Home / ಕವನ / ಕವಿತೆ / ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ
ಹೃದಯಸ್ವರಂ,
ಹೃದಯದಲಿ ಕಲುಕುತಿದೆ
ವಿರಹಜ್ವರಂ;
ಎತ್ತ ನಡೆದವನೆಂದು
ಮತ್ತೆನಗೆ ಬಹನೆಂದು
ಮನಸಿನೋಪಂ,
ಬಾಗಿಲೊಳೆ ನಿಲುಕುತಿದೆ
ನಯನ ದೀಪಂ.

ಮರಳುವೊಸಗೆಯ ಬೀರಿ
ಗುಡುಗು ಮೊಳಗೆ,
ಮನೆಯ ದಾರಿಯ ತೋರಿ
ಮಿಂಚು ತೊಳಗೆ,
ಬಂದರೆಲ್ಲಿದರೆಲ್ಲ,
ನೀನನಿತೆ ಬಂದಿಲ್ಲ
ವೇಕೆ ನಲ್ಲ?
ಮುಗಿಲ ಸಜ್ಜೆಯ ಭೇರಿ
ಕೇಳಿಸಿಲ್ಲ?

ಬಸಿರೊಳೆಮ್ಮಯ ಕೂಸು
ಬಂದಂದಿನಿಂ,
ನವಿಲ ಮದುವೆಯ ಲೇಸು
ಸಂದಂದಿನಿಂ,
ತೆರಳಿನ್ನು ಮರಳಿಲ್ಲ;
ನಿನ್ನೊಸಗೆ ನನಗಿಲ್ಲ
ದೊಲೆವೆನಿಲ್ಲಿ,
ಗೂಡುಬೆಳಕೊಲು ಬೀಸು
ವಿರುಳಿನಲ್ಲಿ.

ಹಾಲನೂಡಿಸೆ ಹುಬ್ಬೆ
ಹಸುಳೆ ತೆನೆಗೆ,
ಬತ್ತಿದೆದೆಯಕಟ್ಟಬ್ಬೆ
ಗಿಹುದೆ ನನಗೆ?
ನುಡಿಗೆ ನುಡಿ ಮೂಡಿಲ್ಲ,
ಮಗುವಿನಡಿ ಕೂಡಿಲ್ಲ
ದನಿತರೊಳಗೆ
ಸೆಳೆದಳದನಿಳೆ ತಬ್ಬೆ
ತನ್ನ ಬಳಿಗೆ.
* * * *

ಎದೆಯ ಬಯಕೆಯ ಗನಿಯೊ
ಳೊಗೆದ ರನ್ನ
ಎವೆಯನೊಲ್ಲದ ಹನಿಯೊ
ಲುದುರಿತೆನ್ನ!
ಇಲ್ಲಿ ನೀನಿರೆ, ನಲ್ಲ,
ಅಂತಾಗುತಿರಲಿಲ್ಲ-
ಇನನಿಲ್ಲದೆ
ಕಮಲಮದು ಕಮಲಿನಿಯೊ
ಳಿರಬಲ್ಲುದೆ?

ಬರದಿ ನೀರಗೆವಲ್ಲಿ
ನಿಧಿಯನೆಟಕಿ
ಪಡೆದಣುಗನೊಗೆದಲ್ಲಿ
ವಿಧಿಯ ಕಟಕಿ
ಗಿಡುಗನೆನೆ ಮರಿಗಿಳಿಯ
ತುಡುಗೆ ನೀನಿರೆ ಬಳಿಯ
ಲಿಂದು, ನಲ್ಲ,
ಚಿಲಿಮಿಲಿವ ಗೂಡಲ್ಲಿ
ಮೌನವಲ್ಲ!

ಬಳ್ಳಿಗೆಲ್ಲವ ಸಲ್ಲಿ
ಸುವಳೆ ಧರಣಿ?
ಬೆಳಕವಳಿಗಕಟೆಲ್ಲಿ
ತರದೆ ತರಣಿ?
ಧರಣಿಯಕ್ಕರೆ ಸವಿಸೆ,
ತರಣಿ ಮೋರೆಯನವಿಸೆ,
ಬಳ್ಳಿ ತಾರೆ,
ತಂದೆ ತಾಯವರಲ್ಲಿ
ಯಾರ ದೂರೆ?

ಕುರುಡನರಗನಸಂತೆ
ಬಗೆದು ಬೇಯೆ,
ಗರಿಮುರಿದ ಖಗದಂತೆ
ನೆಗೆದು ನೋಯೆ,
ನನ್ನ ಬಾಳಕಟಿನಿಸೆ?
ಹಣ್ಣು ಹುಳುವಿನ ತಿನಿಸೆ?
ಎದೆಯ ತಿರುಳು
ಕೊರೆಯೆ ಸೋರುವ ಚಿಂತೆ
ಹಗಲು ಇರುಳು!
* * * *

ಸರಿದೊಮ್ಮೆ ಬರಸಲ್ಲ
ದಲರಿನಳಿವೊ?
ಸರಿದಂತೆ ಬರಬಲ್ಲ
ಉಡುವಿನಿಳಿವೊ?
ಮರುತರಂಗಿಪ ತೆರೆಯೊ?
ಹುಳು ಪತಂಗಿಪ ಸೆರೆಯೊ?
ಮರಳಿ ಚನ್ನ
ಬಹನೆ, ಬಾರನೆ, ನಲ್ಲ,
ಬಸಿರೊಳೆನ್ನ?

ಎಳೆಯೊಳಿಂಗಿದ ಗೀತಿ
ಮಾರುಲಿಸದೆ,
ಸೊಡರೊಳಾರಿದ ಜ್ಯೋತಿ
ಮಾರುರಿಸದೆ,
ಮರುಕಣಿಸಲೆಂತೆರೆಯ?
ಮರಳಿ ಮುದ್ದಿನ ಮರಿಯ
ನಳವೆ ದೊರೆಯೆ?
ಮುತ್ತು ಮೊಳೆವುದೆ ಸ್ವಾತಿ
ಗಿರಿಯೊಳೆರೆಯೆ?

ಕೋರಿಕೆಯೊಳಡಿಮೆಟ್ಟಿ
ಮುಂದೆ ಪಾರೆ,
ಶಂಕೆ ಹಾವಸೆಗಟ್ಟಿ
ಮನಸು ಜಾರೆ,
ಮೇದ ಮೇವನೆ ಮೇವ
ಕಟ್ಟು ಕಂಬದ ಗೋವ
ತೆರದೊಳೆನ್ನ
ನೆನದ ನೆನವೊಳೆ ದಿಟ್ಟಿ
ಗೊಳುವೆ ನಿನ್ನ.

ಬಲೆಯ ನೀರಲಿ ಸುತ್ತ
ಬರುವ ತನ್ನ
ನೆಳಲನಿನೆಯಂ ಗೆತ್ತ
ಮೀನೊಲೆನ್ನ
ಮನದಿ ಸುಳಿಯುವ ನಿನ್ನ
ನೆನವೆ ನೀನೆನುತೆನ್ನ
ದಿನವ ಕಳೆವೆ-
ಕರೆ ಎತ್ತ ತೆರೆಯತ್ತ
ಮರಳದೊಳವೆ?
*****

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...