Home / ಕವನ / ಕವಿತೆ / ಗೀತೆಯ ಹುಟ್ಟು

ಗೀತೆಯ ಹುಟ್ಟು

ಧರ್ಮಕ್ಷೇತ್ರದ ಭೂಮಿ
ಅಸಮ ಬಲ ಇಕ್ಕಡೆಯೊ-
ಳದಮಧ್ಯೆ ಗಂಭೀರ-ಶ್ರೀಕೃಷ್ಣನು.
ಕುರುಕ್ಷೇತ್ರ ಕುರುಸೇನೆ
ಕೌರವನ ರಣಘೋಷ-
ಸೇನಾನಿ ಫಲ್ಗುಣನು ಬಾಣಸಹಿತ.

ಕುರುಸೇನಾ ಕಡಲಲ್ಲಿ
ತೇಲುತಿಹ ಅರ್ಜುನನ
ರಥವೊಂದು-ಸಾರಥಿಯು ಶ್ರೀಕೃಷ್ಣನು;
ರೋಷ ಸಹನೆಯ ಮಧ್ಯೆ
ಬೇಕೊ ಬೇಡೆಂಬುದರ
ದ್ವಂದ್ವದಲಿ-ಜೀಕಲಾಡುತಯಿರ್ದುದು!

ಭಾರತದ ವಿಧಿನಿಯಮ-
ವನ್ನು ನಡೆಸುವ ಭರದಿ
ಸೇರಿರುವ ಪ್ರಶಾಂತ ಸೂರ್ಯೋದಯ
ಸೂರ್ಯಕಾಂತಿಯ ನಲ್ಮೆ
ಪಾರ್ಥಚಿತ್ರದ ಒಲ್ಮೆ
ಒಂದಾಗಿ ಸೇರಿದುವು ಕುರುಕ್ಷೇತ್ರದಿ.

ನೋಡಿದನು ಬಂಧುಗಳ,
ಗುರುಗಳನು ಹಿರಿಯರನು-
ಬೆಂದಮನ ಸಂತೈಸೆ ಚಕ್ರಧಾರಿ!
ಉಸುರಿದನು ಗೀತೆಯನು-
ವಿಶ್ವಯೋಗದ ಗುಟ್ಟು
ಬಿಚ್ಚಿದನು-ಅರ್ಜುನಗೆ ಅತಿಕಾಮಿಗೆ.

ಕೌರವನ ಹಠಯೋಗ
ಭಾರತದ ಬಲತ್ಯಾಗ-
ಕುರುಕ್ಷೇತ್ರ ಋಣಮುಕ್ತ ಧರ್ಮಕ್ಷೇತ್ರ!
ಗಂಭೀರ ಶಾಂತಿಯದು,
ಮೂಕವಾಗಿಹ ಸೇನೆ,
ರಥಗಾಲಿ ಸ್ತಬ್ಧತೆಯಿಂ ಗೀತಮಂತ್ರ!

ಕರ್ಮಯೋಗಿಯು ಕೃಷ್ಣ
ರಾಜಯೋಗಿಯು ಪಾರ್ಥ
‘ಕಿಂ ಕರ್ಮಾಕರ್ಮ’ಗಳ ವಾದಗಳಲಿ,
ಸತ್ವ ರಾಜಸ ತಮದ
ಹುಟ್ಟು ಸಾವಿನ ಬಲದ
ವಿಶ್ವರೂಪದ ಗೂಢ ರಹಸ್ಯಗಳನು.

ಚೊಕ್ಕ ಭಾಷೆಯ ಶ್ಲೋಕ,
ಪ್ರಶ್ನೆಗುತ್ತರ ಮಾತು-
ಏಸು ಸೊಗವೊ ಅವರ ಗುರುಶಿಷ್ಯತೆ!
ತುಂಬು ಕೂರ್ಮೆಯ ಮಾತು!
ಉಪನಿಷತ್ಕಲಶದ ಮಧುವು!
ವಿಶ್ವವ್ಯಾಪಿತ ವಾಣಿ-ಅಮರಗೀತೆ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...