಮಲರವೋಲ್
ಮುಗಿಲ ಮರೆಯ ತಿಂಗಳಂತೆ,
ನೀರ ಮರೆಯ ಮೀನವೊಲ್‌-

ತೋರಿಯಡಗಿ, ಕಂಡು ಹುದುಗಿ,
ಕಣ್ಣುಕಟ್ಟನೆಸಗುವೆ
ಕಾರ ಹೊನಲಿನಂತೆ ದಡವ
ಮೀರಿ ಹರಿವುದಿಲ್ಲವೆ?

ನಿನ್ನ ಬಳೆಗಳೆಲುಗುದನಿಯು
ಕಾಲ ಗೆಜ್ಜೆಯಿಂಚರ
ಈಗತೇಳದಿರಲು ಹೇತು-
ವೇನು ಹಿಂದಿನಾ ತೆರ?

ತಿಳಿಯಿತೊಂದು ಬಾರಿ ನಗುವ
ಜೊನ್ನ ಹಾಲ ಹುಣ್ಣಿಮೆ
ತಿರುಗಿ ಬರುವುದೊಂದು ಸಾರಿ
ಕಪ್ಪು ಸುರಿವ ಕಾಳಿಮೆ.

ಇಳಿತ- ಭರತ ಸರಿ ಸಮಾನ
ಪ್ರಕೃತಿ ನಿಯಮವಲ್ಲವೇ?
ಕಪ್ಪು ಕತ್ತಲಳಿದ ಮೇಲೆ
ತೆರೆಯಲೀಗ ಬೆಳಕೆವೆ

ನಕ್ಕು ನಲಿದ ಮುಗ್ಧ ಬಾಲೆ-
ಯೇಕೆ ನಿದ್ದೆಯಿದ್ದೆಯೊ?
ಇದ್ದರೇನು?- ಸದ್ಯ ನೀನು
ಎದ್ದು ಸಿದ್ಧಳಾಗೆಯೊ?

ಎಳಮೆ ದಾಟಿ, ಹಿರಿಮೆಯಾಂತು,
ನೋಟ ಮಿಂಚ ಹರಹು ನೀ
ಒಲಿದು ನಲಿದು ನಕ್ಕು ನಗಿಸಿ
ಬಾರೆ ಕವನ ಕಾಮನಿ!

ಕುಣಿದು ಮಣಿದು, ಮಾಲಿ ತೇಲಿ,
ಹಾರಿ ತೂರಿಯೇರಿ ಬಾ
ಹೊಳೆದು ಬಳೆದು, ಚೆಲುವು ಚೆಲ್ಲಿ,
ಉಕ್ಕಿ ಸೊಕ್ಕಿ ಮಿಕ್ಕಿ ಬಾ

ರಸವಿಶುದ್ಧೆ, ರೀತಿಪೂತೆ,
ಗುಣ ನಿಭೂಷಿತಾಂಗಿಯೆ!
ಧ್ವನ್ಯಲಂಕಾರಯುಕ್ತೆ
ಭಾವ-ವೃತ್ತಿ ಸಂಗಿಯೆ!

ಕಲ್ಪನಾ ಕುರಂಗವೇರಿ,
ಹಾರಿ ಬಾರೆ ಸುಂದರಿ!
ಶುಭ್ರ ಚಂದ್ರಿಕಾ ವಿಲಾಸ
ಲಾಸ್ಯ ಗೈ, ರಸೋದರಿ !

ಸರಸ ಮಧುರ ಸುಧೆಯ ಸ್ನಿಗ್ಧ
ಚು೦ಬನವನು ಬಿಂಬಿಸು
ಸಾಂದ್ರ ಪುಲಕವಾಗಿಸುತ್ತ,
ಸಗ್ಗ ಸೊಗವನೂಡಿಸು
*****
೧೯೪೨

Tagged:

Leave a Reply

Your email address will not be published. Required fields are marked *

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...