Home / ಕವನ / ಕವಿತೆ / ಸ್ತ್ರಾಂಬೋಲಿ

ಸ್ತ್ರಾಂಬೋಲಿ

ಕಾಲು ಚಾಚಿ ಕುಳಿತಿಹುದಿಟಲಿ ಭೂಮಧ್ಯ ಸಮುದ್ರದ ನಡುವೆ
ಸಿಸಲಿಯೊಡನೆ ಕದನವೆಸಗಿ ಪಾದಧೂಲಿಯನದಣಕೆರಚುವಂತೆ:
ಇಟಲಿಯ ಹೆಬ್ಬೊಟ್ಟಿನುಗುರಿನ ಹೊಗರ ನೋಡು! ಶೋಭಿಸುತಿಹವು ಪುರಗಳಲ್ಲಿ

ನಿಡಿದಾದ ಪರ್ವತಾವಳಿಯನೇರಲು ಹವಣಿಸುವ ಸಾಹಸಿಗಳಂತೆ
ಮತ್ತೆ ನಿದ್ರಿಸುತಿಹವು ಕೆಲವು ಹೊಳೆದು ಬೆಂಗದಿರನ ಹೊಂಬೆಳಕಿನಲ್ಲಿ.
ಸಿಸಿಲಿಯ ದಂಡೆಗುಂಟ ಹರವಿಹುದು ಮೆಸಿನಾನಗರವು ತನ್ನ ಚೆಲುವನ್ನೆಲ್ಲ.

ದಾಟುತೀ ನೀರಿನೊತ್ತನು ಮುನ್ನಡೆಯೆ ಕಂಡಿತಾಗ ಸಮುದ್ರ
ನೀಲಗನ್ನಡಿಯಂತೆ: ತೆರೆಯಿಲ್ಲ, ಸುಳಿಯಿಲ್ಲ!
ಅಖಂಡವಾಗಿ ನಿದ್ರಿಸುತಿತ್ತು ನಭೋಮಂಡಲದ ಪಡಿನೆಳಲಾಗಿ,
ಬಿಂಬಿಸಿತು ನಿರಾಳವಾದ ಶಾಂತಿಯನು: ಬರುತಿರಲಲ್ಲಿ
ದಾರಿಯಲಿ ನೀನವಿತು ಕುಳಿತಿದ್ದೆ ಸ್ತ್ರಾ೦ಬೋಲಿ!

ಮುಚ್ಚಿತ್ತು ಕರ್ಮೋಡ ಕೆಂಡವನುಗುಳ್ವ ನಿನ್ನ ರುದ್ರಮುಖವ.
ಜ್ವಾಲಾಮುಖಿಯೆ! ನಿನ್ನ ಶಿಖಿಯಡಗಿತ್ತು, ನಿಂತ ಹೊಗೆಮೋಡದಲಿ:
ಜಾರಿತ್ತು ನಿನ್ನ ಮೈಮೇಲೆ ಗಂಧಕದ ರಸ,-ಹೆಪ್ಪುಗಟ್ಟಿ ಹಸಿರಾಗುತ್ತ:
ಆರಿತ್ತು ನಿನ್ನೆದೆಯ ಮೇಲೆ ಕಬ್ಬಿಣದ ಕಸ,-ಕಾಡಿಗೆಯ ಕಪ್ಪಿನಂತೆ.
ನೆಲದ ಬಸಿರನು ಬಗೆದು ನೀ ಕಿತ್ತು ತಂದಿರುವ ಮಣ್ಣಿನ ಬಣ್ಣ
ಹರವಿತ್ತು ತಿಳಿನೀಲಿಯಾಗಿ ನಿನ್ನ೦ಗಾಂಗಳ ಮೇಲೆ:
ಪಾರಿಜಾತವ ತರಲು ವಾರಿಧಿಯ ದಾಟಿ ಮುನ್ನಡೆದ ಹಸುಳರನು
ಹೆದರಿಸಲೆನಲು ಮುಸುಕನು ಹೊತ್ತು ಕುಳಿತಿರುವೆ ಮುದಿ ರಾಕ್ಷಸನಂತೆ,-ಸ್ತ್ರಾಂಬೋಲಿ!

ಹಳ್ಳಿಯನು ಕಟ್ಟಿ ಗಿರಣಿಯೊಂದನು ಹೂಡಿಹನು ನಿನ್ನಡಿಯಲ್ಲಿ ಮಾನವನು
ಅನುದಿನವು ನೀನುಗುಳ್ವ ಲಾಳರಸವ ಲೆಕ್ಕಿಸದೆ,
ನಿನ್ನ ಪ್ರಳಯಾಗ್ನಿಯಲಿ ಬೆಂದುಬಿಡಬಹುದೆಂಬುದನು ನೆನೆದು ಸಹ!
ಕಾಯಿಲೆಯಿರಲು, ಕೆಂಗಿಡಿಗಳನುಗುಳಲು ನೀನು, ನಿನ್ನಾ ವಾಂತಿಭೇದಿಯಿಂದ
ಅಣಿಗೊಳಿಸುವನು ತನಗೆಂದು ಹಲವೌಷಧಿಗಳನು.
ಸುಮ್ಮನಿಹೆ ನೀನು ಮೂಗುಮುರಿದು, ವ್ಯಂಗ್ಯವಾದ ನಗೆಯೊಂದ ನಕ್ಕು!
ಹೇಸಿಗೆಯ ತಿನ್ನಲು ಬಂದ ನಾಯಿಯನು
ಬೀಸಿ ಹೊಡೆದರೇನು ಬಿರುದು ಬಂತೆ?

ರೋಮರಾಜ್ಯದ ತಲೆ ತಗ್ಗಿತು, ಸಿಸಿಲಿಯ ಸುಸಿಲು ತಲೆಕೆಳಗಾಯಿತು:
ಬೇರೊಂದು ರಾಜ್ಯವೆದ್ದಿರುವದಿಂದಿಟಲಿಯಲ್ಲಿ.
ಬೇರೆ ನೌಕೆಗಳಾಳುತಿಹವಿಂದು ಸಪ್ತಸಮುದ್ರಗಳನ್ನು!
ನೀ ಮಾತ್ರ ನಿಂತಿರುವೆ-ಧೂಮಧಾಮವಾಗಿ,
ಭೂಮಧ್ಯಸಮುದ್ರದ ದೀಪಸ್ತಂಭವಾಗಿ!
ಹೊಗೆ ಬಿಡುತಿರುವೆ ಎಂದಿನಂತೆ: ರಾಜ್ಯಗಳಳಿದರೇನು,
ಉದ್ಬುದ್ಧವಿರಲೇನು,-ಮತ್ತೆ ನೆಲಸಮವಾದರೇನು,-
ಎಲ್ಲ ಸಮವೆನುತಿರುವೆ! ಎಂದಿನೊಲು ಸುರಿಸುತ್ತ
ಕಡಲ ಮಡಿಲಲಿ ನಿನ್ನ ಕಾರೊಡಲ ಕೆಂಡವನು!

ನಿನ್ನ ತಲೆಮೇಲೆ ನಿಂತಿಹನು ನೋಡು ಪಡುವಣಕೆ ನಡೆದ ಸೂರ್ಯ:
ನೀನು ಜ್ವಾಲಾಮುಖಿ,-ಅವನು ಜ್ವಾಲೆಯ ಜಗತ್ತು!
ಅವನ ಸ್ವಯಂಪ್ರಶಾಶಕ್ಕೆ ತಾಕಿಲ್ಲವಿನ್ನೂ ಹೊಗೆ:
ಅಚ್ಚಳಿಯದಿದೆಯಿಂದಿಗೂ ಆವನ ನಗೆ.
ನೀನು ಕಾಲದಷ್ಟು ಹಳಬನಾದರೆ ಅವನು ಪ್ರಾಣಕ್ಕಿಂತ ಪ್ರಾಚೀನನಹುದು-.
ಕಳೆಯುವದಿದು ಸ್ತ್ರಾಂಬೂಲಿ ಹಳ್ಳಿ,-ಇಲ್ಲದಿರಲು ನಿನ್ನ ಬೆಂಕಿಯ ಮಳೆ.
ಸೂರ್ಯನು ತಣ್ಣಗಾಗಲು,-ಮುಳುಗುವದು ಮೂಜಗವೆಲ್ಲ!
*****

Tagged:

Leave a Reply

Your email address will not be published. Required fields are marked *

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...