Home / ಕವನ / ಕವಿತೆ / ಶಕ್ತಿ ಸಂಕೇತದ ಸೂಕಿ

ಶಕ್ತಿ ಸಂಕೇತದ ಸೂಕಿ

ಎರಡು ದಶಕದ ಜೈಲುವಾಸಕ್ಕೆ ಕೊನೆಯಾಯ್ತು
ಗೃಹಬಂಧನದ ಜೈಲಿನ ಗೋಡೆಗಳಿಗೆ
ಅಪ್ಪಳಿಸಿದ ನಿನ್ನ ಪ್ರಜಾಸತ್ತೆಯ ಧ್ವನಿ
ಮ್ಯಾನ್‌ಮಾರ್‌ನ ತುಂಬ ಪ್ರತಿಧ್ವನಿಸುತ್ತಿತ್ತು.

ಅರವತ್ತೈದರ ತೆಳ್ಳನ ದೇಹದಲ್ಲಿ
ಬಿರುಗಾಳಿಗೂ ಬಗ್ಗದ ಆತ್ಮವಿಶ್ವಾಸವಿತ್ತು.
ನೀಳ ದೇಹದಲ್ಲಿ ಸಾಗರದಷ್ಟು ಸಿಟ್ಟು
ಬಂದೂಕಿನ ನಳಿಕೆಗೂ ಹೆದರದ ಕೆಚ್ಚು
ಮುಖದಲಿ ಹೊಳೆವ ಪ್ರಶಾಂತ ಕಣ್ಣುಗಳು
ಮ್ಯಾನ್‌ಮಾರ್‌ನ ಭವಿಷ್ಯದ ಕಿರಣಗಳಾಗಿದ್ದವು.

ಮಿಲಿಟರಿ ಶಾಸನದಲಿ ರೆಕ್ಕೆ ಕತ್ತರಿಸಿದ
ಹಕ್ಕಿಯ ಚಡಪಡಿಕೆ ಪಂಜರದಲ್ಲಿತ್ತು.
ಮರಣಶಯ್ಯಯಲ್ಲಿರುವ ಪತಿಯ ಮುಖ
ನೋಡಲು ಬಿಡದ ಮಿಲಿಟರಿ ದಬ್ಬಾಳಿಕೆ
ಪತಿಯ ಅಂತಿಮ ಇಚ್ಛೆ ಪೂರೈಸಲು ಅಡ್ಡಿಯಾಯ್ತು.

ದಶಕಗಳೇ ಸಂದವಲ್ಲೇ ಸೂಕಿ
ಕರುಳ ಕುಡಿ ಮೊಮ್ಮಕ್ಕಳ ಮುಖನೋಡಿ
ಜನಶಕ್ತಿ ಕೇಂದ್ರವನು ಹಿಡಿದಿಡುವ
ಹುಚ್ಚು ಹುನ್ನಾರ ಮಿಲಿಟರಿ ಸರ್‍ಕಾರಕ್ಕೆ
ಅಂತಿಮ ತೀರ್‍ಮಾನದ ದಿನ
ಜನರೇ ವಹಿಸಿಕೊಳ್ಳುತ್ತಾರೆ ಅಧಿಕಾರ.

ಗಂಡ, ಮಕ್ಕಳಿಂದ ಅಗಲಿಸಿದ
ಪತಿಯ ಅಂತಿಮ ದರ್‍ಶನಕ್ಕೂ ಬಿಡದ,
ನೋಬಲ್‌ ಶಾಂತಿ ಪುರಸ್ಕಾರ
ಪಡೆಯಲೂ ಬಿಡದ ಆ
ಮಿಲಿಟರಿ ಸರ್‍ಕಾರವ ಸೋಲಿಸಿ
ಜೈಲಿನಲ್ಲಿದ್ದೇ ಚುನಾವಣೆಯ ಗೆದ್ದೆಯಲ್ಲೇ.

ಪ್ರಜಾಸತ್ತೆಯ ಚುನಾವಣೆಯಲ್ಲಿ
ಮ್ಯಾನ್‌ಮಾರ್‌ನ ಜನತೆ ಉತ್ತರಿಸಿದ್ದಾರೆ.
ಜೈಲಿನಲ್ಲಿದ್ದ ಸೂಕಿಗೆ ಗೆಲಿಸಿದ್ದಾರೆ.
ಮಿಲಿಟರಿ ಮಾಡಿದ ಅನ್ಯಾಯಕೆ
ಪ್ರತ್ಯುತ್ತರ ನೀಡಿ, ಎಚ್ಚರಿಸಿದ್ದಾರೆ.

ನಿನ್ನ ದೃಢ ನಿಲುವಿನ ಮುಂದೆ
ಮಂಡೆಯೂರಿನ ಮಿಲಿಟರಿ
ಬಂಧನದ ಬೇಡಿ ಕಳಚಿದಾಗ
ವಿಶ್ವದ ತುಂಬ ಸಂತೋಷದ ಲಹರಿ,
ಹಬ್ಬದ ಸಂಭ್ರಮ, ಸಿಡಿಲ ಮರಿಗೆ
ಹೃದಯ ತುಂಬಿದ ಸ್ವಾಗತ.

ಕಳಚಿ ಬಿದ್ದಿತು ಸರಳುಗಳ ಸರಪಳಿ
ಸೆರೆಮನೆಯ ಗೋಡೆಗಳು ಅದುರಿದವು
ಚೆಲ್ಲಾಪಿಲ್ಲಿಯಾದವು ಜನಶಕ್ತಿಯ ಮುಂದೆ
ಅಮೂಲ್ಯ ಬದುಕಿನ ಆ ಇಪ್ಪತ್ತು
ವರ್‍ಷಗಳ ಅಜ್ಞಾತವಾಸಕೆ,
ಮಕ್ಕಳಿಂದ, ಪತಿಯಿಂದ ಅಗಲಿಸಿದವರಿಗೆ
ಅವಳ ನಿಟ್ಟುಸಿರಿನ ಶಾಪ ತಟ್ಟದಿದ್ದೀತೆ?

ಜನರು ಮೈದಡವಿ ಮಾನವೀಯತೆಯ
ಬಿಗಿದಪ್ಪಿದರು ಭರವಸೆಯ ಬೆಳಕನು
ಇದು ಜನತೆಯ ಗೆಲುವು ನೋಡು
ಪ್ರಜಾಸತ್ತೆಯ ಉಳಿವು ಸತ್ಯವಾಯ್ತು,
ಸ್ವಾತಂತ್ರ ಹಕ್ಕಿಗೆ ಮುಕ್ತಿ ದೊರಕಿತು.

ಸೌಮ್ಯವಾದ ಶಾಂತ ಮುಖದಲ್ಲಿ
ಕಬ್ಬಿಣದಷ್ಟು ಕಠೋರ ನಿರ್‍ಧಾರ
ಒಡಲಾಳದಲ್ಲಿ ಅಸಹನೆಯ ಹೊಗೆ
ತುಟಿಯ ಮೇಲೆ ಮಾಸದ ಹೂನಗೆ
ಗುಬ್ಬಚ್ಚಿಯ ದೇಹದಲ್ಲಿ ಪರ್‍ವತದ ಆತ್ಮವಿಶ್ವಾಸ,
ಗುರಿ ಸಾಧಿಸುವವರೆಗೂ ನಿಲ್ಲದ ನಡಿಗೆ.

ಜಾಗತಿಕ ನೈತಿಕ ಕೊಂಡಿಗಳು
ಒಂದೊಂದೇ ಕಳಚಿ ಬೀಳುವ ಹೊತ್ತು
ಲೇಕ್‌ಸೈಡ್ ಮನೆಯಿಂದ ಹೊರಬಂದ
ಮೃದು ಮಾತಿನ ಒಡತಿ ಶಕ್ತಿ ಸಂಕೇತವಾಗಿ
ಭತ್ತದ ಉತ್ಸಾಹದ ಚಿಲುಮೆಯಾಗಿ
ಭರವಸೆಯ ಬೆಳಕಿನ ಚಿಗುರೆ ಕಂಗಳ
ಒಡತಿಗೆ ಕೊನೆಗೂ ದಕ್ಕಿತು ಮುಕ್ತಿ
*****
(ಸೂಕಿ ಗೃಹಬಂಧನದಿಂದ ಬಿಡುಗಡೆಯಾದ ದಿನ ಬರೆದ ಕವಿತೆ)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...