Home / ಕವನ / ಕವಿತೆ / ಬದುಕು ಬೇಡ ಅನ್ನಿಸಲಿಲ್ಲ

ಬದುಕು ಬೇಡ ಅನ್ನಿಸಲಿಲ್ಲ

ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ
ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ
ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ
ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ
ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ
ಅನ್ನಲಿಲ್ಲ ಆ ಹೊತ್ತಿನಲ್ಲೂ ಸಾವು ಬೇಕೆನಿಸಲಿಲ್ಲ

ಈ ಕೆಂಪು ಬಿಳಿ ಪಂಚ ಪಂಚ ಪ್ರಾತಃಕಾಲ
ಹೇಗೆ ಹೋಗಲಿ ಬದುಕಿನ ಬಟ್ಟೆಗಳ ಕಳಚಿ-
ಜೀವದ ತುಂಬ ವ್ಯಥೆ ತುಂಬಿ ಒಂದು ಥರಾ
ಹೊಟ್ಟೆ ತೊಳೆಸಿ ಬಂತು ಉಸಿರು ಅಲ್ಲೂ ಇಲ್ಲೂ
ತೇಕುತ್ತಿದ್ದಾಗಲೂ ಬದುಕು ಎಷ್ಟು ಸಿಹಿ ಎಷ್ಟು ಸಹ್ಯ
ಅನುಪಾನ ಉಪಚಾರ ತಣ್ಣೀರು ಪಟ್ಟಿಗಳ ಸಶ್ರಮ ಶಿಕ್ಷೆಯ ನಡುವೆ
ನನ್ನ ಚೈತನ್ಯ
ಗೋಕರ್ಣದ ಬೇಲೆ ದೇವಸ್ಥಾನಗಳನ್ನು ಸುತ್ತಾಡಿ
ಹಿರೇಗುತ್ತಿಯನ್ನು ಮೂಸುತ್ತ ಹೊರಟಿತು

ನನ್ನ ಹಳೆಯ ಕನ್ನಡ ಶಾಲೆಯ ಹತ್ತಿರ ಕಾರು ನಿಂತಿತು
ಇಲ್ಲಿಯ ಕ್ಲಾಸುಗಳಲ್ಲಿ ಅಂಗಿ ಚಡ್ಡಿಯ ನಾನು ಇದ್ದೆ
ಒಂದು ದಿನ ಮನೆಗೋಡಿ ಬರುವಾಗ ಇದೇ ಕಂಪೌಂಡಿನಲ್ಲೊಮ್ಮೆ ಬಿದ್ದೆ
ಮಣ್ಣು ಬಾಯೊಳಹೊಕ್ಕಿತು ಥೂಥೂ ಉಗಿದೆ ಎಲ್ಲ ನಗಬೇಕಿತ್ತು
ನಗಲಿಲ್ಲ ನಾ ಇದ್ದಾಗಲೇ ಅಲ್ಲಿದ್ದ ಧ್ವಜದ ಕಂಬ ಕಿತ್ತು ಇಲ್ಲಿ ಹುಗಿದರು
ನನ್ನ ಜೊತೆ ಇದ್ದವರೆಲ್ಲ ಈಗ ಎಲ್ಲೆಲ್ಲಿದ್ದಾರೆ ಮತ್ತೆ
ಹಾಗೆ ಒಟ್ಟಿಗೆ ಸೇರಲಾರೆವು ಇವೆಲ್ಲ ಒಮ್ಮುಖದ ಓಟ
ಯಾವುದೋ ಗುರಿ ಮುಟ್ಟಲಿಕ್ಕಿರುವ ಒಂದೇ ಉಸಿರಿನ ಆಟ
ಇಲ್ಲಿಯ ಕಬಡ್ಡಿ ಮೂಲೋದ್ಯೋಗ ವ್ಯಾಯಾಮ ಪ್ರಾರ್ಥನೆ
ಪಂಚಾಂಗ ಅಮೃತವಾಣಿ ವಾರದ ಚರ್ಚಾಕೂಟ ಬೆಳಗಿನ ಉಪ್ಪಿಟ್ಟು
ನನ್ನ ಮಾಸ್ತರರು ಅಕ್ಕವರು ಗೆಳೆಯರು ಚಾಡಿ ಮಾತು….
ಜ್ವರ ತೊಂಬತ್ತೊಂಬತ್ತಕ್ಕೆ ಇಳಿಯಿತು

ಕಿವಿಯಲ್ಲಿ ಅಘನಾಶಿನಿ ಮೊರೆದಳು
ಅಘನಾಶಿನೀ ನನಗೆ ಹಾದಿ ಬಿಡು
ಅಲ್ಲಿ ತಾರೀಕಟ್ಟೆಯಲ್ಲಿ ಒಂದರೆಗಳಿಗೆ ಕೂತು
ನಿನ್ನ ನೋಡಿ ಮೈ ಮರೆಯುವೆ ಹೇಳು
ಈ ಚಂದ್ರನ್ನ ನಕ್ಷತ್ರಗಳ ತೊಟ್ಟಿಲು ಕಟ್ಟಿ ತೂಗಿದರಾರು
ನಿನ್ನ ಗರ್ಭದ ಪಾತಾಳದೊಳಗೆ ಸೇರಿದ ಜೀವಗಳೆಷ್ಟು
ಈ ದಡವನ್ನು ಕಾಲುಗಳು ತುಳಿದವು
ನಕ್ಷತ್ರಗಳು ಮೈ ತೊಳೆಯಲು ನಿನ್ನಲ್ಲಿಗೇ ಬಂದಿದ್ದವೇ
ಈ ತಾರಿಕಟ್ಟಿ ಕಟ್ಟಿದವರಾರು ಸಭಾಹಿತರ ಮನೆಯವರು
ಯಾವಾಗ ಬಂದರು ನಿನಗೆಷ್ಟು ವರ್ಷ ಇಲ್ಲಿ ರಾಮಸೀತೆ
ಬಂದಿದ್ದು ನಿಜವೇ ಆ ನಾಯಿಯನ್ನು ಆ ಜನರು ಗುಂಡಿಟ್ಟು
ಕೊಂದರೇ ಈ ತೆಂಗಿನ ಮರದ ಕಾಯಿಗಳನ್ನು ಕದ್ದವರಾರು
ದಿವಸದ ಮೊದಲಿನ ದೋಣಿ ಎಷ್ಟಕ್ಕೆ ಹೊರಡುತ್ತದೆ
ಇವರೆಲ್ಲ ಎಲ್ಲಿಯವರು ಏನಾಗಲಿರುವರು ನೀನು ಎಲ್ಲಿಂದ ಬಂದೆ
ಹೋಗುವೆ ಎಲ್ಲಿಗೆ ಈ ನೈಟ್ ಹಾಲ್ಟ್ ಬಸ್ಸು ಇವತ್ತು ರಾತ್ರಿ
ಎಷ್ಟಕ್ಕೆ ಬಂತು ಈ ಹಾದಿ ದೀಪದ ಮಂದ ಬೆಳಕಲ್ಲಿ
ಹೊಳೆವ ಕಲ್ಲು ಬೂದಿ ಮಣ್ಣು ಬೀದಿನಾಯಿ ಪಾಗಾರ ಕೆಂಪುಬಸ್ಸು
ಇವುಗಳ ಅರ್ಥ ಹೇಳು ಅಘನಾಶಿನೀ ನಿನ್ನ ಸುದೀರ್ಘ ಮೌನ
ಕಳೆದು ಏನೇನೆಂದು ಉಸುರು ಈ ನಿನ್ನ ಗಂಡನ ಹೆಸರು
ಹೇಳು ಇಲ್ಲದಿದ್ದರೆ ನನ್ನ ತಲೆ ಹಾಳಾಗಿ ಹೋಳಾಗಿ ಹೋಗುವುದು
ತಾಯೀ ಅದಕ್ಕಾಗಿಯಾದರೂ ಮಾತಾಡು ನನ್ನ ಚೈತನ್ಯ
ನಿನ್ನ ಮಾತುಗಳಿಂದ ಶಾಂತವಾಗಲಿ
*****

 

Tagged:

Leave a Reply

Your email address will not be published. Required fields are marked *

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...