Home / ಕವನ / ಕವಿತೆ / ಕೆಮ್ಮಣ್ಣುಗುಂಡಿಯಲ್ಲಿ

ಕೆಮ್ಮಣ್ಣುಗುಂಡಿಯಲ್ಲಿ

ಎಲ್ಲಿ ನೋಡಲಲ್ಲಿ ಕಣ್ಣು
ಕಾಣುತಿಹೆದು ಕೆಮ್ಮಣ್ಣು!
ಸುತ್ತ ಮುತ್ತ ನೋಡು ಮಿತ್ರ
ಪ್ರಕೃತಿಯಾ ಕೃತಿ ವಿಚಿತ್ರ!

ತನ್ನ ರೂಪ ತಾನೆ ನೋಡಿ
ಮೆಚ್ಚಿ ಮೋದದಿಂದ ಹಾಡಿ
ಸುರಿಸುತಿಹಳೊ ಪ್ರಕೃತಿಮಾತೆ
ಕಣ್ಣನೀರನೆಂಬೊಲೊರತೆ-
ಯೊಂದು ನೋಡು ಬೀಳುತಿಹುದು!
ನೊರೆಯ ನಗೆಯು ಏಳುತಿಹುದು!
ಇದೋ! ನುಣುಪುಕಲ್ಲ ನಲ್ಲ
ಮುತ್ತನಿಡಲು ನಿಲಲು ಗಲ್ಲ
ತಿರುಗಿಸಿದೊಲು, ಕೊಂಚ ಬಳುಕಿ,
ಅದರ ಆಸೆ ಮುರಿಯಲಳುಕಿ
ಮತ್ತೆ ಬಂಡೆಯನೇ ತಬ್ಬಿ-
ತೆನ್ನೆ ಬಳಸಿರುವುದು ಉಬ್ಬಿ!
ಇದರ ಗಾನವೆಷ್ಟು ಇಂಪು!
ಹಾ! ಕೊರೆವುದಿದರ ತಂಪು!
“ಆ ಮಂಜುಗಡ್ಡೆಯು
ಬಿಸಿಯು” ಎಂಬಸಡ್ಜೆಯು!

ಕೆಳಗೆ ಕಮರಿಯಾಳದಲ್ಲಿ-
ಅಲ್ಲ-ಪಾತಾಳದಲ್ಲಿ
ಕೊಂಚ ನೋಡು!
ಬಗ್ಗಿ ನೋಡು!
ಪ್ರಕೃತಿಯೆಂತು ವಿವಿಧ ವರ್ಣ
ಮೇಳದಿಂದರೊಂದವರ್ಣ-
ನೀಯಮಾದ ಚಿತ್ರವನ್ನು
ರಚಿಸುತಿಹಳು! ರಾಸಿ ಹೊನ್ನು
ಸುರಿದರೂ ಇಂಥ ಚಿತ್ರ
ದೊರೆವುದೇನು ನೋಡು ಮಿತ್ರ!
ಅದೋ! ಅಲ್ಲಿ ದೂರದಲ್ಲಿ
ಭೂಮಿ ಬಾನು ಸೇರುವಲ್ಲಿ
ಹೊಂಬಿಸಿಲಿಗೆ ಮಂಜಕೂಡಿ
ಪ್ರಕೃತಿಯೊಡನೆ ಸ್ಪರ್ಧೆ ಹೂಡಿ
ಸಪ್ತವರ್ಣಧನುವನೆಂತು
ಧರಿಸುತಿರುವನಹಾ ಕಂತು!

ಇತ್ತ ಕೆಳಗೆ ನಮ್ಮ ಎದುರು
ರಾಸಿ ಕೆಂಪು ಬಣ್ಣದದಿರು
ಕಾಣುತಿಹುದು ಚುಕ್ಕಿಯಂತೆ
ಸುತ್ತಲಿರಲು ಹಸಿರ ಸಂತೆ!
“ಚೆಲುವೆ ವಸುಂಧರೆಯ ನೆತ್ತಿ-
ಯೊಳಗಿಹುದೋ ಒಂದು ಮತ್ತಿ
ಪಚ್ಚೆಹಸಿರ ಸೀರೆಯುಟ್ಟ
ತಿರೆಯ ಹೆಣ್ಣ ಮೂಗಬೊಟ್ಟ-
ನಾಳಿ ಮೆರೆಯುತಿರುವ ಕೆಂಪೊ
ಕುಂಕುಮದ ಬೊಟ್ಟ ಕೆಂಪೊ”
ಎಂದು ಮನವು ಭ್ರಮಿಪುದು
ಪ್ರಕೃತಿಗಿಂತು ನಮಿಪುದು!

ಅದಂತಿರಲಿ ಇತ್ತ ಬಂದು
ಕಾಲನೆಂತೊ ಕಿತ್ತು ತಂದು
ಸೊಬಗ ಮಡಿಲನೆಂತೊ ಬಿಟ್ಟು
ಮೌನವನ್ನು ಬೀಳ್ಕೊಟ್ಟು
ಯಂತ್ರ ಜಗದಿ ಮನವಿಡು
ಮೂಗ ಮೇಲೆ ಬೆರಳಿಡು!

ಸಮುದ್ರದೊಳೆ ಮರೆಯಾಗುವ ಹಡಗೊಲು
ಬೆಳಗೊಳು ಕ್ಷೀಣಿಪ ನಕ್ಷತ್ರದವವೊಲು
ರೈಲ ಹಿಂದಿರುವ ಕೆಂಬೆಳಕಿರುಳೊಳು
ಮೆಲುಮೆಲ್ಲನೆಯೇ ನಶಿಸುವ ತೆರದೊಳು
ಬಾನಿಗಳೆಲ್ಲಾ ತೆರಳಿದವು
ಅದಿರನು ಸುರಿಯುತ ಮರಳಿದವು!
ಸೋಲುವೆ ಬಾಯೊಳೆ ಬಣ್ಣಿಸಲೆಳಸಿ!
ಏನುಪಯೋಗವು ಉಹಪಮೆಯ ಬೆಳಸಿ?

ಇತ್ತ ಬುವಿಯ ಬಸಿರ ಬಗೆಯೆ
ಚೆಲುವನೆಲ್ಲ ಕಿತ್ತೊಗೆಯೆ
ರಕ್ತ ಬಸಿಯುತಿರುವುದು
ಎನ್ನೆ ಕುಸಿಯುತಿರುವುದು
ಕೆಮ್ಮಣ್ಣು ರಾಸಿಯಾಗಿ
ಕಣ್ಣಿರಲು ರೋಸಿಹೋಗಿ

ಅಯ್ಯೊ! ನಾನೆಂಥ ಮರುಳ
ಆ ತೊರೆಯ ಹಾಡ ತಿರುಳ
ಕೊಂಚವೂ ತಿಳಿಯದೆ
ಪ್ರಕೃತಿ ಸುರಿವ ದುಃಖ ಬಾಷ್ಪ-
ವನ್ನೆ ಆನಂದ ಬಾಷ್ಪ-
ವೆಂದು ಏನು ತಿಳಿಯದೆ,
ಇದರ ತಂಪು
ಸಾವ ತಂಪು
ಎಂಬುದನ್ನೆ ತಿಳಿಯದೆ
ಏನೇನೊ ಗಳಹಿದೆ!

ಇಂತು ಮನವು ವಿವಿಧ ಭಾವ-
ಗಳಿಗೆ ಇಂಬನೀಯುತಿರೆ
ಬೆಟ್ಟವಿಳಿಯುತಿದ್ದೆ ವಾವು
ರೈಲೆಮಗೇ ಕಾಯುತಿರೆ!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...