Home / ಕವನ / ಕವಿತೆ / ಚಿಕುಹೂ

ಚಿಕುಹೂ

ಚಿಕುಹೂ ಚಿಕುಹೂ ಚಿಕುಹೂ-
ಸನ್ನೆಯವೊಲು ಮುಹುರ್ಮುುಹು
ಆರೆಚ್ಚರಕೀ ತುತ್ತುರಿ
ಬಾನೊಳು ಮೊಳಗುತ್ತಿದೆ?
ಎನ್ನ ಕಿವಿಯೊಳೀ ಸವಿ ದನಿ
ಸಿಂಪಿಸುತಿದೆ ಸೊದೆಸೀರ್ಪನಿ
ವಿಸ್ಮೃತಿಗೈದಿರುವಾತ್ಮವ-
ನುಜ್ಜೀವಿಪ ತೆರದೆ.

ದಿವಮರೆತಪ್ಸರೆ ಎಚ್ಚರೆ
ಅಗಲುವಳೆಂದಿಳೆ ಬೆಚ್ಚಿರೆ
ಹರಿಕಾರರನಮರಾವತಿ
ದೊರೆಯಟ್ಟಿಹನೆನಲು
ಈ ದನಿ ಬರೆ ಲಾಲಿಸುತದೆ
ಪಯಣಕೆ ಸಡಗರಗೊಳುತಿದೆ
ಮನ್ಮಾನಸ ಸರೋವರದ
ಕರಣಗಳಂಚಿನೊಳು.

ಚಿಕುವೂ ಚಿಕುವೂ ಚಿಕುವೂ-
ಕಂಪೆರಚಿದೆ ಈ ದನಿಹೂ
ರಸ ಸೂಸಿದೆ ಸ್ವಾಹಾ
ಎಂದುಜ್ವಲಿಸಲು ನೆನಹು
ನೋಡುತಲಿದ್ದರು ಕಾಣದು
ಆಲಿಸುತಿದ್ದರು ಕೇಳದು
ಸರ್ವೇಂದ್ರಿಯವಿದಕಾಗಿರೆ
ಪ್ರತ್ಯಕ್ಷವೆ ಮರಹು.

“ಬಂದಿರ ತಂದಿರ ಕೊಡುವಿರ
ಕೊಟ್ಟಿರ ಕೊಳುವಿರ ನಡೆವಿರ”-
ನಿಸ್ಸ್ನೇಹದ ಸಭ್ಯತೆಯೊಳು
ಈ ನಡೆವಳಿಯೆಲ್ಲಾ
ನಡೆಯುತ್ತಿವೆ ಹೊರಬಗೆಯೊಳು,
ಮನೆಯಾಚೆಯ ಗದ್ದಲದೊಲು;
ಯೋಗಕ್ಷೇಮದ ವೇದನೆ
ಇಂದೆನಗಿನಿತಿಲ್ಲ.

ಭವಿ ನಾ ತಾಪಸಿ ನಾನು
ಕವಿ ನಾ ಕಿಂಕರ ನಾನು
ನಾ ನಾ ಇದಕಿತಿಯೇನಿದೆ
ಮಿತಿಯೇನಿದೆ, ದನಿಯೇ,
ಥಟ್ಟನೆರಗಿ ಗರುಡನ ತೆರ
ಅಹಮೆಂಬೀ ನಿಧಿನಾಗರ-
ನೊಯ್ದಿಹೆನೀ ಮುದವಿದ್ಯುತ್-
ಸ್ಪರ್ಶವ ಮನ ಪಡೆಯೆ.

ಚಿಕುವೂ ಕುವ್ವೂ- ಏನ್ ಸವಿ!
ಒಂದೇ ಸರದೊಂದೇ ಛವಿ
ಅಜರಾಮರವಿದು ಅಚ್ಚರಿ
ಪುರಾಣ ನೂತನವು
ಕೋಟಿ ಕೋಟಿ ಕೋಗಿಲೆ ಮೈ
ತರಗೆಲೆಯಂತುದುರಿವೆ ಸೈ
ಇದನು ಹಿಡಿದು ಬಿಡುವಾಟದಿ
ಋತುಋತು ಯುಗಯುಗವೂ.

ಈಯೆಡೆ ಆಯಡೆ ಬೇರಡೆ
ಬಿಡುವಿರುವೆಡೆ ಬಿಡುವಿರದೆಡೆ
ಒಲಿವೆಡೆ ನಲಿವೆಡೆ ಅಳುವೆಡೆ
ದೇಶವಿದೇಶದೊಳು
ಜನ್ಮದಿ ಜನ್ಮದಿ ನಾನಿದ
ಬಗೆಬಗೆಯೊಳು ಕೇಳಿದ ಹದ
ಇಂದೆಂತೆಯೊ ತೆರೆ ತರೆಯುತ
ತೋರಿದೆ ಹೃದಯದೊಳು-

“ಓ ಕೆಳೆಯಾ, ಮನೆ ನೆನೆಯಾ
ಬಿಡುಬಿಡು ಭವದೀ ಕೊನೆಯಾ
ದಿವ್ಯತೆಗೆಯೆ ಕಾಮಂಗೊಂ
ಡೆದೆ ಎರಕೆಯನೆರೆಯಾ”
ಎಂಬರ್ತಿಯ ಆರ್ತಸ್ವರ-
ವಿದು ಬಗೆಗೊಳೆ, ನಾ ಕಾತರ-
ಗೊಂಡೋಗುಟ್ಟುವೆ ನೆನೆನೆನೆ-
ದಾ ದೂರದ ಕರೆಯಾ.

ಚಿಕುವೂ ಕುವು ಕುವು ಟಿಇವೂ-
ಕಾರ ತಂಪು ಮಿಂಚ ಹೊಳಹು
ದಾಳಿಂಬೆಯ ರುಚಿ ಅಗಲಿದ
ಕಾದಲರೆದೆ ಕಾವು,
ಮಗು ತಾಯಿಗೆ, ಕವಿ ಚೆಲುವಿಗೆ,
ನನ್ನಿಗ ನನ್ನಿಗೆ, ಪರಮಗೆ
ಭಕ್ತರು ಹಂಬಲಿಸುವ ಬಗೆ
ಈ ಕೋಗಿಲೆಯುಲಿವು.

ದನಿಹಣ್ಣಿಂದಮೃತದ ರಸ
ತೊಟ್ಟಿಡಲಿಂತೆದೆ ತಾಮಸ-
ವುಳಿದುಜ್ವಲಿಸಿರೆ ಈ ಮಹ-
ದನುಭವಕೇನೆಂಬೆ?
ಈ ಶಾಶ್ವತ ರುತಿಗೊಂದಿದ
ಅಂದಂದಿನ ಸ್ಮೃತಿಯೋಲಿದ
ಪಿಡಿವಾನಂದದೊಳಾನಂ-
ತ್ಯವ ಮುಟ್ಟಿಹೆನೆಂಬೆ.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...