Home / ಕವನ / ಕವಿತೆ / ಪ್ರಾರ್‍ಥನೆ

ಪ್ರಾರ್‍ಥನೆ

ನಾನು ಯಾವ ನೆಲದಲ್ಲಾದರೂ ನಡೆದಾಡಲಿ
ನನ್ನ ಮಾತೃಭೂಮಿಯ ಮಣ್ಣವಾಸನೆಯೇ ಸೂಸಿಬರಲಿ
ನಾನು ಕಾಶ್ಮೀರ ಕಣಿವೆಯ ಸುವಾಸನೆ ಮೂಸಿರುವೆನು.
ದ್ವೇಷದ ವಿಷಗಾಳಿ ವರ್‍ಜವಾಗಿದೆ ನನಗೆ
ಸ್ಫೋಟಕ ಮದ್ದಿನ ಘಮಟು ವಾಸನೆ ಒಗ್ಗಲಾರದು
ನನಗೆ ಹಿಮಚ್ಛಾದಿತ ಹಿಮಾಲಯವೇ ಅಚ್ಚು ಮೆಚ್ಚು
ಆದರೂ ಅವರೇಕೆ ಹೇಳುತ್ತಿದ್ದಾರೆ?
ನನಗೆ ರಾಸ ಪರ್‍ವತವೇ ಪ್ರಿಯವೆಂದು.

ನಾನು ಹಜ್ ಯಾತ್ರೆ ಕೈಕೊಂಡರೂ
ಮದೀನಾದ ನೆಲದಲ್ಲಿ ಪ್ರಾರ್‍ಥಿಸಿದರೂ
ಭಾರತದ ಏಳೆಗಾಗಿಯೇ ಪ್ರಾರ್‍ಥಿಸುವೆನು.
ನನ್ನ ದೇಶದ ಸುಖ ಸಮೃದ್ಧಿಯನೇ ಬಯಸುವೆನು
ನನಗೆ ಆಡಲು ಮಡಿಲು ನೀಡಿದ
ನೀರು, ಆಹಾರ, ಗಾಳಿ ಕೊಟ್ಟು ಪೋಷಿಸಿದ
ಮಾತೃ ಭೂಮಿಯ ಶ್ರೇಯಸ್ಸು ಬಯಸುವೆ.
ನನ್ನ ದೇಹದ ಹನಿ ಹನಿ ರಕ್ತದಲ್ಲೂ
ಭಾರತದ ಹೆಸರೇ ಪ್ರತಿಧ್ವನಿಸುತ್ತಿರುತ್ತದೆ.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಗಡಿಯಾಚೆಯವಳೆಂದು?.

ನನ್ನ ದೇಶದಲ್ಲಿ ನಿರಂತರ ಹರಿಯುತ್ತಿವೆ
ಗಂಗೆ, ಯಮುನೆ, ಕೃಷ್ಣ, ಕಾವೇರಿಯರು
ಪ್ರೀತಿಯ ತಾಜಮಹಲು ನನ್ನ ದೇಶದಲ್ಲಿಯೇ ಇದೆ.
ಚಾರ್‌ಮಿನಾರ್, ಕುತುಬ್‌ ಮೀನಾರ್‌ಗಳು.
ಬದುಕಿರುವೆನು ನಾನು ಕಾಶೀ, ಮಥುರಾ
ಅಜ್ಮೀರ್‌ಬಾಬಾನ ಸೌಹಾರ್‍ದ ನೆಲೆಗಳಲ್ಲಿ
ಸೌಹಾರ್‍ದ ತಾಣ ಸುಂದರ ಹೂಬನ
ಪೋಷಿಸಿದವಳು ನಾನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಾನು ಕೋಮಲ ಹೂಗಳ ದ್ವೇಷಿಯೆಂದು?

ನಾನು ಲೋಕದ ಯಾವ
ಮೂಲೆಯಲ್ಲಾದರೂ ಕೊನೆಯುಸಿರೆಳೆಯಲಿ
ದೂರದಿಂದಲಾದರೂ ನನ್ನ ಭಾರತದ
ಗಡಿ ಕಾಣುತ್ತಿರಲಿ ಎಂದು ಬಯಸುವೆನು.
ಯಾವ ದೇಶದ ನೀರೇ ಕುಡಿಯಲಿ
ಪವಿತ್ರ ಝಂಝಂ ಸೇವಿಸಿದರೂ ಸಹ
ಅದರಲ್ಲಿ ಗಂಗೆಯ ಸ್ವಾದ ಹುಡುಕುವೆನು.
ಪ್ರಾರ್‍ಥನೆಗೆ ಕೈ ಎತ್ತಿದ ಪ್ರತಿ ಬಾರಿಯೂ
ನನ್ನ ದೇಶದ ಎಳ್ಗೆಯನೇ ಬಯಸುವೆನು.
ಆದರೂ ಅವರೇಕೆ ಹೇಳುತ್ತಿದ್ದಾರೆ
ನಿನ್ನ ಬದ್ಧತೆಯನ್ನು ಸಾಬೀತು ಪಡಿಸು ಎಂದು?
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...