Home / ಕವನ / ಕವಿತೆ / ಹುಣ್ಣಿವೆಯ ಹೊತ್ತಿನ ಹುಟ್ಟು

ಹುಣ್ಣಿವೆಯ ಹೊತ್ತಿನ ಹುಟ್ಟು

(ಒಂದು ಸಾಂಪ್ರದಾಯಿಕ ಭಾವನೆಯ ಉತ್ಪ್ರೇಕ್ಷೆ)


ರಾತ್ರಿ ಸತೀಪತಿ ಚಂದಿರನು-ಕತ್ತಲೆಯೆಂಬಾ ಕುಲಟೆಯಲಿ
ಇರುಳೆಲ್ಲವು ರತನಾಗಿರುತ-ಪರಿಪರಿಯ ಸರಸವಾಡುತಲಿ
ಜಗಕಿಂದು ಮೊಗವ ತೋರಿಸಲು-ಬಗೆಯೊಳು ನಾಚಿಕೆಯೊಂದುತಲಿ,
‘ಮಲಗಿದ ಜನರೇಳುವ ಮೊದಲು
ಮರೆಯಾಗುವೆ’ ನೆಂದು ಜವದೊಳು
ಪಡುವಲ ಸೀಮೆಯ ಬೆಟ್ಟದೊಳು
ಅಡಗಿದನೆಲ್ಲಿಯೊ ತೋಹಿನಲಿ-ಒಡನಿರುವ ಕತ್ತಲೆಯನಗಲಿ!


ಚಿತ್ತವನು ಸೆಳೆದ ಚಂದಿರನು-ಎತ್ತಲೊ ಹೋಗಿರುವುದ ಕಂಡು
ಮತ್ತಾರನಾಶ್ರಯಿಪನೆಂದು ಅತ್ಯಂತ ಕಾತರವನುಂಡು,
ಎತ್ತಲೂ ಸುತ್ತುತಿರಲಂದು – ಹೊತ್ತಿನ ಬರವನು ಬಗೆಗೊಂಡು,
ಅವನೊಡನೆ ಬೆರೆಯಬೇಕೆಂದು
ತವಕದಿಂದ ಕತ್ತಲೆ ಬಂದು
ದಿವಸದೆರೆಯನೆಡೆ ನಿಲಲಂದು
ಕಣ್ದೆರೆದ ಕನಲಿ ಸುಚರಿತನು-ಕೆಂಡಪರಿ ಕಂಡನಾಕೆಯನು.


ಭಾಸ್ಕರನ ಕೋಪವನ್ನರಿದು-ತಸ್ಕರರ ಕೆಳದಿ ಬೆದರಿದಳು.
ಮಿತ್ರನ ಮೊಗ ನೋಡಲು ಹೆದರಿ – ಸುತ್ತುತ ಗಿಡ-ಮರ-ಮೆಳೆಗಳೊಳು
ಮೈಗರೆದಳೊಂದು ತೋಹಿನೊಳು-ಹುಲಿ, ಸಿಂಗಗಳಿಹ ಕಾಡಿನೊಳು
ಕತ್ತಲೆಯ ದುಃಸ್ಥಿತಿಯನರಿದು,
ಆಕೆಯ ಅವಿವೇಕವ ನೆನೆದು,
ಕಾಡಿನರಳುಗಳು ಬಾಯ್ದೆರೆದು,
ಹಿರಿನಗೆಯನಂದು ಹೊಂದಿದುವು-ಸುರಭಿಯನೆಲ್ಲೆಡೆ ಹರಡಿದುವು.


ನಿಜ ನೇಹದಿನಿಯ ನೇಸರಿನಾ-ಪಾವನತೆಯನ್ನು ತಾ ನೋಡಿ,
ಕಮಲಿನೀ ರಮಣಿ ಪ್ರೇಮದಲಿ-ಮೆಲುನಗೆಮೊಗ ಮೇಲಕೆ ಮಾಡಿ,
ಪತಿಯನ್ನು ಕೃತಜ್ಞತೆಯಿಂದ ನಿರುಕಿಸುತ ನಲಿವೊಳೀಜಾಡಿ,
‘ಪರಸತಿಯನಪೇಕ್ಷಿಸದವನು
ನಿಜಸತಿಯ ನಿಚ್ಚದೊಲುಮೆಯನು
ದೊರೆಕಿಸಿ ಚಿರಸುಖವೊಂದುವನು!’
ಎಂದಿಹ ನನ್ನಿಯ ನುಡಿಗಳನು-ಸಾರಿದಳು ಧಾರಿಣಿಗೆ ತಾನು !


ವಲ್ಲಭನಿಲ್ಲದ ವೇಳೆಯಲಿ-ತನ್ನೆಡೆ ಬಂದಾರಡಿಗಳನು
ಹದಿಬದೆಯ ಹುರುಳಿನಲಿ ಬಿಗಿದು ಬಂಧಿಸಿರಲು ಕಮಲಿನಿಯದನು
ಕಾಣುತ, ಕರುಣದಿ ಭಾಸ್ಕರನು-ಕಮಲಿನಿಗೆ ಇಂತು ಉಸುರಿದನು :
‘ಬಂಧಿಸಿದಾ ಮಧುವಾಳಿಯನು
ಬಿಡು ಬಿಡು ಕೊಡು, ಗಡ ಮೋಕ್ಷವನು
ತಾಳಿಹವು ತಕ್ಕ ಶಿಕ್ಷೆಯನು…
ಸಾರ್ಥಕಗೊಳಿಸಲು ಬೇಕದನು-ಸುಮನೆಯೆಂಬ ತವನಾಮವನು;


ನಲ್ಲನ ಇನಿನುಡಿಯಾಲಿಸುತ – ಫುಲ್ಲಾನನೆ ಮರುನುಡಿ ಕೊಡದೆ,
ಹೃದಯದಿ ಕರುಣದ ರಸ ಸುರಿಯೆ- ಮಧುವಾಳಿಯ ನಸು ನೋಯಿಸದೆ,
ಬಿಡುಗಡೆ ಕೊಡಲಾ ಬವರಗಳು-ತಮ್ಮಯ ಗುಂಜಾರವದಿಂದೆ-
ವನಜಾಪತಿಯುಪಕಾರವನು
ನೆನೆ-ನೆನೆದು ಹೊಂದಿ ಹರುಷವನು
ತೋರಿಸಲು ತಮ್ಮ ಹೃದಯವನು
ಇಂಚರದಲಿ ಕೊಂಡಾಡಿದುವು ಮಿತ್ರನ ಮಹಿಮೆಯ ಹಾಡಿದುವು.


ತನ್ನಯ ಕಟ್ಟಳೆ ಮಾರದೆಯೆ-ಬಂಡುಣಿಗಳನ್ನು ಬಿಡಲಂದು
ಮೊಗದಲ್ಲಿ ಮೋದವನು ತಳೆದು-‘ಭಲೆಭಲೆ ಶರಜಿನಿಸತಿ’ ಎಂದು
‘ಇರುಳೆಲ್ಲ ನಿನ್ನ ನಾನಗಲಿ-ಮರುಗಿಸಿ ಕುದಿದೆನು ಮನನೊಂದು’
ಎಂದೀತೆರ ನಯನುಡಿಯಾಡಿ,
ಪ್ರೇಮಾಮೃತವನು ತಾನೂಡಿ,
ತನ್ನಯ ಕೈ ಮುಂದಕೆ ಮಾಡಿ
ಬಿಗಿದಪ್ಪಿದ ಬಾನ್ಮಣಿಯವನು- ತಾವರೆವೆಣ್ಣನು ತಣಿಸಿದನು.


‘ನಿನ್ನೊಲುಮೆಗೆ ಸಲುವ ಫಲವನು-ಚೆಲುವೆಯೆ ನಿನಗೀಯದೆ ಬಿಡೆನು ;
‘ಸತಿಯರಿಗಹಿತವು ನಿಜಪತಿಯು-ಬಯಸುವುದು ಪರಾಂಗನೆಯನ್ನು
‘ಅದರಿಂದೆ ಅನ್ಯರೆನ್ನನ್ನು -ನಿಟ್ಟಿಸಲು ಅವರ ಕಂಗಳನು….’
‘ಸೀದು ಮಾಳ್ಪೆ ಕಣ್ಣಿಲಿಗಳನು,
‘ಪಾವಿತ್ರ್ಯದ ಬೆಲೆ ತೋರುವೆನು!’
ಇಂತೊರೆದು ಸರಸಿಜಾತೆಯನು….
ಸಂತಸದಲಿ ಬಾಯ್ದೆರೆಸಿದನು-ತಾನುಗ್ರತೆಯನ್ನು ವಹಿಸಿದನು.
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...