Home / ಕವನ / ಕವಿತೆ / ನಂಬಲೆಂತು?

ನಂಬಲೆಂತು?

ರಾಗ ಧನ್ಯಾಸಿ- ಆದಿ ತಾಳ

ನಂಬಲೆಂತು ನಾ ನೋಡುವ ಮುನ್ನ
ಯದುಕುಲದಾ ಲೀಲೆಯ ನಿನ್ನ? ||ಪಲ್ಲ||
ನೋಡದೆ ನಂಬಲು ಬಲ್ಲವನಲ್ಲ,
ನೋಡಿಸಿ ನಂಬಿಸೊ ಬಲ್ಲವ ನಲ್ಲ! ||ಅನು||

೧ನನ್ನ ಮನದ ಮೋಹಮೇಕೆ ಹೀರೆ?
೨ಏಕೆದೆಯಾನೆಯ ಮದ ಮುರಿಯೆ?
೩ಏಕೆ ಕನಲ ಕುದುರೆಯ ಕೊಲಲೇರೆ?
೪ಬಿಗಿತದ ಕತ್ತೆಯ ತಿರ್ರನೆ ತರಿಯೆ? ||೧||

೫ಎದೆಯ ಬೆದೆಯ ಹಿಳಿಲನೇಕೆ ಹಿಳಿಯೆ ?
೬ಕಪಟದೇಕೆ ರೆಕ್ಕೆಯ ಕೀಳೆ?
೭ಹಗೆಯ ಹಾವಿನೇತಕೆ ಹೆಡೆ ತುಳಿಯೆ?
೮ಸೆಳೆಯಾಸೆಯ ಸುಳಿಯನೇಕೆ ಸೀಳೆ? ||೨||

ನಿನ್ನಡಿ ಹಂಬಲ ಹಸವ ಮೇಸೆಯ?
ಕೊಳಲಾಗದೆ ಬಿದಿರೆದೆಯೆನ್ನ?
೯ಆಲ ಸಾಲದೇನೆನ್ನೆದೆಯಾಸೆಯ ?
೧೦ಎತ್ತೆ ಏಕೆ ಪಾಪದ ಮಲೆಯನ್ನ? ||೩||

ಡಂಬ ಭಕ್ತಿಯೆನ್ನೆದೆಯಿಂ ಮಾಣದೆ,
೧೧ಮಘವನ್ಮಖ ಮಾಣಿಸಿ ಗುಣವೇಂ?
ನನ್ನ ನಯನದಿ ಸದಾ ನಿನನಾನದೆ,
೧೨ಯಮುನೆಯ ತೇಲಿನ ನೆಳಲಲಿ ತಣಿವೇಂ? ||೪||

೧೩ಹೂವಿನಾಸೆಯೇ? ಪ್ರೇಮದ ಮೊಗಸನೆ
ಸೂಸಿ ಹೂವಿಸೇಕೆದೆಯೆನ್ನ?
೧೪ನನ್ನೆದೆಯೊಗೆಯದೆ ಪಾತಕಿಯಗಸನೆ?
೧೫ಬಾಗಿಹೆ, ನೆಟ್ಟನೆ ನೆಗಹೇಕೆನ್ನ? ||೫||

ನನ್ನೆದೆಯಾನ್ಮೆಯ ೧೬ಮಲ್ಲನ ಮುರಿಯದೆ,
೧೭ಹರಿಯದೆದೆಯ ಹಿಂಸೆಯ ಬಿಲ್ಲ,
ಪಾಪಪುರುಷ ಕಂಸನಿರವನಿರಿಯದೆ,
ಬಲ್ಲೆನೆ ಬಿಲ್ಲಿನ ಹಬ್ಬದ ಗೆಲ್ಲ? ||೬||

ಗೊಲ್ಲ ಗೊಲ್ಲತಿಯರಲ್ಲಿಯೆ ಸಾಕೆನೆ
ಸಲ್ಲಿಸಿದೆಯೊ ೧೮ಮಲ್ಲಣಿಯೆಲ್ಲ?
ಹೊಲ್ಲ ಹೊಲ್ಲದಲಿ ತಲ್ಲಣಿಪೇಕೆನ
ಗೂಲ್ಲೆ ಮೆಲ್ಲಡಿಯ ಪಲ್ಲನದೊಲ್ಲ? ||೭||

ಆದೆಯ ರಾಧೆಯ ಹೃದಯಾರಾಧನ?
ಈಯೆಯೇಕೆ ನಿನ್ನಡಿ ಸಾರೆ?
ಕಂಬನಿಯಿಂಬಿಗನೆಂಬುದೆ ಸಾಧನ-
ಅಂಗಲಾಚಿ ಕರೆವೆನೇಕೆ ಬಾರೆ? ||೮||

ನನ್ನೆದೆ ಯದುಕುಲದಲಿ ಕಂಬನಿಯಾ
ಕೂಲದಿ ಬಾಲಲೀಲೆಯ ನಿನ್ನ
ಮರಳಿ ಮೆರಸದಿರೆ, ಕನಸಿನ ಗನಿಯಾ
ಕಾಲನನಗೆಯಲಳನವೆ ಅಕಟೆನ್ನ? ||೯||
*****
೧ ಪೂತನಿ
೨ ಕುವಲಯಾನಪೀಡನೆಂಬ ಆನೆ
೩ ಕೇತಿ ಎಂಬ ಕುದುರೆ
೪ ಧೇನುಕನೆಂಬ ಕತ್ತೆ
೫ ಅರಿಷ್ಟನೆಂಬ ಗೂಳಿ
೬ ಬಕಾಸುರ
೭ ಕಾಲಿಯನೆಂಬ ನಾಗ
೮ ತೃಣಾವರ್‍ತ
೯ ಭಾಂಡೀರವೆಂಬ ಆಲದ ಮರ
೧೦ ಗೋವರ್ಧನೋದ್ಧಾರ
೧೧ ಇಂದ್ರಯಜ್ಞ ನಿಷೇಧ
೧೨ ಆಕ್ರೂರನಿಗೆ ಯಮುನಾ ನದಿಯಲ್ಲಿತ್ತ ದರ್‍ಶನ
೧೩ ಮಾಲಾಕಾರನಿಂದ ಹೂವನ್ನು ಕೊಂಡುದು
೧೪ ಮಥುರೆಯಲ್ಲಿ ಅಗಸನನ್ನು ಎದುರ್‍ಗೊಂಡುದು
೧೫ ಕುಬ್ಜೆ
೧೬ ಜಾಣೂರ
೧೭ ಧನುರ್‍ಭಂಗ
೧೮ ರಾಸಕ್ರೀಡೆ

Tagged:

Leave a Reply

Your email address will not be published. Required fields are marked *

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...

ಕಾಲ ಹನ್ನೆರಡನೆ ಶತಮಾನ. ದೇಶ ಜಪಾನ್. ಅರಸನ ಹೆಸರು ಅಂತೋಕು. ವಯಸ್ಸು ಕೇವಲ ಏಳು ಸಂವತ್ಸರಗಳು. ಅಂತೋಕು ಹೈಕೆ ಎಂಬ ಸಾಮುರಾಯ ದಳದ ನಾಮ ಮಾತ್ರ ಮುಂದಾಳುವಾಗಿದ್ದು ನಿಜವಾದ ಅಧಿಕಾರ ಇವನ ಅಜ್ಜಮ್ಮನ ಕೈಯಲ್ಲಿತ್ತು. ಅಜ್ಜಮ್ಮನ ಹೆಸರು ನೀ ಎಂದು. ನೀಯ ಜವಾಬ್ದಾರಿ ಗುರುತರವಾಗಿತ್ತು ಎಂದು...

ಶೇಖರನಿಗೆ ಇನ್ನೂ ಎರಡು ದಿನಗಳ ‘ವಾರ’ ಕಡಿಮೆ ಬಿದ್ದಿತ್ತು. ಎಲ್ಲಿಯೂ ಹುಟ್ಟುವಂತೆ ತೋರಲಿಲ್ಲ. ಶ್ರೀಮಾನ್ ಪದ್ಮನಾಭ ಹೆಬ್ಬಾರರ ಮನೆಯಲ್ಲಿ ಕೇಳಬೇಕೆಂದು ನಾಲ್ಕಾರು ಸಲ ಯೋಚಿಸಿದ. ಆದರೆ ಅವರು ಭಿಕ್ಷುಕರನ್ನೂ, ವರ್ಗಣಿ ಕೇಳುವವರನ್ನೂ ವಾರದ ಮಾಣಿಗಳನ್ನೂ ಅಂಗಳಕ್ಕೂ ಬರಗೊ...

ಸರ್‍ಕಸ್ಸು ಮುಗಿದರೂ ಅವನು ಅಲ್ಲಿಯೇ ಕುಳಿತಿದ್ದ. ಎಲ್ಲಾ ಎದ್ದು ಹೋಗಿದ್ದರು. ಎರಡನೇ ಷೋ ಆರಂಭವಾಗಲು ಕೆಲವೇ ಸಮಯ ಉಳಿದಿತ್ತು. ಅವನ ಕಣ್ಣುಗಳು ಏನನ್ನೋ ಹುಡುಕುತ್ತಿದ್ದವು. ಆ ಸರ್‍ಕಸ್ಸಿನ ಹುಡುಗಿ ಪ್ರವೇಶಿಸಿ ಓಡಿ ಬಂದು ಎರಡು ಬಾರಿ ಲಾಗಾ ಹಾಕಿ ಇವನ ಮುಂದೆಯೇ ನಿಂತಂತಾಯಿತು. ಆಕೆಯ...

“ಸುಭದ್ರೆ, ನೀನು ಎಂದು….” ದೈನ್ಯವಾಣಿಯಿಂದ ಕೇಳಿಕೊಂಡ ಶ್ರೀಧರ. “ತಡೆ ಶ್ರೀಧರ. ಹ್ಞ. ಹತ್ತಿರ ಬರಬೇಡ. ಪ್ರತಿಯೊಂದು ಕಾರ್ಯಕ್ಕೂ ಮುಹೂರ್ತ ಬರಬೇಕು; ಸ್ವಲ್ಪ ಕಾಲ ತಡೆ. ಒಮ್ಮೆ ಹೇಳಿದೆ: ನಾನು ನಿನ್ನವಳೆಂದು, ನಂಬಿಕೊ.” “ಎಷ್ಟು ದಿನ ಈ ನ...

ಮಳೆ ಜೋರಾಗಿ ಸುರಿಯುತ್ತಿತ್ತು. ಚಾವಣಿ ತೂತಾಗಿ ಸೋರುತ್ತಿದ್ದುದರಿಂದ ಸಾವಿತ್ರಿಗೆ ನಿದ್ದೆ ಇರಲಿಲ್ಲ. ಅವಳ ಉಗ್ಗವನದೂ ಅದೇ ಕತೆ. ಒಂದು ಮೂಲೆಯಲ್ಲಿ ಉಗ್ಗವನಿಗೆ ಒರಗಿಕೊಂಡು ಹಳೇ ಕಂಬಳಿ ಹೊದ್ದು ಸಾವಿತ್ರಿ ತೂಕಡಿಸುತ್ತಿದ್ದಳು. ಬಾಗಿಲ ಸಂದಿನಿಂದ ಆಗಾಗ ಚಳಕ್ಕನೆ ಕಾಣಿಸಿಕೊಳ್ಳುವ ಮಿ...