Home / ಕವನ / ಕವಿತೆ / ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ

ಸರಿಗೆಯಲಿ ಸಿಲುಕುತಿದೆ
ಹೃದಯಸ್ವರಂ,
ಹೃದಯದಲಿ ಕಲುಕುತಿದೆ
ವಿರಹಜ್ವರಂ;
ಎತ್ತ ನಡೆದವನೆಂದು
ಮತ್ತೆನಗೆ ಬಹನೆಂದು
ಮನಸಿನೋಪಂ,
ಬಾಗಿಲೊಳೆ ನಿಲುಕುತಿದೆ
ನಯನ ದೀಪಂ.

ಮರಳುವೊಸಗೆಯ ಬೀರಿ
ಗುಡುಗು ಮೊಳಗೆ,
ಮನೆಯ ದಾರಿಯ ತೋರಿ
ಮಿಂಚು ತೊಳಗೆ,
ಬಂದರೆಲ್ಲಿದರೆಲ್ಲ,
ನೀನನಿತೆ ಬಂದಿಲ್ಲ
ವೇಕೆ ನಲ್ಲ?
ಮುಗಿಲ ಸಜ್ಜೆಯ ಭೇರಿ
ಕೇಳಿಸಿಲ್ಲ?

ಬಸಿರೊಳೆಮ್ಮಯ ಕೂಸು
ಬಂದಂದಿನಿಂ,
ನವಿಲ ಮದುವೆಯ ಲೇಸು
ಸಂದಂದಿನಿಂ,
ತೆರಳಿನ್ನು ಮರಳಿಲ್ಲ;
ನಿನ್ನೊಸಗೆ ನನಗಿಲ್ಲ
ದೊಲೆವೆನಿಲ್ಲಿ,
ಗೂಡುಬೆಳಕೊಲು ಬೀಸು
ವಿರುಳಿನಲ್ಲಿ.

ಹಾಲನೂಡಿಸೆ ಹುಬ್ಬೆ
ಹಸುಳೆ ತೆನೆಗೆ,
ಬತ್ತಿದೆದೆಯಕಟ್ಟಬ್ಬೆ
ಗಿಹುದೆ ನನಗೆ?
ನುಡಿಗೆ ನುಡಿ ಮೂಡಿಲ್ಲ,
ಮಗುವಿನಡಿ ಕೂಡಿಲ್ಲ
ದನಿತರೊಳಗೆ
ಸೆಳೆದಳದನಿಳೆ ತಬ್ಬೆ
ತನ್ನ ಬಳಿಗೆ.
* * * *

ಎದೆಯ ಬಯಕೆಯ ಗನಿಯೊ
ಳೊಗೆದ ರನ್ನ
ಎವೆಯನೊಲ್ಲದ ಹನಿಯೊ
ಲುದುರಿತೆನ್ನ!
ಇಲ್ಲಿ ನೀನಿರೆ, ನಲ್ಲ,
ಅಂತಾಗುತಿರಲಿಲ್ಲ-
ಇನನಿಲ್ಲದೆ
ಕಮಲಮದು ಕಮಲಿನಿಯೊ
ಳಿರಬಲ್ಲುದೆ?

ಬರದಿ ನೀರಗೆವಲ್ಲಿ
ನಿಧಿಯನೆಟಕಿ
ಪಡೆದಣುಗನೊಗೆದಲ್ಲಿ
ವಿಧಿಯ ಕಟಕಿ
ಗಿಡುಗನೆನೆ ಮರಿಗಿಳಿಯ
ತುಡುಗೆ ನೀನಿರೆ ಬಳಿಯ
ಲಿಂದು, ನಲ್ಲ,
ಚಿಲಿಮಿಲಿವ ಗೂಡಲ್ಲಿ
ಮೌನವಲ್ಲ!

ಬಳ್ಳಿಗೆಲ್ಲವ ಸಲ್ಲಿ
ಸುವಳೆ ಧರಣಿ?
ಬೆಳಕವಳಿಗಕಟೆಲ್ಲಿ
ತರದೆ ತರಣಿ?
ಧರಣಿಯಕ್ಕರೆ ಸವಿಸೆ,
ತರಣಿ ಮೋರೆಯನವಿಸೆ,
ಬಳ್ಳಿ ತಾರೆ,
ತಂದೆ ತಾಯವರಲ್ಲಿ
ಯಾರ ದೂರೆ?

ಕುರುಡನರಗನಸಂತೆ
ಬಗೆದು ಬೇಯೆ,
ಗರಿಮುರಿದ ಖಗದಂತೆ
ನೆಗೆದು ನೋಯೆ,
ನನ್ನ ಬಾಳಕಟಿನಿಸೆ?
ಹಣ್ಣು ಹುಳುವಿನ ತಿನಿಸೆ?
ಎದೆಯ ತಿರುಳು
ಕೊರೆಯೆ ಸೋರುವ ಚಿಂತೆ
ಹಗಲು ಇರುಳು!
* * * *

ಸರಿದೊಮ್ಮೆ ಬರಸಲ್ಲ
ದಲರಿನಳಿವೊ?
ಸರಿದಂತೆ ಬರಬಲ್ಲ
ಉಡುವಿನಿಳಿವೊ?
ಮರುತರಂಗಿಪ ತೆರೆಯೊ?
ಹುಳು ಪತಂಗಿಪ ಸೆರೆಯೊ?
ಮರಳಿ ಚನ್ನ
ಬಹನೆ, ಬಾರನೆ, ನಲ್ಲ,
ಬಸಿರೊಳೆನ್ನ?

ಎಳೆಯೊಳಿಂಗಿದ ಗೀತಿ
ಮಾರುಲಿಸದೆ,
ಸೊಡರೊಳಾರಿದ ಜ್ಯೋತಿ
ಮಾರುರಿಸದೆ,
ಮರುಕಣಿಸಲೆಂತೆರೆಯ?
ಮರಳಿ ಮುದ್ದಿನ ಮರಿಯ
ನಳವೆ ದೊರೆಯೆ?
ಮುತ್ತು ಮೊಳೆವುದೆ ಸ್ವಾತಿ
ಗಿರಿಯೊಳೆರೆಯೆ?

ಕೋರಿಕೆಯೊಳಡಿಮೆಟ್ಟಿ
ಮುಂದೆ ಪಾರೆ,
ಶಂಕೆ ಹಾವಸೆಗಟ್ಟಿ
ಮನಸು ಜಾರೆ,
ಮೇದ ಮೇವನೆ ಮೇವ
ಕಟ್ಟು ಕಂಬದ ಗೋವ
ತೆರದೊಳೆನ್ನ
ನೆನದ ನೆನವೊಳೆ ದಿಟ್ಟಿ
ಗೊಳುವೆ ನಿನ್ನ.

ಬಲೆಯ ನೀರಲಿ ಸುತ್ತ
ಬರುವ ತನ್ನ
ನೆಳಲನಿನೆಯಂ ಗೆತ್ತ
ಮೀನೊಲೆನ್ನ
ಮನದಿ ಸುಳಿಯುವ ನಿನ್ನ
ನೆನವೆ ನೀನೆನುತೆನ್ನ
ದಿನವ ಕಳೆವೆ-
ಕರೆ ಎತ್ತ ತೆರೆಯತ್ತ
ಮರಳದೊಳವೆ?
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...