Home / ಕವನ / ಕವಿತೆ / ಕುಳಿರ್ ಮಂಜು

ಕುಳಿರ್ ಮಂಜು

ಉದುರಿಸುತ ಮಣಿ ಮಂಜು | ಮಾಡಿ ಮಲ್ವಾಸುಗಳ
ನೆಲದ ಹಸುರನು ಮುಚ್ಚಿ – ಹರಡಿ ಬಿಳಿ ಬಣ್ಣಗಳ
ಬೆದೆಯನಾರಿಸಿ ತಣ್ಪ | ನೆರಚಿ ಚಳಿ ಹೊದಿಕೆಗಳ
ಹೊದಿಸಿ ನಡುಗುವ ಕುಳಿರ | ನೂಕುತಿದೆ ಕುರುಡಿರುಳ.

ಬೆಟ್ಟಗಳ ನಡುವಿಂದ | ಹರಿದು ಬಹ ಹೊಳೆಯಂತೆ
ಮಂಜಿನೆಳೆ ವಸ್ತ್ರಗಳ | ಹೊದಿಸಿ ಚಳಿ ಮುರಿವಂತೆ
ಆಗಸವೆ ಧರೆಗಿಳಿದು | ಬೆಟ್ಟದಲಿ ನಿಂದಂತೆ
ತೋರುತಿದೆ ಸುತ್ತಲುಂ | ತುಹಿನಗಿರಿ ಬಂದಂತೆ.

ರಸವೇರಿ ಚೆಲುವೆತ್ತು | ಮೈದೋರಿ ಕಾಣುತಿವೆ
ಪೂಗಾಯಿ ಪಣ್ಗಳುಂ | ನುಡಿಗಳಿಗೆ ಸಿಲುಕದಿವೆ
ಸುತ್ತಣ ದಿಗಂತದಲಿ | ಹಿಮದ ರೇಖೆಯ ನಾವೆ
ಮನ ಸೆಳೆದು ಜಗ ಮರೆದು | ಎಲ್ಲೆಲ್ಲು ತೇಲುತಿವೆ.

ಓಡಿಹೋದನು ಚಂದ್ರ | ಹಿಮಗಿರಿಯ ಸೆರೆಯಲ್ಲಿ
ಚಳಿಯ ಹೂದಿಕೆಯ ಸೂರ್ಯ | ಝಳನೀಗಿ ಹಗಲಲ್ಲಿ
ಕುಳಿರ ಕುಣಿತಕೆ ಸೋತು | ಪಣ್ಪಿರಿಯೆ ಮರದಲ್ಲಿ
ಮೈಯುರುಬಿ ನುಡಿಯುತಿವೆ | ಗಿಳಿವಿಂಡು ಮರೆಯಲ್ಲಿ.

ಎಳೆಯ ಹರೆಯದ ವೃದ್ಧ | ರೆಲ್ಲರುಂ ಗಡಗಡನೆ
ನಡುಗುತ್ತ ಬೆನ್ ಬಾಗಿ | ಮೈ ಕುಗ್ಗಿ ಬರುತೊಡನೆ
ಕುಳಿರು ಬರುತಿರೆ ಸಾಗಿ | ಸೂರ್ಯನಲ್ಲೆನುತೊಡನೆ
ಉರಿಗೆ ನೀರೆರೆದಂತೆ | ಸಹಿಸದೆಯೆ ಬಲು ಬೇನೆ.

ಕಾಯ್ಗಟ್ಟಿ ಮೈಯೆಲ್ಲ | ಹುರಿಗಟ್ಟಿ ನವಿರೆಲ್ಲ
ಹಿಮ ತಣ್ಪು ಒಳಗೇರೆ | ರಕುತಮಂ ಹೊರಚೆಲ್ಲಿ
ಕುಳಿರ ಚಲುವಂ ನೋಡೆ | ಮೈಯೊಡೆವ ತೆರನೆಲ್ಲ
ಕೂಪಗೊಂಡಿವೆ ಹಸಿದು | ನಿಮಿರಿ ರೋಮಗಳೆಲ್ಲ.
*****

Tagged:

Leave a Reply

Your email address will not be published. Required fields are marked *

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...