ಬದುಕು ಬೇಡ ಅನ್ನಿಸಲಿಲ್ಲ

ಜ್ವರ ನೂರಾನಾಲ್ಕು ಡಿಗ್ರಿಗೆ ಏರಿ ಎದೆ ಹಾರಿ
ಹೋದಾಗಲೂ ಈ ಡಿಗ್ರಿಗಳ ಕೋಟೆಗಳ ಮೀರಿ
ಪ್ರಾಣಪಕ್ಷಿ ಎನ್ನುತ್ತಾರಲ್ಲ ಅದು ರೆಕ್ಕೆ ಬಿಚ್ಚಿ
ಪುರ್ರಂತ ದಿಗಂತ ಸೇರಿ ಅಂಥದೇ ಪಕ್ಷಗಳ ಪ್ರಭಾತಫೇರಿ
ಕೂಡಿಕೊಳ್ಳಲಿ ಈ ಜೀವ ಗರಂ ಇದ್ದುದು ನರಂ ಆಗಲಿ
ಅನ್ನಲಿಲ್ಲ ಆ ಹೊತ್ತಿನಲ್ಲೂ ಸಾವು ಬೇಕೆನಿಸಲಿಲ್ಲ

ಈ ಕೆಂಪು ಬಿಳಿ ಪಂಚ ಪಂಚ ಪ್ರಾತಃಕಾಲ
ಹೇಗೆ ಹೋಗಲಿ ಬದುಕಿನ ಬಟ್ಟೆಗಳ ಕಳಚಿ-
ಜೀವದ ತುಂಬ ವ್ಯಥೆ ತುಂಬಿ ಒಂದು ಥರಾ
ಹೊಟ್ಟೆ ತೊಳೆಸಿ ಬಂತು ಉಸಿರು ಅಲ್ಲೂ ಇಲ್ಲೂ
ತೇಕುತ್ತಿದ್ದಾಗಲೂ ಬದುಕು ಎಷ್ಟು ಸಿಹಿ ಎಷ್ಟು ಸಹ್ಯ
ಅನುಪಾನ ಉಪಚಾರ ತಣ್ಣೀರು ಪಟ್ಟಿಗಳ ಸಶ್ರಮ ಶಿಕ್ಷೆಯ ನಡುವೆ
ನನ್ನ ಚೈತನ್ಯ
ಗೋಕರ್ಣದ ಬೇಲೆ ದೇವಸ್ಥಾನಗಳನ್ನು ಸುತ್ತಾಡಿ
ಹಿರೇಗುತ್ತಿಯನ್ನು ಮೂಸುತ್ತ ಹೊರಟಿತು

ನನ್ನ ಹಳೆಯ ಕನ್ನಡ ಶಾಲೆಯ ಹತ್ತಿರ ಕಾರು ನಿಂತಿತು
ಇಲ್ಲಿಯ ಕ್ಲಾಸುಗಳಲ್ಲಿ ಅಂಗಿ ಚಡ್ಡಿಯ ನಾನು ಇದ್ದೆ
ಒಂದು ದಿನ ಮನೆಗೋಡಿ ಬರುವಾಗ ಇದೇ ಕಂಪೌಂಡಿನಲ್ಲೊಮ್ಮೆ ಬಿದ್ದೆ
ಮಣ್ಣು ಬಾಯೊಳಹೊಕ್ಕಿತು ಥೂಥೂ ಉಗಿದೆ ಎಲ್ಲ ನಗಬೇಕಿತ್ತು
ನಗಲಿಲ್ಲ ನಾ ಇದ್ದಾಗಲೇ ಅಲ್ಲಿದ್ದ ಧ್ವಜದ ಕಂಬ ಕಿತ್ತು ಇಲ್ಲಿ ಹುಗಿದರು
ನನ್ನ ಜೊತೆ ಇದ್ದವರೆಲ್ಲ ಈಗ ಎಲ್ಲೆಲ್ಲಿದ್ದಾರೆ ಮತ್ತೆ
ಹಾಗೆ ಒಟ್ಟಿಗೆ ಸೇರಲಾರೆವು ಇವೆಲ್ಲ ಒಮ್ಮುಖದ ಓಟ
ಯಾವುದೋ ಗುರಿ ಮುಟ್ಟಲಿಕ್ಕಿರುವ ಒಂದೇ ಉಸಿರಿನ ಆಟ
ಇಲ್ಲಿಯ ಕಬಡ್ಡಿ ಮೂಲೋದ್ಯೋಗ ವ್ಯಾಯಾಮ ಪ್ರಾರ್ಥನೆ
ಪಂಚಾಂಗ ಅಮೃತವಾಣಿ ವಾರದ ಚರ್ಚಾಕೂಟ ಬೆಳಗಿನ ಉಪ್ಪಿಟ್ಟು
ನನ್ನ ಮಾಸ್ತರರು ಅಕ್ಕವರು ಗೆಳೆಯರು ಚಾಡಿ ಮಾತು….
ಜ್ವರ ತೊಂಬತ್ತೊಂಬತ್ತಕ್ಕೆ ಇಳಿಯಿತು

ಕಿವಿಯಲ್ಲಿ ಅಘನಾಶಿನಿ ಮೊರೆದಳು
ಅಘನಾಶಿನೀ ನನಗೆ ಹಾದಿ ಬಿಡು
ಅಲ್ಲಿ ತಾರೀಕಟ್ಟೆಯಲ್ಲಿ ಒಂದರೆಗಳಿಗೆ ಕೂತು
ನಿನ್ನ ನೋಡಿ ಮೈ ಮರೆಯುವೆ ಹೇಳು
ಈ ಚಂದ್ರನ್ನ ನಕ್ಷತ್ರಗಳ ತೊಟ್ಟಿಲು ಕಟ್ಟಿ ತೂಗಿದರಾರು
ನಿನ್ನ ಗರ್ಭದ ಪಾತಾಳದೊಳಗೆ ಸೇರಿದ ಜೀವಗಳೆಷ್ಟು
ಈ ದಡವನ್ನು ಕಾಲುಗಳು ತುಳಿದವು
ನಕ್ಷತ್ರಗಳು ಮೈ ತೊಳೆಯಲು ನಿನ್ನಲ್ಲಿಗೇ ಬಂದಿದ್ದವೇ
ಈ ತಾರಿಕಟ್ಟಿ ಕಟ್ಟಿದವರಾರು ಸಭಾಹಿತರ ಮನೆಯವರು
ಯಾವಾಗ ಬಂದರು ನಿನಗೆಷ್ಟು ವರ್ಷ ಇಲ್ಲಿ ರಾಮಸೀತೆ
ಬಂದಿದ್ದು ನಿಜವೇ ಆ ನಾಯಿಯನ್ನು ಆ ಜನರು ಗುಂಡಿಟ್ಟು
ಕೊಂದರೇ ಈ ತೆಂಗಿನ ಮರದ ಕಾಯಿಗಳನ್ನು ಕದ್ದವರಾರು
ದಿವಸದ ಮೊದಲಿನ ದೋಣಿ ಎಷ್ಟಕ್ಕೆ ಹೊರಡುತ್ತದೆ
ಇವರೆಲ್ಲ ಎಲ್ಲಿಯವರು ಏನಾಗಲಿರುವರು ನೀನು ಎಲ್ಲಿಂದ ಬಂದೆ
ಹೋಗುವೆ ಎಲ್ಲಿಗೆ ಈ ನೈಟ್ ಹಾಲ್ಟ್ ಬಸ್ಸು ಇವತ್ತು ರಾತ್ರಿ
ಎಷ್ಟಕ್ಕೆ ಬಂತು ಈ ಹಾದಿ ದೀಪದ ಮಂದ ಬೆಳಕಲ್ಲಿ
ಹೊಳೆವ ಕಲ್ಲು ಬೂದಿ ಮಣ್ಣು ಬೀದಿನಾಯಿ ಪಾಗಾರ ಕೆಂಪುಬಸ್ಸು
ಇವುಗಳ ಅರ್ಥ ಹೇಳು ಅಘನಾಶಿನೀ ನಿನ್ನ ಸುದೀರ್ಘ ಮೌನ
ಕಳೆದು ಏನೇನೆಂದು ಉಸುರು ಈ ನಿನ್ನ ಗಂಡನ ಹೆಸರು
ಹೇಳು ಇಲ್ಲದಿದ್ದರೆ ನನ್ನ ತಲೆ ಹಾಳಾಗಿ ಹೋಳಾಗಿ ಹೋಗುವುದು
ತಾಯೀ ಅದಕ್ಕಾಗಿಯಾದರೂ ಮಾತಾಡು ನನ್ನ ಚೈತನ್ಯ
ನಿನ್ನ ಮಾತುಗಳಿಂದ ಶಾಂತವಾಗಲಿ
*****

 

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಲೆ
Next post ಪಂಜದಮ್ಯಾಲ ನಿನ್ನ ಮನಸು

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ವಿರೇಚನೆ

    ರವಿವಾರ ರಜವೆಂದು ರಾಮರಾವು ಶನಿವಾರ ರಾತ್ರಿಯೇ ಭೇದಿಗೆ ಔಷಧಿ ತೆಗೆದುಕೊಂಡ, ಕೆಲವು ತಿಂಗಳುಗಳಿಂದ ಊಟಕ್ಕೆ ರುಚಿಯಿಲ್ಲ. ತಿಂದದ್ದು ಜೀರ್ಣವಾಗುವುದಿಲ್ಲ. ರಾತ್ರಿ ನಿದ್ರೆ ಬರುವುದಿಲ್ಲ, ಹೊಟ್ಟೆ ಉಬ್ಬುತ್ತಿದೆ, ದೃಷ್ಟಿ… Read more…

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದಾರಿ ಯಾವುದಯ್ಯಾ?

    ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

cheap jordans|wholesale air max|wholesale jordans|wholesale jewelry|wholesale jerseys