Home / ಕವನ / ಕವಿತೆ / ಹುಣ್ಣಿವೆಯ ಹೊತ್ತಿನ ಹುಟ್ಟು

ಹುಣ್ಣಿವೆಯ ಹೊತ್ತಿನ ಹುಟ್ಟು

(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ)


ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ
ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ
ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ,
‘ಮಲಗಿದ ಜನರೇಳುವ ಮೊದಲು
ಮರೆಯಾಗುವೆ’ ನೆಂದು ಜವದೊಳು
ಪಡುವಲ ಸೀಮೆಯ ಬೆಟ್ಟದೊಳು
ಅಡಗಿದನೆಲ್ಲಿಯೊ ತೋಹಿನಲಿ-ಒಡನಿರುವ ಕತ್ತಲೆಯನಗಲಿ!


ಚಿತ್ತವನು ಸೆಳೆದ ಚಂದಿರನು-ಎತ್ತಲೊ ಹೋಗಿರುವುದ ಕಂಡು
ಮತ್ತಾರನಾಶ್ರಯಿಪನೆಂದು ಅತ್ಯಂತ ಕಾತರವನುಂಡು,
ಎತ್ತಲೂ ಸುತ್ತುತಿರಲಂದು – ಹೊತ್ತಿನ ಬರವನು ಬಗೆಗೊಂಡು,
ಅವನೊಡನೆ ಬೆರೆಯಬೇಕೆಂದು
ತವಕದಿಂದ ಕತ್ತಲೆ ಬಂದು
ದಿವಸದೆರೆಯನೆಡೆ ನಿಲಲಂದು
ಕಣ್ದೆರೆದ ಕನಲಿ ಸುಚರಿತನು-ಕೆಂಡಪರಿ ಕಂಡನಾಕೆಯನು.


ಭಾಸ್ಕರನ ಕೋಪವನ್ನರಿದು-ತಸ್ಕರರ ಕೆಳದಿ ಬೆದರಿದಳು.
ಮಿತ್ರನ ಮೊಗ ನೋಡಲು ಹೆದರಿ – ಸುತ್ತುತ ಗಿಡ-ಮರ-ಮೆಳೆಗಳೊಳು
ಮೈಗರೆದಳೊಂದು ತೋಹಿನೊಳು-ಹುಲಿ, ಸಿಂಗಗಳಿಹ ಕಾಡಿನೊಳು
ಕತ್ತಲೆಯ ದುಃಸ್ಥಿತಿಯನರಿದು,
ಆಕೆಯ ಅವಿವೇಕವ ನೆನೆದು,
ಕಾಡಿನರಳುಗಳು ಬಾಯ್ದೆರೆದು,
ಹಿರಿನಗೆಯನಂದು ಹೊಂದಿದುವು-ಸುರಭಿಯನೆಲ್ಲೆಡೆ ಹರಡಿದುವು.


ನಿಜ ನೇಹದಿನಿಯ ನೇಸರಿನಾ-ಪಾವನತೆಯನ್ನು ತಾ ನೋಡಿ,
ಕಮಲಿನೀ ರಮಣಿ ಪ್ರೇಮದಲಿ-ಮೆಲುನಗೆಮೊಗ ಮೇಲಕೆ ಮಾಡಿ,
ಪತಿಯನ್ನು ಕೃತಜ್ಞತೆಯಿಂದ ನಿರುಕಿಸುತ ನಲಿವೊಳೀಜಾಡಿ,
‘ಪರಸತಿಯನಪೇಕ್ಷಿಸದವನು
ನಿಜಸತಿಯ ನಿಚ್ಚದೊಲುಮೆಯನು
ದೊರೆಕಿಸಿ ಚಿರಸುಖವೊಂದುವನು!’
ಎಂದಿಹ ನನ್ನಿಯ ನುಡಿಗಳನು-ಸಾರಿದಳು ಧಾರಿಣಿಗೆ ತಾನು !


ವಲ್ಲಭನಿಲ್ಲದ ವೇಳೆಯಲಿ-ತನ್ನೆಡೆ ಬಂದಾರಡಿಗಳನು
ಹದಿಬದೆಯ ಹುರುಳಿನಲಿ ಬಿಗಿದು ಬಂಧಿಸಿರಲು ಕಮಲಿನಿಯದನು
ಕಾಣುತ, ಕರುಣದಿ ಭಾಸ್ಕರನು-ಕಮಲಿನಿಗೆ ಇಂತು ಉಸುರಿದನು :
‘ಬಂಧಿಸಿದಾ ಮಧುವಾಳಿಯನು
ಬಿಡು ಬಿಡು ಕೊಡು, ಗಡ ಮೋಕ್ಷವನು
ತಾಳಿಹವು ತಕ್ಕ ಶಿಕ್ಷೆಯನು…
ಸಾರ್ಥಕಗೊಳಿಸಲು ಬೇಕದನು-ಸುಮನೆಯೆಂಬ ತವನಾಮವನು;


ನಲ್ಲನ ಇನಿನುಡಿಯಾಲಿಸುತ – ಫುಲ್ಲಾನನೆ ಮರುನುಡಿ ಕೊಡದೆ,
ಹೃದಯದಿ ಕರುಣದ ರಸ ಸುರಿಯೆ- ಮಧುವಾಳಿಯ ನಸು ನೋಯಿಸದೆ,
ಬಿಡುಗಡೆ ಕೊಡಲಾ ಬವರಗಳು-ತಮ್ಮಯ ಗುಂಜಾರವದಿಂದೆ-
ವನಜಾಪತಿಯುಪಕಾರವನು
ನೆನೆ-ನೆನೆದು ಹೊಂದಿ ಹರುಷವನು
ತೋರಿಸಲು ತಮ್ಮ ಹೃದಯವನು
ಇಂಚರದಲಿ ಕೊಂಡಾಡಿದುವು ಮಿತ್ರನ ಮಹಿಮೆಯ ಹಾಡಿದುವು.


ತನ್ನಯ ಕಟ್ಟಳೆ ಮಾರದೆಯೆ-ಬಂಡುಣಿಗಳನ್ನು ಬಿಡಲಂದು
ಮೊಗದಲ್ಲಿ ಮೋದವನು ತಳೆದು-‘ಭಲೆಭಲೆ ಶರಜಿನಿಸತಿ’ ಎಂದು
‘ಇರುಳೆಲ್ಲ ನಿನ್ನ ನಾನಗಲಿ-ಮರುಗಿಸಿ ಕುದಿದೆನು ಮನನೊಂದು’
ಎಂದೀತೆರ ನಯನುಡಿಯಾಡಿ,
ಪ್ರೇಮಾಮೃತವನು ತಾನೂಡಿ,
ತನ್ನಯ ಕೈ ಮುಂದಕೆ ಮಾಡಿ
ಬಿಗಿದಪ್ಪಿದ ಬಾನ್ಮಣಿಯವನು- ತಾವರೆವೆಣ್ಣನು ತಣಿಸಿದನು.


‘ನಿನ್ನೊಲುಮೆಗೆ ಸಲುವ ಫಲವನು-ಚೆಲುವೆಯೆ ನಿನಗೀಯದೆ ಬಿಡೆನು ;
‘ಸತಿಯರಿಗಹಿತವು ನಿಜಪತಿಯು-ಬಯಸುವುದು ಪರಾಂಗನೆಯನ್ನು
‘ಅದರಿಂದೆ ಅನ್ಯರೆನ್ನನ್ನು -ನಿಟ್ಟಿಸಲು ಅವರ ಕಂಗಳನು….’
‘ಸೀದು ಮಾಳ್ಪೆ ಕಣ್ಣಿಲಿಗಳನು,
‘ಪಾವಿತ್ರ್ಯದ ಬೆಲೆ ತೋರುವೆನು!’
ಇಂತೊರೆದು ಸರಸಿಜಾತೆಯನು….
ಸಂತಸದಲಿ ಬಾಯ್ದೆರೆಸಿದನು-ತಾನುಗ್ರತೆಯನ್ನು ವಹಿಸಿದನು.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...