Home / ಕವನ / ಕವಿತೆ / ಬದುಕು ಬೇಡ ಅನ್ನಿಸಲಿಲ್ಲ

ಬದುಕು ಬೇಡ ಅನ್ನಿಸಲಿಲ್ಲ

ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ
ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ
ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ
ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ
ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ
ಅನ್ನಲಿಲ್ಲ ಆ ಹೊತ್ತಿನಲ್ಲೂ ಸಾವು ಬೇಕೆನಿಸಲಿಲ್ಲ

ಈ ಕೆಂಪು ಬಿಳಿ ಪಂಚ ಪಂಚ ಪ್ರಾತಃಕಾಲ
ಹೇಗೆ ಹೋಗಲಿ ಬದುಕಿನ ಬಟ್ಟೆಗಳ ಕಳಚಿ-
ಜೀವದ ತುಂಬ ವ್ಯಥೆ ತುಂಬಿ ಒಂದು ಥರಾ
ಹೊಟ್ಟೆ ತೊಳೆಸಿ ಬಂತು ಉಸಿರು ಅಲ್ಲೂ ಇಲ್ಲೂ
ತೇಕುತ್ತಿದ್ದಾಗಲೂ ಬದುಕು ಎಷ್ಟು ಸಿಹಿ ಎಷ್ಟು ಸಹ್ಯ
ಅನುಪಾನ ಉಪಚಾರ ತಣ್ಣೀರು ಪಟ್ಟಿಗಳ ಸಶ್ರಮ ಶಿಕ್ಷೆಯ ನಡುವೆ
ನನ್ನ ಚೈತನ್ಯ
ಗೋಕರ್ಣದ ಬೇಲೆ ದೇವಸ್ಥಾನಗಳನ್ನು ಸುತ್ತಾಡಿ
ಹಿರೇಗುತ್ತಿಯನ್ನು ಮೂಸುತ್ತ ಹೊರಟಿತು

ನನ್ನ ಹಳೆಯ ಕನ್ನಡ ಶಾಲೆಯ ಹತ್ತಿರ ಕಾರು ನಿಂತಿತು
ಇಲ್ಲಿಯ ಕ್ಲಾಸುಗಳಲ್ಲಿ ಅಂಗಿ ಚಡ್ಡಿಯ ನಾನು ಇದ್ದೆ
ಒಂದು ದಿನ ಮನೆಗೋಡಿ ಬರುವಾಗ ಇದೇ ಕಂಪೌಂಡಿನಲ್ಲೊಮ್ಮೆ ಬಿದ್ದೆ
ಮಣ್ಣು ಬಾಯೊಳಹೊಕ್ಕಿತು ಥೂಥೂ ಉಗಿದೆ ಎಲ್ಲ ನಗಬೇಕಿತ್ತು
ನಗಲಿಲ್ಲ ನಾ ಇದ್ದಾಗಲೇ ಅಲ್ಲಿದ್ದ ಧ್ವಜದ ಕಂಬ ಕಿತ್ತು ಇಲ್ಲಿ ಹುಗಿದರು
ನನ್ನ ಜೊತೆ ಇದ್ದವರೆಲ್ಲ ಈಗ ಎಲ್ಲೆಲ್ಲಿದ್ದಾರೆ ಮತ್ತೆ
ಹಾಗೆ ಒಟ್ಟಿಗೆ ಸೇರಲಾರೆವು ಇವೆಲ್ಲ ಒಮ್ಮುಖದ ಓಟ
ಯಾವುದೋ ಗುರಿ ಮುಟ್ಟಲಿಕ್ಕಿರುವ ಒಂದೇ ಉಸಿರಿನ ಆಟ
ಇಲ್ಲಿಯ ಕಬಡ್ಡಿ ಮೂಲೋದ್ಯೋಗ ವ್ಯಾಯಾಮ ಪ್ರಾರ್ಥನೆ
ಪಂಚಾಂಗ ಅಮೃತವಾಣಿ ವಾರದ ಚರ್ಚಾಕೂಟ ಬೆಳಗಿನ ಉಪ್ಪಿಟ್ಟು
ನನ್ನ ಮಾಸ್ತರರು ಅಕ್ಕವರು ಗೆಳೆಯರು ಚಾಡಿ ಮಾತು….
ಜ್ವರ ತೊಂಬತ್ತೊಂಬತ್ತಕ್ಕೆ ಇಳಿಯಿತು

ಕಿವಿಯಲ್ಲಿ ಅಘನಾಶಿನಿ ಮೊರೆದಳು
ಅಘನಾಶಿನೀ ನನಗೆ ಹಾದಿ ಬಿಡು
ಅಲ್ಲಿ ತಾರೀಕಟ್ಟೆಯಲ್ಲಿ ಒಂದರೆಗಳಿಗೆ ಕೂತು
ನಿನ್ನ ನೋಡಿ ಮೈ ಮರೆಯುವೆ ಹೇಳು
ಈ ಚಂದ್ರನ್ನ ನಕ್ಷತ್ರಗಳ ತೊಟ್ಟಿಲು ಕಟ್ಟಿ ತೂಗಿದರಾರು
ನಿನ್ನ ಗರ್ಭದ ಪಾತಾಳದೊಳಗೆ ಸೇರಿದ ಜೀವಗಳೆಷ್ಟು
ಈ ದಡವನ್ನು ಕಾಲುಗಳು ತುಳಿದವು
ನಕ್ಷತ್ರಗಳು ಮೈ ತೊಳೆಯಲು ನಿನ್ನಲ್ಲಿಗೇ ಬಂದಿದ್ದವೇ
ಈ ತಾರಿಕಟ್ಟಿ ಕಟ್ಟಿದವರಾರು ಸಭಾಹಿತರ ಮನೆಯವರು
ಯಾವಾಗ ಬಂದರು ನಿನಗೆಷ್ಟು ವರ್ಷ ಇಲ್ಲಿ ರಾಮಸೀತೆ
ಬಂದಿದ್ದು ನಿಜವೇ ಆ ನಾಯಿಯನ್ನು ಆ ಜನರು ಗುಂಡಿಟ್ಟು
ಕೊಂದರೇ ಈ ತೆಂಗಿನ ಮರದ ಕಾಯಿಗಳನ್ನು ಕದ್ದವರಾರು
ದಿವಸದ ಮೊದಲಿನ ದೋಣಿ ಎಷ್ಟಕ್ಕೆ ಹೊರಡುತ್ತದೆ
ಇವರೆಲ್ಲ ಎಲ್ಲಿಯವರು ಏನಾಗಲಿರುವರು ನೀನು ಎಲ್ಲಿಂದ ಬಂದೆ
ಹೋಗುವೆ ಎಲ್ಲಿಗೆ ಈ ನೈಟ್ ಹಾಲ್ಟ್ ಬಸ್ಸು ಇವತ್ತು ರಾತ್ರಿ
ಎಷ್ಟಕ್ಕೆ ಬಂತು ಈ ಹಾದಿ ದೀಪದ ಮಂದ ಬೆಳಕಲ್ಲಿ
ಹೊಳೆವ ಕಲ್ಲು ಬೂದಿ ಮಣ್ಣು ಬೀದಿನಾಯಿ ಪಾಗಾರ ಕೆಂಪುಬಸ್ಸು
ಇವುಗಳ ಅರ್ಥ ಹೇಳು ಅಘನಾಶಿನೀ ನಿನ್ನ ಸುದೀರ್ಘ ಮೌನ
ಕಳೆದು ಏನೇನೆಂದು ಉಸುರು ಈ ನಿನ್ನ ಗಂಡನ ಹೆಸರು
ಹೇಳು ಇಲ್ಲದಿದ್ದರೆ ನನ್ನ ತಲೆ ಹಾಳಾಗಿ ಹೋಳಾಗಿ ಹೋಗುವುದು
ತಾಯೀ ಅದಕ್ಕಾಗಿಯಾದರೂ ಮಾತಾಡು ನನ್ನ ಚೈತನ್ಯ
ನಿನ್ನ ಮಾತುಗಳಿಂದ ಶಾಂತವಾಗಲಿ
*****

 

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಎಮ್.ಎನ್.ಎಸ್.ರಾವ್