Home / ಕವನ / ಕವಿತೆ / ಹೋದ ಬಾಲ್ಯ

ಹೋದ ಬಾಲ್ಯ

ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಹರೆಯದೊಡನೆ ನಿಲುವುದೆಂತು
ಕಿರಿಯತನದ ಮುಗ್ಧತೆ?
* * *
ಹಗಲು ಹಣ್ಣು ತಿರುಗುತಿತ್ತು,
ಹೊಗೆಯ ಬಂಡಿಯೋಡುತಿತ್ತು,
ಮನದಿ, ಹಿಂದೆ ಬಿಟ್ಟುದರದು
ನೆನಪು ಬೇಯುತಿದ್ದಿತು.

ಕಳೆದ ಸುಖವ, ತಬ್ಬುವಳಲ,
ಒಳಗೆ ಕುಳಿತು ನೆನೆಯುತಿದ್ದೆ-
ಹೆಗಲ ಜಗ್ಗು ತೊದೆದರಾರೊ!
ಹಗಲ ಕನಸು ಚೆದರಿತು.

ಹಿಂದೆ ನೋಡೆ – ನಗುವ ಕಣ್ಣ
ಕಂದನೆಂದು! ತುಂಟತನದ
ಬೆಳಕ ಹೊಳೆಸಿ, ಕಣ್ಣ ನೆಟ್ಟ
ಚೆಲುವನೆಂತು ಮರೆವೆನು!

“ಬೇಡ ಕಂದ, ಹೊರಗಿನವರ
ಕಾಡಲುಂಟೆ? ಬೇಡ ಬಿಡೆಲೊ”
ಎಂದು ತಡೆವ ತಾಯ ನುಡಿಯ
ಕಂದನಂದು ಕೇಳದು.

ಅದರ ತುಂಟತನವ ಕಂಡು
ಮುದವನಾಂತೆನಂದು ನಾನು.-
ಹುಡುಗನೊದೆಗೆ ಅರ್‍ಥವುಂಟೆ?
ನುಡಿಗೆ ಕೊಂಡಿ ಇರುವುದೆ?
* * *
ಎಳೆಯನಂತೆ ಹೆಗಲ ಜಗ್ಗಿ
ಕೆಳೆಯನೊಡನೆ ಸೆಣಸಲಿಲ್ಲ;
ದಿಟ್ಟತನದಿ ನಗುವ ಕಣ್ಣ
ನೆಟ್ಟು ಜರೆಯಲಿಲ್ಲವು.

ಹರೆಯತನಕೆ ಬೆಳೆದುದನ್ನು
ಮರೆತು ನುಡಿದೆನೊಂದು ನುಡಿಯ.
ಆದರದಕೆ ಕೊಂಡಿಯಿತ್ತು,
ಎದೆಯ ಚುಚ್ಚಿ ಕೊರೆಯಿತು.

‘ಯುವಕ’ನೆನ್ನುವರಿವು, ಅಯ್ಯೊ,
ಅವನ ತೆರದೊಳೆನಗೆ ಇತ್ತೆ?
ಆದರೀಗ ಅದರ ತಿಳಿವು
ಎದೆಯನೆಂತು ಇರಿವುದು!
* * *
ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಆದರೆಷ್ಟು ನೋವು: ಬಾಲ್ಯ
ಹೋದುದೆಂದು ತಿಳಿಯಲು!
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...