Home / ಕವನ / ಕವಿತೆ / ಚಿಕುಹೂ

ಚಿಕುಹೂ

ಚಿಕುಹೂ ಚಿಕುಹೂ ಚಿಕುಹೂ-
ಸನ್ನೆಯವೊಲು ಮುಹುರ್ಮುುಹು
ಆರೆಚ್ಚರಕೀ ತುತ್ತುರಿ
ಬಾನೊಳು ಮೊಳಗುತ್ತಿದೆ?
ಎನ್ನ ಕಿವಿಯೊಳೀ ಸವಿ ದನಿ
ಸಿಂಪಿಸುತಿದೆ ಸೊದೆಸೀರ್ಪನಿ
ವಿಸ್ಮೃತಿಗೈದಿರುವಾತ್ಮವ-
ನುಜ್ಜೀವಿಪ ತೆರದೆ.

ದಿವಮರೆತಪ್ಸರೆ ಎಚ್ಚರೆ
ಅಗಲುವಳೆಂದಿಳೆ ಬೆಚ್ಚಿರೆ
ಹರಿಕಾರರನಮರಾವತಿ
ದೊರೆಯಟ್ಟಿಹನೆನಲು
ಈ ದನಿ ಬರೆ ಲಾಲಿಸುತದೆ
ಪಯಣಕೆ ಸಡಗರಗೊಳುತಿದೆ
ಮನ್ಮಾನಸ ಸರೋವರದ
ಕರಣಗಳಂಚಿನೊಳು.

ಚಿಕುವೂ ಚಿಕುವೂ ಚಿಕುವೂ-
ಕಂಪೆರಚಿದೆ ಈ ದನಿಹೂ
ರಸ ಸೂಸಿದೆ ಸ್ವಾಹಾ
ಎಂದುಜ್ವಲಿಸಲು ನೆನಹು
ನೋಡುತಲಿದ್ದರು ಕಾಣದು
ಆಲಿಸುತಿದ್ದರು ಕೇಳದು
ಸರ್ವೇಂದ್ರಿಯವಿದಕಾಗಿರೆ
ಪ್ರತ್ಯಕ್ಷವೆ ಮರಹು.

“ಬಂದಿರ ತಂದಿರ ಕೊಡುವಿರ
ಕೊಟ್ಟಿರ ಕೊಳುವಿರ ನಡೆವಿರ”-
ನಿಸ್ಸ್ನೇಹದ ಸಭ್ಯತೆಯೊಳು
ಈ ನಡೆವಳಿಯೆಲ್ಲಾ
ನಡೆಯುತ್ತಿವೆ ಹೊರಬಗೆಯೊಳು,
ಮನೆಯಾಚೆಯ ಗದ್ದಲದೊಲು;
ಯೋಗಕ್ಷೇಮದ ವೇದನೆ
ಇಂದೆನಗಿನಿತಿಲ್ಲ.

ಭವಿ ನಾ ತಾಪಸಿ ನಾನು
ಕವಿ ನಾ ಕಿಂಕರ ನಾನು
ನಾ ನಾ ಇದಕಿತಿಯೇನಿದೆ
ಮಿತಿಯೇನಿದೆ, ದನಿಯೇ,
ಥಟ್ಟನೆರಗಿ ಗರುಡನ ತೆರ
ಅಹಮೆಂಬೀ ನಿಧಿನಾಗರ-
ನೊಯ್ದಿಹೆನೀ ಮುದವಿದ್ಯುತ್-
ಸ್ಪರ್ಶವ ಮನ ಪಡೆಯೆ.

ಚಿಕುವೂ ಕುವ್ವೂ- ಏನ್ ಸವಿ!
ಒಂದೇ ಸರದೊಂದೇ ಛವಿ
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿವೆ ಸೈ
ಇದನು ಹಿಡಿದು ಬಿಡುವಾಟದಿ
ಋತುಋತು ಯುಗಯುಗವೂ.

ಈಯೆಡೆ ಆಯಡೆ ಬೇರಡೆ
ಬಿಡುವಿರುವೆಡೆ ಬಿಡುವಿರದೆಡೆ
ಒಲಿವೆಡೆ ನಲಿವೆಡೆ ಅಳುವೆಡೆ
ದೇಶವಿದೇಶದೊಳು
ಜನ್ಮದಿ ಜನ್ಮದಿ ನಾನಿದ
ಬಗೆಬಗೆಯೊಳು ಕೇಳಿದ ಹದ
ಇಂದೆಂತೆಯೊ ತೆರೆ ತರೆಯುತ
ತೋರಿದೆ ಹೃದಯದೊಳು-

“ಓ ಕೆಳೆಯಾ, ಮನೆ ನೆನೆಯಾ
ಬಿಡುಬಿಡು ಭವದೀ ಕೊನೆಯಾ
ದಿವ್ಯತೆಗೆಯೆ ಕಾಮಂಗೊಂ
ಡೆದೆ ಎರಕೆಯನೆರೆಯಾ”
ಎಂಬರ್ತಿಯ ಆರ್ತಸ್ವರ-
ವಿದು ಬಗೆಗೊಳೆ, ನಾ ಕಾತರ-
ಗೊಂಡೋಗುಟ್ಟುವೆ ನೆನೆನೆನೆ-
ದಾ ದೂರದ ಕರೆಯಾ.

ಚಿಕುವೂ ಕುವು ಕುವು ಟಿಇವೂ-
ಕಾರ ತಂಪು ಮಿಂಚ ಹೊಳಹು
ದಾಳಿಂಬೆಯ ರುಚಿ ಅಗಲಿದ
ಕಾದಲರೆದೆ ಕಾವು,
ಮಗು ತಾಯಿಗೆ, ಕವಿ ಚೆಲುವಿಗೆ,
ನನ್ನಿಗ ನನ್ನಿಗೆ, ಪರಮಗೆ
ಭಕ್ತರು ಹಂಬಲಿಸುವ ಬಗೆ
ಈ ಕೋಗಿಲೆಯುಲಿವು.

ದನಿಹಣ್ಣಿಂದಮೃತದ ರಸ
ತೊಟ್ಟಿಡಲಿಂತೆದೆ ತಾಮಸ-
ವುಳಿದುಜ್ವಲಿಸಿರೆ ಈ ಮಹ-
ದನುಭವಕೇನೆಂಬೆ?
ಈ ಶಾಶ್ವತ ರುತಿಗೊಂದಿದ
ಅಂದಂದಿನ ಸ್ಮೃತಿಯೋಲಿದ
ಪಿಡಿವಾನಂದದೊಳಾನಂ-
ತ್ಯವ ಮುಟ್ಟಿಹೆನೆಂಬೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಂ ಎನ್ ಎಸ್ ರಾವ್