Home / ಕವನ / ಕವಿತೆ / ಹೋದ ಬಾಲ್ಯ

ಹೋದ ಬಾಲ್ಯ

ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಹರೆಯದೊಡನೆ ನಿಲುವುದೆಂತು
ಕಿರಿಯತನದ ಮುಗ್ಧತೆ?
* * *
ಹಗಲು ಹಣ್ಣು ತಿರುಗುತಿತ್ತು,
ಹೊಗೆಯ ಬಂಡಿಯೋಡುತಿತ್ತು,
ಮನದಿ, ಹಿಂದೆ ಬಿಟ್ಟುದರದು
ನೆನಪು ಬೇಯುತಿದ್ದಿತು.

ಕಳೆದ ಸುಖವ, ತಬ್ಬುವಳಲ,
ಒಳಗೆ ಕುಳಿತು ನೆನೆಯುತಿದ್ದೆ-
ಹೆಗಲ ಜಗ್ಗು ತೊದೆದರಾರೊ!
ಹಗಲ ಕನಸು ಚೆದರಿತು.

ಹಿಂದೆ ನೋಡೆ – ನಗುವ ಕಣ್ಣ
ಕಂದನೆಂದು! ತುಂಟತನದ
ಬೆಳಕ ಹೊಳೆಸಿ, ಕಣ್ಣ ನೆಟ್ಟ
ಚೆಲುವನೆಂತು ಮರೆವೆನು!

“ಬೇಡ ಕಂದ, ಹೊರಗಿನವರ
ಕಾಡಲುಂಟೆ? ಬೇಡ ಬಿಡೆಲೊ”
ಎಂದು ತಡೆವ ತಾಯ ನುಡಿಯ
ಕಂದನಂದು ಕೇಳದು.

ಅದರ ತುಂಟತನವ ಕಂಡು
ಮುದವನಾಂತೆನಂದು ನಾನು.-
ಹುಡುಗನೊದೆಗೆ ಅರ್‍ಥವುಂಟೆ?
ನುಡಿಗೆ ಕೊಂಡಿ ಇರುವುದೆ?
* * *
ಎಳೆಯನಂತೆ ಹೆಗಲ ಜಗ್ಗಿ
ಕೆಳೆಯನೊಡನೆ ಸೆಣಸಲಿಲ್ಲ;
ದಿಟ್ಟತನದಿ ನಗುವ ಕಣ್ಣ
ನೆಟ್ಟು ಜರೆಯಲಿಲ್ಲವು.

ಹರೆಯತನಕೆ ಬೆಳೆದುದನ್ನು
ಮರೆತು ನುಡಿದೆನೊಂದು ನುಡಿಯ.
ಆದರದಕೆ ಕೊಂಡಿಯಿತ್ತು,
ಎದೆಯ ಚುಚ್ಚಿ ಕೊರೆಯಿತು.

‘ಯುವಕ’ನೆನ್ನುವರಿವು, ಅಯ್ಯೊ,
ಅವನ ತೆರದೊಳೆನಗೆ ಇತ್ತೆ?
ಆದರೀಗ ಅದರ ತಿಳಿವು
ಎದೆಯನೆಂತು ಇರಿವುದು!
* * *
ಕಿರಿಯತನವು ಕಳೆದುದನ್ನು
ಮರೆತು ನಡೆವುದೆಷ್ಟು ಹುಚ್ಚು!
ಆದರೆಷ್ಟು ನೋವು: ಬಾಲ್ಯ
ಹೋದುದೆಂದು ತಿಳಿಯಲು!
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...