Home / ಕವನ / ಕವಿತೆ / ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ
ಹೃದಯಸ್ವರಂ,
ಹೃದಯದಲಿ ಕಲುಕುತಿದೆ
ವಿರಹಜ್ವರಂ;
ಎತ್ತ ನಡೆದವನೆಂದು
ಮತ್ತೆನಗೆ ಬಹನೆಂದು
ಮನಸಿನೋಪಂ,
ಬಾಗಿಲೊಳೆ ನಿಲುಕುತಿದೆ
ನಯನ ದೀಪಂ.

ಮರಳುವೊಸಗೆಯ ಬೀರಿ
ಗುಡುಗು ಮೊಳಗೆ,
ಮನೆಯ ದಾರಿಯ ತೋರಿ
ಮಿಂಚು ತೊಳಗೆ,
ಬಂದರೆಲ್ಲಿದರೆಲ್ಲ,
ನೀನನಿತೆ ಬಂದಿಲ್ಲ
ವೇಕೆ ನಲ್ಲ?
ಮುಗಿಲ ಸಜ್ಜೆಯ ಭೇರಿ
ಕೇಳಿಸಿಲ್ಲ?

ಬಸಿರೊಳೆಮ್ಮಯ ಕೂಸು
ಬಂದಂದಿನಿಂ,
ನವಿಲ ಮದುವೆಯ ಲೇಸು
ಸಂದಂದಿನಿಂ,
ತೆರಳಿನ್ನು ಮರಳಿಲ್ಲ;
ನಿನ್ನೊಸಗೆ ನನಗಿಲ್ಲ
ದೊಲೆವೆನಿಲ್ಲಿ,
ಗೂಡುಬೆಳಕೊಲು ಬೀಸು
ವಿರುಳಿನಲ್ಲಿ.

ಹಾಲನೂಡಿಸೆ ಹುಬ್ಬೆ
ಹಸುಳೆ ತೆನೆಗೆ,
ಬತ್ತಿದೆದೆಯಕಟ್ಟಬ್ಬೆ
ಗಿಹುದೆ ನನಗೆ?
ನುಡಿಗೆ ನುಡಿ ಮೂಡಿಲ್ಲ,
ಮಗುವಿನಡಿ ಕೂಡಿಲ್ಲ
ದನಿತರೊಳಗೆ
ಸೆಳೆದಳದನಿಳೆ ತಬ್ಬೆ
ತನ್ನ ಬಳಿಗೆ.
* * * *

ಎದೆಯ ಬಯಕೆಯ ಗನಿಯೊ
ಳೊಗೆದ ರನ್ನ
ಎವೆಯನೊಲ್ಲದ ಹನಿಯೊ
ಲುದುರಿತೆನ್ನ!
ಇಲ್ಲಿ ನೀನಿರೆ, ನಲ್ಲ,
ಅಂತಾಗುತಿರಲಿಲ್ಲ-
ಇನನಿಲ್ಲದೆ
ಕಮಲಮದು ಕಮಲಿನಿಯೊ
ಳಿರಬಲ್ಲುದೆ?

ಬರದಿ ನೀರಗೆವಲ್ಲಿ
ನಿಧಿಯನೆಟಕಿ
ಪಡೆದಣುಗನೊಗೆದಲ್ಲಿ
ವಿಧಿಯ ಕಟಕಿ
ಗಿಡುಗನೆನೆ ಮರಿಗಿಳಿಯ
ತುಡುಗೆ ನೀನಿರೆ ಬಳಿಯ
ಲಿಂದು, ನಲ್ಲ,
ಚಿಲಿಮಿಲಿವ ಗೂಡಲ್ಲಿ
ಮೌನವಲ್ಲ!

ಬಳ್ಳಿಗೆಲ್ಲವ ಸಲ್ಲಿ
ಸುವಳೆ ಧರಣಿ?
ಬೆಳಕವಳಿಗಕಟೆಲ್ಲಿ
ತರದೆ ತರಣಿ?
ಧರಣಿಯಕ್ಕರೆ ಸವಿಸೆ,
ತರಣಿ ಮೋರೆಯನವಿಸೆ,
ಬಳ್ಳಿ ತಾರೆ,
ತಂದೆ ತಾಯವರಲ್ಲಿ
ಯಾರ ದೂರೆ?

ಕುರುಡನರಗನಸಂತೆ
ಬಗೆದು ಬೇಯೆ,
ಗರಿಮುರಿದ ಖಗದಂತೆ
ನೆಗೆದು ನೋಯೆ,
ನನ್ನ ಬಾಳಕಟಿನಿಸೆ?
ಹಣ್ಣು ಹುಳುವಿನ ತಿನಿಸೆ?
ಎದೆಯ ತಿರುಳು
ಕೊರೆಯೆ ಸೋರುವ ಚಿಂತೆ
ಹಗಲು ಇರುಳು!
* * * *

ಸರಿದೊಮ್ಮೆ ಬರಸಲ್ಲ
ದಲರಿನಳಿವೊ?
ಸರಿದಂತೆ ಬರಬಲ್ಲ
ಉಡುವಿನಿಳಿವೊ?
ಮರುತರಂಗಿಪ ತೆರೆಯೊ?
ಹುಳು ಪತಂಗಿಪ ಸೆರೆಯೊ?
ಮರಳಿ ಚನ್ನ
ಬಹನೆ, ಬಾರನೆ, ನಲ್ಲ,
ಬಸಿರೊಳೆನ್ನ?

ಎಳೆಯೊಳಿಂಗಿದ ಗೀತಿ
ಮಾರುಲಿಸದೆ,
ಸೊಡರೊಳಾರಿದ ಜ್ಯೋತಿ
ಮಾರುರಿಸದೆ,
ಮರುಕಣಿಸಲೆಂತೆರೆಯ?
ಮರಳಿ ಮುದ್ದಿನ ಮರಿಯ
ನಳವೆ ದೊರೆಯೆ?
ಮುತ್ತು ಮೊಳೆವುದೆ ಸ್ವಾತಿ
ಗಿರಿಯೊಳೆರೆಯೆ?

ಕೋರಿಕೆಯೊಳಡಿಮೆಟ್ಟಿ
ಮುಂದೆ ಪಾರೆ,
ಶಂಕೆ ಹಾವಸೆಗಟ್ಟಿ
ಮನಸು ಜಾರೆ,
ಮೇದ ಮೇವನೆ ಮೇವ
ಕಟ್ಟು ಕಂಬದ ಗೋವ
ತೆರದೊಳೆನ್ನ
ನೆನದ ನೆನವೊಳೆ ದಿಟ್ಟಿ
ಗೊಳುವೆ ನಿನ್ನ.

ಬಲೆಯ ನೀರಲಿ ಸುತ್ತ
ಬರುವ ತನ್ನ
ನೆಳಲನಿನೆಯಂ ಗೆತ್ತ
ಮೀನೊಲೆನ್ನ
ಮನದಿ ಸುಳಿಯುವ ನಿನ್ನ
ನೆನವೆ ನೀನೆನುತೆನ್ನ
ದಿನವ ಕಳೆವೆ-
ಕರೆ ಎತ್ತ ತೆರೆಯತ್ತ
ಮರಳದೊಳವೆ?
*****

Tagged:

Leave a Reply

Your email address will not be published. Required fields are marked *

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...

ದೀಪಾವಳಿಯ ಸೂಟಿಯನ್ನು ಕಳೆಯಲು ಊರಿಗೆ ಹೋಗಿದ್ದೆ. ಹಳ್ಳಿಗೆ ಹೋದಾಗೆಲ್ಲ ಕತೆಯ ಸುಬ್ಬಣ್ಣನ ಮನೆಗೆ ಹೋಗದಿದ್ದರೆ ನನ್ನ ಮನಸ್ಸು ಕೇಳುವದಿಲ್ಲ. ಊರಿಗೆ ಬಂದು ತನ್ನ ಮನೆಗೆ ಬರದಿದ್ದರೆ ಸುಬ್ಬಣ್ಣ ಬಿಡುತ್ತಾನೇ? ಅವನ ಆಮಂತ್ರಣ ಬರುವ ಮುಂಚೆಯೇ ಹೋಗುವದು ಉಚಿತವೆಂದು ತೋರಿತು. ಅವನ ಕತೆ ಕೇ...

ಒಂದು ತಿಂಗಳ ಮಗು ಹೆನ್ರಿ ನೋಡಲು ಬಲು ಮುದ್ದಾಗಿದ್ದ. ಸೇಬಿನ ಕೆನ್ನೆಗಳು, ದೊಡ್ಡ ಕಪ್ಪು ಕಣ್ಣುಗಳು, ತಲೆಯಲ್ಲಿ ಕೆಂಚು ಕೂದಲು, ನೀಳ ಮೂಗು, ಮುದ್ದಾದ ಪುಟ್ಟ ಬಾಯಿ, ನೋಡಿದೊಡನೆ ಹೇಳಬಹುದಿತ್ತು ಆ ಮಗು ಬ್ರಿಟಿಷ್ ತಂದೆ ತಾಯಿಗೆ ಹುಟ್ಟಿದವನೆಂದು. ತಂದೆ ಸ್ಮಿಥ್ ಮತ್ತು ತಾಯಿ ಮೇರಿಗೆ...

ಕೊನೆಗೊಮ್ಮೆ ಶಂಕರ ಹೂಂಗುಟ್ಟಲೇಬೇಕಾಯಿತು. “ಹುಡುಗಿ ಮನಸ್ಸಿಗೆ ಬಂದರೆ ಮಾತ್ರ ಆಗಿ. ಈ ವಿಷಯದಲ್ಲಿ ಒತ್ತಾಯಮಾಡಬರುತ್ತದೆಯೇ?” ಎಂದು ಶಿವರಾಮ ಹೆಗಡೆಯವರು ಶಂಕರನನ್ನು ಹೊರಡಿಸಿದರು. ದಾರಿಯುದ್ದಕ್ಕೂ ಹೆಗಡೆಯವರು ತಮ್ಮ ಮಗಳ ಗುಣಗಾನವನ್ನು ಪ್ರಸ್ತುತ ಅಪ್ರಸ್ತುತ ಪ್ರಶಂಸೆಗಳಿಂದ...

ಅಡಿಗೆಯ ಮನೆಯಿಂದ ಉಮೆಯು ಓಡಿ ಬಂದು “ನೀರಿನ ಕೊಡದ ಬಳಿಗೆ ಒಂದು ಕಪ್ಪೆ ಕುಳಿತಿದೆ. ಹೊರಗೆ ಹಾಕಿ ಕೊಡಿ” ಅಂದಳು. ತನಗೆ ಹೆದರದವಳು ಒಂದು ಕಪ್ಪೆಗೆ ಅಂಜುತ್ತಾಳಲ್ಲ ಅಂದುಕೊಂಡು ಉಮೇಶ ಒಳಗೆ ಬಂದ. ಕಪ್ಪೆಯು ಭದ್ರಾಸನ ಹಾಕಿತ್ತು. ಉಮೇಶ ಒಂದು ಸೌದೆಯಿಂದ ಕೊಡವನ್ನು ಕುಟ್ಟಿ...

ಹೊಲದ ಬದುವಿನ ಮೇಲೆ ಸಿದ್ದವ್ವ ಕುಳಿತಿದ್ದಳು. ಬಿಳಿ ಜ್ವಾಳದ ತೆನೆಗಳ ಮೇಲೆ ಹಾಯ್ದ ಗಾಳಿ ಒಂದೇ ಸಮನೆ ಬೀಸುತ್ತಿತ್ತು. ಇದೇ ಹೊಲದಲ್ಲಿ ತಾನು ಬಾಲ್ಯವನ್ನೆಲ್ಲಾ ಕಳೆದದ್ದು ನೆನಪಾಗಿ ಎಂಬತ್ತೈದರ ಸಿದ್ದವ್ವಳಿಗೆ ಮೈಯಲ್ಲಿ ಹರೆಯ ಉಕ್ಕಿ ಬಂದಂಗೆ ಆಯ್ತು. ತನ್ನ ಸೊರಗಿ ತೆಳುವಾದ ಕೈ ಕಾಲು...