Home / ಕವನ / ಕವಿತೆ / ಬೆಳಕು ಬೆಳೆದ ಈ ಹಿತ

ಬೆಳಕು ಬೆಳೆದ ಈ ಹಿತ

ಮನೆಯ ತೊರೆದು ಹೊರಗೆ ಬಾರೆ
ಹುಣ್ಣಿಮೆಯನು ನೋಡಲು
ಇರುಳಿನೆದೆಯು ಹೂತು ಹರಿದ
ಹಾಲಿನಲ್ಲಿ ಮೀಯಲು.
ಹುಣ್ಣಿಮೆಯಿದು ಬಾನ ಬಾಳ
ಪೂರ್ಣಿಮೆಯೇ ಅಲ್ಲವೇ?
ಬುವಿಯ ಬಯಕೆ ಬಾಯಾರಿಕೆ
ಕಳೆವ ಗಂಗೆಯಲ್ಲವೆ?
ನಂದನಕ್ಕೆ ನೀರೆರೆಯುವ
ಸಂಜೀವಕ ವಾಹಿನಿ!
ದಿಕ್ತಟಗಳ ದಾಟಿ ಹರಿದ
ಅನುಪಮ ಸಂಮೋಹಿನಿ!
ಬಾಂದೇವಿಯ ಶೃಂಗಾರಕೆ
ಹೂತ ವತ್ಸಲತೆಯಿದು.
ಭೂದೇವಿಯ ಶೃಂಗಸ್ತನ
ತೊರೆದ ಒಲವು ಹಾಲಿದು,
ಬಾಂಗಡಲಿನ ನೀಲಿಮೆಯಲಿ
ಜನಿಸಿ ನೆಗೆದ ಸುರಭಿಯು
ಮದವೇರದ ಮುದಬೀರುವ
ಅತಿ ಮಾನವ ಪೇಯವು.
ಇಂಗಡಲಿದು ಉಡುಲೋಕವ
ಮುಳುಗಿಸುತ್ತ ಬೆಳೆದಿದೆ
ಮೂಲೋಕದ ಮೂಲೆ ಮೂಲೆ
ಯನ್ನು ಮುಟ್ಟಿ ಹರಿದಿದೆ.
ಮಣ್ಣಿನಲ್ಲಿ ಸುರಿದು ಅದಕೆ
ಮಲರ ಮಾಯೆ ಬೀರಿದೆ.
ಕೊಳೆಯೆಲ್ಲವ ಸುತ್ತಿ ಮುತ್ತಿ
ಚೆಲುವನಲ್ಲಿ ಬಿತ್ತಿದೆ.
ಶುಭ ಮಂಗಲ ಪಾವನತೆಯು
ಆಣುರೇಣುವಿಗಿಳಿದಿದೆ
ಪ್ರತಿ ಜೀವದಿ ನವ ಸ್ವಪ್ನದ
ಸಂಗೀತವು ತುಂಬಿದೆ.
ಅಂಗಳದಲಿ ರಂಗೋಲಿಯ
ಮಂಗಲವನು ಬರೆದಿದೆ.
ಹೊಸ್ತಿಲದಲಿ ಸ್ವಸ್ತಿಕವನು
ಬರೆದು ಶುಭವ ಕೋರಿದೆ!
ಅರೆಯಿಲ್ಲದ ತೆರೆಯಿಲ್ಲದ
ನಿಶ್ಚಲ ಚಿರ ಶಾಂತಿಯು
ಮಧು ಮಧುರವು ಅತಿ ಮೃದುಲವು
ಇದರೆ ದಿವ್ಯ ಕಾಂತಿಯು.
ಇಲ್ಲಿ ಬಾರೆ ಬೆಳುದಿಂಗಳ
ಈ ಮಂಗಲ ಜಲಧಿಗೆ
ಮೆಯನೊಡ್ಡು ಬೆಳಕಿಗಿದರ
ತೆರೆಯದನು ಶಾಂತಿಗೆ
ಹರಿದೋಡುತ ಹೊರಳಾಡುತ
ಮುಳುಗೇಳುತ ಎಲ್ಲೆಡೆ
ತೆರೆತೆರೆಗಳು ಸೆಳೆದಲ್ಲಿಗೆ
ಕರೆಕರೆಯುತ ಎಳೆದೆಡೆ.
ಈಸಾಡಲು ಮೀನವಾಗಿ
ಹಕ್ಕಿಯಾಗಿ ಹಾರಲು
ಜೊನ್ನ ಕುಡಿದು ಜ್ಯೋತಿಯಾಗಿ
ಬಾನಿನಲ್ಲಿ ಬೆರೆಯಲು.
ಬಾ ಗೆಳತಿಯೆ ಹುಣ್ಣಿಮೆಯಲಿ
ಪೂಣ್ದಾಶಿಷ ಪಡೆಯಲು
ಮನೆಯ ತೊರೆದು ಚಿಂತೆ ಜರೆದು
ಪ್ರೀತಿಗೀತ ಹಾಡಲು
ದೇವರನ್ನು ಕುಣಿಸಿದಂಥ
ಚೆಲುವು ಚಂದ್ರನಮೃತ
ದೀನರನ್ನು ತಣಿಸದಿಹುದೆ
ಬೆಳಕು ಬೆಳದ ಈ ಹಿತ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...