Home / ಕವನ / ಕವಿತೆ / ಸ್ತ್ರಾಂಬೋಲಿ

ಸ್ತ್ರಾಂಬೋಲಿ

ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯ ಸಮುದ್ರದ ನಡುವೆ
ಸಿಸಲಿಯೊಡನೆ ಕದನವೆಸಗಿ ಪಾದಧೂಲಿಯನದಣಕೆರಚುವಂತೆ:
ಇಟಲಿಯ ಹೆಬ್ಬೊಟ್ಟಿನುಗುರಿನ ಹೊಗರ ನೋಡು! ಶೋಭಿಸುತಿಹವು ಪುರಗಳಲ್ಲಿ

ನಿಡಿದಾದ ಪರ್ವತಾವಳಿಯನೇರಲು ಹವಣಿಸುವ ಸಾಹಸಿಗಳಂತೆ
ಮತ್ತೆ ನಿದ್ರಿಸುತಿಹವು ಕೆಲವು ಹೊಳೆದು ಬೆಂಗದಿರನ ಹೊಂಬೆಳಕಿನಲ್ಲಿ.
ಸಿಸಿಲಿಯ ದಂಡೆಗುಂಟ ಹರವಿಹುದು ಮೆಸಿನಾನಗರವು ತನ್ನ ಚೆಲುವನ್ನೆಲ್ಲ.

ದಾಟುತೀ ನೀರಿನೊತ್ತನು ಮುನ್ನಡೆಯೆ ಕಂಡಿತಾಗ ಸಮುದ್ರ
ನೀಲಗನ್ನಡಿಯಂತೆ: ತೆರೆಯಿಲ್ಲ, ಸುಳಿಯಿಲ್ಲ!
ಅಖಂಡವಾಗಿ ನಿದ್ರಿಸುತಿತ್ತು ನಭೋಮಂಡಲದ ಪಡಿನೆಳಲಾಗಿ,
ಬಿಂಬಿಸಿತು ನಿರಾಳವಾದ ಶಾಂತಿಯನು: ಬರುತಿರಲಲ್ಲಿ
ದಾರಿಯಲಿ ನೀನವಿತು ಕುಳಿತಿದ್ದೆ ಸ್ತ್ರಾ೦ಬೋಲಿ!

ಮುಚ್ಚಿತ್ತು ಕರ್ಮೋಡ ಕೆಂಡವನುಗುಳ್ವ ನಿನ್ನ ರುದ್ರಮುಖವ.
ಜ್ವಾಲಾಮುಖಿಯೆ! ನಿನ್ನ ಶಿಖಿಯಡಗಿತ್ತು, ನಿಂತ ಹೊಗೆಮೋಡದಲಿ:
ಜಾರಿತ್ತು ನಿನ್ನ ಮೈಮೇಲೆ ಗಂಧಕದ ರಸ,-ಹೆಪ್ಪುಗಟ್ಟಿ ಹಸಿರಾಗುತ್ತ:
ಆರಿತ್ತು ನಿನ್ನೆದೆಯ ಮೇಲೆ ಕಬ್ಬಿಣದ ಕಸ,-ಕಾಡಿಗೆಯ ಕಪ್ಪಿನಂತೆ.
ನೆಲದ ಬಸಿರನು ಬಗೆದು ನೀ ಕಿತ್ತು ತಂದಿರುವ ಮಣ್ಣಿನ ಬಣ್ಣ
ಹರವಿತ್ತು ತಿಳಿನೀಲಿಯಾಗಿ ನಿನ್ನ೦ಗಾಂಗಳ ಮೇಲೆ:
ಪಾರಿಜಾತವ ತರಲು ವಾರಿಧಿಯ ದಾಟಿ ಮುನ್ನಡೆದ ಹಸುಳರನು
ಹೆದರಿಸಲೆನಲು ಮುಸುಕನು ಹೊತ್ತು ಕುಳಿತಿರುವೆ ಮುದಿ ರಾಕ್ಷಸನಂತೆ,-ಸ್ತ್ರಾಂಬೋಲಿ!

ಹಳ್ಳಿಯನು ಕಟ್ಟಿ ಗಿರಣಿಯೊಂದನು ಹೂಡಿಹನು ನಿನ್ನಡಿಯಲ್ಲಿ ಮಾನವನು
ಅನುದಿನವು ನೀನುಗುಳ್ವ ಲಾಳರಸವ ಲೆಕ್ಕಿಸದೆ,
ನಿನ್ನ ಪ್ರಳಯಾಗ್ನಿಯಲಿ ಬೆಂದುಬಿಡಬಹುದೆಂಬುದನು ನೆನೆದು ಸಹ!
ಕಾಯಿಲೆಯಿರಲು, ಕೆಂಗಿಡಿಗಳನುಗುಳಲು ನೀನು, ನಿನ್ನಾ ವಾಂತಿಭೇದಿಯಿಂದ
ಅಣಿಗೊಳಿಸುವನು ತನಗೆಂದು ಹಲವೌಷಧಿಗಳನು.
ಸುಮ್ಮನಿಹೆ ನೀನು ಮೂಗುಮುರಿದು, ವ್ಯಂಗ್ಯವಾದ ನಗೆಯೊಂದ ನಕ್ಕು!
ಹೇಸಿಗೆಯ ತಿನ್ನಲು ಬಂದ ನಾಯಿಯನು
ಬೀಸಿ ಹೊಡೆದರೇನು ಬಿರುದು ಬಂತೆ?

ರೋಮರಾಜ್ಯದ ತಲೆ ತಗ್ಗಿತು, ಸಿಸಿಲಿಯ ಸುಸಿಲು ತಲೆಕೆಳಗಾಯಿತು:
ಬೇರೊಂದು ರಾಜ್ಯವೆದ್ದಿರುವದಿಂದಿಟಲಿಯಲ್ಲಿ.
ಬೇರೆ ನೌಕೆಗಳಾಳುತಿಹವಿಂದು ಸಪ್ತಸಮುದ್ರಗಳನ್ನು!
ನೀ ಮಾತ್ರ ನಿಂತಿರುವೆ-ಧೂಮಧಾಮವಾಗಿ,
ಭೂಮಧ್ಯಸಮುದ್ರದ ದೀಪಸ್ತಂಭವಾಗಿ!
ಹೊಗೆ ಬಿಡುತಿರುವೆ ಎಂದಿನಂತೆ: ರಾಜ್ಯಗಳಳಿದರೇನು,
ಉದ್ಬುದ್ಧವಿರಲೇನು,-ಮತ್ತೆ ನೆಲಸಮವಾದರೇನು,-
ಎಲ್ಲ ಸಮವೆನುತಿರುವೆ! ಎಂದಿನೊಲು ಸುರಿಸುತ್ತ
ಕಡಲ ಮಡಿಲಲಿ ನಿನ್ನ ಕಾರೊಡಲ ಕೆಂಡವನು!

ನಿನ್ನ ತಲೆಮೇಲೆ ನಿಂತಿಹನು ನೋಡು ಪಡುವಣಕೆ ನಡೆದ ಸೂರ್ಯ:
ನೀನು ಜ್ವಾಲಾಮುಖಿ,-ಅವನು ಜ್ವಾಲೆಯ ಜಗತ್ತು!
ಅವನ ಸ್ವಯಂಪ್ರಶಾಶಕ್ಕೆ ತಾಕಿಲ್ಲವಿನ್ನೂ ಹೊಗೆ:
ಅಚ್ಚಳಿಯದಿದೆಯಿಂದಿಗೂ ಆವನ ನಗೆ.
ನೀನು ಕಾಲದಷ್ಟು ಹಳಬನಾದರೆ ಅವನು ಪ್ರಾಣಕ್ಕಿಂತ ಪ್ರಾಚೀನನಹುದು-.
ಕಳೆಯುವದಿದು ಸ್ತ್ರಾಂಬೂಲಿ ಹಳ್ಳಿ,-ಇಲ್ಲದಿರಲು ನಿನ್ನ ಬೆಂಕಿಯ ಮಳೆ.
ಸೂರ್ಯನು ತಣ್ಣಗಾಗಲು,-ಮುಳುಗುವದು ಮೂಜಗವೆಲ್ಲ!
*****

Tagged:

Leave a Reply

Your email address will not be published. Required fields are marked *

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...

ಮಧ್ಯಾಹ್ನದ ಆರು ತಾಸಿನ ಸಮಯ. ಬಿಸಿಲು ರಣಗುಟ್ಟುತ್ತಿತ್ತು. ಕಲ್ಲವನು ಉರುವಲ ಹೊರೆಯೊಂದನ್ನು ಹೊತ್ತು ತಂದು, ಗುಡಿಸಲಿನ ಮುಂದೆ ಒಗೆದು ಬೇವಿನ ಗಿಡದ ನೆರಳಿನಲ್ಲಿ ಕುಳಿತು ಉಸ್ಸೆಂದು ಉಸುರುಗರೆದಳು. ಗುಡಿಸಲಿನೊಳಗಿಂದ ನಾಲ್ಕಾರು ಚಿಕ್ಕ ಮಕ್ಕಳು ಹೊರಗೆ ಹಾತೊರೆದು ಬಂದು, “ಅವ್...

ಬೀರ ಹಾಸಿಗೆಯಲ್ಲಿ ಹೊರಳುತ್ತಿದ್ದಾನೆ, ಕಣ್ಣಿಗೆ ನಿದ್ರೆಯಿಲ್ಲ; ಮನಸ್ಸಿಗೆ ಶಾ೦ತಿಯಿಲ್ಲ. ಸಾಯಂಕಾಲ ಊರ ಚಾವಡಿಯಲ್ಲಿ “ಹೆಚ್ಚು ಆಹಾರ ಧಾನ್ಯ ಬೆಳೆಯಿರಿ!” ಎಂಬ ವಿಷಯದ ಮೇಲೆ ಅಧಿಕಾರಿಗಳ ವ್ಯಾಖ್ಯಾನ ಕೇಳಿದ್ದನಾತ. ಆಗಿನಿಂದಲೂ ಅವನಿಗೆ ತಾನೊಂದು ಬಾವಿಯನ್ನೇಕೆ ತೋಡಬಾರದು ಎನ್ನ...

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...