Home / ಕವನ / ಕವಿತೆ / ಕವಿತೆ

ಕವಿತೆ

ಕವಿತೆ ಮತಿಜಲ ನಲಿನ,
ವ್ಯಸನ ವನಧಿಯ ಪುಲಿನ,
ಕವಿತೆ ಗಾನದ ಸುಗ್ಗಿ, ಸೊಬಗ ತೆನೆಸೂಡಿ,
ಕವಿತೆ ನವರಸ ರಂಗ
ವದು ತ್ರಿವೇಣಿಯ ಸಂಗ
ಮಿದೊ ನೆನಸು ಕನಸು ಮನಸಿನ ತ್ರಿತಯಮೊಡಗೂಡಿ ೬

ಧ್ಯಾನ ಗನಿಗಳ ರನ್ನ,
ಪ್ರಣಯ ಭಿಕ್ಷುವಿನನ್ನ,
ಕವಿತೆ ಜೀವನಸಮರ ಯೋಧರ ತುತೂರಿ,
ಕರುಣೆಯ ನಯನ ಬಿಂದು
ವೇಕಾಂತತೆಯ ಬಂಧು-
ಬಹುರೂಪದಿಂ ಸುಖಿಸುವುದು ಮನಮನವ ಸೇರಿ. ೧೨

ಇಂದುವುರುಗುವುದೇಕೆ?
ತಾರೆ ಮಿರುಗುವುದೇಕೆ?
ಕುಕಿಲು ಕರಗುವುದೇಕೆ ವಿರಹ ವಿಸ್ಮೃತಿಗೆ ?
ಅವರವರಿಗದೆ ಧರ್‍ಮ
ವಿದು ವಿಧಾತನ ಮರ್‍ಮ –
ಕವಿಯ ಹೃದಯವೆ ನರ್‍ಮಕುಂಜ ಕವಿತಾಸತಿಗೆ. ೧೮

ಪ್ರಾಸದಕ್ಷರ ಕೆಲವು
ತೊಡವುಗಳ ಕಿಲಕಿಲವು,
ಶೈಲಿಯಂಗದ ಚೆಲುವು, ಛಂದಸಂಚಲವು
ಅರ್‍ಥಲಾಲಿತ್ಯವೆನು
ವ ಸತೀತ್ವವಿರದೊಡನು
ಗೊಳಿಸುವಳೆ ಕವಿತಾರಮಣಿ ರಸಿಕನಿಗೆ ನಲವು? ೨೪

ವಿಪುಲ ಮಾನುಷ ಜೀವ
ನದ ಯಥಾರ್‍ಥ ಸಮಾವ
ಲೋಕನಂ ಕವಿತೆ ಎನೆ ಪಡುದೀವಿಯವರು,೧
ಕವಿತೆ ಬಡಗಣ ತಾರೆ
ಯಂತೆ ದಾರಿಯ ತೋರೆ,
ಎನಿತು ಧನ್ಯರೊ ಸಂಸ್ಕೃತಿಯ ನಾವನೇರ್‍ದವರು! ೩೦

ಸಂಪಗೆಗೆ ಕಂಪಿಹುದೆ?
ಇಂಗೋಲಿಗಿಂಪುಹುದೆ?
ಮಳೆವಿಲ್ಗೆ ಸೊಂಪಿಹುದೆ? ಕದಿರಿಹುದೆ ರವಿಗೆ?
ತಿಂಗಳಿಗೆ ತಂಪಿಹುದೆ?
ಸಾಗರಕ ಪೆಂಪಿಹುದೆ?
ಇಲ್ಲದಡೆ ಪೇಳು ಪೊಸ ಸೃಷ್ಟಿರಚಿಸುವ ಕವಿಗೆ ೩೬

ಕಂಬದಿಂ ಕವಿವಂದು,
ದಶತಿರನ ತಿವಿವಂದು,
ಫಲುಗುಣಗೆ ಕೊಳುಗುಳದಿ ಗೀತೆಯೊರೆವಂದು,
ಅರಳಿಯಡಿ ತಪಿಪಂದು,
ಸಿಲುಬೆಯಿಂ ಕ್ಷಮಿಪಂದು…
ರವಿಯೊ ಮೇಣ್‌ ಕವಿಯೊ ಕಾಣಿಸುವನಂದುಮನಿಂದು? ೪೨

ಮನದನ್ನನಿನೆಯಳಿಗೆ,
ಮನದನ್ನೆ ಇನೆಯನಿಗೆ,
ತಂದೆತಾಯನಗಲ್ದವರ ತಾಯಿತಂದೆ,
ತಂಗಿಯಳಿದರ ತಂಗಿ,
ಬಂಧುಗಳನು ಮರುಂಗಿ
ಶೂನ್ಯಮಾದೆದೆಯ ಪಡಿವಾವಿ ಕವಿತೆಯದೊಂದೆ! ೪೮

ಜಗದುದಯ ನಡುವಗಲು
ಸಂಜೆ ರಜನಿಯ ಮಿಗಿಲು
ನೆನಸು ಕನಸುಗಳನರಿಯಲು ಮನಸನೀಯೆ,
ಗುರುವಿನಾಶ್ರಮದಂತೆ
ಕವಿತೆ ವಿದ್ಯೆಯ ಸಂತೆ-
ಭುವನ ಕವಿತೆಗೆ ಕವಿಯ ಕವಿತೆಯೊಪ್ಪುವ ಛಾಯೆ. ೫೪

ಕವಿಗಿಂತ ಪಗೆಯಿಲ್ಲ
ಪರವಶತೆ ಒಗೆಗೆಲ್ಲ-
ಕವಿಯೆ ಸ್ಪಾತಂತ್ರ್ಯ ಮಧು ಕುಡಿವ ಮಧುಕರನು,
ಆದಿಕವಿ ಹರಿಯಿಂದ
ಕಲಿತು ಪರಿಪರಿಯಿಂದ
ಪರಹಿತವ ಬೆದರದೆಸಗುವನವನೆ ಕವಿವರನು ೬೦

ಅಬಲೆಯರ ತೋಳ್ಗಳನು
ಪರವಶರ ಬಾಳ್ಗಳನು
ಹುರಿದುಂಬಿಪುದು ನಾಡಿನಾಡಿಯಲಿ ಹರಿದು,
ಉದ್ಧರಿಸಿ ಪತಿತರನು,
ತಡೆದು ದುಶ್ಚಂತರನು,
ಧರ್‍ಮಪಥಕೊಯ್ಯುವುದು ಕವಿತೆಗಿದು ದಿಟ ಬಿರಿದು! ೬೬

ದಿನಭುವನನನು ಪದೆದು
ಹಾಸುಹೊಕ್ಕಂತೆ ಪದು
ಪಿಂದಲೊಂದಿಸುತೊಂದೆ ಮಗ್ಗದಲಿ ನೇತ
ಕವಿತೆ ಶಬಲಾಂಶುಕವ
ನುಡುತ ಕವಿಗತಿಸುಖವ
ನೀಡು ದೇವಕಿಕಂದ ಕವಿಚಂದ್ರ ದಿನನಾಧ! ೭೨
*****
1 Poetry is the criticism of Life’ (Matthew Arnold)

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...