Home / ಕವನ / ಕವಿತೆ / ಕಾರ್ತೀಕ

ಕಾರ್ತೀಕ

ಕನಸಿಗರಿಗೆ ಮಾಸವೇಕ
ಕಣಸುತರುವ ಕಾರ್ತಿಈಕ!
ನಿಯತಿ ತನ್ನ ಬಿಡುವಿಗೆಂದು
ಮೀಸಲಿಡುವ ಕಾಲವಿಂದು.

ನಿಗಿ ನಿಗಿ ನಿಗಿ ನಗುವ ಹಗಲು,
ಝಗಿ ಝಗಿ ಝಗಿ ಝಗಿಸುವಿರಳು.
ಬಹು ಮನೋಜ್ಞ ಲಲಿತ ಮಧುರ-
ರಾಗ ರಚಿತ, ಭಗಣರುಚಿರ
ಭಾವದೀಪ್ತ ಸಂಧ್ಯೆ!-ಎಂತು
ನುಡಿವೆನಿದಿರ ಚೆಲುವ? ಕಂತು
ತನ್ನ ತೋಷಕಿರವುಗೊಡಲು
ತಾನೆ ಕುಂಚಿ ಹಿಡಿದನೆನಲೆ?

ಅತ್ತ ಇತ್ತ ಸುತ್ತ ಸುಳಿದು,
ಹರಳ ಚೆಲ್ಲಿ, ಹೊನ್ನ ಕಳೆದು,
ಹೋದಳೆನಲೆ ಆಪ್ಸರಸಿ
ಇನಿಯನರಸಲವಸರಿಸಿ?

ಅಗೋ ನೋಡು! ಗೊಲ್ಲ ಹುಡುಗ,
ಕೋಡ ತುದಿಯನೇರಿ ನಿಂತು,
ಸ್ಪರ್ಶಮಣಿಯ ಮಾಟದಂತೆ
ಸತ್ಯದಿಳೆಯು ಚೋದ್ಯವೆನಿಪ
ಸಂಜೆ ರವಿಯ ಸ್ವರ್ಣಕಾಂತಿ-
ಗೊಡ್ಡಿ ತನುವ, ಹೋ ಹೋ
ಎಂದು ಕುಣಿದು, ಮೇರುಗಿರಿಯ
ಶಿಖರವಡರಿ ವಿಹರಿಪಮರ-
ಕುವರನನ್ನೆ ಹೋಲುತಿಹನು!

ಇಗೋ! ಪುರಂಧ್ರಿ ಕಾಮ್ಯವಾದ
ಸೋಪಾನ ರಮ್ಯವಾದ
ಸರಸಿಯೊಳಗೆ, ಕಿರು ಕಿರುದೆರೆ,
ಮುಗಿಲ ರಂಗನೆರಚಿಯಾಡಿ,
ವೃದ್ಧಸಖನೆನೆಳೆಯರಂತೆ
ಗುಡಿಯ ನೆಲ ಗೇಲಿಮಾಡಿ,
ಗೆಲುವುಗೊಂಡು ನಲಿಯುತಿರಲು;
ನೀರಿಗೆಂದು ಬಂದ ಬಾಲೆ
ತನ್ನ ಕಾಲನಿಳಿಯಬಿಟ್ಟು,
ತಂದ ಕೊಡವ ಮುಳಗಿಸಿಟ್ಟು,
ಪಡುವದೆಸೆಗೆ ದಿಟ್ಟಿಯಟ್ಟಿ,
ಅಲ್ಲಿ ಸಂಜೆ ಮುಗಿಲನೊಳಗೆ-
ತನ್ನ ಹೃದಯದಾಳದಲ್ಲಿ
ಭಾವರಾಗದುಲ್ಬದಲ್ಲಿ
ತನಗೆ ತಾನು ತಿಳಿಯದಂತೆ
ರೂಪುಗೊಳ್ಳುವೊಲುಮೆಯಂತೆ-
ಮೆಲ್ಲ ಮೆಲ್ಲನೆ ಕಳೆಯಕೊಂಡು
ಸ್ಪಷ್ಟವಾಗುತ್ತಿರುವ ಚಂದ್ರ-
ಲೇಖೆಯನ್ನು ಕಂಡು, ಇಂದು
ಆವುದೋ ಕನಸಿಗಾಗಿ
ಆವದೋ ಬಯಕೆಗಾಗಿ
ಉತ್ಸೇಕಗೊಳ್ಳುತ್ತಿರುವ
ಬಗೆಯ ಚೆಂದವನ್ನು ನೋಡು!

ಒಡತಿ ಬರುವ ಬೇಹ ಕೊಡಲು
ಮಿಂಚಿ ಮುಂಚೆ ಹೋದಳೆನ್ನೆ,
ಪಡುವಲಾಚೆ ಸಂಜೆ ಸಾಗೆ,
ಜಗವೆ ನಿಶ್ಶಬ್ದಮಾಗೆ-
ಕೃತ್ತಿಕೆಗಳ ತಿಲಕವಿಟ್ಟು
ರೋಹಿಣಿ ಮೂಗುತಿಯ ತೊಟ್ಟು
ಮಾರ್ಗಶೀರ್ಷ ಪದಕ ಝಗಿಸೆ
ಪುನರ್ವಸವೆ ಕಾಂಚಿಯೆನಿಸೆ
ಮಿಕ್ಕ ಚುಕ್ಕಿ ಢಾಳಿನಿಂದ
ತನ್ನದೊಂದೆ ಠೀವಿಯಿಂದ
ಪೆರೆಯ ಸೊಡಲ ಬೆಳಕಿನಲ್ಲಿ
ಮಂದ ಮಂದ ಗಮನದಲ್ಲಿ
ಬಾನ ಸೆಜ್ಜೆಗೈತರುವ
ಇರುಳ ಚೆಲುವನೆಂತೊರೆವ!

ಇಂದು ಹುಣ್ಣಿಮೆಯ ಹಬ್ಬ,
ನಮ್ರ ಶುಭ್ರ ಚಂದ್ರಹಾಸ
ತಿರೆಯಿರವನು ನಾಕದೊಂದು
ಕನಸಿನೊಳಗೆ ತೇಲಿಸಿಹುದು.
ಅಗೋ! ಮೇಲೆ, ದೂರದಲ್ಲಿ-
ಚಕ್ರವಾಳದಂತರದೊಳು,
ಲೆಕ್ಕವಿಲ್ಲದಷ್ಟು ಸೊಡರ
ಹೊನ್ನ ಹೊಗರ ದಳಗಳಿಂದ,
ಗೋಪುರಾಂತ ದೀಪ್ತವಾಗಿ
ಮಲೆಯ ತದಿಯ ಗುಡಿ ಅದೊಂದೆ
ಕಾಣತಿಹುದು ಮೂಡಲೊಳಗೆ
ಬೆಳುದಿಂಗಳ ಪಾಲ್ಗಡಲೊಳು-
ಮುನ್ನ ಅವ್ಯಕ್ತದಿಂದ
ಘನಶ್ಯಾಮನಾಭಿಯಿಂದ
ಮೊಳೆದುತಂದೆ ಬಿರಿಯಲಿರುವ
ಶತ ಶತ ದಳ ಕಮಲದಂತೆ.

ರವಿಲೋಕ ಪ್ರಜೆಗಳಿಂತು
ಹರಕೆ ಹೊತ್ತು ಪರಿಸೆಗೊಂಡು
ಜಾತ್ರೆಯಾಗಿ ಇಳಿದು ಬಂದು
ಗುಡಿಯೊಳಿಂತು ನೆರೆದರೆನಲು-
ಎಲ್ಲೆಲ್ಲು,- ಹೊಸಿಲ ಮೇಲೆ
ಗೂಡಿನೊಳಗೆ ಜಗುಲಿ ಮೇಲೆ
ಕೈಸಾಲೆ ಕಂಬದಲ್ಲಿ
ಹಂತದಲ್ಲಿ ಗುಳಿಗಳಲ್ಲಿ
ಬೃಂದಾವನದ ಸುತ್ತ
ದೇವನಿದಿರು ಸುತ್ತಮುತ್ತ
ಸೊಡಲಮಲ್ಲಿಯಂಜಲಿಯೊಳು
ರಂಗವಲ್ಲಿಯಾರತಿಯೊಳು,
ತೂಗಿ ಬಾಗಿ ಕುಡಿಯ ಮೆರೆಸಿ
ಇದೇ ಸುವರ್ಲೋಕಮೆನಿಸಿ
ಬೆಳಗುತಿಹುದು ದೀಪಮಾಲೆ.

ಉಚ್ಚನೆನದೆ ನೀಚನೆನದೆ
ಪೌರವೃದ್ದರೊಂದುಗೂಡಿ,
ಅಂಜಲಿಯೊಳು ಹಣತೆಯಾಂತು,
ಮಂತ್ರಪೂತ ಆಜ್ಯದೀಪ.
ದಾರತಿಯನು ಮುಂದೆ ಕೊಂಡು,
ವೇದಘೋಷ ಘೋ ಎನ್ನೆ,
ಘಂಟಾರವ ಶಿವೋಮೆನ್ನೆ,
ಶಂಖಸ್ವನ ಮೊಗೆಯುತಿರಲು,
ದುಂದುಭಿಗಳು ಮೊಳಗುತಿರಲು,
ತಾಳ ಮೇಳ ಮೇಳವಿಸೆ-
ತನ್ನ ಸತ್ವವರಿವ ಜೀವ
ಮುಕ್ತಿಯಂತ್ಯ ನಿವೇದನವ
ಹಾ ಹೂ ಗಾನದೊಡನೆ
ಇಂತೆ ಸಲಿಪುದೆನ್ನುವಂತೆ –
ದೇವ ದೇವನಡಿಮಲರೊಳು
ಸೊಡಲ ಸಲಿಸಿ ದೀಪವೆತ್ತೆ;

ಗುಡಿಯ ಹೊರಗೆ ಉತ್ಸವದೊಳು
ಬಿಜಯಗೈವ ದೇವನಿದಿರು,
ತೈಲಸಿಕ್ತ ನೂತ್ನ ವಸನ-
ದಾಲಂಬದಲ್ಲಿ ಅಗ್ನಿ –
ತನ್ನ ತನುವನುರೆ ತಾಪಿಸಿ
ಆತ್ಮತೇಜವುದ್ದೀಪಿಸಿ
ನಿರ್ವಾಣಕ್ಕೆ ಮನಮಾಡುವ
ಪರಮ ಯೋಗಿಯಾತ್ಮದಂತೆ-
ಉಜ್ವಲಿಸಿ ಪ್ರಜ್ಜ್ವಲಿಸಿ
ಗೋಪುರಾಗ್ರಗಾಮಿಯಾಗಿ
ನೀಲ ಗಗನತಲವ ಮುಟ್ಟಿ
ತಲ್ಲೀನನಾಗುತಿರಲು;

ಸೋಜಿಗವನ್ನು ನೋಡಿ ನೋಡಿ
ಧನ್ಯ ಭಾವವಡೆದು ಮಂದಿ-
ದೀಪದರ್ಶನಾನಂದಿ-
ಭಾವಮಾತ್ರರಾಗುತ್ತಿರುವ
ಪರಿಯನೆಂತು ನಾವೇಳ್ವೆ!

ದಿಟ ದಿಟ ದಿಟ ಕಾರ್ತೀಕ
ಕನಸಿಗರಿಗೆ ಮಾಸವೇಕ!
ದೀಪದೀಪ್ತ ಕಾರ್ತೀಕ
ಜ್ಯೋತಿರ್ಮಯ ಕಾರ್ತೀಕ
ಆಸ್ತೀಕ ಕಾರ್ತೀಕ!
*****

Tagged:

Leave a Reply

Your email address will not be published. Required fields are marked *

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...