Home / ಕವನ / ಕವಿತೆ / ಬಾಡಿಗೆ ತಾಯಂದಿರು

ಬಾಡಿಗೆ ತಾಯಂದಿರು

ಸಿಗುತ್ತದೆ ಈ ಪುಣ್ಯಭೂಮಿಯಲಿ
ತಾಯಂದಿರ ಗರ್ಭಗಳು ಬಾಡಿಗೆಗೆ
ತಾಯ್ತನದ ಬಯಕೆಗಳ ಅದುಮಿಟ್ಟು
ದುಡ್ಡು ಕೊಟ್ಟವರಿಗೆ ಹೆತ್ತು ಕೊಡುವರು
ಇಲ್ಲಿ ಬಾಡಿಗೆ ತಾಯಂದಿರು

ಬಸಿರಲಿ ಮೂಡಿದ ಮಗು
ಒದ್ದು ಮೈ ಬದಲಿಸುವ ಚಲನೆ
ತಾಯ್ತನದ ಖುಷಿಯ ಘಳಿಗೆಯಲಿ
ಕಲ್ಲಾಗಿ ಕನಸಿಗೆ ನಿಷೇಧ ಹೇರುವರು.
ಹಿಂಸೆಯ ಶಿಲುಬೆಗೇರುವರು
ಇಲ್ಲಿ ಬಾಡಿಗೆ ತಾಯಂದಿರು.

ಕನಲುವ, ಮಗ್ಗಲು ಬದಲಿಸುವ
ಮುಲುಕುವ, ಹೊಟ್ಟೆಗೆ ಒದೆಯುವ,
ಕಂದನ ಕೈಸರಬೇಕೆಂದರೆ
ಸತ್ತ ಹೃದಯ ತಾಯಿಯವಳು
ಗಂಡನ ಸಾಲ ತೀರಿಸಲು
ಕೇವಲ ಬಾಡಿಗೆ ಗರ್ಭವಾದವಳು.

ಹೆತ್ತ ಕೂಸಿಗೆ ಅವಡುಗಚ್ಚಿ ಕೊಡುವಳು
ಉಕ್ಕಿ ಹರಿವ ಹಾಲಿನ ತೊರೆಯ
ಮನಸು ಕಲ್ಲಾಗಿಸಿ ಆವಿಯಾಗಿಸುವಳು
ಕೊಟ್ಟ ಮಕ್ಕಳ ಮರಳಿ ನೋಡಳು
ಹೊಟ್ಟೆ ಹೊರೆಯಲವಳು
ಸಂತೆಯಲಿ ಗರ್ಬವಿಟ್ಟವಳು

ಅವಳದೆಂತಹ ಹಣೆಬರಹ ನೋಡು
ಹೆತ್ತ ಮಗುವಿಗೆ ಎತ್ತಿ ಮುದ್ದಿಸಲಾರಳು
ತನ್ನದೇ ಕುಡಿ, ತನ್ನಾತ್ಮದ ತುಣುಕನು
ಕರುಳಿಲ್ಲದ ಮಾರುಕಟ್ಟೆಯಲ್ಲಿಟ್ಟು
ಜಾಗತೀಕರಣದ ಹೊಸ ಉದ್ಯಮದಲಿ
ಕೇವಲ ಬಾಡಿಗೆ ತಾಯಾದವಳು.

ಪ್ರಭುವೆ! ಕಣ್ಣಲ್ಲಿ ಕನಸುಗಳ ಕೊಡಬೇಡವೆಂದು
ಕಣ್ಣು ರೆಪ್ಪೆ ಗಟ್ಟಿ ಮುಚ್ಚಿಕೊಳ್ಳುವಳು
ತೇಲಿ ಬರುವ ಕನಸುಗಳಿಗೆ ನಿಷೇಧ ಹೇರುವಳು
ಬಸಿರೋದ್ಯಮದಲಿ ಗರ್ಭ ಮಾರಾಟಕ್ಕಿಡುವಳು
ಮಮತೆಯ ಕತ್ತು ಹಿಸುಕಿದ ಅವಳು,
ಕೇವಲ ಬಾಡಿಗೆ ತಾಯಿಯಾದವಳು.

ದೇವತೆಯೆಂದು ಪೂಜಿಸಿದವರೇ
ಅವಳ ಕ೦ಡು ಇಂದೇಕೆ ನಗುವಿರಿ?
ತಾಯ್ತಾನದ ಘನತೆ ಮಾರಾಟದ ಸರಕಾಗಿಸಿ
ಘನತೆಯ ಬದುಕು ಬೀದಿಪಾಲಾಗಿಸಿ
ಕೇವಲ ಬಾಡಿಗೆ ತಾಯಾಗಿಸಿದಿರಿ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...