Home / ಕವನ / ಕವಿತೆ / ಹುಣ್ಣಿವೆಯ ಹೊತ್ತಿನ ಹುಟ್ಟು

ಹುಣ್ಣಿವೆಯ ಹೊತ್ತಿನ ಹುಟ್ಟು

(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ)


ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ
ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ
ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ,
‘ಮಲಗಿದ ಜನರೇಳುವ ಮೊದಲು
ಮರೆಯಾಗುವೆ’ ನೆಂದು ಜವದೊಳು
ಪಡುವಲ ಸೀಮೆಯ ಬೆಟ್ಟದೊಳು
ಅಡಗಿದನೆಲ್ಲಿಯೊ ತೋಹಿನಲಿ-ಒಡನಿರುವ ಕತ್ತಲೆಯನಗಲಿ!


ಚಿತ್ತವನು ಸೆಳೆದ ಚಂದಿರನು-ಎತ್ತಲೊ ಹೋಗಿರುವುದ ಕಂಡು
ಮತ್ತಾರನಾಶ್ರಯಿಪನೆಂದು ಅತ್ಯಂತ ಕಾತರವನುಂಡು,
ಎತ್ತಲೂ ಸುತ್ತುತಿರಲಂದು – ಹೊತ್ತಿನ ಬರವನು ಬಗೆಗೊಂಡು,
ಅವನೊಡನೆ ಬೆರೆಯಬೇಕೆಂದು
ತವಕದಿಂದ ಕತ್ತಲೆ ಬಂದು
ದಿವಸದೆರೆಯನೆಡೆ ನಿಲಲಂದು
ಕಣ್ದೆರೆದ ಕನಲಿ ಸುಚರಿತನು-ಕೆಂಡಪರಿ ಕಂಡನಾಕೆಯನು.


ಭಾಸ್ಕರನ ಕೋಪವನ್ನರಿದು-ತಸ್ಕರರ ಕೆಳದಿ ಬೆದರಿದಳು.
ಮಿತ್ರನ ಮೊಗ ನೋಡಲು ಹೆದರಿ – ಸುತ್ತುತ ಗಿಡ-ಮರ-ಮೆಳೆಗಳೊಳು
ಮೈಗರೆದಳೊಂದು ತೋಹಿನೊಳು-ಹುಲಿ, ಸಿಂಗಗಳಿಹ ಕಾಡಿನೊಳು
ಕತ್ತಲೆಯ ದುಃಸ್ಥಿತಿಯನರಿದು,
ಆಕೆಯ ಅವಿವೇಕವ ನೆನೆದು,
ಕಾಡಿನರಳುಗಳು ಬಾಯ್ದೆರೆದು,
ಹಿರಿನಗೆಯನಂದು ಹೊಂದಿದುವು-ಸುರಭಿಯನೆಲ್ಲೆಡೆ ಹರಡಿದುವು.


ನಿಜ ನೇಹದಿನಿಯ ನೇಸರಿನಾ-ಪಾವನತೆಯನ್ನು ತಾ ನೋಡಿ,
ಕಮಲಿನೀ ರಮಣಿ ಪ್ರೇಮದಲಿ-ಮೆಲುನಗೆಮೊಗ ಮೇಲಕೆ ಮಾಡಿ,
ಪತಿಯನ್ನು ಕೃತಜ್ಞತೆಯಿಂದ ನಿರುಕಿಸುತ ನಲಿವೊಳೀಜಾಡಿ,
‘ಪರಸತಿಯನಪೇಕ್ಷಿಸದವನು
ನಿಜಸತಿಯ ನಿಚ್ಚದೊಲುಮೆಯನು
ದೊರೆಕಿಸಿ ಚಿರಸುಖವೊಂದುವನು!’
ಎಂದಿಹ ನನ್ನಿಯ ನುಡಿಗಳನು-ಸಾರಿದಳು ಧಾರಿಣಿಗೆ ತಾನು !


ವಲ್ಲಭನಿಲ್ಲದ ವೇಳೆಯಲಿ-ತನ್ನೆಡೆ ಬಂದಾರಡಿಗಳನು
ಹದಿಬದೆಯ ಹುರುಳಿನಲಿ ಬಿಗಿದು ಬಂಧಿಸಿರಲು ಕಮಲಿನಿಯದನು
ಕಾಣುತ, ಕರುಣದಿ ಭಾಸ್ಕರನು-ಕಮಲಿನಿಗೆ ಇಂತು ಉಸುರಿದನು :
‘ಬಂಧಿಸಿದಾ ಮಧುವಾಳಿಯನು
ಬಿಡು ಬಿಡು ಕೊಡು, ಗಡ ಮೋಕ್ಷವನು
ತಾಳಿಹವು ತಕ್ಕ ಶಿಕ್ಷೆಯನು…
ಸಾರ್ಥಕಗೊಳಿಸಲು ಬೇಕದನು-ಸುಮನೆಯೆಂಬ ತವನಾಮವನು;


ನಲ್ಲನ ಇನಿನುಡಿಯಾಲಿಸುತ – ಫುಲ್ಲಾನನೆ ಮರುನುಡಿ ಕೊಡದೆ,
ಹೃದಯದಿ ಕರುಣದ ರಸ ಸುರಿಯೆ- ಮಧುವಾಳಿಯ ನಸು ನೋಯಿಸದೆ,
ಬಿಡುಗಡೆ ಕೊಡಲಾ ಬವರಗಳು-ತಮ್ಮಯ ಗುಂಜಾರವದಿಂದೆ-
ವನಜಾಪತಿಯುಪಕಾರವನು
ನೆನೆ-ನೆನೆದು ಹೊಂದಿ ಹರುಷವನು
ತೋರಿಸಲು ತಮ್ಮ ಹೃದಯವನು
ಇಂಚರದಲಿ ಕೊಂಡಾಡಿದುವು ಮಿತ್ರನ ಮಹಿಮೆಯ ಹಾಡಿದುವು.


ತನ್ನಯ ಕಟ್ಟಳೆ ಮಾರದೆಯೆ-ಬಂಡುಣಿಗಳನ್ನು ಬಿಡಲಂದು
ಮೊಗದಲ್ಲಿ ಮೋದವನು ತಳೆದು-‘ಭಲೆಭಲೆ ಶರಜಿನಿಸತಿ’ ಎಂದು
‘ಇರುಳೆಲ್ಲ ನಿನ್ನ ನಾನಗಲಿ-ಮರುಗಿಸಿ ಕುದಿದೆನು ಮನನೊಂದು’
ಎಂದೀತೆರ ನಯನುಡಿಯಾಡಿ,
ಪ್ರೇಮಾಮೃತವನು ತಾನೂಡಿ,
ತನ್ನಯ ಕೈ ಮುಂದಕೆ ಮಾಡಿ
ಬಿಗಿದಪ್ಪಿದ ಬಾನ್ಮಣಿಯವನು- ತಾವರೆವೆಣ್ಣನು ತಣಿಸಿದನು.


‘ನಿನ್ನೊಲುಮೆಗೆ ಸಲುವ ಫಲವನು-ಚೆಲುವೆಯೆ ನಿನಗೀಯದೆ ಬಿಡೆನು ;
‘ಸತಿಯರಿಗಹಿತವು ನಿಜಪತಿಯು-ಬಯಸುವುದು ಪರಾಂಗನೆಯನ್ನು
‘ಅದರಿಂದೆ ಅನ್ಯರೆನ್ನನ್ನು -ನಿಟ್ಟಿಸಲು ಅವರ ಕಂಗಳನು….’
‘ಸೀದು ಮಾಳ್ಪೆ ಕಣ್ಣಿಲಿಗಳನು,
‘ಪಾವಿತ್ರ್ಯದ ಬೆಲೆ ತೋರುವೆನು!’
ಇಂತೊರೆದು ಸರಸಿಜಾತೆಯನು….
ಸಂತಸದಲಿ ಬಾಯ್ದೆರೆಸಿದನು-ತಾನುಗ್ರತೆಯನ್ನು ವಹಿಸಿದನು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...