Home / ಕವನ / ಕವಿತೆ / ಗೀತೆಯ ಹುಟ್ಟು

ಗೀತೆಯ ಹುಟ್ಟು

ಧರ್ಮಕ್ಷೇತ್ರದ ಭೂಮಿ
ಅಸಮ ಬಲ ಇಕ್ಕಡೆಯೊ-
ಳದಮಧ್ಯೆ ಗಂಭೀರ-ಶ್ರೀಕೃಷ್ಣನು.
ಕುರುಕ್ಷೇತ್ರ ಕುರುಸೇನೆ
ಕೌರವನ ರಣಘೋಷ-
ಸೇನಾನಿ ಫಲ್ಗುಣನು ಬಾಣಸಹಿತ.

ಕುರುಸೇನಾ ಕಡಲಲ್ಲಿ
ತೇಲುತಿಹ ಅರ್ಜುನನ
ರಥವೊಂದು-ಸಾರಥಿಯು ಶ್ರೀಕೃಷ್ಣನು;
ರೋಷ ಸಹನೆಯ ಮಧ್ಯೆ
ಬೇಕೊ ಬೇಡೆಂಬುದರ
ದ್ವಂದ್ವದಲಿ-ಜೀಕಲಾಡುತಯಿರ್ದುದು!

ಭಾರತದ ವಿಧಿನಿಯಮ-
ವನ್ನು ನಡೆಸುವ ಭರದಿ
ಸೇರಿರುವ ಪ್ರಶಾಂತ ಸೂರ್ಯೋದಯ
ಸೂರ್ಯಕಾಂತಿಯ ನಲ್ಮೆ
ಪಾರ್ಥಚಿತ್ರದ ಒಲ್ಮೆ
ಒಂದಾಗಿ ಸೇರಿದುವು ಕುರುಕ್ಷೇತ್ರದಿ.

ನೋಡಿದನು ಬಂಧುಗಳ,
ಗುರುಗಳನು ಹಿರಿಯರನು-
ಬೆಂದಮನ ಸಂತೈಸೆ ಚಕ್ರಧಾರಿ!
ಉಸುರಿದನು ಗೀತೆಯನು-
ವಿಶ್ವಯೋಗದ ಗುಟ್ಟು
ಬಿಚ್ಚಿದನು-ಅರ್ಜುನಗೆ ಅತಿಕಾಮಿಗೆ.

ಕೌರವನ ಹಠಯೋಗ
ಭಾರತದ ಬಲತ್ಯಾಗ-
ಕುರುಕ್ಷೇತ್ರ ಋಣಮುಕ್ತ ಧರ್ಮಕ್ಷೇತ್ರ!
ಗಂಭೀರ ಶಾಂತಿಯದು,
ಮೂಕವಾಗಿಹ ಸೇನೆ,
ರಥಗಾಲಿ ಸ್ತಬ್ಧತೆಯಿಂ ಗೀತಮಂತ್ರ!

ಕರ್ಮಯೋಗಿಯು ಕೃಷ್ಣ
ರಾಜಯೋಗಿಯು ಪಾರ್ಥ
‘ಕಿಂ ಕರ್ಮಾಕರ್ಮ’ಗಳ ವಾದಗಳಲಿ,
ಸತ್ವ ರಾಜಸ ತಮದ
ಹುಟ್ಟು ಸಾವಿನ ಬಲದ
ವಿಶ್ವರೂಪದ ಗೂಢ ರಹಸ್ಯಗಳನು.

ಚೊಕ್ಕ ಭಾಷೆಯ ಶ್ಲೋಕ,
ಪ್ರಶ್ನೆಗುತ್ತರ ಮಾತು-
ಏಸು ಸೊಗವೊ ಅವರ ಗುರುಶಿಷ್ಯತೆ!
ತುಂಬು ಕೂರ್ಮೆಯ ಮಾತು!
ಉಪನಿಷತ್ಕಲಶದ ಮಧುವು!
ವಿಶ್ವವ್ಯಾಪಿತ ವಾಣಿ-ಅಮರಗೀತೆ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...