Home / ಕವನ / ಕವಿತೆ / ಭರತಮಾತೆಯ ನುಡಿ

ಭರತಮಾತೆಯ ನುಡಿ

ಭರತಮಾತೆಯೆ, ಭರತಮಾತೆಯೆ, ಎಂದು ನೀ ತಲೆಯೆತ್ತುವೆ ?
ಎಂದು ಲೋಕದ ಜನದ ಹೃದಯದಿ ನಿನ್ನ ಮಹಿಮೆಯ ಬಿತ್ತುವೆ ?
ಎಂದು ಮಲಿನತೆ ನೀಗುವೆ-ಮಗು
ಳೆಂದು ನುಗುಮುಖವಾಗುವೆ ?

ಯಾರು ಮುಸುಕಿದ ಕಣ್ಣ ಮಂಜನು ತೆಗೆದು ಬೆಳಕನು ಬಿಟ್ಟರೋ,
ಯಾರು ಜಾಡ್ಯವ ಹರಿಸಿ ನಮ್ಮಲಿ ಹೊಸದು ಜೀವವನಿಟ್ಟರೋ,
ಅವರೆ ಕಣ್ಣನು ಹಿರಿವರೇ-ಕುದಿ
ದವರೆ ಕೊರಳನು ಮುರಿವರೇ !

ಎಲ್ಲಿ ಧರ್ಮವ ಕಂಡು ಸಾರಿದ ನಿನ್ನ ಪೂರ್ವದ ಋಷಿಗಳು ?
ಎಲ್ಲಿ ಘನತೆಯ ಬದುಕ ಹಾಡಿದ ನಿನ್ನ ಸತ್ಯದ ಕವಿಗಳು ?
ಎಲ್ಲಿ ಧರ್ಮದ ಧಣಿಗಳು-ಅವ
ರೆಲ್ಲ ಜ್ಞಾನದ ಕಣಿಗಳು ?

ಎಲ್ಲಿ ಕಲೆಗಳ ಬೆಳಸಿ, ಲಕ್ಷ್ಮಿಯನೊಲಿಸಿ ನಿಲಿಸಿದ ಧೀರರು ?
ಎಲ್ಲಿ ರಾಜ್ಯವ ಕಟ್ಟಿ, ಶಾಂತಿಯ ಪ್ರಜೆಗೆ ಬೀರಿದ ವೀರರು ?
ಎಲ್ಲಿ ಆರ್‍ಯರ ರಾಜರು-ಈ
ಗೆಲ್ಲಿ ಸಾಹಸ ತೇಜರು ?

ಭರತಮಾತೆಯೆ, ಭರತಮಾತೆಯೆ, ನಮ್ಮ ಹಂಬಲು ಕೇಳದೆ ?
ದೇವಿ, ಮೌನವಿದೇನು, ಭಕ್ತರು ನಮಗೆ ನೀತಿಯ ಹೇಳದೆ ?
ಎಂದು ಮಕ್ಕಳಿಗೊಲಿಯುವೆ-ನುಡಿ,
ಎಂದು ನಮ್ಮಲಿ ನಲಿಯುವೆ ?

– ೨ –

ನಿನ್ನ ಧರ್ಮದ ದಿವ್ಯಪಥದಲಿ ಬದುಕ ತಿದ್ದದೆ ಹೋದೆವು ;
ನಿನ್ನ ಸೇವೆಯ ಮರೆತು ನಮ್ಮ ಹೋರಿ ಸೋತವರಾದೆವು ;
ನಿನ್ನ ಹೆರರಿಗೆ ಕೊಟ್ಟೆವು-ನೀ
ನಿನ್ನು ಸಾಕದೆ ಕೆಟ್ಟೆವು.

ನಮ್ಮ ಮನೆಯಲಿ ನಾವು ಹೆರರಿಗೆ ದುಡಿವ ತೊತ್ತುಗಳಾದೆವು ;
ನಮ್ಮ ಹಿರಿಯರ ಪುಣ್ಯ ಕೀರ್ತಿಯನುಳಿಸಿಕೊಳ್ಳದೆ ಹೋದೆವು ;
ನಮ್ಮ ಬಾಳಿಸು, ಕೂಡಿಸು-ಸಲ
ಹಮ್ಮ, ಸದ್ಗತಿ ನೋಡಿಸು.

-ಮಕ್ಕಳಿರ, ಅಕ್ಕರೆಯ ಮಕ್ಕಳ, ಹೆತ್ತ ಕರುಳನು ಮರೆವೆನೆ ?
ಸೊಕ್ಕಿ ಸೆಡೆದವರೀಗ ತಿಳಿದಿರಿ, ಇನ್ನು ನಿಮ್ಮ ನು ತೊರೆವೆನೆ ?
ಕೇಳಿ, ಎದೆಯಲಿ ಹದಿಯರಿ-ಹೊಸ
ಆಳ ಬಾಳಲಿ ಹುದಿಯಿರಿ.

ದೇವ ಸನ್ನಿಧಿಯಿಂದ, ಮಕ್ಕಳ, ಮೊದಲು ಧರ್ಮವ ತಂದೆನು ;
ಜೀವಕಲೆಗಳ ಕಲಿಸಿ ಸುಖದಲಿ ಸೊಬಗ ಬೆಳಸುತ ಬಂದೆನು ;
ಹಿಮದ ಗಿರಿಯಲಿ ಸುಳಿದೆನು-ಕುಡಿ
ನಿಮಿರಿ ತೆರೆಗಳ ತುಳಿದೆನು.

ಹೊಳೆದ ಸತ್ಯವ ಹಿಡಿದು ಮುಂದಕೆ ನೂಕಲಮ್ಮದೆ ಸೆಡೆದಿರಿ ;
ಹಳದ ನೆಮ್ಮುತ ಜಾತಿಮತಗಳ ಮದದ ಗುಹೆಯಲ್ಲಿ ಕೆಡೆದಿರಿ ;
ಬಯಲ ಬೆಳಕಿಗೆ ಮುಳಿದಿರಿ-ಸಮ
ದಯದ ನಡತೆಯ ಹಳಿದಿರಿ.

ಮತ್ತೆ ಮತ್ತೊಡಹುಟ್ಟಿನೊಲುಮೆಯನೊರೆವ ಗುರುಗಳನಿಳುಹಿದೆ;
ಒತ್ತಿ ಗಡಿಗಳ ಹಲವು ನಾಡನು ಬೆಸೆವ ರಾಜರ ಕಳುಹಿದೆ;
ಮರುಗಿ ಆಗಚ್ಚತ್ತಿರಿ-ಮ
ತ್ತೊರಗಿ ಮುಸುಕನು ಹೊತ್ತಿರಿ.

– ೩ –

ಕಾವಲೊಡೆದೆನು, ಪಡುವ ಕಣಿವೆಯ ತೆರೆದು ಸುರಿದೆನು ದಳವನು ;
ದೈವಭಕ್ತಿಯ, ಭ್ರಾತೃಧರ್ಮದ, ಧೀರ ಮುಸ್ಲಮಕುಳವನು
ಚಿಮ್ಮಿ, ಕೆರಳಿಸಿ, ಕಲೆತರು-ಅಹ !
ನಿಮ್ಮ ಸಮಕೇ ಮಲೆತರು.

ಕಡೆಗೆ ನೆನೆದೆನು ನನ್ನ ಮನೆತನ ನೇರವಾಗುವ ತೆರವನು,
ಕಡಲ ರಾಣಿ ಬ್ರಿಟಾನಿಯಳ, ನನ್ನಿ ನಿಯ ತಂಗಿಯ ನೆರವನು ;
ಗೆಲಿದು ನಾಡನು ಬೆಸೆದಳು-ನೆಲ
ದೊಲುಮೆಕಟ್ಟನು ಹೊಸೆದಳು.

ಸಕಲ ಧರ್ಮದ ತಿರುಳ ಹೊರೆದಳು, ಸಕಲ ಜ್ಞಾನವ ತೆರೆದಳು ;
ಸಕಲ ಸೀಮೆಯ ಬಳಕೆಗೆಳೆದಳು, ಸಕಲ ಕುಶಲವನೊರೆದಳು ;-
ಅವಳ ಗುಣವನ್ನು ಮೆರೆಯಿರಿ-ಕಳೆ
ದವಳ ಕೊರತೆಯ ಮರೆಯಿರಿ.

ಮುರಿಯಲಾಕೆಯ ವ್ರತವನಸುರರ ಮಕ್ಕಳುರಿದುರಿದೆದ್ದರು;
ಹರಡಿ ನೆಲಸಿದ ಮಗಳ್ದಿರಣುಗರು ತಾಯ ಕಾಯುತ ಬಿದ್ದರು ;
ಅವರು ಮಡಿದೆಡೆ ಮಡಿಯಿರಿ-ಬಿಡ
ದವರು ಹಿಡಿದುದ ಹಿಡಿಯಿರಿ.

ಹಿರಿಯ ಸಿರಿಯೊಕ್ಕಲಲಿ ಹೊಕ್ಕಿರಿ, ನಂಟನಳಿಯದೆ ಬಲಿಯಿರಿ ;
ಅರುಹಿ, ನಯದಲಿ ಹೋರಿ, ನಂಬಿಸಿ, ಮನೆಯನಾಳಲು ಕಲಿಯಿರಿ.
ಶಿಷ್ಟ ಮಾರ್ಗದಿ ನಡೆಯಿರಿ-ನಿ
ಮ್ಮಿಷ್ಟಸಿದ್ಧಿಯ ಪಡೆಯಿರಿ.

ಮರಳಿ ಸುಗುಣರ ಕಾರ್‍ಯದಕ್ಷರ ಹೆತ್ತು ಕೊರಗನು ತಳ್ಳುವೆ ;
ಮರಳಿ ಮಹಿಮೆಯ ತೋರಿ ಲೋಕದ ಜನದ ಪೂಜೆಯ ಕೊಳ್ಳುವೆ;
ಮಕ್ಕಳಿರ, ನಿಮಗೊಲಿಯುವೆ-ನಿ
ಮ್ಮಕರೆಗೆ ಮಿಗೆ ನಲಿಯುವೆ.

– ೪ –

ಧರ್ಮ ಶಾಂತಿ ಸ್ವತಂತ್ರವಲ್ಲದೆ ನಮ್ಮ ಹಿರಿಯರ ನುಡಿಗಳು ?
ಧರ್ಮ ಶಾಂತಿ ಸ್ವತಂತ್ರವೇ ನನ್ನಿನಿಯ ತಂಗಿಯ ಮುಡಿಗಳು ;
ಕೂಡ ಲೋಕವ ಕಾಯುವ-ಯಶ
ಗೂಡಿ ಮುಕ್ತಿಗೆ ಹಾಯುವ!

-ಭರತಮಾತೆಯೆ, ಭರತಮಾತೆಯೆ, ನಿನ್ನ ಮಾತನ್ನು ಮರೆಯೆವು ;-
ಹಿರಿಯ ಬಳಗದ ಕಾರ್‍ಯಚತುರೆಯ ಸಾಕುತಾಯಿಯ ತೊರೆಯೆವು ;
ಒಂದೆ ಜನವಾಗಿರುವೆವು-ಒಲಿ
ದೊಂದೆ ಭಾರವ ಹೊರುವೆವು.

ನಿನ್ನ ಹಿಂದಿನ ಭಾಗ್ಯವೆಲ್ಲವ ಮರಳಿ ಸಾಧಿಸಿ ಮೆರೆವೆವು ;
ನಿನ್ನ ಧರ್ಮಾಮೃತವ ಶೋಧಿಸಿ ಬರಡು ಲೋಕಕ್ಕೆರೆವೆವು ;
ದೈವಚಿತ್ತದಿ ನಿಲುವೆವು-ಸ
ತ್ಸೇವೆಗೆಯ್ಯುತ ಸಲುವೆವು.
*****
೧೯೧೪

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...