Home / ಕವನ / ಕವಿತೆ / ಭರತಮಾತೆಯ ನುಡಿ

ಭರತಮಾತೆಯ ನುಡಿ

ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ?
ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ?
ಎಂದು ಮಲಿನತೆ ನೀಗುವೆ-ಮಗು
ಳೆಂದು ನುಗುಮುಖವಾಗುವೆ ?

ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ,
ಯಾರು ಜಾಡ್ಯವ ಹರಿಸಿ ನಮ್ಮಲಿ ಹೊಸದು ಜೀವವನಿಟ್ಟರೋ,
ಅವರೆ ಕಣ್ಣನು ಹಿರಿವರೇ-ಕುದಿ
ದವರೆ ಕೊರಳನು ಮುರಿವರೇ !

ಎಲ್ಲಿ ಧರ್ಮವ ಕಂಡು ಸಾರಿದ ನಿನ್ನ ಪೂರ್ವದ ಋಷಿಗಳು ?
ಎಲ್ಲಿ ಘನತೆಯ ಬದುಕ ಹಾಡಿದ ನಿನ್ನ ಸತ್ಯದ ಕವಿಗಳು ?
ಎಲ್ಲಿ ಧರ್ಮದ ಧಣಿಗಳು-ಅವ
ರೆಲ್ಲ ಜ್ಞಾನದ ಕಣಿಗಳು ?

ಎಲ್ಲಿ ಕಲೆಗಳ ಬೆಳಸಿ, ಲಕ್ಷ್ಮಿಯನೊಲಿಸಿ ನಿಲಿಸಿದ ಧೀರರು ?
ಎಲ್ಲಿ ರಾಜ್ಯವ ಕಟ್ಟಿ, ಶಾಂತಿಯ ಪ್ರಜೆಗೆ ಬೀರಿದ ವೀರರು ?
ಎಲ್ಲಿ ಆರ್‍ಯರ ರಾಜರು-ಈ
ಗೆಲ್ಲಿ ಸಾಹಸ ತೇಜರು ?

ಭರತಮಾತೆಯೆ, ಭರತಮಾತೆಯೆ, ನಮ್ಮ ಹಂಬಲು ಕೇಳದೆ ?
ದೇವಿ, ಮೌನವಿದೇನು, ಭಕ್ತರು ನಮಗೆ ನೀತಿಯ ಹೇಳದೆ ?
ಎಂದು ಮಕ್ಕಳಿಗೊಲಿಯುವೆ-ನುಡಿ,
ಎಂದು ನಮ್ಮಲಿ ನಲಿಯುವೆ ?

– ೨ –

ನಿನ್ನ ಧರ್ಮದ ದಿವ್ಯಪಥದಲಿ ಬದುಕ ತಿದ್ದದೆ ಹೋದೆವು ;
ನಿನ್ನ ಸೇವೆಯ ಮರೆತು ನಮ್ಮ ಹೋರಿ ಸೋತವರಾದೆವು ;
ನಿನ್ನ ಹೆರರಿಗೆ ಕೊಟ್ಟೆವು-ನೀ
ನಿನ್ನು ಸಾಕದೆ ಕೆಟ್ಟೆವು.

ನಮ್ಮ ಮನೆಯಲಿ ನಾವು ಹೆರರಿಗೆ ದುಡಿವ ತೊತ್ತುಗಳಾದೆವು ;
ನಮ್ಮ ಹಿರಿಯರ ಪುಣ್ಯ ಕೀರ್ತಿಯನುಳಿಸಿಕೊಳ್ಳದೆ ಹೋದೆವು ;
ನಮ್ಮ ಬಾಳಿಸು, ಕೂಡಿಸು-ಸಲ
ಹಮ್ಮ, ಸದ್ಗತಿ ನೋಡಿಸು.

-ಮಕ್ಕಳಿರ, ಅಕ್ಕರೆಯ ಮಕ್ಕಳ, ಹೆತ್ತ ಕರುಳನು ಮರೆವೆನೆ ?
ಸೊಕ್ಕಿ ಸೆಡೆದವರೀಗ ತಿಳಿದಿರಿ, ಇನ್ನು ನಿಮ್ಮ ನು ತೊರೆವೆನೆ ?
ಕೇಳಿ, ಎದೆಯಲಿ ಹದಿಯರಿ-ಹೊಸ
ಆಳ ಬಾಳಲಿ ಹುದಿಯಿರಿ.

ದೇವ ಸನ್ನಿಧಿಯಿಂದ, ಮಕ್ಕಳ, ಮೊದಲು ಧರ್ಮವ ತಂದೆನು ;
ಜೀವಕಲೆಗಳ ಕಲಿಸಿ ಸುಖದಲಿ ಸೊಬಗ ಬೆಳಸುತ ಬಂದೆನು ;
ಹಿಮದ ಗಿರಿಯಲಿ ಸುಳಿದೆನು-ಕುಡಿ
ನಿಮಿರಿ ತೆರೆಗಳ ತುಳಿದೆನು.

ಹೊಳೆದ ಸತ್ಯವ ಹಿಡಿದು ಮುಂದಕೆ ನೂಕಲಮ್ಮದೆ ಸೆಡೆದಿರಿ ;
ಹಳದ ನೆಮ್ಮುತ ಜಾತಿಮತಗಳ ಮದದ ಗುಹೆಯಲ್ಲಿ ಕೆಡೆದಿರಿ ;
ಬಯಲ ಬೆಳಕಿಗೆ ಮುಳಿದಿರಿ-ಸಮ
ದಯದ ನಡತೆಯ ಹಳಿದಿರಿ.

ಮತ್ತೆ ಮತ್ತೊಡಹುಟ್ಟಿನೊಲುಮೆಯನೊರೆವ ಗುರುಗಳನಿಳುಹಿದೆ;
ಒತ್ತಿ ಗಡಿಗಳ ಹಲವು ನಾಡನು ಬೆಸೆವ ರಾಜರ ಕಳುಹಿದೆ;
ಮರುಗಿ ಆಗಚ್ಚತ್ತಿರಿ-ಮ
ತ್ತೊರಗಿ ಮುಸುಕನು ಹೊತ್ತಿರಿ.

– ೩ –

ಕಾವಲೊಡೆದೆನು, ಪಡುವ ಕಣಿವೆಯ ತೆರೆದು ಸುರಿದೆನು ದಳವನು ;
ದೈವಭಕ್ತಿಯ, ಭ್ರಾತೃಧರ್ಮದ, ಧೀರ ಮುಸ್ಲಮಕುಳವನು
ಚಿಮ್ಮಿ, ಕೆರಳಿಸಿ, ಕಲೆತರು-ಅಹ !
ನಿಮ್ಮ ಸಮಕೇ ಮಲೆತರು.

ಕಡೆಗೆ ನೆನೆದೆನು ನನ್ನ ಮನೆತನ ನೇರವಾಗುವ ತೆರವನು,
ಕಡಲ ರಾಣಿ ಬ್ರಿಟಾನಿಯಳ, ನನ್ನಿ ನಿಯ ತಂಗಿಯ ನೆರವನು ;
ಗೆಲಿದು ನಾಡನು ಬೆಸೆದಳು-ನೆಲ
ದೊಲುಮೆಕಟ್ಟನು ಹೊಸೆದಳು.

ಸಕಲ ಧರ್ಮದ ತಿರುಳ ಹೊರೆದಳು, ಸಕಲ ಜ್ಞಾನವ ತೆರೆದಳು ;
ಸಕಲ ಸೀಮೆಯ ಬಳಕೆಗೆಳೆದಳು, ಸಕಲ ಕುಶಲವನೊರೆದಳು ;-
ಅವಳ ಗುಣವನ್ನು ಮೆರೆಯಿರಿ-ಕಳೆ
ದವಳ ಕೊರತೆಯ ಮರೆಯಿರಿ.

ಮುರಿಯಲಾಕೆಯ ವ್ರತವನಸುರರ ಮಕ್ಕಳುರಿದುರಿದೆದ್ದರು;
ಹರಡಿ ನೆಲಸಿದ ಮಗಳ್ದಿರಣುಗರು ತಾಯ ಕಾಯುತ ಬಿದ್ದರು ;
ಅವರು ಮಡಿದೆಡೆ ಮಡಿಯಿರಿ-ಬಿಡ
ದವರು ಹಿಡಿದುದ ಹಿಡಿಯಿರಿ.

ಹಿರಿಯ ಸಿರಿಯೊಕ್ಕಲಲಿ ಹೊಕ್ಕಿರಿ, ನಂಟನಳಿಯದೆ ಬಲಿಯಿರಿ ;
ಅರುಹಿ, ನಯದಲಿ ಹೋರಿ, ನಂಬಿಸಿ, ಮನೆಯನಾಳಲು ಕಲಿಯಿರಿ.
ಶಿಷ್ಟ ಮಾರ್ಗದಿ ನಡೆಯಿರಿ-ನಿ
ಮ್ಮಿಷ್ಟಸಿದ್ಧಿಯ ಪಡೆಯಿರಿ.

ಮರಳಿ ಸುಗುಣರ ಕಾರ್‍ಯದಕ್ಷರ ಹೆತ್ತು ಕೊರಗನು ತಳ್ಳುವೆ ;
ಮರಳಿ ಮಹಿಮೆಯ ತೋರಿ ಲೋಕದ ಜನದ ಪೂಜೆಯ ಕೊಳ್ಳುವೆ;
ಮಕ್ಕಳಿರ, ನಿಮಗೊಲಿಯುವೆ-ನಿ
ಮ್ಮಕರೆಗೆ ಮಿಗೆ ನಲಿಯುವೆ.

– ೪ –

ಧರ್ಮ ಶಾಂತಿ ಸ್ವತಂತ್ರವಲ್ಲದೆ ನಮ್ಮ ಹಿರಿಯರ ನುಡಿಗಳು ?
ಧರ್ಮ ಶಾಂತಿ ಸ್ವತಂತ್ರವೇ ನನ್ನಿನಿಯ ತಂಗಿಯ ಮುಡಿಗಳು ;
ಕೂಡ ಲೋಕವ ಕಾಯುವ-ಯಶ
ಗೂಡಿ ಮುಕ್ತಿಗೆ ಹಾಯುವ!

-ಭರತಮಾತೆಯೆ, ಭರತಮಾತೆಯೆ, ನಿನ್ನ ಮಾತನ್ನು ಮರೆಯೆವು ;-
ಹಿರಿಯ ಬಳಗದ ಕಾರ್‍ಯಚತುರೆಯ ಸಾಕುತಾಯಿಯ ತೊರೆಯೆವು ;
ಒಂದೆ ಜನವಾಗಿರುವೆವು-ಒಲಿ
ದೊಂದೆ ಭಾರವ ಹೊರುವೆವು.

ನಿನ್ನ ಹಿಂದಿನ ಭಾಗ್ಯವೆಲ್ಲವ ಮರಳಿ ಸಾಧಿಸಿ ಮೆರೆವೆವು ;
ನಿನ್ನ ಧರ್ಮಾಮೃತವ ಶೋಧಿಸಿ ಬರಡು ಲೋಕಕ್ಕೆರೆವೆವು ;
ದೈವಚಿತ್ತದಿ ನಿಲುವೆವು-ಸ
ತ್ಸೇವೆಗೆಯ್ಯುತ ಸಲುವೆವು.
*****
೧೯೧೪

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...