ಚಿಕುಹೂ

ಚಿಕುಹೂ ಚಿಕುಹೂ ಚಿಕುಹೂ-
ಸನ್ನೆಯವೊಲು ಮುಹುರ್ಮುುಹು
ಆರೆಚ್ಚರಕೀ ತುತ್ತುರಿ
ಬಾನೊಳು ಮೊಳಗುತ್ತಿದೆ?
ಎನ್ನ ಕಿವಿಯೊಳೀ ಸವಿ ದನಿ
ಸಿಂಪಿಸುತಿದೆ ಸೊದೆಸೀರ್ಪನಿ
ವಿಸ್ಮೃತಿಗೈದಿರುವಾತ್ಮವ-
ನುಜ್ಜೀವಿಪ ತೆರದೆ.

ದಿವಮರೆತಪ್ಸರೆ ಎಚ್ಚರೆ
ಅಗಲುವಳೆಂದಿಳೆ ಬೆಚ್ಚಿರೆ
ಹರಿಕಾರರನಮರಾವತಿ
ದೊರೆಯಟ್ಟಿಹನೆನಲು
ಈ ದನಿ ಬರೆ ಲಾಲಿಸುತದೆ
ಪಯಣಕೆ ಸಡಗರಗೊಳುತಿದೆ
ಮನ್ಮಾನಸ ಸರೋವರದ
ಕರಣಗಳಂಚಿನೊಳು.

ಚಿಕುವೂ ಚಿಕುವೂ ಚಿಕುವೂ-
ಕಂಪೆರಚಿದೆ ಈ ದನಿಹೂ
ರಸ ಸೂಸಿದೆ ಸ್ವಾಹಾ
ಎಂದುಜ್ವಲಿಸಲು ನೆನಹು
ನೋಡುತಲಿದ್ದರು ಕಾಣದು
ಆಲಿಸುತಿದ್ದರು ಕೇಳದು
ಸರ್ವೇಂದ್ರಿಯವಿದಕಾಗಿರೆ
ಪ್ರತ್ಯಕ್ಷವೆ ಮರಹು.

“ಬಂದಿರ ತಂದಿರ ಕೊಡುವಿರ
ಕೊಟ್ಟಿರ ಕೊಳುವಿರ ನಡೆವಿರ”-
ನಿಸ್ಸ್ನೇಹದ ಸಭ್ಯತೆಯೊಳು
ಈ ನಡೆವಳಿಯೆಲ್ಲಾ
ನಡೆಯುತ್ತಿವೆ ಹೊರಬಗೆಯೊಳು,
ಮನೆಯಾಚೆಯ ಗದ್ದಲದೊಲು;
ಯೋಗಕ್ಷೇಮದ ವೇದನೆ
ಇಂದೆನಗಿನಿತಿಲ್ಲ.

ಭವಿ ನಾ ತಾಪಸಿ ನಾನು
ಕವಿ ನಾ ಕಿಂಕರ ನಾನು
ನಾ ನಾ ಇದಕಿತಿಯೇನಿದೆ
ಮಿತಿಯೇನಿದೆ, ದನಿಯೇ,
ಥಟ್ಟನೆರಗಿ ಗರುಡನ ತೆರ
ಅಹಮೆಂಬೀ ನಿಧಿನಾಗರ-
ನೊಯ್ದಿಹೆನೀ ಮುದವಿದ್ಯುತ್-
ಸ್ಪರ್ಶವ ಮನ ಪಡೆಯೆ.

ಚಿಕುವೂ ಕುವ್ವೂ- ಏನ್ ಸವಿ!
ಒಂದೇ ಸರದೊಂದೇ ಛವಿ
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿವೆ ಸೈ
ಇದನು ಹಿಡಿದು ಬಿಡುವಾಟದಿ
ಋತುಋತು ಯುಗಯುಗವೂ.

ಈಯೆಡೆ ಆಯಡೆ ಬೇರಡೆ
ಬಿಡುವಿರುವೆಡೆ ಬಿಡುವಿರದೆಡೆ
ಒಲಿವೆಡೆ ನಲಿವೆಡೆ ಅಳುವೆಡೆ
ದೇಶವಿದೇಶದೊಳು
ಜನ್ಮದಿ ಜನ್ಮದಿ ನಾನಿದ
ಬಗೆಬಗೆಯೊಳು ಕೇಳಿದ ಹದ
ಇಂದೆಂತೆಯೊ ತೆರೆ ತರೆಯುತ
ತೋರಿದೆ ಹೃದಯದೊಳು-

“ಓ ಕೆಳೆಯಾ, ಮನೆ ನೆನೆಯಾ
ಬಿಡುಬಿಡು ಭವದೀ ಕೊನೆಯಾ
ದಿವ್ಯತೆಗೆಯೆ ಕಾಮಂಗೊಂ
ಡೆದೆ ಎರಕೆಯನೆರೆಯಾ”
ಎಂಬರ್ತಿಯ ಆರ್ತಸ್ವರ-
ವಿದು ಬಗೆಗೊಳೆ, ನಾ ಕಾತರ-
ಗೊಂಡೋಗುಟ್ಟುವೆ ನೆನೆನೆನೆ-
ದಾ ದೂರದ ಕರೆಯಾ.

ಚಿಕುವೂ ಕುವು ಕುವು ಟಿಇವೂ-
ಕಾರ ತಂಪು ಮಿಂಚ ಹೊಳಹು
ದಾಳಿಂಬೆಯ ರುಚಿ ಅಗಲಿದ
ಕಾದಲರೆದೆ ಕಾವು,
ಮಗು ತಾಯಿಗೆ, ಕವಿ ಚೆಲುವಿಗೆ,
ನನ್ನಿಗ ನನ್ನಿಗೆ, ಪರಮಗೆ
ಭಕ್ತರು ಹಂಬಲಿಸುವ ಬಗೆ
ಈ ಕೋಗಿಲೆಯುಲಿವು.

ದನಿಹಣ್ಣಿಂದಮೃತದ ರಸ
ತೊಟ್ಟಿಡಲಿಂತೆದೆ ತಾಮಸ-
ವುಳಿದುಜ್ವಲಿಸಿರೆ ಈ ಮಹ-
ದನುಭವಕೇನೆಂಬೆ?
ಈ ಶಾಶ್ವತ ರುತಿಗೊಂದಿದ
ಅಂದಂದಿನ ಸ್ಮೃತಿಯೋಲಿದ
ಪಿಡಿವಾನಂದದೊಳಾನಂ-
ತ್ಯವ ಮುಟ್ಟಿಹೆನೆಂಬೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಂಡೇಲನ ಬಂಧುಗಳು
Next post ಯಾಕೆ ನಿಂತಿ ಬೆರ್‍ಚಪ್ಪ

ಸಣ್ಣ ಕತೆ

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ನಿರೀಕ್ಷೆ

    ಆ ಹಣ್ಣು ಮುದುಕ ಎಲ್ಲಿಂದ ಬರುತ್ತಾನೆ, ಎಲ್ಲಿಗೆ ಹೋಗುತ್ತಾನೆ ಎಂದು ಯಾರಿಗೂ ತಿಳಿಯದು. ಆದರೆ ಎಲ್ಲರೂ ಅವನನ್ನು ಕಲ್ಲು ಬೆಂಚಿನ ಮುದುಕ ಎಂದೇ ಕರೆಯುತ್ತಾರೆ. ಪ್ರೈಮರಿ ಶಾಲೆಯ… Read more…

  • ಹನುಮಂತನ ಕಥೆ

    ಹರಿಹರಯದ ಆ ಸಂದರ ಹುಡುಗಿ ದಿನವೂ ಅರಳೀ ಕಟ್ಟೆಗೆ ಬಂದು ಯಾರಿಗಾಗಿ ಕಾಯುತ್ತಾಳೆ? ಎಂದು ಯೋಚಿಸುವಾಗ ಅವಳ ಪ್ರಿಯತಮ ಬಂದು ಕುಳಿತ. ಅವನು ಅವಳ ತೊಡೆ ಏರಿದ… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…