ನೀರಿಗೆ ಬಿದ್ದ ಹೆಣ್ಣು

ನೀರಿಗೆ ಬಿದ್ದ ಹೆಣ್ಣು ತಾವರೆಯ ತೆನೆಯಾಗಿ
ಹೂವಾಗಲಿಲ್ಲ ಕೆಂಪಾಗಿ.
ಸಾವಿನಲಿ ಶಾಂತಿ ಉರುಳಿತ್ತು ತಲೆಕೆಳಗಾಗಿ
ಆ ಎಲ್ಲ ನೋವು ತಂಪಾಗಿ.

ನೀರಿಗೆ ಬಿದ್ದ ಹೆಣ್ಣು ಒಂದೇ ಮುಳುಗು ಮುಳುಗಿ
ಕಂಡಿತ್ತು ಸಾವಿನ ಯುಗಾದಿ.
ಸುತ್ತೆಲ್ಲ ಕಿತ್ತು ಬಿದ್ದಿತ್ತು ಆಸೆಯ ಜೋಲಿ
ತೆರೆದಿತ್ತು ಹುಡಿಮಣ್ಣು ಹಾದಿ.

ನೀರಿಗೆ ಬಿದ್ದ ಹೆಣ್ಣು ಯಾರಿಗೂ ಹೇಳದೆಯೆ
ಆಗಿತ್ತು ಕೆರೆಗೆ ಆಹುತಿ.
ಹಾಲ ಕಾಣದ ಬದುಕು ಕುಡಿದಿತ್ತು ಕೆರೆಯನೆ;
ಅಲ್ಲಿತ್ತು ಅದರ ಸದ್ಗತಿ.

ಗಂಡ ಬಂದನು ಕಡೆಗೆ ನಡೆಬಂದ ಕಂಬದೊಲು;
ಹತ್ತು ಜನ ಅಲ್ಲೆ ಒದಗಿದರು.
ಬೆಂಕಿ ಹೆಣವನು ನುಂಗಿ ಬೆಂಬೂದಿಯಾಗಿರಲು,
ಉಳಿದವರು ಊರ ಸೇರಿದರು.

ನೀರು ಮುಗಿಸಿದ ಕಥೆಗೆ ಬೆಂಕಿ ಮಂಗಳ ಹಾಡಿ
ನಡೆದಿತ್ತು ದೈವ ಸಂಕಲ್ಪ.
ಇಂಥ ಬಾಳಿಗೆ ಸಾವೆ ನಂದನದ ಕೆರೆ-ಕೋಡಿ;
ಮಸಣದಲಿ ಮಾತ್ರ ಸುಖತಲ್ಪ.

ಹೆಣ್ಣು ಸತ್ತಳು ಏಕೆ? ನೆರೆಯ ನಿರ್ಭಾಗ್ಯರಿಗೆ
ಸಂಶಯದ ಮೇಲೆ ಸಂಶಯ.
ಕಾರಣದ ಬಂಗಾರ ಬೇಟೆ ಫಲಿಸದೆ ಕಡೆಗೆ
ಸತ್ತವಳ ಮೇಲೆ ಸಂಶಯ.

ಕಯ್ಯಾರ ಕೆರೆಗೆ ತಳ್ಳಿದನೆ ಮಡೆದಿಯನಿವನು?
ನ್ಯಾಯದಲಿ ತೀರ್ಪು: ನಿರ್ದೋಷಿ.
ಗದ್ದಲದ ಗಡಸು ನಾಲಗೆಯ ಗಂಡಲ್ಲಿವನು;
ಊರು ಕಂಡಂತೆ ಮಿತಭಾಷಿ.

ಸತ್ತವಳ ಮೇಲೆ ಸಂಶಯ -ಊರಿಗಿವನಂಥ
ಮಾದರಿಯ ಗಂಡ ಆಭರಣ.
ಸತ್ತವಳು ಇಳಿದು ಸತ್ಯವನೊದರುವಂತಿಲ್ಲ ;
ಸಂಗತಿಗೆ ಮೌನದಾವರಣ.

ನೀರಿಗೆ ಬಿದ್ದ ಹೆಣ್ಣ ಗಂಡನ ಹಣೆಯ ಮೇಲೆ
ಬಿಡುಗಡೆಯ ನಿರ್ಭಯದ ತಿಲಕ.
ಎದೆಯಲಿ ಏನೊ ಎಂತೊ, ತೋರುವ ಮುಖದ ಮೇಲೆ
ಎಷ್ಟೊಂದು ನೋವು, ನಾಟಕ!

ಸತ್ತಳು ಏಕೆ ಹೆಣ್ಣು (ಊರಿಗೆ ಇಲ್ಲ ಕಣ್ಣು):
ಅಂತು ಕೇಳಿದವನೊಬ್ಬ ಕುಂಟ.
ಸತ್ತರೆ ಏನು ನಷ್ಟ? ಕಾದಿದೆ ಬೇರೆ ಹೆಣ್ಣು;
ಇಂತು ಹೇಳಿದನೊಬ್ಬ ನಂಟ.

ಕನಿಕರದಿಂದ ಬಂದ ಕುರಿಯೊಂದು ನುಡಿದಿತ್ತು :
ಮುಂಗಿದಿತ್ತು ಹೆಣ್ಣ ಹಣೆ-ಬರಹ.
ಮಾನವ ಜನ್ಮಧಾರಿ ನರಿಯೊಂದು ನಕ್ಕಿತ್ತು :
ನೀರಿಗೆ ಜಾರಿ ಬಿದ್ದ ವಿಷಯ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಮ್ಮೆ ಹಾಡಿದ ಹಾಡು
Next post ಮನಕೆ ಕನ್ನಡಿಯಾದರೆ……

ಸಣ್ಣ ಕತೆ

  • ಆಮಿಷ

    ರಮಾ ಕುರ್ಚಿಯನ್ನೊರಗಿ ಕುಳಿತಿದ್ದಳು. ದುಃಖವೇ ಮೂರ್ತಿವೆತ್ತಂತೆ ಕುಳಿತಿದ್ದ ಅವಳ ಹೃದಯದಲ್ಲಿ ಭೀಕರ ಕೋಲಾಹಲ ನಡೆದಿತ್ತು. ಕಣ್ಣುಗಳು ಆಳಕ್ಕಿಳಿದಿದ್ದವು. ದೇಹದ ಅಣು ಅಣುವೂ ನೋವಿನಿಂದ ಮಿಡಿಯುತ್ತಿತ್ತು. "ತಾನೇಕೆ ದುಡುಕಿಬಿಟ್ಟೆ?… Read more…

  • ಮಲ್ಲೇಶಿಯ ನಲ್ಲೆಯರು

    ಹೇಮರಡ್ಡಿ ಪ್ರಭುಗಳು ಒಂದು ಊರಿನ ದೇಸಾಯರು. ಆ ಗ್ರಾಮದ ಉತ್ಪನ್ನವು ಆರೇಳು ಸಾವಿರ ರೂಪಾಯಿ ಇರುವದಲ್ಲದೆ ದೇಸಾಯರಿಗೆ ತೋಟ ಪಟ್ಟಿ ಮನೆಯ ಒಕ್ಕಲತನಗಳಿಂದಾದರೂ ಪ್ರಾಪ್ತಿಯು ಚನ್ನಾಗಿತ್ತು. ಅವರೊಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…